Saturday, September 9, 2017

ಕವಿತೆಗಳು

[24/08 2:52 pm] ಅಮುಭಾವಜೀವಿ: *ಮಳೆ ನೆನಪ ತಂತು*

ತುಂತುರು ತುಂತುರು
ಮಳೆ ಹನಿಯುತಿದೆ
ನಿನ್ನಯ ನೆನಪುಗಳ
ಹೊತ್ತು ತಂದಿದೆ

ಶ್ರಾವಣ ಮಾಸದ  ಈ ಮಳೆ
ಹಸಿರಿನ ಸಂಭ್ರಮ ಸವಿದ ಇಳೆ
ಕಾಮನಬಿಲ್ಲಿನ ಬಣ್ಣವ ಬಳಿದು
ಕನಸನು ನನಸು ಮಾಡಿತು

ಮೊದಲ ಭೇಟಿಯಲ್ಲಿ ಅಂದು
ಮೊದಲ ಮಳೆಗೆ ನೆನೆದ ನೆನಪು
ನೂರು ಭಾವ ಮೂಡಿ ಬರೆದ
ಕವಿತೆಯಲ್ಲವೆ ಆ ಸುಂದರ ನೆನಪು

ಮುಸ್ಸಂಜೆಯ ವೇಳೆಯಲ್ಲಿ
ರಂಗನೆರಚಿದ ತೆರದಲಿ
ಹಕ್ಕಿ ಗೂಡಿಗೆ ಮರಳುವಂತೆ
ನೆನಪು ಬಂದು ಕಾಡಿದೆ

ನೆನಪಿನ  ಈ ಯಾತ್ರೆಯಲಿ
ಸಂಭ್ರಮದ ಜಾತ್ರೆಯಲಿ
ಶ್ರಾವಣದ ಸೋನೆಯಲ್ಲಿ
ಕಾರಣವಿಲ್ಲದೆ ಕರಗಿ ಹೋದೆ

0226ಪಿಎಂ24082017

*ಅಮುಭಾವಜೀವಿ*
[27/08 7:30 am] ಅಮುಭಾವಜೀವಿ: *ಸವಿಭಾವದುಡುಗೊರೆ*

ಮುಂಜಾನೆಯ ಹನಿ ಸಿಂಚನ
ಪುಳಕಗೊಂಡಿದೆ ಮೈಮನ
ಶುಭೋದಯಕೆ ಸವಿಭಾವವ
ಉಡುಗೊರೆ ನೀಡಿದೆ ನಿಸರ್ಗ

ಹಾಸನಾಂಬೆಯ ತವರಲ್ಲಿ
ಕಾವ್ಯಸಂಗಮದ ಖುಷಿಯಲ್ಲಿ
ವರುಣ ಕೃಪೆ ತೋರಿರಲು
ಎಲ್ಲೆಲ್ಲೂ ಸಂಭ್ರಮವೇ

ತಣ್ಣನೆಯ ಹೊತ್ತಿನಲಿ
ಹೊಸ ಜಾಗದ ಉಲ್ಲಾಸದಲಿ
ನಡೆದಾಡುವ ಸೊಬಗೇ ಸೋಜಿಗ
ಮುಂಜಾನೆ ರಮ್ಯತೆಯ ಐಭೋಗ

ಕವಿಪುಂಗವರ ಭೇಟಿಯಲ್ಲಿ
ನವಕಲ್ಪನೆಯ ಧಾಟಿಯಲ್ಲಿ
ಮೂಡಿದೆ ಹೊಸ ಕವಿತೆ
ಮನವೋ ಉಲ್ಲಾಸದಿ ತೇಲಿದೆ

ಕವಿಬಳಗದ ಕೋಗಿಲೆಯ ಗಾನ
ಕರ್ಣಾಲಿಗಳಿಗೆ ಹೊಸ ಚೇತನ
ನಲಿಯುವ ಮನದ ಭಾವನೆಗೆ
ಈ ಜಾಗವೇ ಸುಂದರ  ಒಸಗೆ

0727ಎಎಂ27082017

*ಅಮುಭಾವಜೀವಿ*

ಹಾಸನದಿಂದ
[28/08 4:54 pm] ಅಮುಭಾವಜೀವಿ: *ನಿನ್ನ ಹೊರತು*

ಕಣ್ಣಂಚಲಿ ಹನಿಗೂಡಿದೆ
ನಿನ್ನೊಲವಿಗೆ ಮರುಳಾಗಿ
ಹೃದಯದ ಭಾವ ಮೂಡಿದೆ
ಕಣ್ಣೊಳಗಿನ ಬಿಂಬವಾಗಿ 

ನನ್ನ ಕೈ ಹಿಡಿದು ನಡೆಸೋ
ನಾವಿಕ ನೀನಲ್ಲವೆ ಗೆಳೆಯ
ನೀ ಪ್ರೀತಿಯ ಅಂಬಾರಿಯಲಿ
ಕೂತ ನನ್ನ  ಒಡೆಯ

ಬಾಳ ಯಾನದ ಬಳುವಳಿ ನೀನು
ನಾಳೆ ಕನಸುಗಳ ಬಿತ್ತಿದವ ನೀನು
ಬೇಕಿಲ್ಲ ನನಗೇನೂ ನಿನ್ನ ಹೊರತು
ಬದುಕಲಿ ನೀನೇ ನನ್ನ ಗುರುತು

ಜೊತೆಗಾರನಾಗಿ ನೀ ಹಿತವಾದೆ
ದಂತಕಥೆಯಾಗೋಣ ಪ್ರೀತಿಗೆ
ವ್ಯಥೆಗಳ ಕಳೆದು ಶಪಥಗೈದೆ
ಇನ್ನು ಕಷ್ಟಗಳೇ ಇಲ್ಲ ಬಾಳಿಗೆ

ಕಣ್ಣು ಕಣ್ಣು ಕಲೆತ  ಈ ಬಂಧ
ಮಣ್ಣು ಸೇರುವ ತನಕ ಬೆಸೆಯಲಿ
ನಮ್ಮಿಬ್ಬರ ಈ ಅನುಬಂಧಕೆ
ಕಣ್ಣಂಚಿನ ಹನಿ ಸಾಕ್ಷಿಯಾಗಲಿ

*ಅಮುಭಾವಜೀವಿ*

ಶುಭಸಂಜೆ ಸ್ನೇಹಿತರೇ
[28/08 10:15 pm] ಅಮುಭಾವಜೀವಿ: *ಯಾವ ನೋವು ಕಾಡದೆ*

ಯಾವ ನೋವು ನಿನ್ನ ಕಾಡಿದೆ
ಏಕೆ ನಿನ್ನ ಮನವು ನೊಂದಿದೆ
ಯಾವ ಕಾರಣವ ನಾನು ಕಾಣೆ
ನಿನ್ನ ವೇದನೆಗೆ ಉಪಶಮನವೇನೋ ಕಾಣೆ /ಪ/

ಮೊದಲೇ ಹೆದರುವವನ ಮೇಲೆ
ಹಗ್ಗ ಹಾವಾಗಿ ಕಾಡಿತದೇಕೆ
ಮೃದು ದಳದ ಹೂವ ಮೇಲೆ
ಬರಸಿಡಿಲು ಬಂದೆರಗಿತದೇಕೆ
ನೋಯುವ ಸರದಿ ಬಿಟ್ಟು
ಛಲದಿ ಎಲ್ಲ ದೂರ  ಅಟ್ಟು  |೧|

ಯಾರಿಗಿಲ್ಲ ಇಲ್ಲಿ ನೋವು
ಒಂದೇ ಭಾರಿಗೆ ಒಲಿಯದು ಗೆಲುವು
ಸತತ ಸೋಲುವ ಮನದೊಳಗೆ
ಗೆಲ್ಲುವ ಭರವಸೆಯ ಕಾಣಬೇಕು
ಮರೆತುಬಿಡು ಎಲ್ಲ ನೋವ
ಕದ ತೆರೆದು ನೋಡು ಜಗವೆಲ್ಲ  |೨|

ಹೆಜ್ಜೆ  ಇಡುವ ಭರದಲಿ
ಎಡವುವ ಭಯ ಕಾಡದೆಂದು
ಸದ್ದು ಮಾಡುವ ಮಡಿಕೆಯಲ್ಲಿ
ತುಂಬ ನೀರು  ಇರಲಾರದೆಂದೆದೂ
ಮಾತನಾಡಿ  ಎಲ್ಲ ಮರೆತುಬಿಡು
ಮೌನದಲ್ಲಿ  ಎಲ್ಲ ತೊರೆದುಬಿಡು |೩|

ತುಸು ಮೆಲ್ಲ ಗಾಳಿ ಬೀಸಿದಂತೆ
ಹುಸಿನಗತಲಿರು ಯಾವ ನೋವು ಕಾಡದು
ಹಸಿರೆಲೆಯ ಮೇಲೆಯೇ ತಾನೇ
ಇಬ್ಬನಿಯು ಮಾಣಿಕ್ಯದಂತೆ ಹೊಳೆವುದು

