Tuesday, September 22, 2020

ಲೇಖನ

*ಹಿರಿಯರ ಬಗ್ಗೆ ಇರಲಿ ಗೌರವ ಮತ್ತು ಕಾಳಜಿ*

ಹಿರಿಯ ಜೀವಗಳಿಗೆ ಪ್ರೀತಿತುಂಬಿದ ಮಾತುಗಳು ಹಾಗೂ ಮಕ್ಕಳ ಸಾಂಗತ್ಯ ಹೆಚ್ಚು ಅಗತ್ಯವಿರುತ್ತದೆ . ಆಧುನಿಕ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದೆ. ಹೆತ್ತವರನ್ನು ಬಿಟ್ಟು ದೂರದಲ್ಲಿ ಮಕ್ಕಳು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಯಸ್ಸಾದ ಮೇಲೆ ಹಿರಿಯರು ಮಕ್ಕಉ ಜತೆಗಿರಬೇಕು ಎಂದು ಬಯಸುತ್ತಾರೆ. ಅವರ ಆಸೆಗಳನ್ನು ಮಕ್ಕಳು ಈಡೇರಿಸಬೇಕು.ಹಿರಿಯರನ್ನು ಗೌರವಾದರಗಳಿಂದ ನೋಡುತ್ತಿದ್ದ ಪರಂಪರೆ ನಶಿಸಿ ಹೋಗುತ್ತಿದೆ. ಅವಿದ್ಯಾವಂತರಾಗಿದ್ದರೂ ಜೀವನದ ಅನುಭವ ಪಡೆದ ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಿರುತ್ತಿದ್ದರು. ಆದರೆ, ಪ್ರಸ್ತುತ ಆಸ್ತಿ ವ್ಯಾಮೋಹದಿಂದ ಮಕ್ಕಳು ಹೆತ್ತವರನ್ನು ಬೀದಿಗೆ ತಳ್ಳುತ್ತಿರುವ ನಿದರ್ಶನಗಳು ಹೆಚ್ಚಾಗುತ್ತಿವೆ 
       ಹಿರಿಯರ ಪ್ರೀತಿ, ತ್ಯಾಗ, ಸೇವೆಗಳನ್ನು ಮಕ್ಕಳು ನೆನಪಿನಲ್ಲಿಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ. ಯುವ ಪೀಳಿಗೆ ಹಿರಿಯ ನಾಗರಿಕರನ್ನು ಪ್ರೀತಿಸುವ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು

ಹಿರಿಯ ನಾಗರಿಕರಿಗೆ ಮನಸ್ಸಿಗೆ ನೋವುಂಟು ಮಾಡದೇ ಅವರನ್ನು ಗೌರವದಿಂದ ನೋಡಿಕೊಳ್ಳಬೇಕು 

ಎಲ್ಲವನ್ನೂ ಕೊಂಡುಕೊಳ್ಳಬಹುದು. ಆದರೆ, ತಂದೆ-ತಾಯಿಯನ್ನು ಕೊಂಡುಕೊಳ್ಳಲಾಗದು. ಅದನ್ನು ಅರಿತು ಮಕ್ಕಳು ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಿರಿಯ ನಾಗರಿಕರು ಸಂತೋಷದಿಂದ ಬಾಳಬೇಕು 
 
ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಬಗ್ಗೆ ಚಿಂತಿಸುವ ಸಮಾಜದಲ್ಲಿ ಪೋಷಕರು ನೈತಿಕ ಮೌಲ್ಯ ಕಡೆಗಣಿಸುತ್ತಿದ್ದಾರೆ. ಅದರಿಂದ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆಯೋ ವಿನಃ ಸಂಬಂಧಗಳ ಬಗ್ಗೆ ಅರಿವು ಕ್ಷೀಣಿಸುತ್ತಿದೆ 

ಸಮಾಜದಲ್ಲಿ ನೂರಕ್ಕೆ ಶೇ.5ರಷ್ಟು ಹಿರಿಯ ನಾಗರಿಕರು ಇಂದು ತಮ್ಮ ಮಕ್ಕಳೊಂದಿಗಿದ್ದಾರೆ. ಆದರೆ ಶೇ. 95ರಷ್ಟು ಜನರು ಹಲವು ಸಮಸ್ಯೆಗಳಿಂದ ವೃದ್ಧಾಶ್ರಮ ಸೇರಿಕೊಳ್ಳುವಂತಾಗಿದೆ. ಹಿಂದಿನ ಕಾಲದಲ್ಲಿ ಹಿರಿಯ ನಾಗರಿಕ ವೇದಿಕೆಗಳೇ ಇರಲಿಲ್ಲ. ಆದರೆ ಇಂದು ಅನಿವಾರ್ಯವಾಗುತ್ತಿವೆ. ಇದೆಲ್ಲವೂ ಬದಲಾಗಬೇಕಾದರೆ ಶಿಕ್ಷಣದಲ್ಲಿ ಸಂಸ್ಕಾರ ಬರಬೇಕಿದೆ

ನಮ್ಮ ಬಾಲ್ಯದಲ್ಲಿ ನಮಗೆ ಸಿಗುವ ಸಂಸ್ಕಾರವೇ ಭವಿಷ್ಯದಲ್ಲಿ ನಮ್ಮ ಖುಷಿ, ದುಃಖವನ್ನು ಆಳುವುದು. ನಾವು ಇನ್ನೊಬ್ಬರ ನಡುವೆ ಎಷ್ಟು ಪ್ರಭಾವಿಗಳಾಗಿರುತ್ತೇವೆ ಎನ್ನುವುದಕ್ಕಿಂತಲೂ ನಮ್ಮನ್ನು ನಾವು ಗೆಲ್ಲಲು ಈ ಸಂಸ್ಕಾರ ಅತ್ಯಗತ್ಯ. 

ಕೆಲವು ವಿಷಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸಿ ಹೇಳಬೇಕು. ಅವಾಗ ಅವರು ದೊಡ್ಡವರಾದಂತೆ ಅದನ್ನೇ ಮುಂದುವರೆಸಿಕೊಂಡು ಹೋಗಿ, ಮುಂದೊಬ್ಬ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಆರಂಭದಲ್ಲಿ ಈ ಸಣ್ಣ ಪುಟ್ಟ ಮಾಹಿತಿಗಳನ್ನು ಅವರಿಗೆ ತಿಳಿಸಿ ಹೇಳಿ. ಮುಂದೆ ಅದೇ ವಿಷಯಗಳು ಜೀವನದ ಮೌಲ್ಯವನ್ನು ಮಕ್ಕಳಿಗೆ ತಿಳಿಸಿಕೊಡುತ್ತವೆ.. ಸರಿ ತಪ್ಪು ಯಾವುದು ಎಂದು ಸರಿಯಾಗಿ ಮಕ್ಕಳಿಗೆ ತಿಳಿ ಹೇಳಿ. ಅವುಗಳ ಅಂತರದ ಬಗ್ಗೆ ಅರಿವು ಮೂಡಿಸಿ. ಇದರಿಂದ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗುತ್ತದೆ. 

- ಹಿರಿಯರ ಜೊತೆ ಹೇಗೆ ಮಾತನಾಡುವುದು ಅನ್ನೋದನ್ನು ಕಲಿಸಿರಿ. ಹಿರಿಯರಿಗೆ ಗೌರವ ಕೊಡುವ ರೀತಿಯನ್ನು ಕಲಿಸಿಕೊಡಿ. 

- ಈಗಿನ ಮಕ್ಕಳಲ್ಲಿ ಧೈರ್ಯ ಕಡಿಮೆ. ಅವರಿಗೆ ಧೈರ್ಯದಿಂದ ಜೀವನವನ್ನು ಹೇಗೆ ಎದುರಿಸುವುದು ಅನ್ನೋದನ್ನು ತಿಳಿಸಿ. 

- ಹಂಚಿಕೊಂಡು ಬಾಳುವ  ಅಭ್ಯಾಸ ಕಲಿಸಿಕೊಡಿ. ಇದರಿಂದ ಮಕ್ಕಳಿಗೆ ಇತರರ ಭಾವನೆ ಮತ್ತು ಅಗತ್ಯತೆ ಬಗ್ಗೆ ತಿಳಿಯುತ್ತದೆ. ಯಾವುದೇ ವಸ್ತು ತನಗೆ ಸೇರಿದ್ದಲ್ಲ, ಬೇರೆಯವರ ಜೊತೆ ಹಂಚಿ ತಿನ್ನುವುದನ್ನು ತಿಳಿಸಿ. 

- ಯಾರಿಗಾದರೂ ಸಹಾಯ ಬೇಕಾದರೆ ಕೂಡಲೇ ಮಾಡುವಂತೆ ತಿಳಿಸಿ. ಜೊತೆಗೆ ಅವರಿಗೆ ಕಾಣುವಂತೆ ನೀವೇ ಇತರರಿಗೆ ಸಹಾಯ ಮಾಡಿ, ಯಾಕೆಂದರೆ ಮಕ್ಕಳು ನೋಡುತ್ತಾ ಬೇಗನೆ ಕಲಿತು ಬಿಡುತ್ತಾರೆ. 

ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?

- ಸಮಯ ಪರಿಪಾಲನೆ ಮಹತ್ವ ತಿಳಿಸಿಕೊಡಿ.  ಯಾಕೆಂದರೆ ಜೀವನದಲ್ಲಿ ಮುಂದೆ ಬರಲು ಸಮಯದ ಪರಿಪಾಲನೆ ತುಂಬಾನೇ ಮುಖ್ಯ. 

- ಇದು ಮಕ್ಕಳಿಗೆ ಕಲಿಸಲೇಬೇಕಾದ ಮುಖ್ಯ ವಿಷಯ ಎಂದರೆ ಥಾಂಕ್ಯೂ ಮತ್ತು ಸಾರಿ ಹೇಳೋದು. ಯಾರಾದರೂ ಯಾವುದೇ ವಿಧದ ಸಹಾಯ ಮಾಡಿದರೆ ಥಾಂಕ್ಯೂ ಹೇಳಲು ಹಾಗೂ ಯಾರಿಗಾದರೂ ತಮ್ಮಿಂದ ಬೇಜಾರಾದರೆ ಕ್ಷಮೆ ಕೇಳಲೇಬೇಕು ಎಂಬುದನ್ನು ಹೇಳಿಕೊಡಿ. 

- ಪ್ರತಿದಿನ ಪ್ರಾರ್ಥಿಸುವ ಅಭ್ಯಾಸ ಮಾಡಿಸಿದರೆ, ನಿಮಗೂ, ಮಕ್ಕಳಿಗೂ ಉತ್ತಮ. ಇದರಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. 

- ಪ್ರಾಮಾಣಿಕವಾಗಿರುವುದನ್ನೂ ಮಕ್ಕಳಿಗೆ ಗೊತ್ತಿರಲಿ.  ಯಾವತ್ತೂ ಸುಳ್ಳು ಹೇಳಲೇಬಾರದು ಅನ್ನೋದನ್ನು ತಿಳಿಸಿ. ಸುಳ್ಳು ಹೇಳೋದು ಎಷ್ಟು ತಪ್ಪು ಅನ್ನೋದನ್ನೂ ಮನವರಿಕೆ ಮಾಡಿಕೊಡಿ. 

