Saturday, August 31, 2019

ನಮ್ಮ ಬದುಕಿನ ನಿರ್ಮಾತೃ ಶಿಕ್ಷಕ

ವಿಷಯ :- *ನಮ್ಮ ಶಿಕ್ಷಕರು ನಮ್ಮ ಬದುಕಿನ ಮಾರ್ಗದರ್ಶಕರು*

ಲೇಖನದ  ಶೀರ್ಷಿಕೆ :-  *ನಮ್ಮ ಬದುಕಿನ ನಿರ್ಮಾತೃ ಶಿಕ್ಷಕ*

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಕವಿವಾಣಿಯಂತೆ ಗುರುವಿನ ಮಹತ್ವ ತುಂಬಾ ಅರ್ಥಪೂರ್ಣವಾಗಿ ಅಭಿವ್ಯಕ್ತವಾಗಿದೆ. ಮಾಂಸದ ಮುದ್ದೆಯಂತಹ ಮಗುವಿನಲ್ಲಿ ಸಮಾಜ ಒಪ್ಪಿತ ಸಂಸ್ಕಾರವನ್ನು ನೀಡುವುದರ ಮೂಲಕ ಚೆನ್ನಾಗಿ ರೂಪಿಸಲು ಭದ್ರ ಬುನಾದಿಯನ್ನು ಹಾಕುವಲ್ಲಿ ಶಿಕ್ಷಕರ ಪಾತ್ರ ಜವಾಬ್ದಾರಿಯುತವಾಗಿದೆ. ಶಿಕ್ಷಕ ತನ್ನ ಜ್ಞಾನದ ಜ್ಯೋತಿಯನ್ನು ಶಿಷ್ಯಂದಿರ ಮಸ್ತಕಕ್ಕೆ ತುಂಬುವ ಅವರ ಏಳಿಗೆಯಲ್ಲಿ ಖುಷಿಯನ್ನು ಕಾಣುವ ನಿಸ್ವಾರ್ಥ ವ್ಯಕ್ತಿ.

      ಪ್ರತಿಯೊಂದು ಮಗುವೂ ಶಾಲಾ ಶಿಕ್ಷಣದ ವ್ಯಾಪ್ತಿಗೊಳಪಟ್ಟು ವಿದ್ಯೆಯನ್ನು ಕಲಿಯುವುದು ಸಾಮಾನ್ಯ. ಆ ಕ್ಷೇತ್ರದಲ್ಲಿ ಶಿಕ್ಷಕ ಎಂಬ ವ್ಯಕ್ತಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಜೊತೆ ಜೊತೆಗೆ ಬದುಕಿನ ರೀತಿನೀತಿಗಳನ್ನು ಸಮಾಜದ , ದೇಶದ ಆಶಯ ಗುರಿಗಳನ್ನು ಮನದಟ್ಟು ಮಾಡಿಸಿ ಸಾಧನೆಯತ್ತ ಕೊಂಡೊಯ್ಯುವ ವಾಹಕನಾಗಿರುತ್ತಾನೆ. ಇಲ್ಲಿ ಅವನು ಜಾತಿ ಮತ ಪಂಥ ಶ್ರೀಮಂತ-ಬಡವ ಇತ್ಯಾದಿ ಯಾವುದೇ ಅಂಶಗಳನ್ನು ಪರಿಗಣಿಸದೆ ತನ್ನ ಶಿಷ್ಯ ಎಂದು ಸ್ವೀಕರಿಸಿ ಅವರ ಜ್ಞಾನವನ್ನು ಉನ್ನತೀಕರಿಸಲು ಪ್ರಯತ್ನಿಸುತ್ತಾನೆ.

        ಶಿಕ್ಷಕ ಎಂದರೆ ನಮ್ಮ ಬಾಳಿನ ಪ್ರಮುಖ ನಿರ್ಮಾತೃ. ಬೆಳೆಯುವ ಪೈರಿನ ಗುಣಗಳನ್ನು ಮೊಳಕೆಯಲ್ಲಿಯೇ ಗುರುತಿಸಿ ಅದಕ್ಕೆ ಸೂಕ್ತ ವೇದಿಕೆಗಳನ್ನು ನೀಡುತ್ತಾ ಮಾರ್ಗದರ್ಶಿಸುವ ಮೂಲಕ ಗುರಿಯೆಡೆಗೆ ತಲುಪಿಸುವಲ್ಲಿ ತನ್ನೆಲ್ಲ ಶ್ರಮವನ್ನು ವ್ಯಯಿಸುತ್ತಾನೆ. ಗುರು ತನ್ನ ಜ್ಞಾನ ಮತ್ತು ವಿದ್ವತ್ತನ್ನು ಬೇರೊಬ್ಬರಿಗೆ (ವಿದ್ಯಾರ್ಥಿಗಳಿಗೆ) ವರ್ಗಾವಣೆ ಮಾಡಿದಾಗ ಮಾತ್ರ ದೇಶದ ಶಕ್ತಿ, ಜ್ಞಾನ ಸಂಪತ್ತಿನ ವೃದ್ಧಿ ಸಾಧ್ಯವಿದೆ. ಅಂದರೆ ಆತ ಗಳಿಸಿದ ವಿದ್ಯೆಯನ್ನು ಬೇರೆಯವರಿಗೆ ಧಾರೆಯೆರೆದು ಅವರ ಬದುಕು ರೂಪಿಸುವಂತಹ ಪ್ರಾಮಾಣಿಕ ಕೆಲಸ ಮಾಡುವವನೇ ನಿಜವಾದ ಗುರು. ಮಕ್ಕಳು ತಮ್ಮ ಇಚ್ಛಾಶಕ್ತಿಯನ್ನು ಬಳಸಿಕೊಂಡು ಸನ್ಮಾರ್ಗದಲ್ಲಿ ನಡೆದಾಗ ಗುರುವಿನ ಬದುಕು ಸಾರ್ಥಕವಾಗುತ್ತದೆ.