0956ಪಿಎಂ28082017

*ಅಮುಭಾವಜೀವಿ*

ಶುಭಸಂಜೆ ಸ್ನೇಹಿತರೇ
[29/08 8:05 am] ಅಮುಭಾವಜೀವಿ: *ಮಲಿನವಾಗಿದೆ ಹೆಸರು*

ಅಲ್ಲೂ ಇರಬಹುದು
ಮಾನವೀಯತೆಯ ಬೇರು
ಆದರೂ ಹಿಂಸೆಯಲಿ ಮಿಂದು
ಮಲಿನವಾಗಿದೆ ಅದರ ಹೆಸರು

ಧರ್ಮಸಾರದೊಳಗೆಲ್ಲೂ ಇಲ್ಲ
ಒಬ್ಬರನೊಬ್ಬರು ಕೊಲ್ಲುವ ಪಾಠ
ಆದರೆ ಅದಕ್ಕೆ ಭಯೋತ್ಪಾದನೆಯ
ಬೆಂಬಲಿಸಿ ಜಗ ಗೆಲ್ಲುವ ಹಠ

ಶಾಂತಿಯ ಸಾರ ಬೇಕಿಲ್ಲ
ಪ್ರೀತಿಯ ಸಂಸ್ಕಾರ ಗೊತ್ತಿಲ್ಲ
ಸ್ನೇಹ ಹಸ್ತವ ಚಾಚಿದರೂ
ಅವರು ದ್ವೇಷದ ಪೊರೆ ಕಳಚದವರು

ಸ್ವರ್ಗವೇ ಇರಬಹುದು ಅಲ್ಲಿ
ನರಕಸದೃಶವಾಗಿಹುದು ಜಗದ ಕಣ್ಣಲ್ಲಿ
ಸಾಮಾಜಿಕ ಬದುಕಿಗಿಂತಲೂ
ರಾಜಕೀಯ ಪ್ರತಿಷ್ಠೆಯೇ ಮೇಲಲ್ಲಿ.

ಕೈಜೋಡಿಸಿದರೆ ಈಗಲೂ
ನಾವಾಗುವೆವು ಸೋದರರು
ಕೈಮಿಲಾಯಿಸಿದರೆ ಸುಮ್ಮನಿರಲು
ನಾವಲ್ಲ ಹೇಡಿಗಳು

0410ಪಿಎಂ270816

*ಅಮುಭಾವಜೀವಿ*

*ವರ್ಷದ ಹಿಂದೆ ಬರೆದ ಕವನ*

.
[29/08 9:09 pm] ಅಮುಭಾವಜೀವಿ: *ಕವಿಗೋಷ್ಠಿಗಾಗಿ*

*ನನ್ನೀ ಮಾತೃಭೂಮಿ*

ಜನ್ಮ ಭೂಮಿ ಮಾತೃಭೂಮಿ
ನನ್ನ ಪೊರೆವ ತೊಟ್ಟಿಲು
ನನ್ನ ನಾಡು ನನ್ನ ಪಾಡು
ಎಲ್ಲ ಸಾಧನೆಗೂ ಮೆಟ್ಟಿಲು

ಸಂಸ್ಕೃತಿಯ ತವರಲ್ಲಿ
ಪರಂಪರೆಯ ನೆರಳಲ್ಲಿ
ಅರಳುವ ಭವಿಷ್ಯದ
ಆಶಾಭಾವವೇ ನನ್ನೀ ಮಾತೃಭೂಮಿ

ಸುಜ್ಞಾನದ ಬೆಳಕಿನಡಿಯಲ್ಲಿ
ವಿಜ್ಞಾನದ ಮುನ್ನಡೆಯಲ್ಲಿ
ತತ್ವಜ್ಞಾನದ ತಿಳುವಳಿಕೆ
ನೀಡುವ ಶಾಲೆ ನನ್ನೀ ಮಾತೃಭೂಮಿ

ಸಂವಿಧಾನದ ಚೌಕಟ್ಟಿನಲ್ಲಿ
ಸ್ವಾತಂತ್ರ್ಯದ ಹಕ್ಕಿನಲ್ಲಿ
ಸಹಬಾಳ್ವೆಯ ಸಮಭಾವವ
ಕಣಕಣದಿ ಬೆರೆಸಿದ ನನ್ನೀ ಮಾತೃಭೂಮಿ

ಗಂಗೆ ತುಂಗೆ ಕಾವೇರಿಯರ
ಒಡಲ ಕರುಳ ಬಳ್ಳಿಯಿದು
ಹಿಮಾಲಯದ ಶೃಂಗದಲ್ಲಿ
ತಿರಂಗ ಹಾರಿಸಿದ ನನ್ನೀ ಮಾತೃಭೂಮಿ

ಯೋಧರ ಗಡಿ ಗಸ್ತಿನಲ್ಲಿ
ಆರಕ್ಷಕರ ಬಿಗಿ ಶಿಸ್ತಿನಲ್ಲಿ
ಧರ್ಮಗ್ರಂಥಗಳ ನಂಬಿಕೆಯಲ್ಲಿ
ಒಂದಾಗಿ ಬದುಕುವುದೆನ್ನ ಮಾತೃಭೂಮಿ

ಇಲ್ಲಿ ಜನಿಸಿದ ನಾನು ಧನ್ಯ
ಅದರಿಂದಲೇ ನಾನಿಂದು ಜಗಮಾನ್ಯ
ನನ್ನದೆಂಬ ಹೆಮ್ಮೆಪಡುವ
ನಾನು ಜನಸಿದ ಮಾತೃಭೂಮಿ

0958ಪಿಎಂ17082017
*ಅಮುಭಾವಜೀವಿ*
[29/08 9:11 pm] ಅಮುಭಾವಜೀವಿ: ಸೂರಿ ಸೃಷ್ಟಿಯ ಬರಹ ವಾಟ್ಸಪ್ ಗ್ರೂಪ್ನಲ್ಲಿ ನಡೆದ ಶ್ರಾವಣ ಕವಿಗೋಷ್ಠಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ನನ್ನ ಕವಿತೆ.
[30/08 1:47 pm] ಅಮುಭಾವಜೀವಿ: *ಸ್ಪೂರ್ತಿಗೀತೆಯಾದೆ*

ನೀ ತೋರಿದ ಪ್ರೀತಿಗೆ
ಅದಿತ್ತ ಆ ಭದ್ರತೆಗೆ
ಋಣಿಯಾಗಿರುವುದೊಂದುಳಿದು
ಅನ್ಯ ಮಾರ್ಗವಿಲ್ಲೆನಗೆ

ಅಲುಗಾಡುವ ಹರೆಯಕೆ
ಆಸರೆಗೋಲಾಗಿ ಬಂದೆ
ಹೆಜ್ಜೆಹೆಜ್ಜೆಗೂ ಅನುಸರಿಸಿ
ಬಾಳಿಗೊಂದು ರೂಪ ತಂದೆ

ಗುರಿಯಿರದ ನಡೆಗೊಂದು
ತಡೆ ಕೋರಿ ಮಾರ್ಗ ಬದಲಿಸಿದೆ
ಸರಿ ದಾರಿ ಬೆರಳು ತೋರಿ ನನ್ನ
ಉನ್ನತಿಯ ಸ್ಪೂರ್ತಿಗೀತೆಯಾದೆ

ಜೋಡು ಇಲ್ಲದ ಹಾದಿಯಲಿ
ಜೋಡಿಯಾಗಿ ನೀ ನಡೆದೆ
ನೀ ಬಂದ ಕ್ಷಣದಿಂದಲೇ
ನನ್ನ ನಡೆ ದಣಿವ ಮರೆತಿದೆ

ಸಂಭ್ರಮಿಸುತಿಹೆ ನಾನೀಗ
ನೀನನ್ನ ಎಲ್ಲಾ ಐಭೋಗ
ಸಾಕೆನಗೆ ಜೋತಿಯಿರು ಹೀಗೆ
ನನ್ನ ಬಾಳಿಗಾಗ ಬಾಧಿಸದು ಬೇಗೆ

ನೀನಿತ್ತ ಈ ಒಲವಿಗೆ
ನನ್ನ ಅಭಿನಂದನೆ
ನನ್ನಲ್ಲಿ ನೀನಿರುವೆ ಓ ಅರ್ಧಾಂಗಿ ಅದೇ  ನನಗೆ ಪ್ರೇರಣೆ

0703ಎಎಂ300815

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಇದೇ ದಿನ ಬರೆದ ಕವಿತೆ*

*ಶುಭ ಮಧ್ಯಾಹ್ನ ಸ್ನೇಹಿತರೇ*
[31/08 1:33 pm] ಅಮುಭಾವಜೀವಿ: *ಪ್ರತಿಭೆ ಇದ್ದರೂ*

ನಾ ಬಯಸಿದವರಾರೂ
ನನ್ನವರಾಗಲೇ ಇಲ್ಲ
ಬಯಸದೇ ಬಂದವರೆಲ್ಲಾ
ನನ್ನವರಾಗೇ ಉಳಿದರೆಲ್ಲಾ

ನಾ ಅಂದುಕೊಂಡದ್ದೇನೂ
ಆಗಲೇ ಇಲ್ಲ ಬದುಕಲಿ
ನೊಂದುಕೊಂಡೇ ಬಾಳುತಿರುವೆ
ನಿತ್ಯ ನೋವಿನ ನೆರಳಲಿ

ಪ್ರತಿಭೆ ಇದ್ದರೂ ಯಾರೂ
ನನ್ನನ್ನು ಗುರುತಿಸಲೇ ಇಲ್ಲ
ಪ್ರತಿಭಟಿಸಲಾಗದೇ ಕೈಚೆಲ್ಲಿದೆ
ಪ್ರೋತ್ಸಾಹವಿಲ್ಲದೆ ಪರಿತಪಿಸಿದೆ

