Saturday, February 8, 2020

ಕವಿತೆ

*ಇನ ತೆರೆದ ಬಾಗಿಲು*

ಬಾನಲ್ಲಿ ಮೂಡಿತೊಂದು
ಬೆಳಕಿನ ಆಶಾಕಿರಣ
ಜಗದ ಎಲ್ಲ ಕ್ರಿಯೆಗಳಿಗೆ
ಅದುವೇ ನಿತ್ಯ ಪ್ರೇರಣ

ಇರುಳ ಬೆರಳ ಹಿಡಿದು ನಡೆಸಿ
ವಿಶ್ರಾಂತಿಗೆ ವಿರಾಮ ಕೊಡಿಸಿ
ಮುಂಜಾನೆಯ ಮುದ ತಂದ
ಒಂಟಿಕಾಲ ಸೂರ್ಯಕಾಂತಿ
ಬಿರಿದರಳಿ ರವಿಗೆ ನಮಸಿ
ಸ್ವಾಗತಿಸಲು ಓಡಿ ಬಂದ

ಹರಿವ ನೀರ ಬಳುಕಿನಲ್ಲಿ
ನಲಿದ ತಾ ಹೊಳೆಯುತಲಿ
ಸಾಗರಕೆಲ್ಲ ಹೊಂಬಣ್ಣ ಚೆಲ್ಲಿದ
ಹಕ್ಕಿ ಗಾನ ಮಾಧುರ್ಯಕೆ
ಮನಸೋತು ಮೌನದಿಂದ
ಬೆಳಕಿನ ರಥವನೇರಿ ಬಂದ

ಮುತ್ತಿನ ಮಣಿ ಪೋಣಿಸಿ
ಪ್ರಕೃತಿ ತಾನು ಸಂ‌ಭ್ರಮಿಸಿ
ದಿನಕರನ ಸ್ವಾಗತಿಸಲು
ಬೆಳ್ಮುಗಿಲ ಮರೆಯಿಂದ
ಹೊಂಬೆಳಕಿನ ಚೆಲುವಿಂದ
ಇನ ತೆರೆದ ದಿನದ ಬಾಗಿಲು

0713ಎಎಂ08022018

*ಅಮುಭಾವಜೀವಿ*

ನೀ ಬಯಸಿದ ಹಾಗೆಲ್ಲ
ನಾ ಬದುಕಿಸಲಾಗಲಿಲ್ಲ
ಬಡವ ನಾನು
ಪ್ರೀತಿಯಲಿ ಕೈತುತ್ತನಿತ್ತು
ಭೂತಾಯ ಮೇಲ್ಮಲಗಿಸಿ
ಜೋಗುಳ ಹಾಡುವೆನು,
ನನ್ನ ತೋಳ ಬಂಧಿಯೇ
ಆಭರಣ
ಸವಿ ಮಾತೆ  ಸಿಹಿಯೂರಣ
ಈ ಗುಡಿಸಲೇ ಅರಮನೆ
ಆದರೆ ಇಲ್ಲಿ ಒಲವಿನದೇ
ಆರಾಧನೆ.
ಗೆಳತಿ ಬಡವ ನಾನು
ಪ್ರೀತಿಯಲ್ಲಿ ಧನಿಕನು.

834am080215

ಕವಿತೆ

*#ನನ್ನನುಳಿಸಿಕೊಳ್ಳದೆ*

ತುಂಬಾ ನೋವಿದೆ 
ಈ ಮಣ್ಣಿನೊಳಗೆ

ರೈತನ ನೇಗಿಲಿಗೆ ಎದೆಯೊಡ್ಡಿ
ಒಡಲ ಕೊಯ್ದ ಕೆಂಪು ಮಣ್ಣು ನನ್ನದು 
ಅವನಿತ್ತ ಬೀಜಗಳ ಮೊಳೆಸಿ 
ಒಂದನು ಹತ್ತಾಗಿಸಿ ಮತ್ತೆ  
ಹಿಂತಿರುಗಿಸೊ ಹೊಣೆ ನನ್ನದು

ಮಳೆಯ ರಭಸಕ್ಕೆ ಮೈಚೆಲ್ಲಿ
ನನ್ನೊಡಲನೆಲ್ಲ ಅಲ್ಲಿ ಹರಿಸಬೇಕು 
ಚೂರುಪಾರು ಉಳಿದ ಕೊರಕಲಿನಲ್ಲಿ
ಇದ್ದ ಬೀಜಗಳಿಂದ ಹಸಿರ ಚಿಗುರಿಸಬೇಕು

ಗಾಳಿಯಲಿ ಧೂಳಾಗಿ ಹೋಗಿ 
ಆಶ್ರಯವಿಲ್ಲದ ಅನಾಥವಾಗಿ 
ಬಿಸಿಲ ಬೇಗೆಯ ಬರಗಾಲಕೆ 
ಬರಿಗೈಯ ತಾಯಾಗಿ ಕೊರಗಬೇಕು

ಬಿಸಿಲು ಮಳೆ ಗಾಳಿಗಳ ದಾಳಿಯಿಂದ 
ಭರವಸೆ ಕಳೆದುಕೊಳ್ಳದೆ ಉಳಿಯಬೇಕು
ಮಾನವನ ಬೃಹತ್ ಯಂತ್ರಗಳ
ಅತ್ಯಾಚಾರಕೆ ನಿತ್ಯ ಬಲಿಯಾಗಬೇಕು

ಎಂದಿಗೆ ಇದು ಕೊನೆ 
ನಾವಿದ್ದರೆ ತಾನೆ ಬೆಳೆಗೆ ತೆನೆ 
ನನ್ನನುಳಿಸಿಕೊಳ್ಳದೆ ಹೋದರೆ ನಿಮಗೆ 
ಖಂಡಿತ ನಿತ್ಯ ನರಕದ ಬೇಗೆ 

1026ಪಿಎಂ26022014

*ಅಮುಭಾವಜೀವಿ*