       ಶಿಕ್ಷಕರು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಮಾರ್ಗದರ್ಶಕ. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರನ್ನು ನಾವು ನೋಡಿದ್ದೇವೆ. ಎಲ್ಲ ಸಾಧಕರ ಹಿಂದೆ ಗುರುವೊಬ್ಬ ಇದ್ದೇ ಇರುತ್ತಾನೆ. ಬದಲಾದ ಸಮಾಜಕ್ಕನುಗುಣವಾಗಿ ವಿದ್ಯಾರ್ಥಿಗಳನ್ನು ರೂಪಿಸುವುದೇ ಶಿಕ್ಷಕನ ಆದ್ಯ ಕರ್ತವ್ಯವಾಗಿರುತ್ತದೆ. *"ಆದರ್ಶಗಳ ಬಗ್ಗೆ ಮಾತನಾಡುವ ಶಿಕ್ಷಕನಾಗಿರದೇ ಶಿಕ್ಷಕನೇ ಆದರ್ಶವಾಗಿರಬೇಕು ಆಗ ಮಾತ್ರ ಇಡೀ ಸಮಾಜ ಅವನನ್ನು ಗೌರವಿಸುತ್ತದೆ".*ಪರರಲ್ಲಿ ದೋಷವನ್ನು ಹುಡುಕುವ ಬದಲು ತನ್ನ ದೋಷವನ್ನು ತಿದ್ದಿಕೊಳ್ಳುವವನೆ ಆದರ್ಶ ಶಿಕ್ಷಕ. "ಶಿಕ್ಷಕ ಕ್ರಿಯಾತ್ಮಕನಾಗಿರಬೇಕು. ಕೆಲಸದಲ್ಲಿ ವ್ಯತ್ಯಾಸವಾದಾಗ ಸಮಸ್ಯೆಯ ಮೂಲ ಹುಡುಕಿ ಅದರ ನಿವಾರಣೆಗೆ ಪ್ರಯತ್ನಿಸಬೇಕೇ ಹೊರತು , ಮೌನಕ್ಕೆ ಶರಣಾಗಬಾರದು. ಧೋರಣೆಯಲ್ಲಿ ಬದಲಾವಣೆ ತಂದು ಅನುಕರಣೀಯ ವಿಚಾರಗಳನ್ನು ಅಳವಡಿಸಿಕೊಳ್ಳುವ ಶಿಕ್ಷಕ ಶಿಕ್ಷಣದ ಮೂಲಕ ಸಮಾಜ ಸುಧಾರಣೆ ಮಾಡಬಲ್ಲ."

ಪ್ರತಿಯೊಬ್ಬ ಆದರ್ಶ ವ್ಯಕ್ತಿಗೆ ಆತನ ಗುರುವಿನ ಛಾಪು ಮಾತ್ರ ಸತ್ಯದ್ದೇ ಆಗಿರುತ್ತದೆ.  ವ್ಯಕ್ತಿ ತನ್ನ ಜೀವನ ರೂಪಿಸಿಕೊಳ್ಳಲು ಶಿಕ್ಷಕ ಅವಶ್ಯ. ಆ ಕಾರ್ಯವನ್ನು ಅನುಷ್ಠಾನಗೊಳಿಸುವವರು ಶಿಕ್ಷಕ. ಜ್ಞಾನ ನೀಡುವ ಜೊತೆ ತಿಳುವಳಿಕೆ ಮತ್ತು ನಡವಳಿಕೆಗಳನ್ನು ವ್ಯಕ್ತಿಯ ಜೀವನದಲ್ಲಿ ತುಂಬುವ ಶಕ್ತಿ ಶಿಕ್ಷಕನಿಗಿರುತ್ತದೆ. ಬದುಕಿನ ಅನುಕ್ಷಣದಲ್ಲೂ ದಾರಿತೋರುವ ಮಾರ್ಗದರ್ಶಕನಾಗಿರುತ್ತಾನೆ. *ಶಿಕ್ಷಕರ ನಡೆ ನುಡಿ ಸರಳತೆ ಮಕ್ಕಳ ಮೇಲಿನ ಪ್ರೀತಿ ಇವು ಶ್ರೇಷ್ಠ ಶಿಕ್ಷಕನ ಗುಣಗಳಾಗಿರುತ್ತವೆ. ಶಿಕ್ಷಕರು ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸಬೇಕು. ಅವನು ಸರ್ಕಾರ ಮೆಚ್ಚುವ ಶಿಕ್ಷಕನಾಗಿರುವ ಬದಲು ಜನ ಮೆಚ್ಚಿದ ಶಿಕ್ಷಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ ನಾಗಿರಬೇಕು.*  ವೈಜ್ಞಾನಿಕ ಮನೋಭಾವನ್ನು ಶಿಕ್ಷಕ ಹೊಂದಿದ್ದು ಅದನ್ನು ತನ್ನ ವಿದ್ಯಾರ್ಥಿಗಳಿಗೂ ವರ್ಗಾಯಿಸಬೇಕು. ಶಿಕ್ಷಕ ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ಇಂದೀಕರಿಸಿಕೊಂಡು ಅದನ್ನು ತನ್ನ ವಿದ್ಯಾರ್ಥಿಗಳಲ್ಲಿ  ಯಶಸ್ವಿಯಾಗಿ ಮೂಡಿಸಬೇಕಾಗಿದೆ.

     ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರು, ಶಿಕ್ಷಕ ಎಂಬ ಪದ ಅತ್ಯಂತ ಮಹತ್ವವಾದದ್ದು. ಗುರುವಿನಂತೆ ಶಿಷ್ಯ ರೂಪುಗೊಳ್ಳುತ್ತಾನೆ. ಹಾಗಾಗಿ ಗುರು ಸಮಾಜಮುಖಿಯಾಗಿದ್ದರೆ ಶಿಷ್ಯ ಸಮಾಜದ ಏಳಿಗೆಗೆ ಅಣಿಯಾಗುತ್ತಾನೆ. ಇಲ್ಲವಾದಲ್ಲಿ ಸಮಾಜ ಕಂಟಕನಾಗುತ್ತಾನೆ. ಹಾಗಾಗಿ ಶಿಕ್ಷಕ ಎಲ್ಲರ ಬದುಕಿನ ಮಾರ್ಗದರ್ಶಕನಾಗಿ, ಸಮಾಜದ ಏಳಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡಬೇಕು. ಗುರುಪರಂಪರೆ ಅತ್ಯಂತ ದೊಡ್ಡದಿದೆ. ಅದರ ಆಳ ಹರಿವುಗಳನ್ನು ಅರಿತು ತಮ್ಮ ವಿದ್ಯಾರ್ಥಿಗಳನ್ನು ರೂಪಿಸಬೇಕಾದ ಗುರುತರವಾದ ಹೊಣೆ ಶಿಕ್ಷಕರ ಮೇಲೆ ಇದೆ. *ಎಷ್ಟೇ ತಂತ್ರಜ್ಞಾನ ಮುಂದುವರೆದಿದ್ದರೂ ಅದು ಶಿಕ್ಷಕನ ಸ್ಥಾನವನ್ನು ತುಂಬಲಾರದು.*  ಹಾಗಾಗಿ ಶಿಕ್ಷಕ ತುಂಬಾ ಪ್ರಾಮಾಣಿಕನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳ, ನವಸಮಾಜದ ಬದುಕಿನ ಮಾರ್ಗದರ್ಶಕನಾಗಿ  ಶಿಕ್ಷಕ ಎಂದೆಂದೂ ಆದರಣೀಯವಾಗಿ, ಪೂಜಿತನಾಗಿ ಶಾಶ್ವತವಾದ ಸ್ಥಾನವನ್ನು ಪಡೆಯುತ್ತಾನೆ.

             ಇಂದು ನಾವೆಲ್ಲಾ ಏನೇನು ಆಗಿದ್ದೇವೆಯೋ ಅದಕ್ಕೆಲ್ಲ ಕಾರಣರಾದವರು ನಮ್ಮನ್ನು ತಿದ್ದಿ ತೀಡಿದ ಶಿಕ್ಷಕರಾಗಿದ್ದಾರೆ. ಬದುಕಿನ ಪ್ರತಿ ಹಂತದಲ್ಲೂ ಎದೆಗುಂದದೆ ಮುನ್ನಡೆಯುವ ಆತ್ಮ ವಿಶ್ವಾಸವನ್ನು ತುಂಬಿ ಈ ಸಮಾಜಕ್ಕೆ ನಮ್ಮನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಆಶಯಗಳು, ಆದರ್ಶಗಳು ನಮ್ಮನ್ನು ಇಂದಿಗೂ ಕಾಯುತ್ತಿವೆ. ಒಂದಕ್ಷರವನ್ನು ಕಲಿಸಿದಾತಂ ಗುರು ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಏಳಿಗೆಗೆ ಸಹಕರಿಸಿದ ಎಲ್ಲ ಗುರು ಸಮಾನರಾದ ವ್ಯಕ್ತಿಗಳಿಗೆ ನಾವು ಆಭಾರಿಯಾಗಿ ಋಣ ತೀರಿಸಬೇಕಾಗಿದೆ. ಆ ಮೂಲಕ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಅಂತಹ ಎಲ್ಲ ಮಹನೀಯರನ್ನು ಸ್ಮರಿಸುತ್ತಾ ನಮ್ಮ ಬಾಳ ಹಾದಿಯನ್ನು ಸವೆಸೋಣ ಅಲ್ಲವೇ.

*ಅಮುಭಾವಜೀವಿ ಮುಸ್ಟೂರು.*
ಶಿಕ್ಷಕರು.
ಮುಸ್ಟೂರು ಅಂಚೆ, ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ
8496819281

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರ ಸ್ಥಿತಿಗತಿಯ ಕುರಿತು ವಿಶೇಷ ಲೇಖನ


*ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಕರ ಸ್ಥಿತಿಗತಿಯ ಕುರಿತು ವಿಶೇಷ ಲೇಖನ*

ಶೀರ್ಷಿಕೆ :- *ಅನುಕೂಲಿಸುವವನ ಸ್ಥಿತಿಯೇ ಅನುಕೂಲಕರವಾಗಿಲ್ಲ*

ಮನುಷ್ಯನ ಅತ್ಯಂತ ಮಹತ್ವದ ಘಟ್ಟ ಎಂದರೆ ಬಾಲ್ಯ. ಇಲ್ಲಿ ನಲುಗಿದ ಮಗು ಕೆಲವೊಮ್ಮೆ ಅಪ್ರತಿಮ ಸಾಧನೆಯನ್ನು ಮಾಡಬಹುದು. ಇಲ್ಲಾ ಎಲ್ಲವೂ ಇದ್ದು ಏನನ್ನು ಸಾಧಿಸದೆ ಇರಬಹುದು. ಇದಕ್ಕೆಲ್ಲ ಮೂಲ ಕಾರಣ ಮಗುವಿನ ಬೆಳವಣಿಗೆಯಲ್ಲಿ ಶಿಕ್ಷಣದ ಪ್ರಭಾವ ಮತ್ತು ಅವಶ್ಯಕತೆ. ಪ್ರತಿ ಮಗುವು ಉತ್ತಮ ನಾಗರಿಕನಾಗಲು ಅವನ ಬಾಲ್ಯದ ಶಿಕ್ಷಣ ಅತ್ಯಂತ ಅವಶ್ಯಕವಾಗಿರುತ್ತದೆ. ಈ ಹಂತದಲ್ಲಿ ಶಿಕ್ಷಕನ ಪಾತ್ರ ತುಂಬಾ ಜವಾಬ್ದಾರಿಯುತವಾದುದ್ದಾಗಿದೆ. ಆದರೆ ಅಂತಹ ಜವಾಬ್ದಾರಿಯುತ ಸ್ಥಾನ ನಿಭಾಯಿಸಬೇಕಾದ ಶಿಕ್ಷಕರ ಬದುಕು ಗೊಂದಲದ ಗೂಡಾಗಿ, ನಿತ್ಯ ಅವನ ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.