ಬೆಳೆಯುವ ಹಂಬಲದಲೇ
ದಾರಿ ಸವೆಸುತಿರುವೆ ನಾನು 
ಬೆಳೆಸುವ ಬೆಂಬಲವೆಲ್ಲಿದೆಯೋ
ಅರಸುತಿರುವೆ ಹಸಿವಿನೊಳಗೂ ನಾನು

0136ಪಿಎಂ310816

*ಅಮುಭಾವಜೀವಿ*
[31/08 9:05 pm] ಅಮುಭಾವಜೀವಿ: *ಧನ್ಯವಾದಗಳು ನಿಮಗೆ*

ಮಳೆಯನು ಸುರಿದ ಮೋಡಗಳೇ
ಧನ್ಯವಾದಗಳು ನಿಮಗೆ
ಬದುಕಿಗೆ ಮತ್ತೆ ಚೇತನವಾದೆರಿ
ಅದಕೆ ಚಿರಋಣಿಗಳು ನಾವು ನಿಮಗೆ

ಬರದಿಂದ ಬೇಸತ್ತ ಒಡಲಿಗೆ
ಜೀವಕಳೆ ತಂತು ನಿಮ್ಮೀ ಕೊಡುಗೆ
ಭೀಕರತೆ ಎಂಬುದನು ದೂರತಳ್ಳಿ
ಮಮತೆಯ ತೋರಿದಿರೀ ಜಗಕೆ

ಬತ್ತಿದ ಮಡಿಲಲಿ ಮೊಳೆತಿದೆ ಬೀಜ
ಮತ್ತೆ ಜೀವನ ಸಾಗಿದೆ ಸಹಜ
ಹಸಿರಿನ ಕುಸುರಿಯ ಎಣೆದಿದೆ
ಭೂತಾಯಿ ಮತ್ತೆ ನಗುವಂತಾಗಿದೆ

ಸತ್ತ ಕೆರೆಗಳಿಗೆ ಮತ್ತೆ ಜೀವ ಬಂತು
ಒಣಗಿದ ನದಿಯಲಿ ನಾದ ತಂತು
ಸಂಭ್ರಮವೇ ಈಗ ಎಲ್ಲೆಲ್ಲೂ
ಸಮೃದ್ಧ ಬದುಕಿನ್ನು ಯಾವಾಗಲೂ

ಹೀಗೆ ನಮ್ಮನು ಸಲಹುತಿರಿ
ಕಾಲಕಾಲಕ್ಕೆ ಮಳೆ ಸುರಿಯುತಿರಿ
ಬಂಜೆಯ  ಒಡಲಲೂ ಖುಷಿ ತಂದಿರಿ
ನೆಮ್ಮದಿ ಬದುಕನು ಹರಸಿದಿರಿ

0556ಪಿಎಂ29082017

*ಅಮುಭಾವಜೀವಿ*

*ಶುಭರಾತ್ರಿ ಸ್ನೇಹಿತರೇ*
[01/09 7:14 am] ಅಮುಭಾವಜೀವಿ: *ರವಿ ಬರುವ ಹಾದಿಯಲ್ಲಿ*

ಕಣ್ಣು ತೆರೆಯಿತೊಂದು ಹಗಲು
ಬಣ್ಣ ಬಳಿದ ಹೊನ್ನ ಮುಗಿಲು
ರವಿಯು ಬರುವ ಹಾದಿಯಲ್ಲಿ
ಇಬ್ಬನಿ ಮಿನುಗಿತು ಎಲೆಎಲೆಯಲ್ಲಿ

ಇರುಳಿನೊಡೆಯ ಚಂದಿರಗೆ
ವಿಶ್ರಾಂತಿ ನೀಡಲು ಬಂದ ಭಾಸ್ಕರ
ಕವಿದ ಕತ್ತಲೆಗೆ ಮುಕ್ತಿ ಹಾಡಿ
ಬೆಳಕಿನೊಸಗೆ ತಂದ ನೇಸರ

ಮುದುಡಿದ ತಾವರೆಯು ನಕ್ಕಿತು
ಅಲೆಗಳಿಗೆ ಹೊಂಬಣ್ಣ ಬಳಿಯಿತು
ಮರಗಿಡಗಳ ತಲೆ ನೇವರಿಸಿ
ಹೊಸ ಚೈತನ್ಯದ ಪುಳಕ ತಂದಿತು

ರವಿಯು ಬರೆದ ಚಿತ್ರ ಕಾವ್ಯವನು
ಹಕ್ಕಿ ಉಲಿಯಿತು ಇಂಪು ಗಾನದಲಿ
ಬೆರಗುಗೊಂಡಿತು ಈ ಜಗವು
ನವೋಲ್ಲಾಸದ  ಬೀದಿಯಲಿ

ಶುಭೋದಯದ ನವಕಿರಣದಿಂದ
ಜಗದ ಚೆಲುವಾಯ್ತು ನವೀಕರಣ
ದಿನವೆಲ್ಲ ರವಿಗೆ ರಾಜಮರ್ಯಾದೆ
ಜಗವು  ಅದರಿಂದ ಹಿಗ್ಗಿ ನಲಿದಿದೆ

0709ಎಎಂ01092017

*ಅಮುಭಾವಜೀವಿ*

🌞💐🌼 *ಶುಭೋದಯ ಸ್ನೇಹಿತರೇ* 🌺🌼💐
[02/09 7:49 pm] ಅಮುಭಾವಜೀವಿ: *ಭಾವವಿರದ ಹಾಡಿನಲ್ಲಿ*

ಭಾವವಿರದ ಹಾಡಿನಲ್ಲಿ /
ಬರಿಯೇ ನೋವು ತುಂಬಿದೆ
ಭಾರ ಹೊತ್ತ ಬದುಕಿನಲ್ಲಿ /
ಕರಿಯ ಛಾಯೆ ಮೂಡಿದೆ /ಪ/

ಯಾರೋ ಬರೆದ ಕವಿತೆ ಇಂದು
ನನ್ನ ಕಥೆಯ ಹೇಳಿದೆ
ಯಾವ ಬಣ್ಣ ಬಳಸಿದರೂ
ನನ್ನ ವ್ಯಥೆಯ ಬದಲಿಸದಾಗಿದೆ
ಯಾವ ತಪ್ಪಿಗೆ ನನಗೀ ಶಿಕ್ಷೆ
ದೇವ ನೀಡೆಯಾ ನನಗೆ ರಕ್ಷೆ  /೧/ 

ಬಡತದನ ಪ್ರತಿ ಹೊಡೆತಕೂ
ನಾನೇ ಸಿಕ್ಕು ಬಲಿಯಾದೆ
ಒಳ್ಳೆಯ ಕಾಲ ಬರುವುದೆಂದು
ಬರುವ ಕಷ್ಟಗಳನೆಲ್ಲ ಸಹಿಸಿ ನಡೆದೆ
ನೀಗಲಿಲ್ಲ  ನನ್ನ ಬಡತನ
ಕಾಲ ಬದಲಿಸಲಿಲ್ಲ ಜೀವನ /೨/

ಪ್ರೀತಿಯೆಂಬ ಹಣತೆ ಕಂಡು
ಹಾರಿ ಬಂದೆ ನಾನದರ ಬಳಿಗೆ
ಜ್ಯೋತಿಯೂ ಕೂಡ ರೆಕ್ಕೆ ಸುಟ್ಟು
ಬಿದ್ದಿತ್ತು ಉರಿವ ದೀಪದ ಕೆಳಗೆ
ಬದುಕು ಬರೀ ಬೇಗೆ
ಸುಖ ಮರೀಚಿಕೆ ಇನ್ನು ನನಗೆ /೩/

