Friday, January 24, 2020

ಲೇಖನ

*ಲೇಖನ*

*ತ್ಯಾಗಮಯಿ ಹೆಣ್ಣು*   

ಇಡೀ ಮಾನವ ಜಗತ್ತಿನ ಹುಟ್ಟಿನ ಮೂಲ ಹೆಣ್ಣು. ಅವಳು ಜನ್ಮ ಕೊಡುವುದರಿಂದ ಹಿಡಿದು ಬದುಕಿನ ಪ್ರತಿಕ್ಷಣವು ಅವಳ ತ್ಯಾಗದ ಫಲವಾಗಿದೆ. ನಾವು ಸುಖವಾಗಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ನಮ್ಮ ಮನೆಯ ಹೆಣ್ಣು ತನ್ನ ಇಡೀ ಬದುಕನ್ನು ನಮಗಾಗಿ ಮೀಸಲಿಟ್ಟಿದ್ದಾರೆ ಪರಿಣಾಮವಾಗಿರುತ್ತದೆ. ಅವಳು ತಾಯಿಯಾಗಿ ಸಹೋದರಿಯಾಗಿ ಮಡದಿಯಾಗಿ ಮಗಳಾಗಿ
ಶಕ್ತಿಯಾಗಿ ಸಹಾಯಕಳಾಗಿ ಪ್ರೋತ್ಸಾಹಕನಾಗಿ ಹೊಣೆಗಾರರಾಗಿದ್ದಾರೆ ಹೊರುವ ಸ್ತ್ರೀಯ ಪ್ರತಿ ಪಾತ್ರವು ಮನುಷ್ಯನ ಜೀವನದಲ್ಲಿ ಅತಿ ಮುಖ್ಯವಾಗಿರುತ್ತದೆ. ಈ ಪಾತ್ರಗಳ ನೆರಳಿನಿಂದ ವಂಚಿತರಾದವರ ಬದುಕು ಸುಂದರವಾಗಿರಲು ಸಾಧ್ಯವೇ ಇಲ್ಲ. ಅದಕ್ಕೆ ಹೇಳಿದ್ದು ಒಂದು ಎಸ್ಎಸ್ಸಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು . ಇದು ಎಷ್ಟೊಂದು ಅರ್ಥಪೂರ್ಣ ಮಾತು.

      ಹೆಣ್ಣು ಪ್ರತಿ ಕುಟುಂಬದ ಆಧಾರ. ಪ್ರತಿ ಮನೆಯಲ್ಲೂ ಹೆಣ್ಣು ಎಲ್ಲರೂ ಏಳುವುದಕ್ಕಿಂತ ಮುಂಚೆ ಎದ್ದು ಎಲ್ಲರೂ ಮಲಗಿದ ಮೇಲೆ ಮಲಗುವ ಅವರ ಬದುಕು ತ್ಯಾಗದ ಪ್ರತೀಕ. ತನ್ನಿರಿ ಎಷ್ಟೇ ಒತ್ತಡಗಳಿದ್ದರೂ ಅಡುಗೆ ಮಾಡುವುದು ಮನೆಗೆಲಸ ಮಕ್ಕಳ ಅಭ್ಯಾಸ ಮನೆಯ ಖರ್ಚು ವೆಚ್ಚ ನಿರ್ವಹಣೆ ಎಲ್ಲದರಲ್ಲೂ ಮಹಿಳೆಗೆ ಅಗ್ರಸ್ಥಾನ. ಎಲ್ಲಾ ಕೆಲಸಗಳು  ಅವಳಿಲ್ಲದೆ ಮಾಡಲು ಅಸಾಧ್ಯ. ಪುರುಷ ಕೇವಲ ಸಹಕಾರ ನೀಡಬಹುದು, ಅವಳಿಗೆ ಬೆಂಗಾವಲಾಗಿ  ನಿಲ್ಲಬಹುದು. ಆದರೆ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಹೆಣ್ಣು ಒಬ್ಬಳಿಂದ ಮಾತ್ರವೇ ಸಾಧ್ಯ.