      ಪ್ರತಿಯೊಬ್ಬ ವ್ಯಕ್ತಿ ಅವನ ಕಾಯಕಕ್ಕೆ ನ್ಯಾಯ ಒದಗಿಸಬೇಕಾದಲ್ಲಿ ಅವನು ಮಾನಸಿಕ ನೆಮ್ಮದಿ ಪಡೆದಿರಬೇಕಾಗುತ್ತದೆ. ಆದರೆ ಈ ಜಗತ್ತನ್ನು ಜ್ಞಾನದಿಂದ ಮುನ್ನಡೆಸಬೇಕಾದ ಶಿಕ್ಷಕ ನಿಜವಾಗಿಯೂ ಇಂದು ನೆಮ್ಮದಿಯಿಂದ ಇದ್ದಾನೆಯೇ? ಈ ಪ್ರಶ್ನೆಗೆ ಉತ್ತರ  ಹುಡುಕಹೊರಟರೆ ನಿಜವಾಗಲೂ ಸಂಕಷ್ಟಗಳ ಸರಮಾಲೆ ಅವನನ್ನು ಬಂಧಿಸಿ ಹಿಂಡಿ ಹಿಪ್ಪೆ ಮಾಡುತ್ತಿರುವುದು ಇಂದು ಶಿಕ್ಷಕ ಎಂತಹ ಶೋಚನೀಯ ಸ್ಥಿತಿಯಲ್ಲಿದ್ದಾನೆ ಎಂಬುದು ಗೊತ್ತಾಗುತ್ತದೆ. ಅತ್ಯಂತ ಗೌರವಿತವಾಗಿ ಬದುಕುತ್ತಿದ್ದ ಶಿಕ್ಷಕರ ಬದುಕು ಇಂದು ತೀರಾ ನಿಕೃಷ್ಟವಾದ, ಸದಾ ನಿಷ್ಠೂರಕ್ಕೆ ಗುರಿಯಾಗುವ ಮೂಲಕ ತೀರ ಕೆಳಹಂತದ ಮಾತುಗಳಿಗೆ ಆಹಾರವಾಗಿದ್ದಾರೆ.

     ಹಿಂದೆ ಹರ ಮುನಿದರೂ ಗುರು ಕಾಯುವನು ಎಂಬ ಮಾತಿತ್ತು ಆದರೆ ಇಂದು ಗುರು ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದ ಇಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಜ್ಞಾನಿಯಾಗಿ ತನ್ನ ಜ್ಞಾನವನ್ನು ಸಮಾಜದ ಆಸ್ತಿಯನ್ನಾಗಿ ಮಾಡುತ್ತಿದ್ದ. ಆದರೆ ಇಂದಿನ ಶಿಕ್ಷಕರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಅವನ ಜ್ಞಾನ ವರ್ಗಾವಣೆಯಾಗುವುದು ಇರಲಿ ಅದು ತುಕ್ಕು ಹಿಡಿಯುತ್ತಿದೆ. ಕಾರಣ ಅವನಿಗೆ ಇರುವ ಒತ್ತಡಗಳು ಕೆಲಸವನ್ನು ನಿಭಾಯಿಸಲು ಆಗದಷ್ಟು ಅವನನ್ನು ಬಂಧಿಸಿ ಬಿಟ್ಟಿವೆ. ಮೊದಲೆಲ್ಲಾ ಶಾಲೆ ಪ್ರಾರಂಭವಾಗುವುದಕ್ಕೆ ಮುನ್ನ ಅವನು ಅಧ್ಯಯನ ಶೀಲನಾಗಿ ಸಿದ್ದವಾಗಿ ಬರುವ ಪರಿಪಾಠವಿತ್ತು. ಆದರೆ ಈಗ ತಡರಾತ್ರಿಯವರೆಗೂ ಇಲಾಖೆ ಕೇಳುವ ದಾಖಲೆಗಳನ್ನು ಅಂತರ್ಜಾಲದ ಹೊಟ್ಟೆಗೆ ತುಂಬಿಸಬೇಕು. ಮಗುವಿನ ಎಸ್ಟಿಎಸ್ ನಿಂದ ಹಿಡಿದು ಅವನ ವಿದ್ಯಾರ್ಥಿವೇತನ, fa1 sa1 fa2 sa2, ದೈನಂದಿನ ಹಾಜರಾತಿ, ಬಿಸಿಯೂಟ , ಕ್ಷೀರಭಾಗ್ಯ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ, ವರ್ಗಾವಣೆ ಪತ್ರ ಹೊರಗೆ ಕಳಿಸುವ ಮತ್ತು ಒಳಗೆ ತೆಗೆದುಕೊಳ್ಳುವ ಪ್ರಕ್ರಿಯೆ, ಶಾಲೆ ಬಿಟ್ಟ ಮಕ್ಕಳ ದಾಖಲೆ, ಅಂಗವಿಕಲ ಮಕ್ಕಳ ದಾಖಲೆ, ಮಾತ್ರೆ ಚುಚ್ಚುಮದ್ದುಗಳನ್ನು ಹಾಕಿಸಿದ ದಾಖಲೆ, ಇತ್ಯಾದಿಗಳನ್ನು ನಿಗದಿತ ಸಮಯದೊಳಗೆ ಇಂದೀಕರಿಸುವ, ಹಾಗೂ ದಾಖಲೆಗಳನ್ನು ಸೂಕ್ತ ನಿರ್ವಹಣೆ ಮಾಡುವ ಅತಿ ತುರ್ತು ಕಾರ್ಯಗಳು ಅವನ ಹಸಿವು ನಿದ್ರೆಗಳನ್ನೇ ಮರೆಸಿಬಿಟ್ಟಿವೆ. 