0729ಎಎಂ01092017

*ಅಮುಭಾವಜೀವಿ*
[03/09 8:14 am] ಅಮುಭಾವಜೀವಿ: *ನನ್ನಂತೆ ನಾನಿರುವೆ*

ನಾ ಸುಂದರನಲ್ಲ
ನಾ ಚಂದಿರನಲ್ಲ
ಇದ್ದಿಲಾ ಕುಲದವನು

ನನಗಿಲ್ಲ ಯಾರ ಬೆಂಬಲ
ನನ್ನದೊಂದೇ ಹಂಬಲ
ನಾನಾಗಬೇಕೆಲ್ಲರಿಗೂ ಬೇಕಾದವನು

ನನ್ನ ಹೊರಗಿಡಿ   ಬೇಜಾರಿಲ್ಲ
ನಾನ್ಯಾವ ಗಡಿ ದಾಟುವುದಿಲ್ಲ
ಎಲ್ಲರೊಳಗೊಂದಾಗಿರುವೆನು

ನಿಮ್ಮ ಸ್ನೇಹಕ್ಕೆ ಹಿತವಾಗಿ
ಪ್ರೀತಿಗೆ ಪ್ರತಿಯಾಗಿ
ನನ್ನೆದೆಯಲಿ ಗುಡಿ ಕಟ್ಟಿ ಪೂಜಿಪೆನು

ಹಣವು ನನ್ನೊಳಿಲ್ಲ
ಗುಣಕೆ ನನ್ನೊಳು ಕೊರತೆಯಿಲ್ಲ
ಬೇಡಿ ಪಡೆವ ಬಡವ ನಾನು

ಹಂಗಿಸಿ ಆದರೆ ಕುಗ್ಗಿಸಬೇಡಿ
ಪ್ರೀತಿಸಿ ಆದರೆ ದ್ವೇಶಿಸಬೇಡಿ
ಸದಾ ನಿಮ್ಮ ಋಣಿ ನಾನು

ಆಸರೆಗೆ ಕೈ ನೀಡಿ
ನಡೆವ ಕಾಲೆಳೆಯಬೇಡಿ
ಏನಿಲ್ಲದಿದ್ದರೂ ನನ್ನಂತೆ ನಾನಿರುವೆ

ಹರಸಿ ಸಾಕು ನನ್ನೇಳ್ಗೆಗೆ
ಬುತ್ತಿ ಕಟ್ಟಿಕೊಳ್ವೆ ಬಾಳಿಗೆ.

0532ಎಎಂ030915

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ*

ಶುಭೋದಯ ಸ್ನೇಹಿತರೇ
[03/09 9:35 am] ಅಮುಭಾವಜೀವಿ: ನಲ್ಲ ನೀನಿಲ್ಲದೆ
ನನಗೇನೂ ಇಲ್ಲ
ಬಳ್ಳಿಗೆ ನೀನೊಂದಾಸರೆ
ನಾ ನಿನಗಾಗಿ ಅರಳಿದ ತಾವರೆ

ಹರೆಯದ ಆಗಸದಲಿ
ನೂರು ಕನಸ ಹರವಿದವ ನೀನು
ಪ್ರೀತಿಯಾ ಪಯಣಕ್ಕೆ
ಎಂದೆಂದೂ ಜೊತೆಯಾದವನು

ಎದೆಯ ಭಾವದೊಳು
ಒಲವ ಬಿತ್ತಿದವನು ನೀನು
ನೆನಪಿನ ಹದ ಮಳೆಯಲಿ
ನಿತ್ಯ ತೋಯ್ದು ಮುದಗೊಳ್ಳುವೆನು

ಹೆತ್ತವರ ಆ ಹಾರೈಕೆಯ
ಮರೆಸುವ ಸ್ನೇಹಿತ ನೀನು
ನಿನ್ನ ಬಳಿ ಸದಾ ಮಗುವಾಗ
ಬಯಸಿಹೆ ನಾನು

ಒಂಟಿತನವ ದೂರ ತಳ್ಳಿ
ಒಲವಿನಾಲಿಂಗನವಿತ್ತೆ
ಹಗಳಿರುಳು ಅದೇ ಗುಂಗಲಿ
ಮಿಂದೇಳುತಿಹೆ ನಾ ಮತ್ತೆ ಮತ್ತೆ

ನೀನೆನಗೆ ಕಟ್ಟಿಸಬೇಡ ಮಹಲು
ನಿನ್ನೆದೆಯಲಿ ಜಾಗ ನೀ ನೀಡಿರಲು
ಸಾಕೆನಗೆ ಅದೇ ಸವಿ ಸ್ವರ್ಗ
ನೀ ನನ್ನ ಬಾಳ ಸನ್ಮಾರ್ಗ

0750ಎಎಂ010915

*ಅಮುಭಾವಜೀವಿ*
[03/09 10:02 pm] ಅಮುಭಾವಜೀವಿ: *ಚಿತ್ರಕವನ*

*ಕಾಡಿಲ್ಲದೆ*

ಮಂಗನಿಂದ ಮಾನವನಾದ
ಸಮೃದ್ಧ ಕಾಡನು ಖಾಲಿ ಮಾಡಿದ

ಬುದ್ದಿ ಇಲ್ಲದಾಗ ಕಾಡಿನೊಂದಿಗೆ
ಹೊಂದಿಕೊಂಡು ಬದುಕ ನಡೆಸಿ
ಹಂತ ಹಂತವಾಗಿ ಬೆಳೆಯುತ್ತಾ
ಸ್ವಲ್ಪ ಸ್ವಲ್ಪವೇ ನಾಶ ಮಾಡುತ ಬಂದ

ತನ್ನನೇ ಸಲಹಿದ ಕಾಡು ಕಡಿದು
ಬರಡು ಮಾಡಿ ಪರಿದಾಡುತಿಹನು
ಹಸಿರೇ ಇಲ್ಲದ ನಾಡನು ಕಟ್ಟಿ
ಉಸಿರಿಗಾಗಿ ಪರಿತಪಿಸುತಿಹನು

ಅಂದು ಹಸಿವಿಗಾಗಿ ತಿನ್ನುತ್ತಿದ್ದ
ಇಂದು ಅತಿಯಾಸೆಗಾಗಿ ನಾಶಗೈದ
ವಾನರನಾಗಿ ಮರದಾಸರೆ ಪಡೆದ
ಮಾನವನಾಗಿ ನೆರಳಿಲ್ಲದಂತೆ ನರಳಾಡಿದ

ಪ್ರಕೃತಿ ಪಾಲಿನ ಕಂಟಕ  ಇವನು
ವಿಕೃತ ಮನಸ್ಸಿನ ವಂಚಕನಿವನು
ಕಡಿಯುವಯೆಡೆಯಲಿ ನೆಡದೆ
ಬೆಳೆದುದನೆಲ್ಲ ಕಡಿದು ಕಂಗಾಲಾದ

ಕಾಡಿಲ್ಲದೆ ಮಳೆ ಬಾರದೆ
ಹೆಚ್ಚಾಗಿದೆ ಬರದ ಬಾಧೆ
ಮೂಲವ ಮರೆತು ಕುಲದ ನೆಲೆಗೆ
ಕಾಲಯಮನಾದ ನಿಸರ್ಗ ಸೌಖ್ಯಕೆ

0350ಪಿಎಂ03092017

*ಅಮುಭಾವಜೀವಿ*


[04/09 9:52 am] ಅಮುಭಾವಜೀವಿ: *ನಾ ಹಂಬಲಿಸುವಂತೆ*

ಕ್ಷಮಿಸು ನನ್ನ ಕ್ಷಮಿಸು ನನ್ನ
ಓ ನನ್ನ  ಒಲವ ಜೀವವೇ /ಪ/

ಪ್ರೀತಿಯ ಭಾವ ಸಹಿಸಿ ನೋವ
ಅಂದು ತಂದಿತ್ತು ಹಿತಾನುಭವವ
ನಿನ್ನ ಈ ಸಹವಾಸದಿಂದ /
ದುಡುಕಿ ಆಡಿದ ಮಾತಿಗೆ
ಮುದುಡಿ ಕುಳಿತೆ ನೀನಿಂದು
ಕ್ಷಮೆ ತೋರು ನಿನ್ನ ನಗುವಿಂದ /೧/

ಯಾಕೋ ಬೇಸರ ನಿನ್ನ ಕಾಣೋ ಕಾತರ
ನನ್ನ ಮನದೊಳಗೆ ಏನೇನೋ ಹೊಯ್ದಾಟ
ಅಲ್ಲೆಲ್ಲ ನೀನಿಲ್ಲದ ಬಲು ಸಂಕಟ /
ಯಾರೋ ಹೇಳಿದರೆಂದು ನಂಬಿದ
ನಾನು ನಿನ್ನ ನಿಂದಿಸಿದ  ಆ ತಪ್ಪಿಗೆ
ಕ್ಷಮೆ ಇರಲಿ ಕೊನೆಯಾಗಲಿ ಸಂಕಷ್ಟ  /೨/

ದಿನವೆಲ್ಲವೂ ಕನವರಿಸಿದೆ ನಿನ್ನನ್ನೇ
ಕ್ಷಣಕ್ಷಣವೂ ಮನ ಕಾಡಿದೆ ನನ್ನನ್ನೇ
ಬಾ ಒಲವೇ ಮನ್ನಿಸು ನನ್ನ /
ದೂಡು ಈ ಬೇಸರ ನೋಡು ಆ ನೇಸರ
ದಿನಕಾಗಿ ರಾತ್ರಿಯೆಲ್ಲ ಅಲೆದು ಬಂದ
ನಾ ಹಂಬಲಿಸುವಂತೆ ನಿನ್ನ  /೩/