ಈ ವಿಷಯಗಳನ್ನು ನೀವು ಮಕ್ಕಳಿಗೆ ಸರಿಯಾಗಿ ಮನವರಿಕೆ ಮಾಡಿದರೆ ಮಕ್ಕಳು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವುದು ಖಂಡಿತಾ.

ಹಿರಿಯರಿಗೆ ದಕ್ಕದ ಗೌರವ-ಮಾನ್ಯತೆ



      ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳಲ್ಲಿ ಹಿರಿಯರಿಗೆ ಗೌರವ, ಮಾನ್ಯತೆ ದೊರೆಯುತ್ತಿಲ್ಲ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆಂಗಬಾಲಯ್ಯ ಕಳವಳ ವ್ಯಕ್ತಪಡಿಸಿದರು.

      ನಗರದ ಬಾಲನ್ಯಾಯ ಮಂಡಳಿಯಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆದರ್ಶ ಸಮಾಜ ಕಾರ್ಯ ಸಂಸ್ಥೆ ಹಾಗೂ ಗಾಯತ್ರಿ ಗ್ರಾಮೀಣ ವಿದ್ಯಾಸಂಸ್ಥೆ ಇವುಗಳ ಸಂಯುಕ್ತಾಶ್ರದಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಮತ್ತು ಕಾನೂನು ಅರಿವು ಕಾರ್ಯಕ್ರ ಉದ್ಘಾಟಿಸಿ ಅವರು ಮಾತನಾಡಿದರು.

        ಪ್ರಸ್ತುತ ಬಹುತೇಕ ಮನೆಗಳಲ್ಲಿ ಹಿರಿಯರ ಬಗ್ಗೆ ತಾತ್ಸಾರ ಮನೋಭಾವ ಹೆಚ್ಚುತ್ತಿದೆ. ಹೀಗೆ ಮಾಡುವುದರಿಂದ ಹಿರಿಯರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಹಿರಿಯರು ನಮ್ಮ ಸಮಾಜದ ಮೂಲ ಬೇರು ಆಗಿದ್ದಾರೆ. ಆ ಬೇರಿಗೆ ಉತ್ತಮ ಪೋಷಕಾಂಶ ನೀಡಿ ಸಲಹಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

        ಹಿರಿಯರಿಗೂ ಕೂಡ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳಿವೆ. ಹಿರಿಯರ ನಡತೆ ಕುಟುಂಬಕ್ಕೆ ಊರು ಗೋಲಂತಿರಬೇಕು. ಅವರ ಅನುಭವಪೂರಿತ ನಡೆ-ನುಡಿ ಕುಟುಂಬಕ್ಕೆ ದಾರಿದೀಪದಂತಿರಬೇಕು. ಹಾಗೂ ಅವರು ತಮ್ಮ ಸಮಸ್ಯೆಗಳ ಕುರಿತು ಸಮಾನ ಮನಸ್ಕರೊಂದಿಗೆ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಬೇಕು. ಶಾಂತಿ ಮತ್ತು ನೆಮ್ಮದಿಯಿಂದ ಇರಲು ಭಜನೆ, ಸತ್ಸಂಗ ಅಥವಾ ಇತರೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು

] ಹಿರಿಯರ ಪಾದಗಳನ್ನು ಸ್ಪರ್ಶಿಸುವ ಶಿಷ್ಟಾಚಾರವನ್ನು ಅಥವಾ ಸ೦ಪ್ರದಾಯವನ್ನು ಎಲ್ಲಾ ಭಾರತೀಯ ಮಕ್ಕಳಿಗೂ ಸಹ ಸ೦ಸ್ಕಾರದ ಒ೦ದು ಭಾಗವಾಗಿ ಮೊದಲು ಕಲಿಸಿ ಕೊಡಲಾಗುತ್ತದೆ. ಆದರೆ, ಅದೇಕೆ ನಮ್ಮೆಲ್ಲರಿಗೂ ಹಿರಿಯರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುವ ಒ೦ದು ಪರಿಪಾಠವನ್ನು ಭೋದಿಸಲಾಗುತ್ತದೆ ಅಥವಾ ಹೇಳಿಕೊಡಲಾಗುತ್ತದೆ ಎ೦ಬುದರ ಕುರಿತು ನೀವೆ೦ದಾದರೂ ಚಕಿತಗೊ೦ಡಿದ್ದೀರಾ? ನಮ್ಮಲ್ಲಿ ಹೆಚ್ಚಿನ ಹಿರಿಯರಲ್ಲಿ ಈ ಕುರಿತು ವಿಚಾರಿಸಿದರೆ, "ಅದು ಹಿರಿಯರಿಗೆ ಕಿರಿಯರು ತೋರಿಸುವ ಗೌರವ ಹಾಗೂ ಅದಕ್ಕೆ ಪ್ರತಿಫಲವಾಗಿ ಆ ಹಿರಿಯರಿ೦ದ ಆಶೀರ್ವಾದವನ್ನು ಪಡೆಯಲು" ಎ೦ಬ ಕಾರಣವನ್ನು ನೀಡುತ್ತಾರೆ. ಆದಾಗ್ಯೂ, ಭಾರತಾದ್ಯ೦ತ ಪಾಲನೆಯಾಗುವ ಈ ಸ೦ಪ್ರದಾಯದ ಹಿ೦ದೆ ವೈಜ್ಞಾನಿಕ ಕಾರಣಗಳು ಸಹ ಇವೆ. ಈ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಇಲ್ಲಿ ಕೆಳಗೆ ನೀಡಲಾಗಿರುವ ಸ್ಲೈಡ್ ಅನ್ನು ಹಾಗೆಯೇ ಒಮ್ಮೆ ತಿರುವಿ ಹಾಕಿರಿ. ಹಿರಿಯರಿಗೆ ಗೌರವ ನೀಡುವುದು ಹಿ೦ದೂ ಧರ್ಮದ ನ೦ಬಿಕೆಯೊ೦ದರ ಪ್ರಕಾರ, ಹಿರಿಯರ ಪಾದಗಳು ಎಲ್ಲಾ ದೇವ ದೇವತೆಗಳ ಆವಾಸಸ್ಥಾನವಾಗಿರುತ್ತದೆ. ಹೀಗಾಗಿ, ಅವರ ಚರಣಗಳನ್ನು ಸ್ಪರ್ಶಿಸುವ ಮೂಲಕ ನಾವು ಆ ಹಿರಿಯರಿಗೆ ಗೌರವವನ್ನು ವ್ಯಕ್ತಪಡಿಸಿದ೦ತಾಗುತ್ತದೆ. ಅವರು ನಮಗೆ ಮಾಡುವ ಆಶೀರ್ವಾದವು ಸ್ವತ: ಆ ದೇವರೇ ನಮಗೆ ಮಾಡುವ ಆಶೀರ್ವಾದ ಎ೦ದು ಪರಿಗಣಿಸಲಾಗುತ್ತದೆ. ಯಶಸ್ಸನ್ನು ಸಾಧಿಸಲು ಹಿರಿಯರ ಮತ್ತು ವಯಸ್ಸಾದವರ ಪಾದಗಳನ್ನು ಸ್ಪರ್ಶಿಸುವುದರ ಮೂಲಕ, ಯಾರು ಗೌರವವನ್ನು ಸೂಚಿಸುತ್ತಾರೆಯೋ, ಅ೦ತಹವರಲ್ಲಿ ಆಯಸ್ಸು, ಬುದ್ಧಿಮತ್ತೆ, ಜ್ಞಾನ, ಮತ್ತು ಶಕ್ತಿಯ ವೃದ್ಧಿಯಾಗುತ್ತವೆ. ಆದ್ದರಿ೦ದಲೇ, ವ್ಯಕ್ತಿಯೋರ್ವನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಅವನು ಅಥವಾ ಅವಳು ಹಿರಿಯರ ಪಾದಗಳನ್ನು ಸ್ಪರ್ಶಿಸುವ ಪರಿಪಾಠವನ್ನಿಟ್ಟುಕೊ೦ಡಿರಬೇಕು. ಗೌರವವನ್ನು ತೋರಿಸುವ ಬೇರೆ ಬೇರೆ ವಿಧಾನಗಳಾವುವೆ೦ದರೆ ಪ್ರತುತ್ಥಾನ - ಹಿರಿಯರನ್ನು ಸ್ವಾಗತಿಸುವುದಕ್ಕಾಗಿ ಎದ್ದು ನಿಲ್ಲುವುದು. ನಮಸ್ಕಾರ - ಕರಗಳೆರಡನ್ನೂ ಜೋಡಿಸಿ ಅವರಿಗೆ ನಮಸ್ತೆ ಎ೦ದು ವ೦ದಿಸುವುದು. ಉಪಸ೦ಗ್ರಹಣ - ಹಿರಿಯರ ಅಥವಾ ಗುರುಗಳ ಪಾದಗಳನ್ನು ಸ್ಪರ್ಶಿಸುವುದು. ಸಾಷ್ಟಾ೦ಗ - ಉದ್ದ೦ಡವಾಗಿ ಹೊಟ್ಟೆಯ ಮೇಲೆ ಮಲಗಿಕೊ೦ಡು ಎರಡೂ ಪಾದಗಳು, ಹೊಟ್ಟೆ, ಎರಡು ಮೊಣಕಾಲುಗಳು, ಎದೆ, ಹಣೆ, ಮತ್ತು ಎರಡೂ ತೋಳುಗಳಿ೦ದ ಹಿರಿಯರ ಮು೦ದೆ ದೀರ್ಘದ೦ಡವಾಗಿ ಸಾಷ್ಟಾ೦ಗ ನಮಸ್ಕಾರವನ್ನು ಮಾಡುವುದು. ಪ್ರತ್ಯಾಭಿವಾದನ - ಅವರು ನೀಡುವ ಆಶೀರ್ವಾದಕ್ಕೆ ಪ್ರತಿನಮಸ್ಕಾರವನ್ನು ಮಾಡುವುದು. ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ ಭಾರತೀಯ ಸ೦ಸ್ಕೃತಿಯಲ್ಲಿ ವ್ಯಕ್ತಿಯೋರ್ವನು ತನ್ನ ಹಿರಿಯರ ಪಾದಸ್ಪರ್ಶಗೈಯ್ಯುವುದನ್ನು ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ ನಿರೀಕ್ಷಿಸಲಾಗುತ್ತದೆ. ಇವುಗಳ ಪೈಕಿ ಕೆಲವೊ೦ದು ಸ೦ದರ್ಭಗಳು ಯಾವುವೆ೦ದರೆ, ಪ್ರಯಾಣಕ್ಕೆ ಹೊರಟಾಗ ಅಥವಾ ಪರಸ್ಥಳದಿ೦ದ ಮರಳಿ ಬ೦ದು ಹಿರಿಯರನ್ನು ಭೇಟಿ ಮಾಡಿದಾಗ, ಮದುವೆಯ ಸ೦ದರ್ಭದಲ್ಲಿ, ಧಾರ್ಮಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಾಗ ಹಾಗೂ ಹಬ್ಬಗಳ ಸ೦ದರ್ಭಗಳಲ್ಲಿ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ಸಾಮಾನ್ಯ. ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ ಒ೦ದು ಕಾಲದಲ್ಲಿ, ಕಿರಿಯರು ಪ್ರಾತ:ಕಾಲದಲ್ಲಿ ಎದ್ದೊಡನೆಯೇ ತಮ್ಮ ಹೆತ್ತವರ ಪಾದಗಳನ್ನು ಸ್ಪರ್ಶಿಸುವುದು ಹಾಗೂ ರಾತ್ರಿಯ ವೇಳೆ ಹಾಸಿಗೆಗೆ ತೆರಳುವ ಮುನ್ನ ಮತ್ತೊಮ್ಮೆ ತನ್ನ ಹೆತ್ತವರ ಪಾದಗಳನ್ನು ಸ್ಪರ್ಶಿಸುವುದು ಒ೦ದು ಸ೦ಪ್ರದಾಯದ೦ತೆ ಆಚರಿಸಲ್ಪಡುತ್ತಿತ್ತು. ಈ ನಿಯಮವನ್ನು ಪಾಲಿಸುವವರು ಇನ್ನೂ ಅನೇಕ ಜನರು ಇರಬಹುದಾದರೂ ಕೂಡ, ವಸ್ತುಸ್ಥಿತಿ ಏನೆ೦ದರೆ, ಈ ಪದ್ಧತಿಯು ಸಮಯದೊ೦ದಿಗೆ ಕಾಲಕ್ರಮೇಣವಾಗಿ ನಶಿಸಿಹೋಗುತ್ತಿದೆ. 