      ಇಂಥ ಅನೇಕ ತ್ಯಾಗಮಯಿ ಹೆಣ್ಣು ಗಳಿಂದಾಗಿ ಮಾನವನ ಬದುಕು ಹಸನಾಗಿ ಸುಖ-ಶಾಂತಿ-ನೆಮ್ಮದಿಗಳು ಮನೆಮಾಡಿವೆ. ಹಾಗಾಗಿ ಅವಳನ್ನು ಅತ್ಯಂತ ಗೌರವಿತವಾಗಿ ನಡೆಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಎಲ್ಲಿ ಹೆಣ್ಣು ಗೌರವಿಸಲ್ಪಡುವಳೋ ಅಲ್ಲಿ ದೇವರು ನೆಲೆಸಿದ್ದಾನೆ ಎಂಬುದು ನಮ್ಮ ಭಾರತೀಯ ಸಂಸ್ಕೃತಿಯ ನಂಬಿಕೆ. ಅದಕ್ಕಾಗಿಯೇ ಅವಳನ್ನು ಶಕ್ತಿ ಸ್ವರೂಪಿಣಿಯಾಗಿ, ವಿದ್ಯಾದಾಯಿನಿಯಾಗಿ , ಅನ್ನಪೂರ್ಣೆಯಾಗಿ, ಒಟ್ಟಾರೆ ದೇವತೆಯಾಗಿ ಪೂಜಿಸುವ ಗೌರವಿಸುವ ಪರಿಪಾಠ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ವರ್ತಮಾನದ ಮಹಿಳೆ ಪುರುಷನ ಸರಿಸಮಾನವಾಗಿ ಹೊರಗಡೆಯೂ, ತನ್ನ ಪುರಾತನ ಸಂಪ್ರದಾಯದಂತೆ ಮನೆಯೊಳಗೂ ದುಡಿಯುತ್ತಿರುವ ಅವಳ ತ್ಯಾಗ ಶ್ಲಾಘನೀಯವಾದದ್ದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯಂತೆ ಹೆಣ್ಣಿನ ಮಹತ್ವ ಕುಟುಂಬ ಸಮಾಜ ದೇಶ ಎಲ್ಲೆಲ್ಲೂ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ.

       ಹೆಣ್ಣಿನ ಮೇಲೆ ಎಷ್ಟೇ ಶೋಷಣೆಗಳು, ಅತ್ಯಾಚಾರಗಳು, ಅಮಾನವೀಯ ನಡವಳಿಕೆಗಳು, ಅಬಲೆ ಎಂಬ ಹಣೆಪಟ್ಟಿ ಕೊಟ್ಟಿದ್ದರು ಅವಳೆಂದೂ ತನ್ನ ಕಾರ್ಯಗಳಿಂದ ವಿಮುಖರಾಗದೆ ಅತ್ಯಂತ ಶ್ರದ್ಧೆಯಿಂದ, ಜವಾಬ್ದಾರಿಯುತವಾಗಿ  ನಿರ್ವಹಿಸುವುದರಿಂದಲೇ ಸಮಾಜದ ಪ್ರತಿಯೊಬ್ಬರ ಬದುಕು ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹಾಗಾಗಿ ಹೆಣ್ಣನ್ನು ನಾವೆಲ್ಲ ಅವಳನ್ನು ಅತ್ಯಂತ ಗೌರವಿತವಾಗಿ, ಆದರಣೀಯವಾಗಿ, ನಡೆಸಿ ಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.