0950ಪಿಎಂ03092017

*ಅಮುಭಾವಜೀವಿ*
[04/09 4:45 pm] ಅಮುಭಾವಜೀವಿ: *ಅರ್ಪಣೆ*

ಅರ್ಪಣೆ ಸಮರ್ಪಣೆ
ಬದುಕ ಬಲಿಸಿ ನಿಲಿಸಿದ
ಎಲ್ಲರಿಗೂ ಹೃದಯ ತುಂಬಿ
ಅರ್ಪಣೆ ಸಮರ್ಪಣೆ

ತನ್ನ ಒಡಲಲ್ಲಿ ಜಾಗವಿತ್ತು
ಎಲ್ಲ ನೋವ ನುಂಗಿಕೊಂಡು
ಜನ್ಮವಿತ್ತ ತಾಯೆ ನಿನಗೆ
ಅರ್ಪಣೆ ಸಮರ್ಪಣೆ

ನನ್ನ ಭವಿಷ್ಯವನು ಕಟ್ಟಲು
ತಂದೆ ಆದರು ಮೆಟ್ಟಿಲು
ಬದುಕಿನಾಧಾರವೇ ಆದ ಅಪ್ಪ 
ನಿನಗೆ  ಅರ್ಪಣೆ ಸಮರ್ಪಣೆ

ವಿಧ್ಯೆ ಎಂಬ ಅಸ್ತ್ರ ಕೊಟ್ಟು
ಬದುಕ ಗೆಲ್ಲುವ ಗುರಿಯನಿಟ್ಟು
ಸಾಧನೆಗೆ ಸ್ಫೂರ್ತಿಯಾದ ಗುರುವೇ
ನಿಮಗೆ ಅರ್ಪಣೆ ಸಮರ್ಪಣೆ

ರಕ್ತ ಹಂಚಿಕೊಂಡು ಹುಟ್ಟಿದವರು
ನನ್ನ  ಏಳಿಗೆಗೆ ಹೆಗಲಾದವರು
ನೋವುನಲಿವಿಗೆ ಜೊತೆಯಾದ 
ಒಡಹುಟ್ಟಿದವರೆ ನಿಮಗೆ ಅರ್ಪಣೆ ಸಮರ್ಪಣೆ

ಯಾವ ಬಂಧ ಬೆಸೆದ ನಂಟೋ
ಯಾವ  ಋಣದ ಸ್ನೇಹ ಗಂಟೋ
ಅಲ್ಲಿಂದ ಇಲ್ಲಿವರೆಗೆ ಒಡನಾಡಿಗಳಾದ
ಸ್ನೇಹಿತರೇ ನಿಮಗೆ ಅರ್ಪಣೆ ಸಮರ್ಪಣೆ

ಮದುವೆ ಎಂಬ ಬೇಲಿಯಲ್ಲಿ
ಮಡದಿಯೆಂಬ ಬೆಳಕ ಚೆಲ್ಲಿ
ಮಕ್ಕಳ  ಅನುಬಂಧ ಬೆಸೆದ
ಸಂಸಾರವೇ ನಿನಗೆ ಅರ್ಪಣೆ ಸಮರ್ಪಣೆ

ಇರುವ ತನಕ ಉಸಿರಾಗಿ
ಹೋದ ಮೇಲೊಂದು ಹೆಸರಾಗಿ
ಎಲ್ಲಕ್ಕೂ ಮೂಲವಾದ
ಪಂಚಭೂತಗಳೇ ನಿಮಗೆ ಅರ್ಪಣೆ ಸಮರ್ಪಣೆ

*ಅಮುಭಾವಜೀವಿ*

*ಶುಭಸಂಜೆ ಸ್ನೇಹಿತರೇ*
[04/09 6:20 pm] ಅಮುಭಾವಜೀವಿ: *ಬದುಕು ಕಟ್ಟಿದ ದೇವತೆ*

ಅವಳಿಗಾಗಿ ಬಾಳು ಮೀಸಲು
ಅವಳಿಗೆ ನಾ ಸದಾ ಕಾವಲು
ಅವಳಿಂದಲೇ ಬೆಳಕು
ಅವಳೇ ನನ್ನ ಬದುಕು

ಅವಳೆನ್ನ ಕಂಗಳು
ನಾನವಳಿಗೆ ಆ ರೆಪ್ಪೆಗಳು
ಅವಳ ಸಲಹೆ ನನಗೆ ಸ್ಪೂರ್ತಿ
ಕಾರಣ ಅವಳೆನ್ನವಳೆಂಬ ಖಾತ್ರಿ

ಗೆಳತಿಯಾಗಿ ಗುರಿಯ ತೋರಿ
ಸಂಗಾತಿಯಾಗಿ ಬಾಳ ಸಲಹಿ
ನನ್ನ ಆ ಎತ್ತರಕ್ಕೇರಿಸಿ
ಬದುಕು ಕಟ್ಟಿದ ದೇವತೆ ಇವಳು

ಅವಳ ಕಣ್ಣಾಗಿ ಕಾಯುವೆ
ಅವಳ ಕಣ್ಣೀರಿಗೆ ನೋಯುವೆ
ಅವಳೋ ತ್ಯಾಗದ ಮೂರ್ತಿ
ಅವಳೆನ್ನ ಬಾಳ ಸಾರಥಿ

ಅವಳ ಕೈ ಹಿಡಿದೆ ನಾ
ಬಾಳಿಗ್ಹೊಸ ಸ್ಪರ್ಶವಿತ್ತಳು
ಅವಳೇ ನನ್ನ ಸಂಗಾತಿ
ಬಾಳ ತುಂಬ ಹರ್ಷ ತಂದಳು

ಅವಳ ಋಣ ತೀರಿಸಲಾಗದು
ಅವಳ ಸೇವೆಯಿಂದದು ಕಡಿಮೆಯಾಗುವುದು
ಅವಳು ಸತಿ ನಾನು ಪತಿ
ನಾವಿಬ್ಬರೂ ದಂಪತಿ.

644ಎಎಂ040915

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ*
[05/09 7:54 am] ಅಮುಭಾವಜೀವಿ: *ಮಹಾತಪಸ್ವಿ*

*ಶಿ*ಷ್ಯನ ತಪ್ಪುಗಳನು
*ಕ್ಷ*ಮಿಸಿ  ಅವನ ಬದುಕಿಗೆ
*ಕ*ಲಿಕೆಯ ವರ ನೀಡುವನೀತ
ಶಿಕ್ಷಕನೆಂಬ ಸಂಭಾವಿತ

*ಗು*ರಿಯ  ಆ ನಿಖರತೆಯನ್ನು
*ರು*ಜುವಾತುಪಡಿಸಿ ಸಾಧಿಸಲು
ಏಣಿಯಾಗಿ ಭವಿಷ್ಯ ಕಟ್ಟಿದ
ದೈವ ಸಮಾನನೀತ

*ಉ*ತ್ಸಾಹದ ಚಿಲುಮೆಯಾಗಿ
*ಪಾ*ಠಪ್ರವಚನದಿ ಭಾಗಿಯಾಗಿ
*ಧ್ಯಾ*ನದಂತೆ ವೃತ್ತಿ ಮಾಡುವ
*ಯ*ಶಸ್ಸಿನ ಮೆಟ್ಟಿಲಾದವನೀತ

ಮುಂದೆ ಗುರಿಯನಿಟ್ಟು
ಹಿಂದೆ ಗುರು ತೋರಿ ಬೊಟ್ಟು
ಸಾಧನೆಯ ಶಿಖರವನೇರಲು
ಹೆಮ್ಮೆ ಪಡುವ ಮೊದಲ ವ್ಯಕ್ತಿ  ಈತ

ತನ್ನ ಸ್ಥಾನಕ್ಕೆ ಘನತೆಯ ತಂದು
ಮಗುವಿನ ಭವಿಷ್ಯ  ಉಜ್ವಗೊಳಿಸಿ
ವೃತ್ತಿಯಲಿ ಧನ್ಯತೆ ಪಡೆವ
ಧರ್ಮನಿರಪೇಕ್ಷನೀತ