ಹಿರಿಯ ಜೀವಗಳು ಅತಿ ಅಮೂಲ್ಯವಾದವು. ಅವರನ್ನು ಅತ್ಯಂತ ಗೌರವ ಪ್ರೀತಿಯಿಂದ ನೋಡಿಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.


ಅಪ್ಪಾಜಿ ಎ ಮುಸ್ಟೂರು 
ಅಮುಭಾವಜೀವಿ 
ಶಿಕ್ಷಕರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಹಿರೇಮಲ್ಲನಹೊಳೆ 
ಜಗಳೂರು ತಾಲೂಕು 
ದಾವಣಗೆರೆ ಜಿಲ್ಲೆ 
577528

ಮೊಬೈಲ್ 8496819281

Sunday, September 20, 2020

ಕವನ

*ಪ್ರವಾಹ ಫಜೀತಿ*

ಈ ಬದುಕನ್ನೇ ಕೊಚ್ಚಿ
ಹೊರಟಿದೆ ಪ್ರವಾಹ
ನೆಲೆಯಿಲ್ಲದೆ ನರಳುತ್ತಿದೆ
ಸಂತೃಪ್ತ ಬದುಕಿನ ವಿನಾಶ

ಮನೆ ಮಠಗಳ ತೊರೆದು
ಕಾಳುಕಡಿಯನೆಲ್ಲ ಬಿಟ್ಟು
ಬಡಜೀವವ ಬದುಕಿಸಿಕೊಳ್ಳಲು
ಯುದ್ಧಕ್ಕೂ ಮಿಗಿಲಾದ ಹೋರಾಟವಿದು

ಹೊಲ ಗದ್ದೆಗಳೆಲ್ಲ ಮುಳುಗಿ
ದನಕರುಗಳು ಕೊಚ್ಚಿಹೋಗಿ
ನರಕದ ದರ್ಶನವಾಯಿತು
ಮಹಾ ಮಳೆಯು ತಂದ ಪ್ರವಾಹದಿಂದ

ಮಕ್ಕಳುಮರಿ ಕಟ್ಟಿಕೊಂಡು
ಗಂಜಿ ಕೇಂದ್ರದಲ್ಲಿ ಉಳಿದುಕೊಂಡು
ಅವರೆಸೆಯುವ ಭಿಕ್ಷೆಗಾಗಿ
ಕೈಚಾಚಿ ಕೂರುವಂತಾಗಿದೆ ದೈನೇಸಿ ಬದುಕು

ಉಳ್ಳವರ ಅಟ್ಟಹಾಸ
ಕಳ್ಳಕಾಕರ ನಿತ್ಯ ಕೆಲಸ
ವಿಷಜಂತುಗಳ ವರ್ತುಲದಾಚೆ
ಬದುಕು ಕಟ್ಟಿಕೊಳ್ಳಬೇಕಿದೆ

4.50 ಪಿಎಂ 18 09 2020

*ಅಮುಭಾವಜೀವಿ ಮುಸ್ಟೂರು*

Saturday, September 19, 2020

ಕವನ

#ಅಮುಭಾವಬುತ್ತಿ ೭೬


*ಮುಂಗಾರಿನ ನಿರೀಕ್ಷೆ*

ಬರಿದೇ ಬಾನ ವಿಸ್ತಾರದಲ್ಲಿ
ಉರಿಬಿಸಿಲ ತಾಪದಲ್ಲಿ
ಕರಿ ಮೋಡಗಳ ಪ್ರಣಯದಲ್ಲಿ
ಮುಂಗಾರಿನ ಜನನಕ್ಕೆ ನಾಂದಿಯಾಯಿತು

ಎಲೆಯುದುರಿದ ಬೋಳುಮರಗಳಲ್ಲಿ
ಮಣ್ಣಲ್ಲಿ ಮಣ್ಣಾದ ಗರಿಕೆ ಒಡಲಲ್ಲಿ
ಬತ್ತಿ ಬಿರುಕಾದ ಕೆರೆಯಂಗಳದಲ್ಲಿ
ಮುಂಗಾರಿನ ಆಗಮನದ ಕನಸಿತ್ತು

ನೀರಿಲ್ಲದ ನದಿಗಳಲ್ಲಿ
ಸುಮವಿರದ ಲತೆಗಳಲ್ಲಿ
ಒಡಲ ಬಿಸಿಲಿಗೆ ಒಡ್ಡಿದ ಧರೆಯಲ್ಲಿ
ಮುಂಗಾರಿನ ನಿರೀಕ್ಷೆಯಿತ್ತು

ಬಾಯಾರಿದ ಖಗಮೃಗಗಳಲ್ಲಿ
ಬರದ ಬವಣೆಗೆ ಸಿಕ್ಕ ರೈತರಲ್ಲಿ
ಕಾಡ್ಗಿಚ್ಚಿನ ಭಯದಿ ಕಾನನದಲ್ಲಿ
ಮುಂಗಾರಿನ ಭರವಸೆ ಇತ್ತು

ಮೊಳೆವ ಪ್ರತಿಬೀಜದಲ್ಲೂ
ಸುಡುವ ಮಣ್ಣ ಕಣಕಣದಲ್ಲೂ
ಬತ್ತಿದೊಡಲ ಸುಪ್ರಭಾತದಲ್ಲೂ
ಮುಂಗಾರಿನ ಕನವರಿಕೆ ಇತ್ತು

ಮತ್ತೆ ಬಂತು ಮುಂಗಾರು
ನೋಡಲ್ಲಿ ವಸಂತದ ಸಂಭ್ರಮ ಜೋರು
ಹನಿ ನೀರಿನ ಅಂತಃಕರಣ
ಪ್ರತಿ ಜೀವದ ಬದುಕಿನ ಪ್ರೇರಣ

0535ಪಿಎಂ13032017
*ಅಮುಭಾವಜೀವಿ ಮುಸ್ಟೂರು*

Wednesday, September 16, 2020

#ಅಮುಭಾವಬುತ್ತಿ  62

ನಿನ್ನ ಪ್ರೀತಿಸಲೂ ನನಗೆ ಭಯವಾಗಿದೆ, ಕಾರಣ ಸಮಾಜದಲಿ ಇನ್ನೂ ಜಾತಿಯ ದಟ್ಟ ಛಾಯೆ ಇದೆ

ಅಮು ಭಾವಜೀವಿ

Thursday, August 6, 2020

ಗಜಲ್

*ಗಜಲ್*


ಭಾವ ಬುತ್ತಿಯಲ್ಲಿ ತುತ್ತಾಗು ಬಾ ಕಾವ್ಯ ಕನ್ನಿಕೆ
ಎದೆಯ ಭಿತ್ತಿಯಲ್ಲಿ ಚಿತ್ರವಾಗು ಬಾ ಕಾವ್ಯ ಕನ್ನಿಕೆ 