10:23 ಪಿಎಂ 23012020

*ಅಮುಭಾವಜೀವಿ ಮುಸ್ಟೂರು*
(ಅಪ್ಪಾಜಿ ಎ ಮುಸ್ಟೂರು)
ಶಿಕ್ಷಕರು
ಮುಸ್ಟೂರು ಅಂಚೆ
ಜಗಳೂರು ತಾಲೂಕು
ದಾವಣಗೆರೆ ಜಿಲ್ಲೆ
ಪಿನ್ ಕೋಡ್ 577528
ಮೊಬೈಲ್ 8496819281

Sunday, January 12, 2020

ಸುಗ್ಗಿಯ ಹಬ್ಬ ಸಂಕ್ರಾಂತಿ


        *ಸುಗ್ಗಿಯ ಹಬ್ಬ ಸಂ ಕ್ರಾಂತಿ*


                   ಸುಗ್ಗಿ ಹಬ್ಬ ಎಂದೇ ಪ್ರಸಿದ್ಧವಾದ ನಮ್ಮ ಸಂಸ್ಕೃತಿಯ ಆಚರಣೆಯ ಪ್ರಮುಖ ಹಬ್ಬ. ಸಂಕ್ರಾಂತಿ ಬದಲಾವಣೆಯ ಪ್ರತೀಕವಾದ ಹಬ್ಬ. ಸೂರ್ಯ ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಚಲಿಸುವ ಪರ್ವಕಾಲ. ಅಂದರೆ ಧನುರಾಶಿಯಿಂದ ಮಕರ ರಾಶಿಗೆ ಸೂರ್ಯ ಪ್ರವೇಶವಾಗುವ ಸುಸಮಯ. ಪ್ರಕೃತಿಯ ಈ ಬದಲಾವಣೆಯಿಂದ ಹಗಲು ರಾತ್ರಿಗಳ ಸಮಯದಲ್ಲಿ ವ್ಯತ್ಯಾಸಗಳಾಗುತ್ತವೆ. ಅಲ್ಲದೇ ಚಳಿ ಕಡಿಮೆಯಾಗಿ ಬಿಸಿಲು ಜಾಸ್ತಿ ಆಗುವ, ಗಿಡ ಮರಗಳು ಎಲೆಗಳನ್ನು ಉದುರಿಸಿ ಹೊಸ ಚಿಗುರನ್ನು ಬಿಡುವ ಕಾಲ. ಅಲ್ಲದೆ ರೈತಾಪಿ ಬದುಕಿನ ಸುಗ್ಗಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಹಬ್ಬ. ವರ್ಷವಿಡೀ ಬೆಳೆದ ಫಸಲನ್ನು ಕಣಕ್ಕೆ ಹಾಕಿ ಅದನ್ನು ವಕ್ಕಣೆ ಮಾಡಿ ರಾಶಿ ಮಾಡಿ ಆ ರಾಶಿಯನ್ನು ಪೂಜೆ ಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ದಾನ ಮಾಡಿ ನಂತರ ಉಳಿದ ಧಾನ್ಯಗಳನ್ನು ಸಂಗ್ರಹಿಸಿಕೊಳ್ಳುವುದು ಸಂಪ್ರದಾಯ