         ಇಂತಹ ಒತ್ತಡದ ಪರಿಸ್ಥಿತಿಯಿಂದಾಗಿ ಅವನ ಆರೋಗ್ಯದಲ್ಲಿ ಏರುಪೇರುಗಳಾಗಿ ಅದರ ಖರ್ಚು-ವೆಚ್ಚಗಳಿಗೆ ತನ್ನದೇ ದುಡಿಮೆಯ ಬಹುಪಾಲು ವೆಚ್ಚವನ್ನು ಭರಿಸಬೇಕಾಗುತ್ತದೆ . ಇಷ್ಟೇ ಅಲ್ಲದೆ ಸಂಸಾರ ಮಕ್ಕಳು ಸಂಬಂಧಿಕರು ಹಬ್ಬ-ಹರಿದಿನಗಳು ಸಂತೋಷಕೂಟಗಳು ಮದುವೆ ಮುಂಜಿ ಇವು ಯಾವುದರಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗದೆ ಬಳಲಿ ಬೆಂಡಾಗಿ ಹೋಗಿದ್ದಾನೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಇಲಾಖೆಯ ಎಲ್ಲಾ ಒತ್ತಡವು ಕೆಳ ಹಂತದಲ್ಲಿರುವ ಶಿಕ್ಷಕನ ಮೇಲೆ ಬಿದ್ದು ಅದರಿಂದ ಪಾರಾಗಲು ಆಗದೆ ನಿತ್ಯ ಒದ್ದಾಡಿ ಹೈರಾಣಾಗಿದ್ದಾನೆ.

            ಶಿಕ್ಷಕನ ಪ್ರಮುಖವಾದ ಕಾರ್ಯ ಬೋಧನೆ. ತನ್ನ ವಿದ್ಯಾರ್ಥಿಗಳಿಗೆ ನಿಗದಿತ ಪಠ್ಯಕ್ರಮವನ್ನು ಅತ್ಯಂತ ಪ್ರಾಮಾಣಿಕವಾಗಿ ಅಷ್ಟೇ ಕಾಳಜಿಯಿಂದ ಮನವರಿಕೆ ಮಾಡಿಸಿ ಪರೀಕ್ಷೆಯೆಂಬ ಹೋರಾಟದಲ್ಲಿ ಅವನು ಜಯಶಾಲಿಯನ್ನಾಗಿಸಿದಾಗಲೇ ಶಿಕ್ಷಕನಿಗೆ ಕೆಲಸದ ತೃಪ್ತಿ. ಆದರೆ ಇಂದು ಶಿಕ್ಷಕರನ್ನು ಮಕ್ಕಳ ಬಳಿಗೆ ಹೋಗಲು ಬಿಡುತ್ತಿಲ್ಲ. ಅವನ ಅನ್ಯ ಕಾರ್ಯಗಳು , ಕ್ಷಣಕ್ಷಣಕ್ಕೊಂದು ನಿಯಮ, ಆ ನಿಯಮಗಳಿಗೆ ಪದೇ ಪದೇ ಕೇಳುವ ಮಾಹಿತಿಗಳು, ಮಾಹಿತಿಗಳನ್ನು ಕಲೆ ಹಾಕಲು, ಪೋಷಕರೊಡನೆ ಇಲಾಖೆಯೊಡನೆ ನಿತ್ಯ ಪರದಾಡಬೇಕು. ಇದರ ಜೊತೆಗೆ ಸಭೆಗಳು, ತರಬೇತಿಗಳು, ಪ್ರತಿಭಾ ಕಾರಂಜಿ , ಕಲಿಕೋತ್ಸವ, ಕ್ರೀಡಾಕೂಟ, ಇನ್ಸ್ಪೈರ್ ಅವಾರ್ಡ್, ಸಮವಸ್ತ್ರ, ಪಠ್ಯಪುಸ್ತಕ, ಡೈರಿ, ಷೂ ಸಾಕ್ಸ್, ಸೈಕಲ್ ವಿತರಣೆ, ಚುನಾವಣೆ ಕೆಲಸ, ಮತಪಟ್ಟಿ ಪರಿಷ್ಕರಣೆ, ಜನಗಣತಿ, ಗ್ರಾಮದಲ್ಲಿ ನಡೆಯುವ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ, ಎಸ್ಡಿಎಂಸಿ ರಚನೆ, ಪ್ರೇರಣೆ, ಮೀನಾ ತಂಡ , ಸ್ವಚ್ಛ ಭಾರತ ಹೀಗೆ ಲೆಕ್ಕವಿಲ್ಲದಷ್ಟು ಯೋಜನೆಗಳು ಶಿಕ್ಷಕನ ಬೋಧನಾ ಕಾರ್ಯಕ್ಕೆ ದೊಡ್ಡ ತೊಡಕನ್ನು ಉಂಟುಮಾಡಿವೆ. ಹೀಗೆ ಹತ್ತು ಹಲವಾರು ಯೋಜನೆಗಳಲ್ಲಿ ಕಳೆದುಹೋದ ಶಿಕ್ಷಕನಿಗೆ ಈಗ ಹೊಸ ನಾಮಕರಣವಾಗಿದೆ. ಅದು ಶಿಕ್ಷಕ ಕಲಿಕೆಗೆ  *"ಅನುಕೂಲಿಸುವವ, ಸುಗಮಕಾರ" ಎಂದೆಲ್ಲ ಕರೆಯಲಾಗುತ್ತದೆ. ಆದರೆ ಸುಗಮಕಾರನ ಹಾದಿಯೇ ಸುಗಮವಾಗಿಲ್ಲ. ಅನುಕೂಲಿಸುವವನ ಸ್ಥಿತಿಯೇ ಅನುಕೂಲಕರವಾಗಿಲ್ಲ.* ಆದರೂ ಇಷ್ಟೆಲ್ಲದರ ನಡುವೆಯೂ ಮಕ್ಕಳ ಕಲಿಕೆಗಾಗಿ, ಇಲಾಖೆಯ ಆಶೋತ್ತರಗಳ ಈಡೇರಿಕೆಗಾಗಿ, ಅವಿರತವಾಗಿ ಶ್ರಮಿಸುತ್ತಾ ಬರುತ್ತಿದ್ದಾನೆ.