ಗುರುವಿನ ಗುಲಾಮರಾಗಿ
ಅರಿವಿನ ಮೂಲವನರಿ ತೋರಿ
ಸಮಾಜದ ಮನ್ನಣೆ ಪಡೆದ
ಶಿಕ್ಷಣದ ಮಹಾತಪಸ್ವಿ ಈತ

*ಅಮುಭಾವಜೀವಿ*

*ಶಿಕ್ಷಕರ ದಿನದ ಶುಭಾಶಯಗಳು ಸ್ನೇಹಿತರೇ*
[05/09 8:03 am] ಅಮುಭಾವಜೀವಿ: ಶಿಕ್ಷಕ ಬದುಕನ್ನು ಬರೆಯುವ ಲೇಖನಿ. ತನ್ನ ಒಡಲಾಳದಲಿ ನೂರು ನೋವಿದ್ದರೂ ಎಲ್ಲ ಮರೆತು ತನ್ನ ವಿದ್ಯಾರ್ಥಿಗಳ ಬದುಕನ್ನು  ರೂಪಿಸುವ ಹೊಣೆ ಹೊತ್ತು  ಶ್ರಮಿಸುತ್ತಾನೆ.ಸ್ವತಃ ಶಿಕ್ಷಕನಾಗಿ ನನ್ನ ಶಿಕ್ಷಕರು ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳ ದೃಷ್ಟಿಕೋನದಿಂದ ಗ್ರಹಿಸಿ ಹೇಳುವುದಾದರೆ,ಶಿಕ್ಷಕ ಮಾರ್ಗದರ್ಶಕನಾಗಿರಬೇಕು.ಕೇವಲ ಪಾಠವನಷ್ಟೇ ಭೋದಿಸದೆ ಬದುಕನ್ನು  ನಿರ್ದೇಶಿಸುವಂತವರಾಗಿರಬೇಕು.ತನ್ನ ತರಗತಿಯ ನಿಗದಿ ಪಡಿಸಿದ ಒಂದು ಪಾಠವನ್ನು ಮಾಡದಿದ್ದರೂ ಪರವಾಗಿಲ್ಲ ತನ್ನ ಗರಡಿಯಲ್ಲಿ ತರಬೇತಿಗೊಳ್ಳುತ್ತಿರುವ ಪ್ರತಿ ವಿದ್ಯಾರ್ಥಿಯನ್ನು ಬದುಕಲು ಸನ್ನದ್ದಗೊಳಿಸುವಂತಿರಬೇಕು. ಶಿಕ್ಷಕ  ತನ್ನ ಹೊಟ್ಟೆಪಾಡಿಗಿಂತಲೂ  ವಿದ್ಯಾರ್ಥಿಗಳ ಭವಿಷ್ಯದ ಬದುಕು ಸಮೃದ್ಧವಾಗಿರುವ ಹಾಗೆ ಬುನಾದಿ ಭದ್ರಪಡಿಸಬೇಕು.
             ನನ್ನ ಶಿಕ್ಷಕ ಕವಿಯಾಗಿ ನನ್ನನ್ನು ಕವಿತೆಯಾಗಿ ಚಿತ್ರಿಸುವ ಕನಸುಗಾರನಾರಬೇಕು.ನನ್ನ ಶಿಕ್ಷಕ ವಿಜ್ಞಾನಿಯಾಗಿ ನನ್ನ ಬದುಕನ್ನು ಸಂಶೋಧಿಸಬೇಕು.ನನ್ನ ಶಿಕ್ಷಕ ತನ್ನ ಕಲ್ಪನೆಯ ಮೂಸೆಯಲ್ಲಿ ನನ್ನನ್ನು ಅರಳಿಸಬೇಕು.ಬದುಕಿನ ಎಂಥಹದ್ದೇ ಸನ್ನಿವೇಶದಲ್ಲೂ ಧೃತಿಗೆಡದ  ಆತ್ಮವಿಶ್ವಾಸವನ್ನು ಅಚ್ಚೊತ್ತಬೇಕು.ವಿದ್ಯಾರ್ಥಿಯೆಂಬ ಹರಿಯುವ ನೀರನ್ನು ಸಮಾಜದ ವಿವಿಧೋದ್ದೇಶಗಳಿಗೆ ಸಮರ್ಥವಾಗಿ ಬಳಕೆಯಾಗುವಂತೆ ಯೋಜಿಸುವವರಾಗಿರಬೇಕು.ನವರಸಗಳನ್ನು ಸಮರಸದೊಂದಿಗೆ ಬೆರೆಸಿ ಬದುಕಿಗೆ ಮಧುರಾನುಭವವ ಸವಿಸಬೇಕು.ಶಿಕ್ಷಕ ಗೋಪುರವಾಗಿ ವಿದ್ಯಾರ್ಥಿಯನ್ನು ಅದರ ಕಳಶವಾಗಿಸಬೇಕು.
                  ತನ್ನೊಡಲ ಕುಡಿಗಳ ಹಾರೈಕೆ ಮಾಡೋ ತಾಯಾಗಿ,ತನ್ನ ಬೇರನೇ ನಂಬಿದ ರೆಂಬೆಕೊಂಬೆಗಳ ಸಲಹೋ ತಂದೆಯಾಗಿ,ಅನುಭವಾಮೃತವ ಉಣಬಡಿಸೋ ಅಜ್ಜನಾಗಿ, ಮಡಿಲಲ್ಲಿ ಮಲಗಿಸಿಕೊಂಡು ನೀತಿಕತೆಗಳಿಂದ ನೈತಿಕತೆ ಯ ಬಿತ್ತುವ ಅಜ್ಜಿಯಾಗಿ,ಜೊತೆಯಲ್ಲಿ ಆಡಿಬೆಳೆದ ಸೋದರತೆಯ ಕುರುಹಾಗಿ, ಒಂದಿಡೀ ಬದುಕಿನ ಮಾರ್ಗಸೂಚಿಯಾಗಿರಬೇಕು ನನ್ನ ಟೀಚರ್.

*ಶಿಕ್ಷಕರ ದಿನಾಚರಣೆಯ ಶುಭಾಶಯಗಳು*
[06/09 7:01 am] ಅಮುಭಾವಜೀವಿ: *ಗುಂಡು ಸದ್ದು ಮಾಡದಿರಲಿ*

ಸಾಧಿಸಿದ್ದಾದರೂ ನೀವೇನನ್ನು
ಸಾವಿನಿಂದ ಹತ್ತಿಕ್ಕುವಿರೇ ಸತ್ಯವನ್ನು

ಪ್ರಜಾಪ್ವಭುತ್ವದ  ಈ ನಾಡಿನಲ್ಲಿ
ವಿಚಾರವಾದಿಗಳ ಹತ್ಯೆಯಾಗುತಿದೆ
ಅಭಿವ್ಯಕ್ತಿ ಸ್ವಾತಂತ್ರ್ಯಕೆ  ಇನ್ನಿಲ್ಲಿ
ಕೋವಿಯ ನಳಿಕೆಯಿಂದ ಸತ್ಯ ಸಾಯುವುದೇ?

ಪಂಥೀಯ ವಾದವದೇನೇ ಇರಲಿ
ಅದನ್ನು ಹತ್ತಿಕ್ಕಲು ಗುಂಡು ಸದ್ದು ಮಾಡದಿರಲಿ
ಖಂಡಿಸುವ ತಾಕತ್ತು  ಇಲ್ಲದಿದ್ದರೆ
ನೀವು ಅವರ ಕೊಲ್ಲುವಷ್ಟು  ಹೇಡಿಯಾದಿರೇ?

ಎಲ್ಲ ವಾದಗಳಿಗೂ ಮಿಗಿಲು
ಮಾನವೀಯತೆಯ ಮಡಿಲು
ಎಲ್ಲಿಗೆ ತಲುಪಿದೆವು ನಾವಿಂದು
ಬಾಯಿ ಮುಚ್ಚಿಸಬಹುದೆ ಕೊಂದು ?

ಸಂವಹನ ಮಾಡಲಾಗದ  ಅಯೋಗ್ಯರು
ಸಂಹಾರ ಮಾಡಿ ತಲೆ ಮರೆಸಿಕೊಂಡರು
ರಕ್ತ ಹರಿಸಿ ಶಕ್ತರಾದಿರೇ ನೀವು
ನಾಳೆ ನಿಮ್ಮನ್ನು  ಉಳಿಕೊಳ್ಳುವುದಿಲ್ಲ ಸಾವು !

ಬಿಟ್ಟು ಬಿಡಿ ಈ ಮೂರ್ಖತನ
ಅರಿತು ನಡೆಯಿರಿ ಮಾನಮಾನವೀಯನ್ನ
ಕೊಲ್ಲುವ ಹೇಡಿ ಕೈಗಳೇ
ಕಾಯುವವರಾರು ನಿಮ್ಮನ್ನ

ಒಂದು ಸಾವಿನಿಂದ ಸತ್ಯ ಸಾಯುವುದಿಲ್ಲ
ಒಂದು ವಾದದಿಂದ ಮಿಥ್ಯ ಗೆಲ್ಲುವುದಿಲ್ಲ
ಓ ಕ್ರೂರ  ಅಸ್ವಸ್ಥ ಕೊಳಕು ಮನಗಳೇ
ಇಲ್ಲಿ ನಿಮಗೆ ಜಾಗವಿಲ್ಲ ಹೊರಡಿ ಗುಳೆ

1054ಪಿಎಂ05092017

*ಅಮುಭಾವಜೀವಿ*

ಗೌರಿ ಲಂಕೇಶ್ ಅವರ ಹತ್ಯೆ ಕುರಿತು ಬರೆದ ಕವಿತೆ



[06/09 5:28 pm] ಅಮುಭಾವಜೀವಿ: *ಎಂದಿಗೆ ಕೊನೆ*

ತಲ್ಲಣಗಳು ತಳಮಳಿಸುತ್ತಿವೆ
ಕಾರಣಗಳು ತಿಳಿಯದೇ
ಮನ ನೊಂದಿದೆ ತನು ಬೆಂದಿದೆ
ಎಂದಿಗೆ ಕೊನೆ ಎಂದು ತಿಳಿಯದೆ

ಬರದ ಛಾಯೆ ಆವರಿಸಿದೆ
ಬದುಕಲು ಹೋರಾಟ ನಿತ್ಯವಾಗಿದೆ
ಕಲ್ಲು ಕೂಡ ಕರಗವ  ಆಕ್ರಂದನಕೆ
ನ್ಯಾಯ ಮಾತ್ರ ಮರೀಚಿಕೆಯಾಗದೆ

ವಾದಗಳ ಭಿನ್ನತೆಯಲಿ
ಬದುಕುವ ಸಾಮ್ಯತೆ ಬಲಿಯಾಗಿ
ಸತ್ಯದ ಹತ್ಯೆಯಾಗುತಿದೆ
ಸಮಾಜದ ಸ್ವಾಸ್ಥ್ಯ ಹಾಳಾಗಿ