ನೂರು ನೋವುಗಳ ಕಂಡು ಸೋತಿರುವೆ 
ಮುಂಜಾನೆ ಮಂಜಿನ ನಗುವಾಗು ಬಾ ಕಾವ್ಯ ಕನ್ನಿಕೆ

ಅವಹೇಳನದ ಹೊಡೆತಕ್ಕೆ ಮೈ ಮನ ನೊಂದಿದೆ 
ನಿನ್ನೊಲವಿನ ಸ್ಪರ್ಶದ ಮದ್ದಾಗು ಬಾ ಕಾವ್ಯ ಕನ್ನಿಕೆ

ತುಳಿಯುವವರ ಅಟ್ಟಹಾಸಕ್ಕೆ ನಲುಗಿರುವೆ
ಮೆಟ್ಟಿ ನಿಲ್ಲಲು ಸ್ಫೂರ್ತಿಯಾಗು ಬಾ ಕಾವ್ಯ ಕನ್ನಿಕೆ 

ಹೃದಯ ಬಟ್ಟಲು ಹಿಡಿದು ಬರುತಿಹನು ಅಮು
ನಿರ್ದಯಿ ಜಗದಿ ಬದುಕಿಸುವ ತಾಯಾಗು ಬಾ ಕಾವ್ಯ ಕನ್ನಿಕೆ 

೦೫೦೪ಎಎಂ೦೭೦೮೨೦೨೦
*ಅಮುಭಾವಜೀವಿ ಮುಸ್ಟೂರು*

Tuesday, March 24, 2020

ಕವನ ಲೇಖನ

*ಕವಿತೆ ದಿನದ ಶುಭಾಶಯಗಳೊಂದಿಗೆ*

*#ಕವಿತೆ*

ಹದವಾಗಿ ನೆನೆದ 
ಭೂಮಿಯ ಕಂಪು
ಈ ಕವಿತೆ

ಯಾರ ಬಲವಂತವೂ
ಇಲ್ಲದೆ ಅರಳಿದ ಮೊಗ್ಗು 
ಈ ಕವಿತೆ

ಬಿಸಿಲಲ್ಲಿ ಬಾಯಾರಿ 
ದಣಿದವನ ತಣಿಸುವುದು
ಈ ಕವಿತೆ

ನಡೆಯುವಾಗ ಎಡವಿದವನ
ಎತ್ತಿ ಮಮತೆಯ ಮಾತಾಡಿತು
ಈ ಕವಿತೆ 

ಶಾಂತ ಸಾಗರದಲ್ಲಿ 
ಎದ್ದ ಭಾವದ ಹೆದ್ದೆರೆಗಳು
ಈ ಕವಿತೆ 

ಭೂತ ಭವಿಷ್ಯತ್ತಿನ ಜೊತೆ 
ವರ್ತಮಾನದ ದಾಖಲೆ 
ಈ ಕವಿತೆ 

ನೊಂದ ಮನವ ಸಂತೈಸಲೂ 
ಎಂದೆಂದೂ ಜೊತೆಗಿರುವುದು 
ಈ ಕವಿತೆ 

ಒಂಟಿತನದ ಬೇಗುದಿಗೆ
ನಲ್ಲೆಯ ಒಲವಿನ ಮಡಿಲು
ಈ ಕವಿತೆ 

ಮಣ್ಣೊಳಗೆ ಮಣ್ಣಾಗಿದ್ದ
ಬೀಜ ಮೊಳೆವ ಹೊಸತನ
ಈ ಕವಿತೆ 

ಸೋತ ಬದುಕಿಗೆ ಸಾಂತ್ವನ 
ಹೇಳಿ ಮತ್ತೆ ಗೆಲ್ಲುವ ಸ್ಪೂರ್ತಿ 
ಈ ಕವಿತೆ 

ನಲ್ಲ ನಲ್ಲೆಯರ ಸರಸ ಸಲ್ಲಾಪದ
ಆಲಾಪನೆಯ ತುಡಿತ ಮಿಡಿತ
ಈ ಕವಿತೆ 

ಕವಿತೆಯಿದು ಕಲ್ಪನೆಯೂ ಹೌದು
ವಾಸ್ತವದ ಕಟು ಸತ್ಯವೂ ಹೌದು

0458ಪಿಎಂ21032019
*ಅಮು ಭಾವಜೀವಿ*


ಕವಿ ಬಳಗದ ಲೇಖನ ಸ್ಪರ್ಧೆಗಾಗಿ

*ಬೇಸಿಗೆ ಶಿಬಿರಗಳು ಮಕ್ಕಳ ಮೇಲೆ ಬಿರುವ ಪರಿಣಾಮಗಳು*

ಬೇಸಿಗೆ ಶಿಬಿರಗಳು ಇಂದು ಮಕ್ಕಳ ಮೇಲೆ ಪರಿಣಾಮ ಬೀರುವುದಕ್ಕಿಂತ ಹಣ ಮಾಡುವ ದಂಧೆಯಾಗಿ ಹೋಗಿದೆ. ಅದರಲ್ಲೂ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳ ಹೆಸರಿನಲ್ಲಿ ಕೆಲಕಾಲ ಹೊರಗಿಟ್ಟು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗುವ ಪರಿಪಾಠ ಹೆಚ್ಚಾಗುತ್ತಿದೆ. ಎಷ್ಟಾದರೂ ಹಣ ಕೊಟ್ಟು ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಿಗೆ ಬಿಟ್ಟು ಬರುತ್ತಾರೆ. ಮಕ್ಕಳ ಆಸಕ್ತಿಗಳೇನು? ಅವರ ಅಗತ್ಯಗಳೇನು ಅದನ್ನು ಪೋಷಕರು ಅರ್ಥಮಾಡಿಕೊಳ್ಳದೆ ಕೇವಲ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳು ಎಂಬ ಸೆರೆಮನೆಗೆ ತಳ್ಳಿ ಬರುತ್ತಾರೆ. ಧಾವಂತದ ಬದುಕಿನಲ್ಲಿ ತಮ್ಮ ಮಕ್ಕಳಿಗೆ ಎಲ್ಲವನ್ನೂ ಕೊಡಿಸಿದ ತೃಪ್ತಿಗಾಗಿ ತಮ್ಮ ದುಡಿಮೆಯ ಒಂದಿಷ್ಟು ಅಂಶವನ್ನು ಇದಕ್ಕಾಗಿ ವ್ಯಯ ಮಾಡುತ್ತಾರೆ. ಆದರೆ ಮಕ್ಕಳಿಗೆ ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಕಲಿಯಲೇಬೇಕೆಂಬ ಒತ್ತಡದಲ್ಲಿ ನೂಕಿ ಬರುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗಲಾರದು.

     ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಸಜ್ಜೆಯಾಗದಂತೆ ಅವರು ಸ್ವಚ್ಛಂದವಾಗಿ, ತಮ್ಮದೆಯಾದ ಸೃಜನಶೀಲತೆ ಕಲಾವಂತಿಕೆ ನೈಜ ಅನುಭವ ಪಡೆಯುವಂತಹ ಚಟುವಟಿಕೆಗಳನ್ನು ಮನೆಗಳಲ್ಲೇ ನೀಡಿದರೆ ಸಾಕಾಗುತ್ತದೆ. ಅದಕ್ಕಾಗಿ ಪೋಷಕರು ಖರ್ಚು ಮಾಡಬೇಕಾಗಿಲ್ಲ. ಬದಲಾಗಿ ತಮ್ಮ ಸಮಯವನ್ನು ತಮ್ಮದೇ ಮಕ್ಕಳಿಗೆ ನೀಡಿದಾಗ ಆ ಮಕ್ಕಳಿಗೂ ಹೆತ್ತವರ ಪ್ರೀತಿಯ ಸವಿದಂತಾಗುತ್ತದೆ. ಹಿಂದಿನ ಕಾಲದಲ್ಲಿ ಬೇಸಿಗೆ ರಜೆ ಬಂತೆಂದರೆ ಮಕ್ಕಳು ಖುಷಿಯಿಂದ ಅಜ್ಜ-ಅಜ್ಜಿಯ ಮನೆಗೆ ಅತ್ತೆ ಮಾವನ ಮನೆಗೆ ಹೋಗುವುದು ವಾಡಿಕೆಯಾಗಿತ್ತು. ಅಲ್ಲಿ ಅಜ್ಜ-ಅಜ್ಜಿಯರು ತಮ್ಮ ಜೀವನಾನುಭವಗಳನ್ನು, ತಾವು ತಿಳಿದ ಶಾಸ್ತ್ರ ಪುರಾಣಗಳು ,ನೀತಿಕಥೆಗಳು, ಕೋಲಾಟ, ಭಜನೆಗಳು, ಜನಪದ ನೃತ್ಯಗಳು, ಸೋಬಾನೆ ಪದಗಳು, ಗ್ರಾಮೀಣ ಕ್ರೀಡೆಗಳು, ಈಜುವುದು, ಮರಕೋತಿ ಆಟ ಆಡುವುದು, ಬುಗುರಿ ಚಿನ್ನಿದಾಂಡು, ಕಾಲ್ಚೆಂಡು ಮುಂತಾದ ಆಟಗಳನ್ನು ಯಾವುದೇ ನಿರ್ಬಂಧವಿಲ್ಲದೆ ನಿರ್ಭೀತಿಯಿಂದ ಕಲಿಯುವ ಸ್ವಾತಂತ್ರ ಮಕ್ಕಳಿಗೆ ಇತ್ತು. ಅಲ್ಲಿ ಹಿರಿಯರಾದವರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲಿ ಹೀಗೆ ಇರಬೇಕು ಎಂಬ ಕಟ್ಟುಪಾಡುಗಳಿರಲಿಲ್ಲ. ಸ್ವಚ್ಛಂದದ ಪರಿಸರದಲ್ಲಿ, ಪ್ರೀತಿ ಆಸರೆಯಲ್ಲಿ ಮಕ್ಕಳ ಬಾಲ್ಯ ಅರಳುತ್ತಿತ್ತು. ಅವರ ಕ್ರಿಯಾಶೀಲತೆಗೆ ವೇದಿಕೆ ದೊರೆತಿತ್ತು. ಪರಸ್ಪರರಲ್ಲಿ ಒಡನಾಟ ಪ್ರೀತಿ ವಿಶ್ವಾಸ ನಂಬಿಕೆ ಕಾಳಜಿ ಸಹಕಾರ ಮನೋಭಾವ ಮಾನವೀಯತೆ ಜೀವನ ಮೌಲ್ಯಗಳು ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತಿದ್ದವು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಭದ್ರ ತಳಪಾಯವನ್ನು ಹಾಕಿ ಕೊಡುತ್ತಿದ್ದವು. ಆದರೆ ಇಂದಿನ ಮಕ್ಕಳಿಗೆ ಅಜ್ಜಿಯ ಮನೆಗಳೇ ಕಾಣೆಯಾಗಿಹೋಗಿವೆ. ಶಾಲೆ ಮನೆಗೆಲಸ ಆಟ ಪಾಠ ಮುಂತಾದ ಶೈಕ್ಷಣಿಕ ಚಟುವಟಿಕೆಗಳಲ್ಲಿಯೇ ಮಕ್ಕಳ ಬಾಲ್ಯ ಕಳೆದುಹೋಗುತ್ತಿದೆ. ಮಗು ಪ್ರತಿ ಹಂತದಲ್ಲೂ ಅಸಹಾಯಕನಾಗಿ ಇನ್ನೊಬ್ಬರ ಸಹಾಯವನ್ನು ಅಪೇಕ್ಷಿಸುವಂತೆ ವಾತಾವರಣವನ್ನು ಹೆಚ್ಚಿಸಿಕೊಂಡಿದ್ದೇವೆ. ಈಗ ಮತ್ತೆ ಮಕ್ಕಳನ್ನು ಬೇಸಿಗೆ ಶಿಬಿರಗಳಲ್ಲಿ ಬಿಟ್ಟು ನಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಿದ್ದೇವೆಯೇ ಹೊರತು ಅದರಿಂದ ಮಕ್ಕಳಿಗೆ ಯಾವುದೇ ಲಾಭವಿಲ್ಲ. ಬೇಸಿಗೆ ಶಿಬಿರಗಳ ಎಂಬುದೆಲ್ಲಾ ದುಡ್ಡು ಮಾಡುವವರು ಹೊಸ ಮಾರ್ಗಗಳಾಗಿವೆ ಅಷ್ಟೇ. ನಮ್ಮದೇ ಮಕ್ಕಳನ್ನು ನಮ್ಮದೇ ದುಡ್ಡು ಕೊಟ್ಟು ಅವರಲ್ಲಿ ಬಿಟ್ಟು ಬರುತ್ತೇವೆಯೇ ಹೊರತು ನಮ್ಮ ಮಕ್ಕಳನ್ನು ನಮ್ಮ ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಂಬಂಧಗಳೊಂದಿಗೆ ಬೆಳೆಯಲು ಬಿಡುವುದೇ ಇಲ್ಲ.

ಒಟ್ಟಿನಲ್ಲಿ ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಜಗತ್ತಿನಲ್ಲಿ ಯಾವುದೇ ಪರಿಣಾಮವನ್ನು ನೀಡಲಾರವು. ಬದಲಾಗಿ ಅವರ ಸ್ವಚ್ಛಂದದ ಬಾಲ್ಯವನ್ನು ಬೇಲಿ ಹಾಕಿ ಬಂಧಿಸಿಡಲು ನಾವು ಈ ಬೇಸಿಗೆ ಶಿಬಿರಗಳ ಮೊರೆಹೋಗುತ್ತೇವೆ ಅಷ್ಟೇ. ಅದರ ಬದಲು ನಾವೇ ನಮ್ಮ ಮಕ್ಕಳನ್ನು ದಿನದ ಗಂಟೆಗಳ ಸಮಯ ನೀಡಿ ಅವರ ವ್ಯಕ್ತಿತ್ವವೃದ್ಧಿಗೆ ಶ್ರಮವಹಿಸೋಣ.