           ಈ ಎಲ್ಲ ಕಾರ್ಯವನ್ನು ಅದು ಹೇಗೋ ನಿಭಾಯಿಸಿಕೊಂಡು ಬರುವವನನ್ನು ಈಗ ಮತ್ತೊಂದು ಅತಿ ದೊಡ್ಡ ಸಮಸ್ಯೆ ಅವನನ್ನು ಪೆಡಂಭೂತವಾಗಿ ಕಾಡುತ್ತಿದೆ. ಅದೇನೆಂದರೆ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಅವನ ಹಂಬಲಕ್ಕೆ ವರ್ಗಾವಣೆ ಎಂಬ ಪ್ರಹಸನವು ಪದೇಪದೇ ತಣ್ಣೀರೆರೆಚಿ ಹಾವೂ ಸಾಯದ ಕೋಲು ಮುರಿಯದ ಅತಂತ್ರ ಸ್ಥಿತಿಯಲ್ಲಿ ಸಿಲುಕಿ ಒದ್ದಾಡಿ ನಿತ್ರಾಣವಾಗಿ ಹೋಗಿದ್ದಾರೆ. ವರ್ಷಗಟ್ಟಲೆ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದರು, ಅವರಿಗೆ ಕೊನೆಗೆ ಸಿಗುವುದು ಹೊಸ ಸ್ಥಳಕ್ಕೆ ನಿಯಕ್ತಿಯಲ್ಲ ಬದಲಾಗಿ, ಕೆಲವು ವರ್ಷದ ಸೇವೆಯೊಂದಿಗೆ ತನ್ನ ಊರು ಮನೆ-ಮಠ ಸಂಬಂಧಿಕರು ಹೆತ್ತವರೊಂದಿಗೆ ಸೇರಿಕೊಳ್ಳುವ ಅವಕಾಶವನ್ನೇ ನೀಡದ ನಿಯಮಗಳು ಅವನ ವೃತ್ತಿ ಕ್ಷಮತೆಯನ್ನು ಕ್ಷೀಣಿಸುವಂತೆ ಮಾಡಿದೆ.

      ಹಿಂದಿನ ಕಾಲದಲ್ಲಿ ಶಿಕ್ಷಕರೆಂದರೆ ಸಮಾಜದಲ್ಲಿ ಗೌರವ ಭಾವನೆಯಿಂದ ನೋಡುತ್ತಿದ್ದರು. ಸಭೆ-ಸಮಾರಂಭಗಳಲ್ಲಿ ವಿಶೇಷವಾದ ಮನ್ನಣೆಯನ್ನು ನೀಡುತ್ತಿದ್ದರು. ಗುರು ಎಂದರೆ ಅದೇನೋ ವಿಶೇಷವಾದ ಅಭಿಮಾನ ಅಕ್ಕರೆ ಇರುತ್ತಿತ್ತು. ಆದರೆ ಇಂದು ಇಂತಹ ಯಾವುದನ್ನು ಕಾಣದಾಗಿದೆ. ಪ್ರತಿಯೊಂದಕ್ಕೂ ಶಿಕ್ಷಕನನ್ನೇ ಹೊಣೆಗಾರರನ್ನಾಗಿ ಮಾಡಿ ಅವನ ಅಸ್ಮಿತೆಯನ್ನು ಹುಡುಗಿಸಿಬಿಟ್ಟಿದೆ. ಸಾರ್ವಜನಿಕರು, ಅಧಿಕಾರಿಗಳು, ಪೋಷಕರು ಎಲ್ಲರ ದೃಷ್ಟಿಯಲ್ಲೂ ಶಿಕ್ಷಕ ಅಪರಾಧಿ ಸ್ಥಾನದಲ್ಲಿದ್ದಾನೆ. ಅವನ ಬದ್ಧತೆಗಿಂತಲೂ ಅವನ ಮೇಲಿನ ದ್ವೇಷವೂ ಕೂಡ ಅವನು ವೃತ್ತಿಯನ್ನು ಗೌರವಿಸದಂತೆ ಮಾಡಿಬಿಟ್ಟಿದೆ.