ವಿಚಾರಧಾರೆಯನು ಹೇಳಲೂ
ಇಲ್ಲಿ ಸ್ವಾತಂತ್ರ್ಯ ಇಲ್ಲವಾಗುತಿದೆ
ಅಂಜದೆ ಬಾಯಿ ಬಿಟ್ಟರೆ
ಗುಂಡು ಸದ್ದು ಮಾಡಿ ಸಾವು ತರುತಿದೆ

ಕಾಯಕ ಮಾಡುವುದೆ ಕಷ್ಟವಾಗಿ
ಭ್ರಷ್ಟ ವ್ಯವಸ್ಥೆಗೆ ಬಲಿಯಾಗಿ
ಧರೆಯೇ ಹೊತ್ತಿ ಉರಿಯುವಾಗ
ಬದುಕಲು ತಲ್ಲಣ ಶುರುವಾಗಿದೆ

*06092017*
*ಅಮುಭಾವಜೀವಿ*
[06/09 9:36 pm] ಅಮುಭಾವಜೀವಿ: *ಕೊಡಲಿ ನಾನೇನು*

ಅಲ್ಪ ನಾನು ಕೊಡಲಿ ಏನು
ನನ್ನ ತಾಯಿ ನಾಡಿಗೆ
ಕಲ್ಪನೆಯ ಕಣ್ಣುಹರಿಸಿ
ಭಾವ ತುಂಬುವೆ ಹಾಡಿಗೆ

ನಾ ಹುಟ್ಟಿದ ಈ ಮಣ್ಣಲಿ
ಹೆಮ್ಮರವಾಗಿ ನಾ ಬೆಳೆಯಬೇಕು
ದಣಿದು,ಮಣಿದು ಬರುವ ಜೀವಕೆ
ತಣ್ಣೆಳಲ ನೀಡಿ ಸಂತೈಸಬೇಕು

ನಾನಿರುವೆಡೆಯಲಿ ತಂಗಾಳಿ
ಬೀಸಿ ತಂಬೆಲರ ಹರಡಬೇಕು
ಪ್ರತಿಶ್ವಾಸದ ಆಸ್ವಾದನೆಯಲಿ
ಆ ಸುಖವ ನಾನೀಯಬೇಕು

ನನ್ನೊಡಲ ಉರಿ ದಹಿಸಿ
ಹಸಿದವಗನ್ನ ಬೇಯಿಸಿಡಬೇಕು
ತುತ್ತಿಗಾಗಿ ಹಂಬಲಿಸಿ ಬಂದವನ
ಮುಖದ ಸಂತೃಪ್ತಿ ನಾನಾಗಬೇಕು

ಬೆವರ ಹರಿಸಿ ಬಾಯಾರಿದವನ
ಬಾಯ್ಗೆ ನಾ ಜಲವಾಗಬೇಕು
ಬಸವಳಿದ ಅವನ ಮೈಯೊಳು
ಮತ್ತೆ ನವಚೈತನ್ಯ ತುಂಬಬೇಕು

ಮಣ್ಣಿನ ಮುದ್ದೆಯಂತಹವನ
ವಿದ್ಯೆಯಲಿ ನಾ ತಿದ್ದಬೇಕು
ಕತ್ತಲಲ್ಲಿರುವವನ ಬೆಳಕಿಗೆ
ತಂದು ಉದ್ದರಿಸಬೇಕು

0652ಎಎಂ060915
*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ*

ಶುಭರಾತ್ರಿ ಸ್ನೇಹಿತರೇ
[07/09 8:26 am] ಅಮುಭಾವಜೀವಿ: *ಇಲ್ಲಿ ಹಂತಕರಿದ್ದಾರೆ ಎಚ್ಚರ*

ಹುಷಾರ್ ಇಲ್ಲಿ ಹಂತಕರಿದ್ದಾರೆ

ಅಭಿವ್ಯಕ್ತಿ ಸ್ವಾತಂತ್ರ್ಯವ ಹತ್ತಿಕ್ಕಿ
ವೈಚಾರಿಕತೆಯನ್ನು ಪೈಶಾಚಿಕವಾಗಿ
ಕೊಲ್ಲುವ ಮಾನವೀಯತೆಯನ್ನೇ ಮರೆತ
ಬಾಡಿಗೆ ಹಂತಕರಿದ್ದಾರೆ  ಎಚ್ಚರ

ವ್ಯವಸ್ಥೆಯ ವಿರುದ್ಧ ಹೋರಾಡಿದರೆ
ಸತ್ಯದ ಪರ ಮಾತನಾಡಿದರೆ
ಸಮಸ್ಯೆಯ ಕರಾಳ ಮುಖ ತೋರಿದರೆ
ತಡಮಾಡದೆ ಕೊಲ್ಲುವ ಹಂತಕರಿದ್ದಾರೆ ಎಚ್ಚರ

ಪಂಥೀಯ ಹಾದಿ ತುಳಿದರೆ
ಮುಖ್ಯವಾಹಿನಿಗೆ ಕರೆತಂದರೆ
ಸೈದ್ಧಾಂತಿಕ ನಿಲುವು ಹೊಂದಿದರೆ
ಸಂಚು ಮಾಡಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ

ತನ್ನ ನಿಲುವನ್ನು  ಪ್ರಕಟಪಡಿಸಿದರೆ
ಅವರ ಗೆಲುವನ್ನು ಖಂಡಿಸಿದರೆ
ಸಮಾನತೆ ವಾದ ಮಂಡಿಸಿದರೆ
ಗುಂಡಿಕ್ಕಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ

ವಿಚಾರವಂತಿಕೆಯ ಪ್ರತಿಪಾದಿಸಿದರೆ
ಮಡಿವಂತಿಕೆಯ  ಅನುಮಾನಿಸಿದರೆ
ಒಡಂಬಡಿಕೆಗೆ ಒಪ್ಪಿಕೊಳ್ಳದಿದ್ದರೆ
ಅಮಾನವೀಯವಾಗಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ

0722ಎಎಂ07092017

*ಅಮುಭಾವಜೀವಿ*

[07/09 1:33 pm] ಅಮುಭಾವಜೀವಿ: *೧•ಕಾಡದಿರಲಿ ಮತ್ತೆ*

ಈ ದೂರ ಆದರೆ ನಿರಂತರ
ಹೇಗಾದಿತು ಮನ್ವಂತರ
ಬಾಳಲಿ ಬರೀ ಬೇಸರ
ನೀನಿಲ್ಲದ ಬದುಕು ಭೀಕರ

ಎಷ್ಟೊಂದು ಒಲವಿತ್ತು
ಎಷ್ಟೊಂದು ಚೆಲುವಿತ್ತು
ನೀನಿರಲು ನನ್ನ ಬಳಿ
ಎಷ್ಟೊಂದು ನೋವಿದೆ
ಸಾವನ್ನು ಸೆಳೆದಿದೆ
ನನ್ನನು ಈ ಬೇಸರದ ಸುಳಿ /೧/

ಭಾವದ  ಅಲೆಯಲ್ಲಿ
ತೇಲಿದ್ದೆ ಖುಷಿಯಲ್ಲಿ
ನಿನ್ನೊಲವ ನನ್ನದಾಗಿರಲು
ಬಾಯ್ಬಿಟ್ಟ ಭುವಿಯೊಳಗೆ
ಆಕ್ರಂದನದ ವೇದನೆಯೊಗೆ
ಬೇಯುತಿಹೆ ನೀನಿಲ್ಲದಿರಲು /೨/

ಮತ್ತೆ ನೀ ಬಂದು ಸೇರು
ಮತ್ತೆದೇ ಒಲವ ತೋರು
ಚೈತ್ರದ ಚಿಗುರಾಗಲಿ ಬದುಕು
ನಿತ್ಯ ನಿನ್ನದೇ ಧ್ಯಾನ
ಸಹಿಸಲಾರೆ ನಾ ಮೌನ
ಕಾಡದಿರಲಿ ಮತ್ತೆ  ಅಂತರದ ಕೆಡುಕು /೩/

೧೦೪೬ಎಎಂ೦೭೦೯೨೦೧೭
*ಅಮುಭಾವಜೀವಿ*
[07/09 5:38 pm] ಅಮುಭಾವಜೀವಿ: *೨•ಒಲವು ಬೆಸೆದ ಕಾರಣಕ್ಕೆ*

ಈ ಅಂತರ ತಂದಿದೆ ಕಾತರ
ಸೇರಿಸಲು ನಮ್ಮಿಬ್ಬರ
ಒಲವು ಬೆಸೆದ ಕಾರಣಕ್ಕೆ
ಒಂದಾಯ್ತು ನಮ್ಮೀ ಸಂಸಾರ

ಹರೆಯದೆಲ್ಲ  ಎಲ್ಲೆ ದಾಟಿ
ಬಂದು ಸೇರಿದ್ದೆ ನೀನಾಗ
ಖಾಲಿ ಕೈಯ ಬಡವ ನಾನು
ನೀನೊಲಿದುದು ನನ್ನ ಯೋಗ

ನಿನಗೆ ನಾನು ನನಗೆ ನೀನು
ಎಂಬ ಭಾವ ನಮ್ಮ ಬೆಸೆದ ಬಂಧನ
ನಾವಿಬ್ಬರೂ ಒಂದಾದ ಮೇಲೆ
ಹಗಲಿರುಳಂತೆ ನಮ್ಮೀ ಆಲಿಂಗನ