ಧನ್ಯವಾದಗಳು

*ಅಮು ಭಾವಜೀವಿ*


#ಗುಬ್ಬಚ್ಚಿ #ದಿನದ #ಕುರಿತಾಗಿ*

#ಇನ್ನಿಲ್ಲದಾಯ್ತು

ನಮ್ಮ ಮನೆಯ ಗೋಡೆಯಲ್ಲಿ
ಇದೆ ಪುಟ್ಟದೊಂದು ಸಂಸಾರ 
ಅಪ್ಪ ಅಮ್ಮ ಇಬ್ಬರೇ 
ಅದರ ಆಧಾರ

ಪುಟ್ಟ ಗೂಡಿನಲ್ಲಿಯೇ 
ಮೊಟ್ಟೆಯೊಡೆದ ಮರಿಗಳಿಗೆ
ಗುಟುಕನಿಟ್ಟು ಪ್ರೀತಿ ಕೊಟ್ಟು 
ಬೆಳೆಸೋ ರೀತಿ ಅದ್ಬುತ 

ಅಲ್ಲಿ ಇಲ್ಲಿ ಬಿದ್ದ ಕಾಳನೆಕ್ಕಿ
ಚಿಕ್ಕ ಪುಟ್ಟ ಹುಡುಗ ಕುಕ್ಕಿ 
ಎಲ್ಲೋ ನಿಂತ ನೀರನು ಹೀರಿ
ಪುರ್ರನೆ ಹಾರಿಹೋಯ್ತು ತಾಯಕ್ಕಿ 

ಚಿವ್ ಚಿವ್ ಎನ್ನುತ್ತಿತ್ತು 
ಮತ್ತೆ ಮತ್ತೆ ಹಾರುತ್ತಿತ್ತು
ತನ್ನ ಪ್ರೀತಿ ತೋರುತ್ತಿತ್ತು 
ಸಂಜೆಗೆಲ್ಲ ಗೂಡನು ಹೊಕ್ಕುತ್ತಿತ್ತು

ಬೆಳ್ಳಂಬೆಳಿಗ್ಗೆ ಚಿಲಿಪಿಲಿಗುಟ್ಟಿ
ಕಡ್ಡಿಪಡ್ಡಿಯಿಂದ ಗೂಡು ಕಟ್ಟಿ 
ಮನುಜ ಕೂಡ ನಾಚುವಂತೆ
ಸಂಸಾರ ಸಾಗಿತ್ತು ಇಲ್ಲದೆ ಚಿಂತೆ 

ಇನ್ನೆಷ್ಟು ದಿನ ಇರುವುದೋ ಹೀಗೆ 
ದಾಳಿಯಿಟ್ಟು ಬಂತು ಬೇಸಿಗೆ
ಕಾಳಿಲ್ಲದೆ ನೀರಿಲ್ಲದೆ ಪರಿತಪಿಸಿ
ಅದರ ಕುಲವೆ ಇನ್ನಿಲ್ಲದಾಯ್ತು ನಶಿಸಿ

1050ಪಿಎಂ20032018

#ಅಮುಭಾವಜೀವಿ

*ಜೀವನ*

ಕಾಲ ಕೂಡ ಸರಿಯುತಿದೆ
ನಾಳೆಯನ್ನು ಕರೆಯುತಿದೆ
ಜೀವನ ಪಯಣವಿದು ಸಾಗಿದೆ
ನಡೆವ ಹಾದಿಯ ಕಲ್ಲು ಮುಳ್ಳು
ಎದುರಾಗುವ ನೂರು ಕಷ್ಟಗಳು
ಎಲ್ಲ ಎದುರಿಸಿ ಮುನ್ನಡೆಯಬೇಕಿದೆ

0447ಪಿಎಂ24032020
*ಅಮುಭಾವಜೀವಿ ಮುಸ್ಟೂರು*

Saturday, March 21, 2020

ಯುಗಾದಿ ಹಬ್ಬದ ಮಹತ್ವ

ಯುಗಾದಿ ಹಬ್ಬದ ಮಹತ್ವ

       ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಅದರದೇ ಆದ ಮಹತ್ವವನ್ನು ನೀಡಲಾಗಿದೆ. ಪ್ರತಿಯೊಂದು ಹಬ್ಬಗಳ ಆಚರಣೆಗೆ ಧಾರ್ಮಿಕ ವೈಚಾರಿಕ , ವೈಜ್ಞಾನಿಕ ನೈಸರ್ಗಿಕವಾದ ಮಹತ್ವವನ್ನು ನೀಡಲಾಗಿದೆ. ಆಯಾ ಕಾಲಮಾನಕ್ಕೆ ತಕ್ಕಂತೆ, ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಹಬ್ಬಗಳ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆಯಾಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಾರೆ ಅದಕ್ಕೆಂದೇ ವಿಶೇಷವಾಗಿ ತಯಾರಿಸಿದ ಭಕ್ಷ್ಯ ಭೋಜನಗಳನ್ನು ಸೇವಿಸುವ ಮೂಲಕ  ಅರ್ಥಪೂರ್ಣ ಆಚರಣೆಗಳನ್ನೂ ಆಚರಿಸಿಕೊಂಡು ಬರಲಾಗುತ್ತಿದೆ.

           ನಮ್ಮ ಪುರಾಣ ಶಾಸ್ತ್ರಗಳ ಪ್ರಕಾರ ವರ್ಷದ ಮೊದಲ ಹಬ್ಬವೇ ಯುಗಾದಿ. ಅಂದರೆ ಯುಗದ + ಆದಿ = ಯುಗಾದಿ , ಯುಗ ಎಂದರೆ ವರ್ಷ ಆದಿ ಎಂದರೆ ಆರಂಭ. ಈ ಪದದ ಅರ್ಥ ವರ್ಷದ ಆರಂಭವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಇಡೀ ಪ್ರಕೃತಿಯೇ ತನ್ನ ಹಳೆಯ ಎಲೆಗಳನ್ನೆಲ್ಲ ಉದುರಿಸಿ ಹೊಸಚಿಗುರಿನೊಂದಿಗೆ ಕಂಗೊಳಿಸುತ್ತಾ ಚೈತ್ರ ಆಗಮನದ ವಸಂತನಿಗೆ ಸ್ವಾಗತ ಕೋರುತ್ತದೆ. ಇಡೀ ನಿಸರ್ಗದ ತುಂಬಾ ಹೊಸತನ ಮನೆಮಾಡಿರುತ್ತದೆ. ಕೆಂದಳಿರಿನ ಚಿಗುರಿನ ಜೊತೆಗೆ ಬಿರಿದ ಮೊಗ್ಗುಗಳು ಅರಳಿ ಹೊಸ ಕಂಪಿನ ನರುಗಂಪನ್ನು ಸೂಸಿ , ಹಕ್ಕಿಗಳ ಕಲರವದ ಜೊತೆಗೆ ಸಂಭ್ರಮಾಚರಣೆಯಲ್ಲಿ ಮುಳುಗಿರುತ್ತದೆ. ಮೊಗ್ಗು ಮಿಡಿಕಾಯಿ ಹಣ್ಣುಗಳಿಂದ ಮೈದುಂಬಿದ ಗಿಡ-ಮರಗಳಲ್ಲಿ ಚಿಕ್ಕಪುಟ್ಟ ಪ್ರಾಣಿ ಪಕ್ಷಿ ಕೀಟಗಳು ಆಹಾರಕ್ಕಾಗಿ ಆಶ್ರಯಿಸುತ್ತವೆ. ಬೇಸಿಗೆಯ ಬಿರುಬಿಸಿಲಿನಲ್ಲಿಯೂ ತಣ್ಣನೆಯ ನೆರಳು ನೀಡುವ ಮರಗಿಡಗಳು ಹೊಸವರ್ಷದ ಸಮೃದ್ಧಿಯ ಸಂಕೇತವಾಗಿ ಕಾಣಿಸುತ್ತವೆ. ಇಡೀ ಪ್ರಕೃತಿ ಹಸುರಿನಿಂದ ಸಮೃದ್ಧವಾಗಿರುತ್ತದೆ.

             
          ಮಾನವರಾದ ನಾವುಗಳು ಈ ಹಬ್ಬವನ್ನು ವಿಶೇಷವಾಗಿ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಚಾಂದ್ರಮಾನದ ಲೆಕ್ಕಾಚಾರದಲ್ಲಿ ಅಮಾವಾಸ್ಯೆಯನ್ನು ಮೊದಲದಿನ ಎಂದು ನಂಬಿಕೊಂಡು ಬಂದಿರುವ ನಾವುಗಳು ಅಂದು ಪುರುಷರು ಮಕ್ಕಳಾದಿಯಾಗಿ ಮೈಯಿಗೆ ಹರಳೆಣ್ಣೆ, ಅರಿಶಿನ ಮಿಶ್ರಣ ಮಾಡಿ ಹಚ್ಚಿಕೊಂಡು ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಓಡಾಡಿ ನಂತರ ಸ್ನಾನ ಮಾಡಿ ಹೊಸಬಟ್ಟೆಗಳನ್ನು ತೊಟ್ಟು ಮನೆಯಲ್ಲಿ ಪೂಜೆ ಮಾಡಿದ್ದಲ್ಲದೆ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಪಡೆಯುವುದು ವಾಡಿಕೆ. ಅದರ ಜೊತೆಗೆ ಎಳೆಯ ಮಾವಿನ ಎಲೆಗಳನ್ನು ಬೇವಿನ ಎಸಳುಗಳನ್ನು ಸೇರಿಸಿ ಮನೆಯ ಬಾಗಿಲುಗಳಿಗೆ ತೋರಣ ಕಟ್ಟಿ ಅಲಂಕರಿಸುತ್ತಾರೆ. ಹೆಂಗಳೆಯರು ಮನೆಯ ಮುಂದೆ ಸಗಣಿಯಿಂದ ನೆಲ ಸಾರಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ ಹಬ್ಬದ ಕಳೆಯನ್ನು ತರುತ್ತಾರೆ. ಅಲ್ಲದೆ ಹೊಸದಾಗಿ ಬೆಳೆದ ನವಧಾನ್ಯಗಳನ್ನು ಬೇಯಿಸಿ ಉಣಬಡಿಸುತ್ತಾರೆ. ಪಾಯಸ ಹೋಳಿಗೆ ಮುಂತಾದ ಸಿಹಿತಿನಿಸುಗಳನ್ನು, ಹೊಸದಾಗಿ ತಯಾರಿಸಿದ ಹಪ್ಪಳ ಸಂಡಿಗೆ ಚಕ್ಕುಲಿ ಮುಂತಾದ ತಿಂಡಿಗಳನ್ನು ಮಾಡಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಸವಿಯನ್ನು ನೀಡುತ್ತಾರೆ.

