Saturday, February 8, 2020

ಕವಿತೆ

*#ನನ್ನನುಳಿಸಿಕೊಳ್ಳದೆ*

ತುಂಬಾ ನೋವಿದೆ 
ಈ ಮಣ್ಣಿನೊಳಗೆ

ರೈತನ ನೇಗಿಲಿಗೆ ಎದೆಯೊಡ್ಡಿ
ಒಡಲ ಕೊಯ್ದ ಕೆಂಪು ಮಣ್ಣು ನನ್ನದು 
ಅವನಿತ್ತ ಬೀಜಗಳ ಮೊಳೆಸಿ 
ಒಂದನು ಹತ್ತಾಗಿಸಿ ಮತ್ತೆ  
ಹಿಂತಿರುಗಿಸೊ ಹೊಣೆ ನನ್ನದು

ಮಳೆಯ ರಭಸಕ್ಕೆ ಮೈಚೆಲ್ಲಿ
ನನ್ನೊಡಲನೆಲ್ಲ ಅಲ್ಲಿ ಹರಿಸಬೇಕು 
ಚೂರುಪಾರು ಉಳಿದ ಕೊರಕಲಿನಲ್ಲಿ
ಇದ್ದ ಬೀಜಗಳಿಂದ ಹಸಿರ ಚಿಗುರಿಸಬೇಕು

ಗಾಳಿಯಲಿ ಧೂಳಾಗಿ ಹೋಗಿ 
ಆಶ್ರಯವಿಲ್ಲದ ಅನಾಥವಾಗಿ 
ಬಿಸಿಲ ಬೇಗೆಯ ಬರಗಾಲಕೆ 
ಬರಿಗೈಯ ತಾಯಾಗಿ ಕೊರಗಬೇಕು

ಬಿಸಿಲು ಮಳೆ ಗಾಳಿಗಳ ದಾಳಿಯಿಂದ 
ಭರವಸೆ ಕಳೆದುಕೊಳ್ಳದೆ ಉಳಿಯಬೇಕು
ಮಾನವನ ಬೃಹತ್ ಯಂತ್ರಗಳ
ಅತ್ಯಾಚಾರಕೆ ನಿತ್ಯ ಬಲಿಯಾಗಬೇಕು

ಎಂದಿಗೆ ಇದು ಕೊನೆ 
ನಾವಿದ್ದರೆ ತಾನೆ ಬೆಳೆಗೆ ತೆನೆ 
ನನ್ನನುಳಿಸಿಕೊಳ್ಳದೆ ಹೋದರೆ ನಿಮಗೆ 
ಖಂಡಿತ ನಿತ್ಯ ನರಕದ ಬೇಗೆ 

1026ಪಿಎಂ26022014

*ಅಮುಭಾವಜೀವಿ* 



No comments:

Post a Comment