ಅಂತರದ ಕಂದರವೇಕೆ
ನಮ್ಮಿಬ್ಬರ ಭಾವ ಬದುಕಲಿ
ಸುಂದರ ಸಂಸ್ಕಾರವಂತ
ಒಲವು ನಮ್ಮನಾಳುತಿರಲಿ

ಭೇದವನ್ನು ದೂರ ತಳ್ಳಿ
ಭಾವದಿಂದ ನಾವು  ಅರಳಿ
ಅಂತರದ ಬೇಗೆ ಕಳೆದು
ಅನುಬಂಧವ ಬೆಸೆದುಕೊಳ್ಳಲಿ

ಪ್ರೀತಿ ನಮ್ಮ ದೈವವು
ಬದುಕು ಅದರ ರೂಪವು
ಅಂಬರದ ಚುಕ್ಕಿ ತಾರೆ ನಾವಾಗಿ
ಅಂತರದ  ಅಪಸ್ವರವ ಮರೆಯುವ

0400ಪಿಎಂ07092017

*ಅಮುಭಾವಜೀವಿ*
[07/09 9:16 pm] ಅಮುಭಾವಜೀವಿ: *ನನ್ನಂತೆ ಬಾಳಬೇಕು*

ನನ್ನ ನೀ ಹಳಿಯಬೇಡ
ನಾನಿಲ್ಲಿ ಬೆಳೆದುಳಿಯಬೇಕು
ಇತರರೊಡನೆ ಹೋಲಿಸಬೇಡ
ನನ್ನಂತೆ ನಾನಿಲ್ಲಿ ಬಾಳಬೇಕು

ಈ ಬದುಕು ನನ್ನದು
ಅದನು ನಾ ಕಟ್ಟಿಕೊಳ್ಳಬೇಕು
ನೂರು ಕಷ್ಟಗಳೆದುರಾಗಲೇಳು
ನಾ ಗೆದ್ದು ಗಟ್ಟಿಗೊಳ್ಳಬೇಕು

ನನ್ನಂತೆ ನಾನಿರಲು ಬಿಡು
ಪ್ರವಾಹದಿಂದೆದ್ದು ಬರುವೆ
ದುಡಿಮೆಯೇ ನನ್ನ ಅಸ್ತಿತ್ವ
ಜತನದಿ ನಾ ಕಾಯ್ದುಕೊಳುವೆ

ಯಾರದೋ ಮಾತಿಗಂಜುವುದಿಲ್ಲ
ಅವರ ನೆಚ್ಚಿ ನಾ ಬಂದಿಲ್ಲ
ನನ್ನ ದಾರಿಯ ನಾನೇ ಸವೆಸಬೇಕು
ನನ್ನಾಸೆಯೆಂತೆ ನಾ ಜೀವಿಸಬೇಕು

ಕೈ ಹಿಡಿದ ನೀ ನನ್ನ
ಜೊತೆ ನಡೆ ಸಾಕು
ನಮ್ಮ ನೋಡಿ ಈ ಜಗ
ಮೆಚ್ಚಿ ತಲೆದೂಗಬೇಕು

ಸಂಗಾತಿಯಾದ ತಪ್ಪಿಗೆ
ನೀ ನನ್ನನನುಸರಿಸಬೇಕು
ತಾಳಿಪಾಶಕೆ ತಲೆ ಕೊಟ್ಟು
ತಾಳಿ ಬಾಳ ಬೇಕು.

0621ಪಿಎಂ070915

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ*
ಕೃಪೆ : ಫೇಸ್ ಬುಕ್

ಶುಭರಾತ್ರಿ ಸ್ನೇಹಿತರೇ
[08/09 9:51 pm] ಅಮುಭಾವಜೀವಿ: *ಒಲವ ಬೆಳಕಿನಿಂದ*

ನಿನ್ನ ನೋಟವೊಂದು ಕವಿತೆ
ನನ್ನ ಬಾಳಲದು ಹಚ್ಚಿದಂತೆ ಹಣತೆ
ಶಾಂತತೆಯಲಿ ಉರಿಯೇ ದೀಪ
ಕ್ರೋಧಗೊಂಡರೆ ಉಗ್ರ ರೂಪ

ನನ್ನ ನಿನ್ನ ನಡುವೆ
ಹರಿದಿದೆ ಒಲವ ಕಾಲುವೆ
ಆ ದಡದಿ ನೀನು ಈ ದಡದಿ ನಾನು
ಈ ನೋಟ ತರಂಗ ತಂತು ಸಂದೇಶವನು

ನೀನು ಭೂಮಿ ನಾನು ಬಾನು
ಕಿರಣ ಕಾಂತಿಗೆ ಒಲಿಯುವೆನು
ಪ್ರೀತಿ ಇಬ್ಬನಿ ಮೇಲೆ ನಿಂತು
ಹೊಳೆವ ಪುಳಕವ ನನಗೆ ತಂತು

ನಿನ್ನಧರ ಬಿರಿದ ಮಧುವ ಹೀರಿ
ನಾ ತೇಲುವೆ ದುಂಬಿಯಾಗಿ ಹಾರಿ
ಮುದ್ದಿಸುವಾ ಮುಂಗುರುಳು
ಇರುಳಬಾನ ಬೇಳಗೊ ಬೆಳ್ದಿಂಗಳು

ನಾನು ಜ್ಯೋತಿ ನೀನು ಬತ್ತಿ
ನಾವಿಬ್ಬರೇ ಆದರ್ಶ ದಂಪತಿ
ಕಳೆಯಬೇಕು ಬಾಳ ಕತ್ತಲೆ
ಒಲವ ಬೆಳಕಿನಿಂದಲೇ.

0237pm080915

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ.*

ಕೃಪೆ : ಫೇಸ್ ಬುಕ್

*ಶುಭರಾತ್ರಿ ಸ್ನೇಹಿತರೇ*
[09/09 3:50 pm] ಅಮುಭಾವಜೀವಿ: *೧•ಮಧುರ ಸಾಕ್ಷಿ*

ಮುತ್ತು ಮುತ್ತು ಸಿಹಿಮುತ್ತು
ಸೋತ ಮನಕೆ ತಾಕತ್ತು
ಆಪ್ತ ಭಾವದ  ಗಮ್ಮತ್ತು
ಅದುವೇ ಪ್ರೀತಿಯ ಸಂಪತ್ತು

ತಾಯಿಯ ಮಡಿಲಲಿ ಮಲಗುವ ಕಂದನ
ಭಯ ದೂರ ಮಾಡುವ ಸಿಹಿಮುತ್ತು
ಅಮ್ಮನು ನೀಡುವ ಭರವಸೆಯೊಂದೇ
ಕಂದನ ಮುದ್ದಿಸುವಾ ಸವಿಮುತ್ತು

ಸೋದರ ಭಾವದ ಬಂಧವು ಬೆಸವ
ಬಾಲ್ಯದ ಬಾಂಧವ್ಯದ ಸಿಹಿಮುತ್ತು
ಸ್ನೇಹದ ಸೌಹಾರ್ದದ  ಅಪ್ಪುಗೆಯ
ಸದ್ಭಾವದ ಸವಿ ಮುತ್ತು

ಹರೆಯದ  ಅಮಲಲಿ ಜೋಡಿ ಜೀವಗಳ
ಮಧುರ ಕ್ಷಣಗಳ ಸಾಕ್ಷಿ ಈ ಸಿಹಿಮುತ್ತು
ಪ್ರೀತಿಯ ಜ್ಯೋತಿಯ ಬೆಳಕಲಿ
ಕಣ್ಮುಚ್ಚಿ ಆನಂದಿಸುವ ಸವಿ ಹೊತ್ತು

ಬಾಳ ಹೋರಾಟದಲಿ ಸೋತ ಸಂಗಾತಿಯ
ಹುರಿದುಂಬಿಸುವ ಸಾಧನವೀ ಸಿಹಿಮುತ್ತು
ಎಲ್ಲಾ ನೋವನು ಕ್ಷಣದಲಿ ಮರೆಸುವ
ದಿವ್ಯೌಷಧಿ ಈ ಒಲವಿನ ಸವಿ ಮುತ್ತು

ಮುಪ್ಪಿನ ಕಾಲದಿ ಸವೆದ ಹಾದಿಯ
ಸವಿನೆನಪನು ಹಸಿರಾಗಿಸೋ ಸಿಹಿಮುತ್ತು
ಎಲ್ಲಾ ಕಾಲಕೂ  ಎಲ್ಲ ಕುಲಕೂ ಸಲ್ಲುವ  
ಗಟ್ಟಿ ನಿಲುವು ನೀಡುವ ಸವಿ ಮುತ್ತು

0235ಪಿಎಂ09092017

*ಅಮುಭಾವಜೀವಿ*

No comments:

Post a Comment