          ಯುಗಾದಿ ಹೊಸ ವರ್ಷವಾದ್ದರಿಂದ ಮನೆಯಲ್ಲಿ ಬಾಳಿಬದುಕಿ ಹೋದ ಹಿರಿಯರನ್ನು ನೆನಪಿಸಿಕೊಳ್ಳುವ ಸಲುವಾಗಿ ಹಿರಿಯರ ಪೂಜೆಯನ್ನು ಮಾಡುವ ಮೂಲಕ ಹೊಸ ಪೀಳಿಗೆಗೆ ಹಿರಿಯರನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ. ಇದರ ಜೊತೆಗೆ ಬದುಕಿನ ನೋವು-ನಲಿವುಗಳನ್ನು, ಕಷ್ಟ-ಸುಖಗಳನ್ನು, ಏಳುಬೀಳುಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲವನ್ನು ಹಂಚುವ ಮೂಲಕ ಬಾಂಧವ್ಯ ಬೆಸೆಯುವ ಅರ್ಥಪೂರ್ಣ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಬೆಲ್ಲದ ಉಪಯೋಗವೂ ಕೂಡ ಪ್ರಕೃತಿಯಲ್ಲಿ ಉಂಟಾಗಿರುವ ಬಿಸಿಲಿನ ಪರಿಣಾಮವನ್ನು ಎದುರಿಸಲು ಸಹಕಾರಿಯಾಗುತ್ತದೆ. ಬೇವು ಕಷ್ಟಗಳ ಸಂಕೇತವಾದರೆ ಬೆಲ್ಲ ಸುಖದ ಸಂಕೇತವಾಗಿದೆ.

        ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಏರಿದ ಬಿಸಿಲಿನ ತಾಪವನ್ನು  ತಣಿಸಿಕೊಳ್ಳುವುದಕ್ಕಾಗಿ ಪರಸ್ಪರರಿಗೆ ಅದರಲ್ಲೂ ಬೀಗರಾದವರಿಗೆ ನೀರನ್ನೆರೆಚುವ ಮೂಲಕ ಖುಷಿಯಲ್ಲಿ ಪಾಲ್ಗೊಳ್ಳುತ್ತಾರೆ. ಅದರ ಜೊತೆಗೆ ಬೇರೆ ಬೇರೆ ಜಾನಪದ ಕ್ರೀಡೆಗಳನ್ನು, ಪುರಾಣ ಪಠಣಗಳನ್ನು, ಇಡೀ ವರ್ಷ ನಡೆಯಬಹುದಾದ ಜಾತಕ ಫಲಗಳ ಪರಿಚಯವನ್ನು ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಯುಗಾದಿಯ ದಿನದಂದು ಆರಂಭಿಸುವ ಎಲ್ಲಾ ಕಾರ್ಯಗಳು ಸಫಲವಾಗುತ್ತವೆ ಎಂಬ ನಂಬಿಕೆಯಿಂದ ಹೊಸ ಯೋಜನೆಗಳು, ಹೊಸ ಚಿಂತನೆಗಳು, ಹೊಸ ಕಾರ್ಯಕ್ರಮಗಳನ್ನು ಕೈಗೊಂಡು ಸಂಭ್ರಮಿಸುತ್ತಾರೆ. ಇದೆಲ್ಲದರ ಜೊತೆಗೆ ಅತ್ಯಂತ ಮುಖ್ಯವಾಗಿ ಚಾಂದ್ರಮಾನ ಯುಗಾದಿ ಅದ್ದರಿಂದ ಚಂದ್ರನ ದರ್ಶನ ದೊಂದಿಗೆ ಯುಗಾದಿ ಹಬ್ಬಕ್ಕೆ ಮಂಗಳ ಹಾಡಲಾಗುತ್ತದೆ. ಅಮಾವಾಸ್ಯೆಯ ನಂತರ ಅತ್ಯಂತ ಸೂಕ್ಷ್ಮವಾಗಿ ಸಂಜೆಯ ವೇಳೆ ಗೋಚರವಾಗುವ ಚಂದ್ರನ ದರ್ಶನಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತವರಿಗೆ ಚಂದ್ರದರ್ಶನವಾಗುತ್ತಿದ್ದಂತೆ ಸಂಪ್ರದಾಯದಂತೆ ಪೂಜೆ ಮಾಡಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದು ಮನೆಯಲ್ಲಿ ಇರುವ ಹಿರಿಯರ ಪದಗಳಿಗೆ ನಮಸ್ಕರಿಸಿ, ಬಂಧು ಬಾಂಧವರೊಂದಿಗೆ ಚಂದ್ರದರ್ಶನದ ಶುಭಾಶಯವನ್ನು ಕೋರುತ್ತಾ ಪರಸ್ಪರ ಸಂಭ್ರಮಿಸುತ್ತಾರೆ. ಅಲ್ಲದೆ ಜನರು ಯುಗಾದಿಯ ನಂತರ ತಮ್ಮ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು 'ಮೊದಲು' ಮಾಡುವ ಸಲುವಾಗಿ ನೇಗಿಲನು ಹೂಡಿ ಭೂಮಿತಾಯಿಗೆ, ನೇಗಿಲು ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಬೇಸಾಯದ ಚಟುವಟಿಕೆಗಳನ್ನು ಆರಂಭಿಸಿ ವರ್ಷವಿಡಿ ಮಳೆ-ಬೆಳೆ ಚೆನ್ನಾಗಿ ಆಗಿ ರೈತನ ಬದುಕು ಹಸನಾಗಲಿ ಎಂದು ದೇವರನ್ನು ಪ್ರಾರ್ಥನೆ ಮಾಡುತ್ತಾರೆ.

         ಒಟ್ಟಾರೆಯಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಕೆಲಸಕಾರ್ಯಗಳಿಗೆ ಅದರದೇ ಆದ ಧಾರ್ಮಿಕ ಸಾಂಪ್ರದಾಯಿಕ ವೈಜ್ಞಾನಿಕ ವೈಚಾರಿಕ   ಕಾರಣಗಳಿದ್ದು ಅದೆಲ್ಲದರ ಒಟ್ಟು ಮೊತ್ತ ಮಾನವನ ಬದುಕು ಪ್ರಕೃತಿಯ ಜೊತೆಜೊತೆಗೆ ಸಂಭ್ರಮದ ಸಮೃದ್ಧಿಯ ಸಂತಸದಾಯಕ ನೆಮ್ಮದಿಯ ಬದುಕನ್ನು ಪಡೆಯುವುದಾಗಿದೆ. ಆಚರಣೆಗಳ ನೆಪದಲ್ಲಿ ಬಂಧುಬಾಂಧವರ ಸಮಾಗಮ ನೋವುಗಳನ್ನೆಲ್ಲ ಮರೆತು ನಲಿವಿನಲ್ಲೂ ಜೊತೆಯಾಗುವ ಅನುಪಮ ಬಾಂಧವ್ಯ ಬೆಸೆಯುವ ಸಂದರ್ಭ ಹಬ್ಬಗಳ ಆಚರಣೆಗೆ ಮೂಲ ಪ್ರೇರಣೆ. ಅದರಲ್ಲೂ ಯುಗಾದಿ ಮಾನವರಿಗಷ್ಟೇ ಅಲ್ಲ ಇಡೀ ಪ್ರಕೃತಿಯೇ ಹೊಸತನದಿಂದ ಸಂಭ್ರಮಿಸುವ ಕಾಲ. ಹೊಸ ಸಂವತ್ಸರದ ಹೊಸ ಮಾಸದ ಹೊಸ ಋತುವಿನ ಆಗಮನದಿಂದ ಹಿಂದಿನ ವರ್ಷದ ಕಷ್ಟನಷ್ಟಗಳೇನೇ ಇರಲಿ ಪ್ರಸ್ತುತ ವರ್ಷದಲ್ಲಾದರೂ ಎಲ್ಲ ಕಷ್ಟನಷ್ಟಗಳು ಕಳೆದು ಸುಖ ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸುತ್ತಾ ಮತ್ತೆ ಇಂದಿನ ಜೀವನಕ್ಕೆ ಮರಳುತ್ತೇವೆ. ಖುಷಿಯ ಕ್ಷಣಗಳನ್ನು ಮೆಲುಕುಹಾಕುತ್ತಾ ವರ್ಷವಿಡಿ ನಮ್ಮ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾ ಬದುಕಿನ ಪುಟಗಳಲ್ಲಿ ಅನುಭವದ ಸಾಲುಗಳನ್ನು ದಾಖಲಿಸುತ್ತಾ ಮುಂದಿನ ಪೀಳಿಗೆಗೆ ವೇದಿಕೆಯನ್ನು ಸಿದ್ಧಪಡಿಸಿ ನಮ್ಮ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು  ಹೋಗಲಾಗುತ್ತದೆ. ಎಲ್ಲರೂ ಬೇವು-ಬೆಲ್ಲವನ್ನು ಹಂಚಿ ತಿಂದು ಖುಷಿಯಿಂದ ಹೊಸವರ್ಷವನ್ನು ಆಚರಿಸೋಣ, ಸಂಭ್ರಮಿಸೋಣ.

ಎಲ್ಲರಿಗೂ ಹೊಸ ವರ್ಷ ಯುಗಾದಿಯ ಹಾರ್ದಿಕ ಶುಭಾಶಯಗಳು
ದಿನಾಂಕ 21032020

ಅಮು ಭಾವಜೀವಿ

         

Saturday, February 8, 2020

ಕವಿತೆ

*ಇನ ತೆರೆದ ಬಾಗಿಲು*

ಬಾನಲ್ಲಿ ಮೂಡಿತೊಂದು
ಬೆಳಕಿನ ಆಶಾಕಿರಣ
ಜಗದ ಎಲ್ಲ ಕ್ರಿಯೆಗಳಿಗೆ
ಅದುವೇ ನಿತ್ಯ ಪ್ರೇರಣ

ಇರುಳ ಬೆರಳ ಹಿಡಿದು ನಡೆಸಿ
ವಿಶ್ರಾಂತಿಗೆ ವಿರಾಮ ಕೊಡಿಸಿ
ಮುಂಜಾನೆಯ ಮುದ ತಂದ
ಒಂಟಿಕಾಲ ಸೂರ್ಯಕಾಂತಿ
ಬಿರಿದರಳಿ ರವಿಗೆ ನಮಸಿ
ಸ್ವಾಗತಿಸಲು ಓಡಿ ಬಂದ

ಹರಿವ ನೀರ ಬಳುಕಿನಲ್ಲಿ
ನಲಿದ ತಾ ಹೊಳೆಯುತಲಿ
ಸಾಗರಕೆಲ್ಲ ಹೊಂಬಣ್ಣ ಚೆಲ್ಲಿದ
ಹಕ್ಕಿ ಗಾನ ಮಾಧುರ್ಯಕೆ
ಮನಸೋತು ಮೌನದಿಂದ
ಬೆಳಕಿನ ರಥವನೇರಿ ಬಂದ

ಮುತ್ತಿನ ಮಣಿ ಪೋಣಿಸಿ
ಪ್ರಕೃತಿ ತಾನು ಸಂ‌ಭ್ರಮಿಸಿ
ದಿನಕರನ ಸ್ವಾಗತಿಸಲು
ಬೆಳ್ಮುಗಿಲ ಮರೆಯಿಂದ
ಹೊಂಬೆಳಕಿನ ಚೆಲುವಿಂದ
ಇನ ತೆರೆದ ದಿನದ ಬಾಗಿಲು

0713ಎಎಂ08022018

*ಅಮುಭಾವಜೀವಿ*

ನೀ ಬಯಸಿದ ಹಾಗೆಲ್ಲ
ನಾ ಬದುಕಿಸಲಾಗಲಿಲ್ಲ
ಬಡವ ನಾನು
ಪ್ರೀತಿಯಲಿ ಕೈತುತ್ತನಿತ್ತು
ಭೂತಾಯ ಮೇಲ್ಮಲಗಿಸಿ
ಜೋಗುಳ ಹಾಡುವೆನು,
ನನ್ನ ತೋಳ ಬಂಧಿಯೇ
ಆಭರಣ
ಸವಿ ಮಾತೆ  ಸಿಹಿಯೂರಣ
ಈ ಗುಡಿಸಲೇ ಅರಮನೆ
ಆದರೆ ಇಲ್ಲಿ ಒಲವಿನದೇ
ಆರಾಧನೆ.
ಗೆಳತಿ ಬಡವ ನಾನು
ಪ್ರೀತಿಯಲ್ಲಿ ಧನಿಕನು.