               ಪ್ರಕೃತಿಯಲ್ಲಿ ಉಂಟಾಗುವ ಚಳಿ ಮತ್ತು ಶಾಖದ ಪರಿಣಾಮವಾಗಿ ದೇಹದ ಚರ್ಮದಲ್ಲಿ ಜಿಡ್ಡಿನ ಅಂಶ ಕಡಿಮೆಯಾಗಿ ಚರ್ಮ ಒಣಗಿದಂತಾಗುತ್ತದೆ. ಇಂತಹ ಸಮಸ್ಯೆಯಿಂದ ದೂರ ಆಗುವುದಕ್ಕಾಗಿ ನಮ್ಮ ಹಿರಿಯರು ಹೊಸದಾಗಿ ಬೆಳೆದ ಎಳ್ಳು ಅದರೊಟ್ಟಿಗೆ ಬೆಲ್ಲ ಬೆರೆಸಿ ಹಂಚುವ ಮೂಲಕ ದೇಹದ ಸಮತೋಲನ ಕಾಪಾಡಿಕೊಳ್ಳಲು, ಆ ಮೂಲಕ ಪರಸ್ಪರ ಬಾಂಧವ್ಯಗಳನ್ನು ಬೆಸೆಯಲು ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು. ಪರಸ್ಪರ ಎಳ್ಳುಬೆಲ್ಲ ಹಂಚುವುದರಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡವ ಮೂಲಕ ನಮ್ಮ ಹಿರಿಯರ ಸೌಹಾರ್ದ ಮನೋಭಾವನೆಗೆ ಸಾಕ್ಷಿಯಾಗಿದೆ. ಎಳ್ಳು ಬೆಲ್ಲದ ಜೊತೆಗೆ ಹೊಸದಾಗಿ ಬೆಳೆದ ಕಬ್ಬು, ಸಕ್ಕರೆ, ಕಡಲೆ, ಶೇಂಗಾ ಬೀಜ ಇತ್ಯಾದಿ ರೈತ ತಾವೇ ಬೆಳೆದ ವಸ್ತುಗಳನ್ನು ಬಳಸಿ ತಿನ್ನುವುದರಿಂದ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

           ರೈತಾಪಿ ಜನ ತಮ್ಮ ಫಸಲು ಬಂದ ಖುಷಿಯಲ್ಲಿ ಸುಗ್ಗಿ ಹಬ್ಬ ಎಂದು ಆಚರಿಸುತ್ತಾರೆ. ತಮಗೆ ಅನ್ನವನ್ನು ಕೊಟ್ಟ ಭೂಮಿತಾಯಿಗೆ ಪೂಜೆಯ ಮೂಲಕ ಕೃತಜ್ಞತೆ ಸಲ್ಲಿಸುವ ಮೂಲಕ ಋಣ ಸಮರ್ಪಣೆ ಮಾಡಿಕೊಳ್ಳುವರು. ಗಂಡಸರು ಕಿಚ್ಚು ಹಾಯಿಸುವ ಮೂಲಕ ದನಕರುಗಳ ಆರೋಗ್ಯದ ಕಡೆಗೂ ಗಮನ ಹರಿಸಿದರೆ, ಹೆಂಗಸರು ಒಬ್ಬಟ್ಟು ಹೋಳಿಗೆ ಸಿಹಿ ತಿಂಡಿಗಳನ್ನು ಮಾಡಿ ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ತೆರಳಿ ಎಳ್ಳು-ಬೆಲ್ಲ ಹಂಚುವ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಅಲ್ಲದೆ ನವ ತರುಣಿಯರು ಜೋಕಾಲಿಯನ್ನು ಹಾಕಿಕೊಂಡು ಉಯ್ಯಾಲೆ ಆಡುವುದು, ಮಕ್ಕಳು ಮತ್ತು ಯುವಕರು ಗಾಳಿಪಟ ಹಾರಿಸುವುದು ಈ ಹಬ್ಬದ ಇನ್ನೊಂದು ವಿಶೇಷವಾಗಿದೆ.

