Tuesday, March 24, 2020

ಕವನ ಲೇಖನ

*ಕವಿತೆ ದಿನದ ಶುಭಾಶಯಗಳೊಂದಿಗೆ*

*#ಕವಿತೆ*

ಹದವಾಗಿ ನೆನೆದ 
ಭೂಮಿಯ ಕಂಪು
ಈ ಕವಿತೆ

ಯಾರ ಬಲವಂತವೂ
ಇಲ್ಲದೆ ಅರಳಿದ ಮೊಗ್ಗು 
ಈ ಕವಿತೆ

ಬಿಸಿಲಲ್ಲಿ ಬಾಯಾರಿ 
ದಣಿದವನ ತಣಿಸುವುದು
ಈ ಕವಿತೆ

ನಡೆಯುವಾಗ ಎಡವಿದವನ
ಎತ್ತಿ ಮಮತೆಯ ಮಾತಾಡಿತು
ಈ ಕವಿತೆ 

ಶಾಂತ ಸಾಗರದಲ್ಲಿ 
ಎದ್ದ ಭಾವದ ಹೆದ್ದೆರೆಗಳು
ಈ ಕವಿತೆ 

ಭೂತ ಭವಿಷ್ಯತ್ತಿನ ಜೊತೆ 
ವರ್ತಮಾನದ ದಾಖಲೆ 
ಈ ಕವಿತೆ 

ನೊಂದ ಮನವ ಸಂತೈಸಲೂ 
ಎಂದೆಂದೂ ಜೊತೆಗಿರುವುದು 
ಈ ಕವಿತೆ 

ಒಂಟಿತನದ ಬೇಗುದಿಗೆ
ನಲ್ಲೆಯ ಒಲವಿನ ಮಡಿಲು
ಈ ಕವಿತೆ 

ಮಣ್ಣೊಳಗೆ ಮಣ್ಣಾಗಿದ್ದ
ಬೀಜ ಮೊಳೆವ ಹೊಸತನ
ಈ ಕವಿತೆ 

ಸೋತ ಬದುಕಿಗೆ ಸಾಂತ್ವನ 
ಹೇಳಿ ಮತ್ತೆ ಗೆಲ್ಲುವ ಸ್ಪೂರ್ತಿ 
ಈ ಕವಿತೆ 

ನಲ್ಲ ನಲ್ಲೆಯರ ಸರಸ ಸಲ್ಲಾಪದ
ಆಲಾಪನೆಯ ತುಡಿತ ಮಿಡಿತ
ಈ ಕವಿತೆ 

ಕವಿತೆಯಿದು ಕಲ್ಪನೆಯೂ ಹೌದು
ವಾಸ್ತವದ ಕಟು ಸತ್ಯವೂ ಹೌದು

0458ಪಿಎಂ21032019
*ಅಮು ಭಾವಜೀವಿ*


ಕವಿ ಬಳಗದ ಲೇಖನ ಸ್ಪರ್ಧೆಗಾಗಿ

*ಬೇಸಿಗೆ ಶಿಬಿರಗಳು ಮಕ್ಕಳ ಮೇಲೆ ಬಿರುವ ಪರಿಣಾಮಗಳು*

ಬೇಸಿಗೆ ಶಿಬಿರಗಳು ಇಂದು ಮಕ್ಕಳ ಮೇಲೆ ಪರಿಣಾಮ ಬೀರುವುದಕ್ಕಿಂತ ಹಣ ಮಾಡುವ ದಂಧೆಯಾಗಿ ಹೋಗಿದೆ. ಅದರಲ್ಲೂ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳ ಹೆಸರಿನಲ್ಲಿ ಕೆಲಕಾಲ ಹೊರಗಿಟ್ಟು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗುವ ಪರಿಪಾಠ ಹೆಚ್ಚಾಗುತ್ತಿದೆ. ಎಷ್ಟಾದರೂ ಹಣ ಕೊಟ್ಟು ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಿಗೆ ಬಿಟ್ಟು ಬರುತ್ತಾರೆ. ಮಕ್ಕಳ ಆಸಕ್ತಿಗಳೇನು? ಅವರ ಅಗತ್ಯಗಳೇನು ಅದನ್ನು ಪೋಷಕರು ಅರ್ಥಮಾಡಿಕೊಳ್ಳದೆ ಕೇವಲ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳು ಎಂಬ ಸೆರೆಮನೆಗೆ ತಳ್ಳಿ ಬರುತ್ತಾರೆ. ಧಾವಂತದ ಬದುಕಿನಲ್ಲಿ ತಮ್ಮ ಮಕ್ಕಳಿಗೆ ಎಲ್ಲವನ್ನೂ ಕೊಡಿಸಿದ ತೃಪ್ತಿಗಾಗಿ ತಮ್ಮ ದುಡಿಮೆಯ ಒಂದಿಷ್ಟು ಅಂಶವನ್ನು ಇದಕ್ಕಾಗಿ ವ್ಯಯ ಮಾಡುತ್ತಾರೆ. ಆದರೆ ಮಕ್ಕಳಿಗೆ ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಕಲಿಯಲೇಬೇಕೆಂಬ ಒತ್ತಡದಲ್ಲಿ ನೂಕಿ ಬರುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗಲಾರದು.

     ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಸಜ್ಜೆಯಾಗದಂತೆ ಅವರು ಸ್ವಚ್ಛಂದವಾಗಿ, ತಮ್ಮದೆಯಾದ ಸೃಜನಶೀಲತೆ ಕಲಾವಂತಿಕೆ ನೈಜ ಅನುಭವ ಪಡೆಯುವಂತಹ ಚಟುವಟಿಕೆಗಳನ್ನು ಮನೆಗಳಲ್ಲೇ ನೀಡಿದರೆ ಸಾಕಾಗುತ್ತದೆ. ಅದಕ್ಕಾಗಿ ಪೋಷಕರು ಖರ್ಚು ಮಾಡಬೇಕಾಗಿಲ್ಲ. ಬದಲಾಗಿ ತಮ್ಮ ಸಮಯವನ್ನು ತಮ್ಮದೇ ಮಕ್ಕಳಿಗೆ ನೀಡಿದಾಗ ಆ ಮಕ್ಕಳಿಗೂ ಹೆತ್ತವರ ಪ್ರೀತಿಯ ಸವಿದಂತಾಗುತ್ತದೆ. ಹಿಂದಿನ ಕಾಲದಲ್ಲಿ ಬೇಸಿಗೆ ರಜೆ ಬಂತೆಂದರೆ ಮಕ್ಕಳು ಖುಷಿಯಿಂದ ಅಜ್ಜ-ಅಜ್ಜಿಯ ಮನೆಗೆ ಅತ್ತೆ ಮಾವನ ಮನೆಗೆ ಹೋಗುವುದು ವಾಡಿಕೆಯಾಗಿತ್ತು. ಅಲ್ಲಿ ಅಜ್ಜ-ಅಜ್ಜಿಯರು ತಮ್ಮ ಜೀವನಾನುಭವಗಳನ್ನು, ತಾವು ತಿಳಿದ ಶಾಸ್ತ್ರ ಪುರಾಣಗಳು ,ನೀತಿಕಥೆಗಳು, ಕೋಲಾಟ, ಭಜನೆಗಳು, ಜನಪದ ನೃತ್ಯಗಳು, ಸೋಬಾನೆ ಪದಗಳು, ಗ್ರಾಮೀಣ ಕ್ರೀಡೆಗಳು, ಈಜುವುದು, ಮರಕೋತಿ ಆಟ ಆಡುವುದು, ಬುಗುರಿ ಚಿನ್ನಿದಾಂಡು, ಕಾಲ್ಚೆಂಡು ಮುಂತಾದ ಆಟಗಳನ್ನು ಯಾವುದೇ ನಿರ್ಬಂಧವಿಲ್ಲದೆ ನಿರ್ಭೀತಿಯಿಂದ ಕಲಿಯುವ ಸ್ವಾತಂತ್ರ ಮಕ್ಕಳಿಗೆ ಇತ್ತು. ಅಲ್ಲಿ ಹಿರಿಯರಾದವರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲಿ ಹೀಗೆ ಇರಬೇಕು ಎಂಬ ಕಟ್ಟುಪಾಡುಗಳಿರಲಿಲ್ಲ. ಸ್ವಚ್ಛಂದದ ಪರಿಸರದಲ್ಲಿ, ಪ್ರೀತಿ ಆಸರೆಯಲ್ಲಿ ಮಕ್ಕಳ ಬಾಲ್ಯ ಅರಳುತ್ತಿತ್ತು. ಅವರ ಕ್ರಿಯಾಶೀಲತೆಗೆ ವೇದಿಕೆ ದೊರೆತಿತ್ತು. ಪರಸ್ಪರರಲ್ಲಿ ಒಡನಾಟ ಪ್ರೀತಿ ವಿಶ್ವಾಸ ನಂಬಿಕೆ ಕಾಳಜಿ ಸಹಕಾರ ಮನೋಭಾವ ಮಾನವೀಯತೆ ಜೀವನ ಮೌಲ್ಯಗಳು ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತಿದ್ದವು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಭದ್ರ ತಳಪಾಯವನ್ನು ಹಾಕಿ ಕೊಡುತ್ತಿದ್ದವು. ಆದರೆ ಇಂದಿನ ಮಕ್ಕಳಿಗೆ ಅಜ್ಜಿಯ ಮನೆಗಳೇ ಕಾಣೆಯಾಗಿಹೋಗಿವೆ. ಶಾಲೆ ಮನೆಗೆಲಸ ಆಟ ಪಾಠ ಮುಂತಾದ ಶೈಕ್ಷಣಿಕ ಚಟುವಟಿಕೆಗಳಲ್ಲಿಯೇ ಮಕ್ಕಳ ಬಾಲ್ಯ ಕಳೆದುಹೋಗುತ್ತಿದೆ. ಮಗು ಪ್ರತಿ ಹಂತದಲ್ಲೂ ಅಸಹಾಯಕನಾಗಿ ಇನ್ನೊಬ್ಬರ ಸಹಾಯವನ್ನು ಅಪೇಕ್ಷಿಸುವಂತೆ ವಾತಾವರಣವನ್ನು ಹೆಚ್ಚಿಸಿಕೊಂಡಿದ್ದೇವೆ. ಈಗ ಮತ್ತೆ ಮಕ್ಕಳನ್ನು ಬೇಸಿಗೆ ಶಿಬಿರಗಳಲ್ಲಿ ಬಿಟ್ಟು ನಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಿದ್ದೇವೆಯೇ ಹೊರತು ಅದರಿಂದ ಮಕ್ಕಳಿಗೆ ಯಾವುದೇ ಲಾಭವಿಲ್ಲ. ಬೇಸಿಗೆ ಶಿಬಿರಗಳ ಎಂಬುದೆಲ್ಲಾ ದುಡ್ಡು ಮಾಡುವವರು ಹೊಸ ಮಾರ್ಗಗಳಾಗಿವೆ ಅಷ್ಟೇ. ನಮ್ಮದೇ ಮಕ್ಕಳನ್ನು ನಮ್ಮದೇ ದುಡ್ಡು ಕೊಟ್ಟು ಅವರಲ್ಲಿ ಬಿಟ್ಟು ಬರುತ್ತೇವೆಯೇ ಹೊರತು ನಮ್ಮ ಮಕ್ಕಳನ್ನು ನಮ್ಮ ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಂಬಂಧಗಳೊಂದಿಗೆ ಬೆಳೆಯಲು ಬಿಡುವುದೇ ಇಲ್ಲ.

ಒಟ್ಟಿನಲ್ಲಿ ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಜಗತ್ತಿನಲ್ಲಿ ಯಾವುದೇ ಪರಿಣಾಮವನ್ನು ನೀಡಲಾರವು. ಬದಲಾಗಿ ಅವರ ಸ್ವಚ್ಛಂದದ ಬಾಲ್ಯವನ್ನು ಬೇಲಿ ಹಾಕಿ ಬಂಧಿಸಿಡಲು ನಾವು ಈ ಬೇಸಿಗೆ ಶಿಬಿರಗಳ ಮೊರೆಹೋಗುತ್ತೇವೆ ಅಷ್ಟೇ. ಅದರ ಬದಲು ನಾವೇ ನಮ್ಮ ಮಕ್ಕಳನ್ನು ದಿನದ ಗಂಟೆಗಳ ಸಮಯ ನೀಡಿ ಅವರ ವ್ಯಕ್ತಿತ್ವವೃದ್ಧಿಗೆ ಶ್ರಮವಹಿಸೋಣ.