        ಮೊದಲೆಲ್ಲಾ ಶಿಕ್ಷಕರು ಎಂದರೆ ಎಲ್ಲೆಡೆಯಲ್ಲೂ ಅವನ ಕೆಲಸಗಳು ಸುಸೂತ್ರವಾಗಿ ಸಾಗುತ್ತಿದ್ದವು. ಯಾವುದೇ ಕಚೇರಿಗೆ ಹೋದರು ಮೊದಲ ಆದ್ಯತೆಯಲ್ಲಿ ಆತನನ್ನು ಆದರಣೀಯವಾಗಿ ಕಂಡು ಅಷ್ಟೇ ಗೌರವಿತವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಇಂದು ಒಬ್ಬ ತರಕಾರಿ ಮಾರುವವನಿಂದ ಹಿಡಿದು ಉನ್ನತ ಅಧಿಕಾರಿಗಳ ವರೆಗೂ ಅವನನ್ನು ನಿಷ್ಕೃಷ್ಟವಾಗಿ ಕಾಣುತ್ತಿದ್ದಾರೆ. ಆಗ ಶಿಕ್ಷಕನ ವೈಯಕ್ತಿಕ ಕೆಲಸಗಳು ಒಂದು ಪೈಸೆ ಖರ್ಚಿಲ್ಲದೆ ‌  ಆಗುತ್ತಿದ್ದವು. ಆದರೆ ಇಂದು ಶಿಕ್ಷಕ ತನ್ನ ಇಲಾಖೆಯ ಕೆಲಸಗಳಿಗೂ ಒಂದು ಪೈಸೆ ಕಡಿಮೆ ಇದ್ದರೂ ಕೆಲಸ ಮಾಡಿಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಪ್ರತಿಯೊಬ್ಬರು ಅನುಮಾನಿಸುವ, ಅವಮಾನಿಸುವ ಅವಹೇಳನಕಾರಿಯಾಗಿ ಮಾತನಾಡುವ ಮಟ್ಟಕ್ಕೆ ಶಿಕ್ಷಕರ ನೈತಿಕತೆಯನ್ನು ಕುಂದಿಸಿದೆ.

       ನಿಜಕ್ಕೂ ಶಿಕ್ಷಕ ವೃತ್ತಿ ಅತ್ಯಂತ ಪಾರದರ್ಶಕವಾದ , ಸ್ವ ಹಿತಾಸಕ್ತಿಯನ್ನು ಬಯಸದ, ವಿದ್ಯಾರ್ಥಿಗಳ ಏಳಿಗೆಯಲ್ಲಿ ತನ್ನ ಖುಷಿಯನ್ನು ಕಾಣುವ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಧಾರೆಯೆರೆಯುವ ಪವಿತ್ರವಾದುದಾಗಿತ್ತು. ದೇವರಿಗಿಂತಲೂ ಒಂದು ಸ್ಥಾನ ಹೆಚ್ಚು ಎಂದು ಭಾವಿಸಿದ್ದ ಗುರುಸ್ಥಾನ ಇಂದು ಅಪಾಯ ಮಟ್ಟ ತಲುಪಿದೆ. ಗುರುವನ್ನು ಗೌರವಿಸದ ಯಾವ ಸಮಾಜವೂ ಉಳಿದಿಲ್ಲ. ಗುರು ಕಾಯ್ವನು ಎಂಬ ಸಮಾಧಾನವಿತ್ತಾದರೂ ಇಂದು ಯಾರನ್ನು ಯಾರೂ ಕಾಯುವವರಿಲ್ಲ. ಅವರವರ ಕರ್ಮವನ್ನು ಅವರೇ ಅನುಭವಿಸಬೇಕು. ಗುರು ಮುನಿದರೆ ಹರನು ಕೂಡ ನಡುಗುತ್ತಿದ್ದ ಅಂದು, ಇಂದು ಗುರು ಮುನಿದು ಸಮಾಜಕ್ಕೆ ಗರ ಬಡಿದರೆ ಅದನ್ನು ಶಮನ ಮಾಡಲು  ಮತ್ತದೇ ಗುರು ಬರಬೇಕು. ಸಮಾಜ ಅದಃಪತನಕ್ಕೆ ತಲುಪುವ ಮೊದಲು ಶಿಕ್ಷಕನ ಸ್ಥಾನಕ್ಕೆ ನ್ಯಾಯಯುತವಾದ ಗೌರವಾದರ ಅಭಿಮಾನಗಳನ್ನು ನೀಡುತ್ತಾ ನಮ್ಮ ಸಮಾಜದಲ್ಲಿ ಗುರು ಪೂಜನೀಯವಾಗುವ ಕಾಲ ಆದಷ್ಟು ಬೇಗ ಬರಲಿ. ಆಗಲಾದರೂ ಶಿಕ್ಷಕರ ದಿನಾಚರಣೆಗೆ ಒಂದು ಗೌರವ ಸಮರ್ಪಿಸಿದಂತಾಗುತ್ತದೆ.  ಆ ನಿಟ್ಟಿನಲ್ಲಿ ಪ್ರಜ್ಞಾವಂತರು ಚಿಂತನೆಯನ್ನು  ಮಾಡಿ ಸಮಾಜದ ಮನೋಭಾವವನ್ನು ಸರಿಪಡಿಸುವಂತಾಗಲಿ.

ಎಲ್ಲರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು. ಗುರುಕಾರುಣ್ಯ ಎಲ್ಲರ ಮೇಲೂ ನಿರಂತರವಾಗಿರಲಿ.

ಅಮು ಭಾವಜೀವಿ (ಅಪ್ಪಾಜಿ ಎ ಮುಸ್ಟೂರು)
ಮುಸ್ಟೂರು ಅಂಚೆ
ಜಗಳೂರು ತಾಲೂಕು
ದಾವಣಗೆರೆ ಜಿಲ್ಲೆ
ಪಿನ್ 5 7 7 5 2 8
ಮೊಬೈಲ್ ಸಂಖ್ಯೆ 8496819281

Saturday, August 10, 2019

ಲೇಖನ

ವಿಷಯ_ - *ಸಧೃಡ ಭಾರತ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ*

ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಮಾನವಸಂಪನ್ಮೂಲದ ಸದ್ಬಳಕೆ ಅತ್ಯಂತ ಅವಶ್ಯಕವಾಗಿರುತ್ತದೆ.    ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಅಭಿವೃದ್ಧಿಯ ಮಾನದಂಡವಾಗಿ ಅಲ್ಲಿನ ಯುವ ಸಮುದಾಯ ಹೆಚ್ಚಿನ ಜವಾಬ್ದಾರಿಯನ್ನು ಬರಬೇಕಾಗುತ್ತದೆ. ಇದನ್ನು ಜಾಗರೂಕತೆಯಿಂದ ಯಶಸ್ವಿಯಾಗಿ ಬಳಸಿಕೊಳ್ಳುವ ಹೊಣೆಗಾರಿಕೆ ಸರ್ಕಾರದ್ದಾಗಿರುತ್ತದೆ.