        ಒಟ್ಟಿನಲ್ಲಿ ಸಂಕ್ರಾಂತಿ ಹಬ್ಬ ಶ್ರಮಜೀವಿಗಳ ದಣಿವನ್ನು ನೀಗಿಸಿ ಹೊಸ ಹುರುಪನ್ನು ತುಂಬುವ ಕೆಲಸ ಮಾಡಿದರೆ, ಪ್ರಕೃತಿ ಚಳಿಗಾಲ ಕಳೆದು ಬೇಸಿಗೆ ಕಾಲಕ್ಕೆ ಅಡಿಯಿಡುವ ಈ ಸಂದರ್ಭದಲ್ಲಿ ಸೂರ್ಯನ ಪಥ ಬದಲಾವಣೆ ಮಹತ್ವವನ್ನು ಪಡೆದಿದೆ ಈ ಸಂಭ್ರಮದಲ್ಲಿ ಜನ-ಜಾನುವಾರುಗಳ ಜೊತೆಗೆ ಇಡೀ ಪ್ರಕೃತಿಯು  ಪಾಲ್ಗೊಳ್ಳುವುದು ನಮ್ಮ ಭಾರತೀಯ ಸಂಸ್ಕೃತಿಯ ಹಬ್ಬಗಳ ಆಚರಣೆಯ ಸಂಪ್ರದಾಯಗಳ ಅರ್ಥಪೂರ್ಣ ಒಳಗೊಳ್ಳುವಿಕೆಯಾಗಿದೆ. ಪ್ರಕೃತಿ ಹೊಸ ಚಿಗುರಿನಿಂದ ಮತ್ತೊಂದು ವರ್ಷದ ಹರ್ಷಕ್ಕೆ ನಾಂದಿ ಹಾಡಲು ಸಜ್ಜಾಗಿರುವ ಅತ್ಯಂತ ಪುಣ್ಯದ ಕಾಲ. ಈ ಸಂದರ್ಭದಲ್ಲಿ ಜನರು ಹಳ್ಳ-ಕೊಳ್ಳಗಳ ಬಳಿಗೆ ಹೋಗಿ ಪುಣ್ಯಸ್ನಾನ ಮಾಡಿ ಸೂರ್ಯದೇವರಿಗೆ ಪ್ರಕೃತಿ ಮಾತೆಗೆ ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ನಿಸರ್ಗ ನಮಗೆ ಎಲ್ಲವನ್ನೂ ಕೊಟ್ಟಿದೆ ಹಾಗಾಗಿ ನಾವದಕ್ಕೆ ಕೃತಜ್ಞತೆಯಿಂದ ಪೂಜೆ ಸಲ್ಲಿಸೋಣ ಎಂಬ ಸಂಪ್ರದಾಯವನ್ನು ಈ ಹಬ್ಬ ನಮಗೆ ಕಲಿಸುತ್ತದೆ.

       ಇಂತಹ ಉಲ್ಲಾಸಮಯವಾದ, ಬದುಕಿನ ಭಾಗವೇ ಆಗಿರುವ ಸಂಕ್ರಾಂತಿ ಎಲ್ಲರ ಬಾಳಲ್ಲೂ ಸಂ ಕ್ರಾಂತಿಯನ್ನು ತಂದು ಎಲ್ಲರ ಏಳಿಗೆಗೆ ಸಹಕಾರಿಯಾಗುವಂತ ಸನ್ನಿವೇಶಗಳೊದಗಿಬರಲಿ ಎಂದು ಆಶಿಸುತ್ತಾ ಪರಸ್ಪರ ಸಾಮರಸ್ಯದ ಬದುಕನ್ನು ಬಾಳುತ್ತಾ, ಮಾನವರು ಮಾನವೀಯತೆಯನ್ನು ಆಚರಣೆಯಲ್ಲಿ ತಂದು ಸಕಲ ಜೀವರಾಶಿಗಳನ್ನು ಗೌರವಾದರಗಳಿಂದ ಕಂಡು ಪ್ರಕೃತಿಯ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಸುಖದುಃಖಗಳನ್ನು ಸಮನಾಗಿ ಸ್ವೀಕರಿಸೋಣ. ಸರ್ವೇಜನ ಸುಖಿನೋ ಭವಂತು ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತುಗಳನ್ನಾಡೋಣ. 

ಎಲ್ಲರಿಗೂ ಸುಗ್ಗಿಹಬ್ಬ ಸಂಕ್ರಾಂತಿಯ ಶುಭಾಶಯಗಳು
0928ಪಿಎಂ10012020
ಅಮು ಭಾವಜೀವಿ ಮುಸ್ಟೂರು 
(ಅಪ್ಪಾಜಿ ಎ ಮುಸ್ಟೂರು) 
ಶಿಕ್ಷಕರು 
ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ 577528
8496819281