ಧನ್ಯವಾದಗಳು

*ಅಮು ಭಾವಜೀವಿ*


#ಗುಬ್ಬಚ್ಚಿ #ದಿನದ #ಕುರಿತಾಗಿ*

#ಇನ್ನಿಲ್ಲದಾಯ್ತು

ನಮ್ಮ ಮನೆಯ ಗೋಡೆಯಲ್ಲಿ
ಇದೆ ಪುಟ್ಟದೊಂದು ಸಂಸಾರ 
ಅಪ್ಪ ಅಮ್ಮ ಇಬ್ಬರೇ 
ಅದರ ಆಧಾರ

ಪುಟ್ಟ ಗೂಡಿನಲ್ಲಿಯೇ 
ಮೊಟ್ಟೆಯೊಡೆದ ಮರಿಗಳಿಗೆ
ಗುಟುಕನಿಟ್ಟು ಪ್ರೀತಿ ಕೊಟ್ಟು 
ಬೆಳೆಸೋ ರೀತಿ ಅದ್ಬುತ 

ಅಲ್ಲಿ ಇಲ್ಲಿ ಬಿದ್ದ ಕಾಳನೆಕ್ಕಿ
ಚಿಕ್ಕ ಪುಟ್ಟ ಹುಡುಗ ಕುಕ್ಕಿ 
ಎಲ್ಲೋ ನಿಂತ ನೀರನು ಹೀರಿ
ಪುರ್ರನೆ ಹಾರಿಹೋಯ್ತು ತಾಯಕ್ಕಿ 

ಚಿವ್ ಚಿವ್ ಎನ್ನುತ್ತಿತ್ತು 
ಮತ್ತೆ ಮತ್ತೆ ಹಾರುತ್ತಿತ್ತು
ತನ್ನ ಪ್ರೀತಿ ತೋರುತ್ತಿತ್ತು 
ಸಂಜೆಗೆಲ್ಲ ಗೂಡನು ಹೊಕ್ಕುತ್ತಿತ್ತು

ಬೆಳ್ಳಂಬೆಳಿಗ್ಗೆ ಚಿಲಿಪಿಲಿಗುಟ್ಟಿ
ಕಡ್ಡಿಪಡ್ಡಿಯಿಂದ ಗೂಡು ಕಟ್ಟಿ 
ಮನುಜ ಕೂಡ ನಾಚುವಂತೆ
ಸಂಸಾರ ಸಾಗಿತ್ತು ಇಲ್ಲದೆ ಚಿಂತೆ 

ಇನ್ನೆಷ್ಟು ದಿನ ಇರುವುದೋ ಹೀಗೆ 
ದಾಳಿಯಿಟ್ಟು ಬಂತು ಬೇಸಿಗೆ
ಕಾಳಿಲ್ಲದೆ ನೀರಿಲ್ಲದೆ ಪರಿತಪಿಸಿ
ಅದರ ಕುಲವೆ ಇನ್ನಿಲ್ಲದಾಯ್ತು ನಶಿಸಿ

1050ಪಿಎಂ20032018

#ಅಮುಭಾವಜೀವಿ

*ಜೀವನ*

ಕಾಲ ಕೂಡ ಸರಿಯುತಿದೆ
ನಾಳೆಯನ್ನು ಕರೆಯುತಿದೆ
ಜೀವನ ಪಯಣವಿದು ಸಾಗಿದೆ
ನಡೆವ ಹಾದಿಯ ಕಲ್ಲು ಮುಳ್ಳು
ಎದುರಾಗುವ ನೂರು ಕಷ್ಟಗಳು
ಎಲ್ಲ ಎದುರಿಸಿ ಮುನ್ನಡೆಯಬೇಕಿದೆ