         ಒಂದು ದೇಶ ಸದೃಢವಾಗಬೇಕಾದರೆ ಆ ದೇಶದಲ್ಲಿ ಇರುವ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಯುವಕರನ್ನು ಇಲ್ಲಿ ತೊಡಗಿಸಿಕೊಂಡಾಗ ಮಾತ್ರ ದೇಶದ ರಕ್ಷಣೆ ಆರ್ಥಿಕತೆ ಸಾಮಾಜಿಕ ಮೌಲ್ಯಗಳು ಅತ್ಯಂತ ಹೆಚ್ಚು ಪ್ರಬಲಗೊಂಡಾಗ ದೇಶ ತಾನೇತಾನಾಗಿ ಸದೃಢವಾಗುತ್ತದೆ.

          ನಮ್ಮ ದೇಶ ಆಪಾರ ಮಾನವ ಸಂಪನ್ಮೂಲವನ್ನು ಹೊಂದಿದ್ದರೂ ಸಹ ಅಭಿವೃದ್ಧಿಯಲ್ಲಿ ಇನ್ನೂ ಹಿನ್ನಡೆ ಸಾಧಿಸಲು ಮೂಲಕಾರಣ ನಮ್ಮ ಯುವಸಮುದಾಯ ಕೇವಲ ಸರ್ಕಾರಿ ಕೆಲಸವನ್ನು ಮಾತ್ರ ನಂಬಿಕೊಂಡಿರುವುದೇ ಆಗಿದೆ . ಅದರ ಬದಲಿಗೆ ತಮ್ಮ ಕೌಶಲ್ಯದ ಆಧಾರದ ಮೇಲೆ ವೃತ್ತಿಯನ್ನು ಕಂಡುಕೊಂಡು ಅದನ್ನು ರಯ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾವಹಾರಿಕ ಜ್ಞಾನದಿಂದ ಹೆಚ್ಚು ಸಂಪಾದನೆ ಯಾಗುವಂತೆ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ನಮ್ಮ ಯುವ ಸಮುದಾಯ ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿದೆ.

*ನಮ್ಮ ಯುವಕರು ಮೊದಲು ದೇಶಕ್ಕಾಗಿ ನಾನು ಏನಾದರೂ ಮಾಡಬೇಕೆಂಬ ಬೆಳೆಸಿಕೊಳ್ಳಬೇಕು.*

*ತಾನು ಪಡೆದ ಶಿಕ್ಷಣ ತನ್ನ ದೇಶಕ್ಕಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು.*

*ಸರ್ಕಾರ ಕೊಡುವ ಉಚಿತ ಶಿಕ್ಷಣವನ್ನು ಪಡೆದುಕೊಂಡು ಸ್ವಂತ ಉದ್ಯೋಗ ಕೈಗೊಂಡು ದೇಶದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುವುದು.*

*ಜ್ಞಾನ ಪಲಾಯನವನ್ನು ತಪ್ಪಿಸಿ ಅದನ್ನು ದೇಶಕ್ಕಾಗಿ ಮುಡಿಪಾಗಿಡಬೇಕು.*

*ಪ್ರತಿಯೊಬ್ಬ ಯುವಕರು ತನ್ನದೇ ಆದ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಂಡು ಅದನ್ನೇ ಬಂಡವಾಳವಾಗಿಸಿಕೊಳ್ಳುವತ್ತ ಗಮನಹರಿಸಬೇಕು.*

*ಎಲ್ಲಕ್ಕೂ ಸರ್ಕಾರವನ್ನು ಅವಲಂಬಿಸಿದೆ ಸ್ವ ಉದ್ಯೋಗ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು.*

*ವ್ಯವಸ್ಥೆಯನ್ನು ದೂರುವ ಬದಲು ವ್ಯವಸ್ಥೆಯನ್ನೇ ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.*

*ದೇಶಕ್ಕಾಗಿ ನಾನು ಪರಿಕಲ್ಪನೆ ಎಲ್ಲರ ಮನಸ್ಸಿನಲ್ಲಿ ಮೂಡಬೇಕು.*

*ಸಾಮಾಜಿಕ ಸ್ಥಿತ್ಯಂತರಗಳನ್ನು ಮೆಟ್ಟಿನಿಂತು ಬೆಳೆಯಬೇಕು.*
         
           ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬ ಯುವಕರು ದೇಶದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿ, ಮಾನವ ಸಂಪನ್ಮೂಲ ಸದ್ಬಳಕೆಯಾಗುವಂತೆ ಎಲ್ಲರೂ ಯೋಜನೆಗಳನ್ನು ರೂಪಿಸಿಕೊಂಡು ದೇಶದ ಪ್ರಗತಿಗೆ ತಮ್ಮ ಅಳಿಯ ಸೇವೆಯನ್ನು ಸಲ್ಲಿಸಿದಾಗ ಮಾತ್ರ  ಈ ದೇಶ ಸಮರ್ಥ ಸದೃಢ ದೇಶ ವಾಗುವುದರಲ್ಲಿ ಎರಡು ಮಾತಿಲ್ಲ

*ಅಮುಭಾವಜೀವಿ*