834am080215

ಕವಿತೆ

*#ನನ್ನನುಳಿಸಿಕೊಳ್ಳದೆ*

ತುಂಬಾ ನೋವಿದೆ 
ಈ ಮಣ್ಣಿನೊಳಗೆ

ರೈತನ ನೇಗಿಲಿಗೆ ಎದೆಯೊಡ್ಡಿ
ಒಡಲ ಕೊಯ್ದ ಕೆಂಪು ಮಣ್ಣು ನನ್ನದು 
ಅವನಿತ್ತ ಬೀಜಗಳ ಮೊಳೆಸಿ 
ಒಂದನು ಹತ್ತಾಗಿಸಿ ಮತ್ತೆ  
ಹಿಂತಿರುಗಿಸೊ ಹೊಣೆ ನನ್ನದು

ಮಳೆಯ ರಭಸಕ್ಕೆ ಮೈಚೆಲ್ಲಿ
ನನ್ನೊಡಲನೆಲ್ಲ ಅಲ್ಲಿ ಹರಿಸಬೇಕು 
ಚೂರುಪಾರು ಉಳಿದ ಕೊರಕಲಿನಲ್ಲಿ
ಇದ್ದ ಬೀಜಗಳಿಂದ ಹಸಿರ ಚಿಗುರಿಸಬೇಕು

ಗಾಳಿಯಲಿ ಧೂಳಾಗಿ ಹೋಗಿ 
ಆಶ್ರಯವಿಲ್ಲದ ಅನಾಥವಾಗಿ 
ಬಿಸಿಲ ಬೇಗೆಯ ಬರಗಾಲಕೆ 
ಬರಿಗೈಯ ತಾಯಾಗಿ ಕೊರಗಬೇಕು

ಬಿಸಿಲು ಮಳೆ ಗಾಳಿಗಳ ದಾಳಿಯಿಂದ 
ಭರವಸೆ ಕಳೆದುಕೊಳ್ಳದೆ ಉಳಿಯಬೇಕು
ಮಾನವನ ಬೃಹತ್ ಯಂತ್ರಗಳ
ಅತ್ಯಾಚಾರಕೆ ನಿತ್ಯ ಬಲಿಯಾಗಬೇಕು

ಎಂದಿಗೆ ಇದು ಕೊನೆ 
ನಾವಿದ್ದರೆ ತಾನೆ ಬೆಳೆಗೆ ತೆನೆ 
ನನ್ನನುಳಿಸಿಕೊಳ್ಳದೆ ಹೋದರೆ ನಿಮಗೆ 
ಖಂಡಿತ ನಿತ್ಯ ನರಕದ ಬೇಗೆ 

1026ಪಿಎಂ26022014

*ಅಮುಭಾವಜೀವಿ* 



Friday, January 24, 2020

ಲೇಖನ

*ಲೇಖನ*

*ತ್ಯಾಗಮಯಿ ಹೆಣ್ಣು*   

ಇಡೀ ಮಾನವ ಜಗತ್ತಿನ ಹುಟ್ಟಿನ ಮೂಲ ಹೆಣ್ಣು. ಅವಳು ಜನ್ಮ ಕೊಡುವುದರಿಂದ ಹಿಡಿದು ಬದುಕಿನ ಪ್ರತಿಕ್ಷಣವು ಅವಳ ತ್ಯಾಗದ ಫಲವಾಗಿದೆ. ನಾವು ಸುಖವಾಗಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ನಮ್ಮ ಮನೆಯ ಹೆಣ್ಣು ತನ್ನ ಇಡೀ ಬದುಕನ್ನು ನಮಗಾಗಿ ಮೀಸಲಿಟ್ಟಿದ್ದಾರೆ ಪರಿಣಾಮವಾಗಿರುತ್ತದೆ. ಅವಳು ತಾಯಿಯಾಗಿ ಸಹೋದರಿಯಾಗಿ ಮಡದಿಯಾಗಿ ಮಗಳಾಗಿ
ಶಕ್ತಿಯಾಗಿ ಸಹಾಯಕಳಾಗಿ ಪ್ರೋತ್ಸಾಹಕನಾಗಿ ಹೊಣೆಗಾರರಾಗಿದ್ದಾರೆ ಹೊರುವ ಸ್ತ್ರೀಯ ಪ್ರತಿ ಪಾತ್ರವು ಮನುಷ್ಯನ ಜೀವನದಲ್ಲಿ ಅತಿ ಮುಖ್ಯವಾಗಿರುತ್ತದೆ. ಈ ಪಾತ್ರಗಳ ನೆರಳಿನಿಂದ ವಂಚಿತರಾದವರ ಬದುಕು ಸುಂದರವಾಗಿರಲು ಸಾಧ್ಯವೇ ಇಲ್ಲ. ಅದಕ್ಕೆ ಹೇಳಿದ್ದು ಒಂದು ಎಸ್ಎಸ್ಸಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು . ಇದು ಎಷ್ಟೊಂದು ಅರ್ಥಪೂರ್ಣ ಮಾತು.

      ಹೆಣ್ಣು ಪ್ರತಿ ಕುಟುಂಬದ ಆಧಾರ. ಪ್ರತಿ ಮನೆಯಲ್ಲೂ ಹೆಣ್ಣು ಎಲ್ಲರೂ ಏಳುವುದಕ್ಕಿಂತ ಮುಂಚೆ ಎದ್ದು ಎಲ್ಲರೂ ಮಲಗಿದ ಮೇಲೆ ಮಲಗುವ ಅವರ ಬದುಕು ತ್ಯಾಗದ ಪ್ರತೀಕ. ತನ್ನಿರಿ ಎಷ್ಟೇ ಒತ್ತಡಗಳಿದ್ದರೂ ಅಡುಗೆ ಮಾಡುವುದು ಮನೆಗೆಲಸ ಮಕ್ಕಳ ಅಭ್ಯಾಸ ಮನೆಯ ಖರ್ಚು ವೆಚ್ಚ ನಿರ್ವಹಣೆ ಎಲ್ಲದರಲ್ಲೂ ಮಹಿಳೆಗೆ ಅಗ್ರಸ್ಥಾನ. ಎಲ್ಲಾ ಕೆಲಸಗಳು  ಅವಳಿಲ್ಲದೆ ಮಾಡಲು ಅಸಾಧ್ಯ. ಪುರುಷ ಕೇವಲ ಸಹಕಾರ ನೀಡಬಹುದು, ಅವಳಿಗೆ ಬೆಂಗಾವಲಾಗಿ  ನಿಲ್ಲಬಹುದು. ಆದರೆ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಹೆಣ್ಣು ಒಬ್ಬಳಿಂದ ಮಾತ್ರವೇ ಸಾಧ್ಯ.

      ಇಂಥ ಅನೇಕ ತ್ಯಾಗಮಯಿ ಹೆಣ್ಣು ಗಳಿಂದಾಗಿ ಮಾನವನ ಬದುಕು ಹಸನಾಗಿ ಸುಖ-ಶಾಂತಿ-ನೆಮ್ಮದಿಗಳು ಮನೆಮಾಡಿವೆ. ಹಾಗಾಗಿ ಅವಳನ್ನು ಅತ್ಯಂತ ಗೌರವಿತವಾಗಿ ನಡೆಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಎಲ್ಲಿ ಹೆಣ್ಣು ಗೌರವಿಸಲ್ಪಡುವಳೋ ಅಲ್ಲಿ ದೇವರು ನೆಲೆಸಿದ್ದಾನೆ ಎಂಬುದು ನಮ್ಮ ಭಾರತೀಯ ಸಂಸ್ಕೃತಿಯ ನಂಬಿಕೆ. ಅದಕ್ಕಾಗಿಯೇ ಅವಳನ್ನು ಶಕ್ತಿ ಸ್ವರೂಪಿಣಿಯಾಗಿ, ವಿದ್ಯಾದಾಯಿನಿಯಾಗಿ , ಅನ್ನಪೂರ್ಣೆಯಾಗಿ, ಒಟ್ಟಾರೆ ದೇವತೆಯಾಗಿ ಪೂಜಿಸುವ ಗೌರವಿಸುವ ಪರಿಪಾಠ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ವರ್ತಮಾನದ ಮಹಿಳೆ ಪುರುಷನ ಸರಿಸಮಾನವಾಗಿ ಹೊರಗಡೆಯೂ, ತನ್ನ ಪುರಾತನ ಸಂಪ್ರದಾಯದಂತೆ ಮನೆಯೊಳಗೂ ದುಡಿಯುತ್ತಿರುವ ಅವಳ ತ್ಯಾಗ ಶ್ಲಾಘನೀಯವಾದದ್ದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯಂತೆ ಹೆಣ್ಣಿನ ಮಹತ್ವ ಕುಟುಂಬ ಸಮಾಜ ದೇಶ ಎಲ್ಲೆಲ್ಲೂ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ.

       ಹೆಣ್ಣಿನ ಮೇಲೆ ಎಷ್ಟೇ ಶೋಷಣೆಗಳು, ಅತ್ಯಾಚಾರಗಳು, ಅಮಾನವೀಯ ನಡವಳಿಕೆಗಳು, ಅಬಲೆ ಎಂಬ ಹಣೆಪಟ್ಟಿ ಕೊಟ್ಟಿದ್ದರು ಅವಳೆಂದೂ ತನ್ನ ಕಾರ್ಯಗಳಿಂದ ವಿಮುಖರಾಗದೆ ಅತ್ಯಂತ ಶ್ರದ್ಧೆಯಿಂದ, ಜವಾಬ್ದಾರಿಯುತವಾಗಿ  ನಿರ್ವಹಿಸುವುದರಿಂದಲೇ ಸಮಾಜದ ಪ್ರತಿಯೊಬ್ಬರ ಬದುಕು ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹಾಗಾಗಿ ಹೆಣ್ಣನ್ನು ನಾವೆಲ್ಲ ಅವಳನ್ನು ಅತ್ಯಂತ ಗೌರವಿತವಾಗಿ, ಆದರಣೀಯವಾಗಿ, ನಡೆಸಿ ಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.