0447ಪಿಎಂ24032020
*ಅಮುಭಾವಜೀವಿ ಮುಸ್ಟೂರು*

Saturday, March 21, 2020

ಯುಗಾದಿ ಹಬ್ಬದ ಮಹತ್ವ

ಯುಗಾದಿ ಹಬ್ಬದ ಮಹತ್ವ

       ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಅದರದೇ ಆದ ಮಹತ್ವವನ್ನು ನೀಡಲಾಗಿದೆ. ಪ್ರತಿಯೊಂದು ಹಬ್ಬಗಳ ಆಚರಣೆಗೆ ಧಾರ್ಮಿಕ ವೈಚಾರಿಕ , ವೈಜ್ಞಾನಿಕ ನೈಸರ್ಗಿಕವಾದ ಮಹತ್ವವನ್ನು ನೀಡಲಾಗಿದೆ. ಆಯಾ ಕಾಲಮಾನಕ್ಕೆ ತಕ್ಕಂತೆ, ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಹಬ್ಬಗಳ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆಯಾಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಾರೆ ಅದಕ್ಕೆಂದೇ ವಿಶೇಷವಾಗಿ ತಯಾರಿಸಿದ ಭಕ್ಷ್ಯ ಭೋಜನಗಳನ್ನು ಸೇವಿಸುವ ಮೂಲಕ  ಅರ್ಥಪೂರ್ಣ ಆಚರಣೆಗಳನ್ನೂ ಆಚರಿಸಿಕೊಂಡು ಬರಲಾಗುತ್ತಿದೆ.

           ನಮ್ಮ ಪುರಾಣ ಶಾಸ್ತ್ರಗಳ ಪ್ರಕಾರ ವರ್ಷದ ಮೊದಲ ಹಬ್ಬವೇ ಯುಗಾದಿ. ಅಂದರೆ ಯುಗದ + ಆದಿ = ಯುಗಾದಿ , ಯುಗ ಎಂದರೆ ವರ್ಷ ಆದಿ ಎಂದರೆ ಆರಂಭ. ಈ ಪದದ ಅರ್ಥ ವರ್ಷದ ಆರಂಭವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಇಡೀ ಪ್ರಕೃತಿಯೇ ತನ್ನ ಹಳೆಯ ಎಲೆಗಳನ್ನೆಲ್ಲ ಉದುರಿಸಿ ಹೊಸಚಿಗುರಿನೊಂದಿಗೆ ಕಂಗೊಳಿಸುತ್ತಾ ಚೈತ್ರ ಆಗಮನದ ವಸಂತನಿಗೆ ಸ್ವಾಗತ ಕೋರುತ್ತದೆ. ಇಡೀ ನಿಸರ್ಗದ ತುಂಬಾ ಹೊಸತನ ಮನೆಮಾಡಿರುತ್ತದೆ. ಕೆಂದಳಿರಿನ ಚಿಗುರಿನ ಜೊತೆಗೆ ಬಿರಿದ ಮೊಗ್ಗುಗಳು ಅರಳಿ ಹೊಸ ಕಂಪಿನ ನರುಗಂಪನ್ನು ಸೂಸಿ , ಹಕ್ಕಿಗಳ ಕಲರವದ ಜೊತೆಗೆ ಸಂಭ್ರಮಾಚರಣೆಯಲ್ಲಿ ಮುಳುಗಿರುತ್ತದೆ. ಮೊಗ್ಗು ಮಿಡಿಕಾಯಿ ಹಣ್ಣುಗಳಿಂದ ಮೈದುಂಬಿದ ಗಿಡ-ಮರಗಳಲ್ಲಿ ಚಿಕ್ಕಪುಟ್ಟ ಪ್ರಾಣಿ ಪಕ್ಷಿ ಕೀಟಗಳು ಆಹಾರಕ್ಕಾಗಿ ಆಶ್ರಯಿಸುತ್ತವೆ. ಬೇಸಿಗೆಯ ಬಿರುಬಿಸಿಲಿನಲ್ಲಿಯೂ ತಣ್ಣನೆಯ ನೆರಳು ನೀಡುವ ಮರಗಿಡಗಳು ಹೊಸವರ್ಷದ ಸಮೃದ್ಧಿಯ ಸಂಕೇತವಾಗಿ ಕಾಣಿಸುತ್ತವೆ. ಇಡೀ ಪ್ರಕೃತಿ ಹಸುರಿನಿಂದ ಸಮೃದ್ಧವಾಗಿರುತ್ತದೆ.

             
          ಮಾನವರಾದ ನಾವುಗಳು ಈ ಹಬ್ಬವನ್ನು ವಿಶೇಷವಾಗಿ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಚಾಂದ್ರಮಾನದ ಲೆಕ್ಕಾಚಾರದಲ್ಲಿ ಅಮಾವಾಸ್ಯೆಯನ್ನು ಮೊದಲದಿನ ಎಂದು ನಂಬಿಕೊಂಡು ಬಂದಿರುವ ನಾವುಗಳು ಅಂದು ಪುರುಷರು ಮಕ್ಕಳಾದಿಯಾಗಿ ಮೈಯಿಗೆ ಹರಳೆಣ್ಣೆ, ಅರಿಶಿನ ಮಿಶ್ರಣ ಮಾಡಿ ಹಚ್ಚಿಕೊಂಡು ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಓಡಾಡಿ ನಂತರ ಸ್ನಾನ ಮಾಡಿ ಹೊಸಬಟ್ಟೆಗಳನ್ನು ತೊಟ್ಟು ಮನೆಯಲ್ಲಿ ಪೂಜೆ ಮಾಡಿದ್ದಲ್ಲದೆ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಪಡೆಯುವುದು ವಾಡಿಕೆ. ಅದರ ಜೊತೆಗೆ ಎಳೆಯ ಮಾವಿನ ಎಲೆಗಳನ್ನು ಬೇವಿನ ಎಸಳುಗಳನ್ನು ಸೇರಿಸಿ ಮನೆಯ ಬಾಗಿಲುಗಳಿಗೆ ತೋರಣ ಕಟ್ಟಿ ಅಲಂಕರಿಸುತ್ತಾರೆ. ಹೆಂಗಳೆಯರು ಮನೆಯ ಮುಂದೆ ಸಗಣಿಯಿಂದ ನೆಲ ಸಾರಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ ಹಬ್ಬದ ಕಳೆಯನ್ನು ತರುತ್ತಾರೆ. ಅಲ್ಲದೆ ಹೊಸದಾಗಿ ಬೆಳೆದ ನವಧಾನ್ಯಗಳನ್ನು ಬೇಯಿಸಿ ಉಣಬಡಿಸುತ್ತಾರೆ. ಪಾಯಸ ಹೋಳಿಗೆ ಮುಂತಾದ ಸಿಹಿತಿನಿಸುಗಳನ್ನು, ಹೊಸದಾಗಿ ತಯಾರಿಸಿದ ಹಪ್ಪಳ ಸಂಡಿಗೆ ಚಕ್ಕುಲಿ ಮುಂತಾದ ತಿಂಡಿಗಳನ್ನು ಮಾಡಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಸವಿಯನ್ನು ನೀಡುತ್ತಾರೆ.

          ಯುಗಾದಿ ಹೊಸ ವರ್ಷವಾದ್ದರಿಂದ ಮನೆಯಲ್ಲಿ ಬಾಳಿಬದುಕಿ ಹೋದ ಹಿರಿಯರನ್ನು ನೆನಪಿಸಿಕೊಳ್ಳುವ ಸಲುವಾಗಿ ಹಿರಿಯರ ಪೂಜೆಯನ್ನು ಮಾಡುವ ಮೂಲಕ ಹೊಸ ಪೀಳಿಗೆಗೆ ಹಿರಿಯರನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ. ಇದರ ಜೊತೆಗೆ ಬದುಕಿನ ನೋವು-ನಲಿವುಗಳನ್ನು, ಕಷ್ಟ-ಸುಖಗಳನ್ನು, ಏಳುಬೀಳುಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲವನ್ನು ಹಂಚುವ ಮೂಲಕ ಬಾಂಧವ್ಯ ಬೆಸೆಯುವ ಅರ್ಥಪೂರ್ಣ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಬೆಲ್ಲದ ಉಪಯೋಗವೂ ಕೂಡ ಪ್ರಕೃತಿಯಲ್ಲಿ ಉಂಟಾಗಿರುವ ಬಿಸಿಲಿನ ಪರಿಣಾಮವನ್ನು ಎದುರಿಸಲು ಸಹಕಾರಿಯಾಗುತ್ತದೆ. ಬೇವು ಕಷ್ಟಗಳ ಸಂಕೇತವಾದರೆ ಬೆಲ್ಲ ಸುಖದ ಸಂಕೇತವಾಗಿದೆ.

        ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಏರಿದ ಬಿಸಿಲಿನ ತಾಪವನ್ನು  ತಣಿಸಿಕೊಳ್ಳುವುದಕ್ಕಾಗಿ ಪರಸ್ಪರರಿಗೆ ಅದರಲ್ಲೂ ಬೀಗರಾದವರಿಗೆ ನೀರನ್ನೆರೆಚುವ ಮೂಲಕ ಖುಷಿಯಲ್ಲಿ ಪಾಲ್ಗೊಳ್ಳುತ್ತಾರೆ. ಅದರ ಜೊತೆಗೆ ಬೇರೆ ಬೇರೆ ಜಾನಪದ ಕ್ರೀಡೆಗಳನ್ನು, ಪುರಾಣ ಪಠಣಗಳನ್ನು, ಇಡೀ ವರ್ಷ ನಡೆಯಬಹುದಾದ ಜಾತಕ ಫಲಗಳ ಪರಿಚಯವನ್ನು ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಯುಗಾದಿಯ ದಿನದಂದು ಆರಂಭಿಸುವ ಎಲ್ಲಾ ಕಾರ್ಯಗಳು ಸಫಲವಾಗುತ್ತವೆ ಎಂಬ ನಂಬಿಕೆಯಿಂದ ಹೊಸ ಯೋಜನೆಗಳು, ಹೊಸ ಚಿಂತನೆಗಳು, ಹೊಸ ಕಾರ್ಯಕ್ರಮಗಳನ್ನು ಕೈಗೊಂಡು ಸಂಭ್ರಮಿಸುತ್ತಾರೆ. ಇದೆಲ್ಲದರ ಜೊತೆಗೆ ಅತ್ಯಂತ ಮುಖ್ಯವಾಗಿ ಚಾಂದ್ರಮಾನ ಯುಗಾದಿ ಅದ್ದರಿಂದ ಚಂದ್ರನ ದರ್ಶನ ದೊಂದಿಗೆ ಯುಗಾದಿ ಹಬ್ಬಕ್ಕೆ ಮಂಗಳ ಹಾಡಲಾಗುತ್ತದೆ. ಅಮಾವಾಸ್ಯೆಯ ನಂತರ ಅತ್ಯಂತ ಸೂಕ್ಷ್ಮವಾಗಿ ಸಂಜೆಯ ವೇಳೆ ಗೋಚರವಾಗುವ ಚಂದ್ರನ ದರ್ಶನಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತವರಿಗೆ ಚಂದ್ರದರ್ಶನವಾಗುತ್ತಿದ್ದಂತೆ ಸಂಪ್ರದಾಯದಂತೆ ಪೂಜೆ ಮಾಡಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದು ಮನೆಯಲ್ಲಿ ಇರುವ ಹಿರಿಯರ ಪದಗಳಿಗೆ ನಮಸ್ಕರಿಸಿ, ಬಂಧು ಬಾಂಧವರೊಂದಿಗೆ ಚಂದ್ರದರ್ಶನದ ಶುಭಾಶಯವನ್ನು ಕೋರುತ್ತಾ ಪರಸ್ಪರ ಸಂಭ್ರಮಿಸುತ್ತಾರೆ. ಅಲ್ಲದೆ ಜನರು ಯುಗಾದಿಯ ನಂತರ ತಮ್ಮ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು 'ಮೊದಲು' ಮಾಡುವ ಸಲುವಾಗಿ ನೇಗಿಲನು ಹೂಡಿ ಭೂಮಿತಾಯಿಗೆ, ನೇಗಿಲು ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಬೇಸಾಯದ ಚಟುವಟಿಕೆಗಳನ್ನು ಆರಂಭಿಸಿ ವರ್ಷವಿಡಿ ಮಳೆ-ಬೆಳೆ ಚೆನ್ನಾಗಿ ಆಗಿ ರೈತನ ಬದುಕು ಹಸನಾಗಲಿ ಎಂದು ದೇವರನ್ನು ಪ್ರಾರ್ಥನೆ ಮಾಡುತ್ತಾರೆ.