10:23 ಪಿಎಂ 23012020

*ಅಮುಭಾವಜೀವಿ ಮುಸ್ಟೂರು*
(ಅಪ್ಪಾಜಿ ಎ ಮುಸ್ಟೂರು)
ಶಿಕ್ಷಕರು
ಮುಸ್ಟೂರು ಅಂಚೆ
ಜಗಳೂರು ತಾಲೂಕು
ದಾವಣಗೆರೆ ಜಿಲ್ಲೆ
ಪಿನ್ ಕೋಡ್ 577528
ಮೊಬೈಲ್ 8496819281

Sunday, January 12, 2020

ಸುಗ್ಗಿಯ ಹಬ್ಬ ಸಂಕ್ರಾಂತಿ


        *ಸುಗ್ಗಿಯ ಹಬ್ಬ ಸಂ ಕ್ರಾಂತಿ*


                   ಸುಗ್ಗಿ ಹಬ್ಬ ಎಂದೇ ಪ್ರಸಿದ್ಧವಾದ ನಮ್ಮ ಸಂಸ್ಕೃತಿಯ ಆಚರಣೆಯ ಪ್ರಮುಖ ಹಬ್ಬ. ಸಂಕ್ರಾಂತಿ ಬದಲಾವಣೆಯ ಪ್ರತೀಕವಾದ ಹಬ್ಬ. ಸೂರ್ಯ ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಚಲಿಸುವ ಪರ್ವಕಾಲ. ಅಂದರೆ ಧನುರಾಶಿಯಿಂದ ಮಕರ ರಾಶಿಗೆ ಸೂರ್ಯ ಪ್ರವೇಶವಾಗುವ ಸುಸಮಯ. ಪ್ರಕೃತಿಯ ಈ ಬದಲಾವಣೆಯಿಂದ ಹಗಲು ರಾತ್ರಿಗಳ ಸಮಯದಲ್ಲಿ ವ್ಯತ್ಯಾಸಗಳಾಗುತ್ತವೆ. ಅಲ್ಲದೇ ಚಳಿ ಕಡಿಮೆಯಾಗಿ ಬಿಸಿಲು ಜಾಸ್ತಿ ಆಗುವ, ಗಿಡ ಮರಗಳು ಎಲೆಗಳನ್ನು ಉದುರಿಸಿ ಹೊಸ ಚಿಗುರನ್ನು ಬಿಡುವ ಕಾಲ. ಅಲ್ಲದೆ ರೈತಾಪಿ ಬದುಕಿನ ಸುಗ್ಗಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಹಬ್ಬ. ವರ್ಷವಿಡೀ ಬೆಳೆದ ಫಸಲನ್ನು ಕಣಕ್ಕೆ ಹಾಕಿ ಅದನ್ನು ವಕ್ಕಣೆ ಮಾಡಿ ರಾಶಿ ಮಾಡಿ ಆ ರಾಶಿಯನ್ನು ಪೂಜೆ ಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ದಾನ ಮಾಡಿ ನಂತರ ಉಳಿದ ಧಾನ್ಯಗಳನ್ನು ಸಂಗ್ರಹಿಸಿಕೊಳ್ಳುವುದು ಸಂಪ್ರದಾಯ


               ಪ್ರಕೃತಿಯಲ್ಲಿ ಉಂಟಾಗುವ ಚಳಿ ಮತ್ತು ಶಾಖದ ಪರಿಣಾಮವಾಗಿ ದೇಹದ ಚರ್ಮದಲ್ಲಿ ಜಿಡ್ಡಿನ ಅಂಶ ಕಡಿಮೆಯಾಗಿ ಚರ್ಮ ಒಣಗಿದಂತಾಗುತ್ತದೆ. ಇಂತಹ ಸಮಸ್ಯೆಯಿಂದ ದೂರ ಆಗುವುದಕ್ಕಾಗಿ ನಮ್ಮ ಹಿರಿಯರು ಹೊಸದಾಗಿ ಬೆಳೆದ ಎಳ್ಳು ಅದರೊಟ್ಟಿಗೆ ಬೆಲ್ಲ ಬೆರೆಸಿ ಹಂಚುವ ಮೂಲಕ ದೇಹದ ಸಮತೋಲನ ಕಾಪಾಡಿಕೊಳ್ಳಲು, ಆ ಮೂಲಕ ಪರಸ್ಪರ ಬಾಂಧವ್ಯಗಳನ್ನು ಬೆಸೆಯಲು ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು. ಪರಸ್ಪರ ಎಳ್ಳುಬೆಲ್ಲ ಹಂಚುವುದರಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡವ ಮೂಲಕ ನಮ್ಮ ಹಿರಿಯರ ಸೌಹಾರ್ದ ಮನೋಭಾವನೆಗೆ ಸಾಕ್ಷಿಯಾಗಿದೆ. ಎಳ್ಳು ಬೆಲ್ಲದ ಜೊತೆಗೆ ಹೊಸದಾಗಿ ಬೆಳೆದ ಕಬ್ಬು, ಸಕ್ಕರೆ, ಕಡಲೆ, ಶೇಂಗಾ ಬೀಜ ಇತ್ಯಾದಿ ರೈತ ತಾವೇ ಬೆಳೆದ ವಸ್ತುಗಳನ್ನು ಬಳಸಿ ತಿನ್ನುವುದರಿಂದ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

           ರೈತಾಪಿ ಜನ ತಮ್ಮ ಫಸಲು ಬಂದ ಖುಷಿಯಲ್ಲಿ ಸುಗ್ಗಿ ಹಬ್ಬ ಎಂದು ಆಚರಿಸುತ್ತಾರೆ. ತಮಗೆ ಅನ್ನವನ್ನು ಕೊಟ್ಟ ಭೂಮಿತಾಯಿಗೆ ಪೂಜೆಯ ಮೂಲಕ ಕೃತಜ್ಞತೆ ಸಲ್ಲಿಸುವ ಮೂಲಕ ಋಣ ಸಮರ್ಪಣೆ ಮಾಡಿಕೊಳ್ಳುವರು. ಗಂಡಸರು ಕಿಚ್ಚು ಹಾಯಿಸುವ ಮೂಲಕ ದನಕರುಗಳ ಆರೋಗ್ಯದ ಕಡೆಗೂ ಗಮನ ಹರಿಸಿದರೆ, ಹೆಂಗಸರು ಒಬ್ಬಟ್ಟು ಹೋಳಿಗೆ ಸಿಹಿ ತಿಂಡಿಗಳನ್ನು ಮಾಡಿ ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ತೆರಳಿ ಎಳ್ಳು-ಬೆಲ್ಲ ಹಂಚುವ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಅಲ್ಲದೆ ನವ ತರುಣಿಯರು ಜೋಕಾಲಿಯನ್ನು ಹಾಕಿಕೊಂಡು ಉಯ್ಯಾಲೆ ಆಡುವುದು, ಮಕ್ಕಳು ಮತ್ತು ಯುವಕರು ಗಾಳಿಪಟ ಹಾರಿಸುವುದು ಈ ಹಬ್ಬದ ಇನ್ನೊಂದು ವಿಶೇಷವಾಗಿದೆ.

        ಒಟ್ಟಿನಲ್ಲಿ ಸಂಕ್ರಾಂತಿ ಹಬ್ಬ ಶ್ರಮಜೀವಿಗಳ ದಣಿವನ್ನು ನೀಗಿಸಿ ಹೊಸ ಹುರುಪನ್ನು ತುಂಬುವ ಕೆಲಸ ಮಾಡಿದರೆ, ಪ್ರಕೃತಿ ಚಳಿಗಾಲ ಕಳೆದು ಬೇಸಿಗೆ ಕಾಲಕ್ಕೆ ಅಡಿಯಿಡುವ ಈ ಸಂದರ್ಭದಲ್ಲಿ ಸೂರ್ಯನ ಪಥ ಬದಲಾವಣೆ ಮಹತ್ವವನ್ನು ಪಡೆದಿದೆ ಈ ಸಂಭ್ರಮದಲ್ಲಿ ಜನ-ಜಾನುವಾರುಗಳ ಜೊತೆಗೆ ಇಡೀ ಪ್ರಕೃತಿಯು  ಪಾಲ್ಗೊಳ್ಳುವುದು ನಮ್ಮ ಭಾರತೀಯ ಸಂಸ್ಕೃತಿಯ ಹಬ್ಬಗಳ ಆಚರಣೆಯ ಸಂಪ್ರದಾಯಗಳ ಅರ್ಥಪೂರ್ಣ ಒಳಗೊಳ್ಳುವಿಕೆಯಾಗಿದೆ. ಪ್ರಕೃತಿ ಹೊಸ ಚಿಗುರಿನಿಂದ ಮತ್ತೊಂದು ವರ್ಷದ ಹರ್ಷಕ್ಕೆ ನಾಂದಿ ಹಾಡಲು ಸಜ್ಜಾಗಿರುವ ಅತ್ಯಂತ ಪುಣ್ಯದ ಕಾಲ. ಈ ಸಂದರ್ಭದಲ್ಲಿ ಜನರು ಹಳ್ಳ-ಕೊಳ್ಳಗಳ ಬಳಿಗೆ ಹೋಗಿ ಪುಣ್ಯಸ್ನಾನ ಮಾಡಿ ಸೂರ್ಯದೇವರಿಗೆ ಪ್ರಕೃತಿ ಮಾತೆಗೆ ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ನಿಸರ್ಗ ನಮಗೆ ಎಲ್ಲವನ್ನೂ ಕೊಟ್ಟಿದೆ ಹಾಗಾಗಿ ನಾವದಕ್ಕೆ ಕೃತಜ್ಞತೆಯಿಂದ ಪೂಜೆ ಸಲ್ಲಿಸೋಣ ಎಂಬ ಸಂಪ್ರದಾಯವನ್ನು ಈ ಹಬ್ಬ ನಮಗೆ ಕಲಿಸುತ್ತದೆ.

       ಇಂತಹ ಉಲ್ಲಾಸಮಯವಾದ, ಬದುಕಿನ ಭಾಗವೇ ಆಗಿರುವ ಸಂಕ್ರಾಂತಿ ಎಲ್ಲರ ಬಾಳಲ್ಲೂ ಸಂ ಕ್ರಾಂತಿಯನ್ನು ತಂದು ಎಲ್ಲರ ಏಳಿಗೆಗೆ ಸಹಕಾರಿಯಾಗುವಂತ ಸನ್ನಿವೇಶಗಳೊದಗಿಬರಲಿ ಎಂದು ಆಶಿಸುತ್ತಾ ಪರಸ್ಪರ ಸಾಮರಸ್ಯದ ಬದುಕನ್ನು ಬಾಳುತ್ತಾ, ಮಾನವರು ಮಾನವೀಯತೆಯನ್ನು ಆಚರಣೆಯಲ್ಲಿ ತಂದು ಸಕಲ ಜೀವರಾಶಿಗಳನ್ನು ಗೌರವಾದರಗಳಿಂದ ಕಂಡು ಪ್ರಕೃತಿಯ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಸುಖದುಃಖಗಳನ್ನು ಸಮನಾಗಿ ಸ್ವೀಕರಿಸೋಣ. ಸರ್ವೇಜನ ಸುಖಿನೋ ಭವಂತು ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತುಗಳನ್ನಾಡೋಣ. 

ಎಲ್ಲರಿಗೂ ಸುಗ್ಗಿಹಬ್ಬ ಸಂಕ್ರಾಂತಿಯ ಶುಭಾಶಯಗಳು
0928ಪಿಎಂ10012020
ಅಮು ಭಾವಜೀವಿ ಮುಸ್ಟೂರು 
(ಅಪ್ಪಾಜಿ ಎ ಮುಸ್ಟೂರು) 
ಶಿಕ್ಷಕರು 
ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ 577528
8496819281