         ಒಟ್ಟಾರೆಯಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಕೆಲಸಕಾರ್ಯಗಳಿಗೆ ಅದರದೇ ಆದ ಧಾರ್ಮಿಕ ಸಾಂಪ್ರದಾಯಿಕ ವೈಜ್ಞಾನಿಕ ವೈಚಾರಿಕ   ಕಾರಣಗಳಿದ್ದು ಅದೆಲ್ಲದರ ಒಟ್ಟು ಮೊತ್ತ ಮಾನವನ ಬದುಕು ಪ್ರಕೃತಿಯ ಜೊತೆಜೊತೆಗೆ ಸಂಭ್ರಮದ ಸಮೃದ್ಧಿಯ ಸಂತಸದಾಯಕ ನೆಮ್ಮದಿಯ ಬದುಕನ್ನು ಪಡೆಯುವುದಾಗಿದೆ. ಆಚರಣೆಗಳ ನೆಪದಲ್ಲಿ ಬಂಧುಬಾಂಧವರ ಸಮಾಗಮ ನೋವುಗಳನ್ನೆಲ್ಲ ಮರೆತು ನಲಿವಿನಲ್ಲೂ ಜೊತೆಯಾಗುವ ಅನುಪಮ ಬಾಂಧವ್ಯ ಬೆಸೆಯುವ ಸಂದರ್ಭ ಹಬ್ಬಗಳ ಆಚರಣೆಗೆ ಮೂಲ ಪ್ರೇರಣೆ. ಅದರಲ್ಲೂ ಯುಗಾದಿ ಮಾನವರಿಗಷ್ಟೇ ಅಲ್ಲ ಇಡೀ ಪ್ರಕೃತಿಯೇ ಹೊಸತನದಿಂದ ಸಂಭ್ರಮಿಸುವ ಕಾಲ. ಹೊಸ ಸಂವತ್ಸರದ ಹೊಸ ಮಾಸದ ಹೊಸ ಋತುವಿನ ಆಗಮನದಿಂದ ಹಿಂದಿನ ವರ್ಷದ ಕಷ್ಟನಷ್ಟಗಳೇನೇ ಇರಲಿ ಪ್ರಸ್ತುತ ವರ್ಷದಲ್ಲಾದರೂ ಎಲ್ಲ ಕಷ್ಟನಷ್ಟಗಳು ಕಳೆದು ಸುಖ ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸುತ್ತಾ ಮತ್ತೆ ಇಂದಿನ ಜೀವನಕ್ಕೆ ಮರಳುತ್ತೇವೆ. ಖುಷಿಯ ಕ್ಷಣಗಳನ್ನು ಮೆಲುಕುಹಾಕುತ್ತಾ ವರ್ಷವಿಡಿ ನಮ್ಮ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾ ಬದುಕಿನ ಪುಟಗಳಲ್ಲಿ ಅನುಭವದ ಸಾಲುಗಳನ್ನು ದಾಖಲಿಸುತ್ತಾ ಮುಂದಿನ ಪೀಳಿಗೆಗೆ ವೇದಿಕೆಯನ್ನು ಸಿದ್ಧಪಡಿಸಿ ನಮ್ಮ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು  ಹೋಗಲಾಗುತ್ತದೆ. ಎಲ್ಲರೂ ಬೇವು-ಬೆಲ್ಲವನ್ನು ಹಂಚಿ ತಿಂದು ಖುಷಿಯಿಂದ ಹೊಸವರ್ಷವನ್ನು ಆಚರಿಸೋಣ, ಸಂಭ್ರಮಿಸೋಣ.

ಎಲ್ಲರಿಗೂ ಹೊಸ ವರ್ಷ ಯುಗಾದಿಯ ಹಾರ್ದಿಕ ಶುಭಾಶಯಗಳು
ದಿನಾಂಕ 21032020

ಅಮು ಭಾವಜೀವಿ