Thursday, December 29, 2022

ಕವಿತೆ

ನನ್ನದು ಬಡತನ
ನಿನ್ನದು ಹಗೆತನ
ನಿನ್ನಲಿದೆ ಹುಂಬತನ
ನನ್ನದು ಅದಕ್ಕೂ ಮೀರಿದ ಗೆಳೆತನ

ಹಣವೊಂದೇ ಮಾನದಂಡವೇ
ಗುಣವೆಂದೂ ಗೌಣವಲ್ಲವೆ
ಕಾಂಚಾಣದ ಮಾತಿಗೆ ಓಗೊಟ್ಟು
ಸಂಬಂಧಕೆ ನೀಡಿದೆ ಕೊಡಲಿಪೆಟ್ಟು

ಕಿವಿ ಚುಚ್ಚುವ ಮಾತಿಗೆ ಬೆಲೆ
ಸದ್ಗುಣಕಿಲ್ಲ ಇಲ್ಲಿ ನೆಲೆ
ದೂರುವವರಿಗೆ ದಾರಿ ಬಿಟ್ಟು
ದೂರವಿರು ನೀ ದಯವಿಟ್ಟು

ದಿಕ್ಕು ಬದಲಿಸುವವರೆದುರು
ಸೊಕ್ಕಿನಿಂದಲೇ ನಡೆಯಬೇಕು
ರೊಕ್ಕದ ಅಮಲಿರುವವರ 
ಪಕ್ಕಕ್ಕೂ ನೀ ಸುಳಿಯದಿರು

ಬಿಟ್ಟು ಹೋಗುವವರ ಚಿಂತೆ ಬಿಟ್ಟು
ನಿನ್ನ ನಂಬಿ ಬಂದವರ ಪ್ರೀತಿಸು
ಸುಖದಲ್ಲಿ ಮೆರೆಯುವವರ ಬಿಟ್ಟು
ಕಷ್ಟಕ್ಕಾದವರ ನೀ ಆಶ್ರಯಿಸು

೦೩೦೭ಎಎಂ೩೦೧೨೨೦೨೨
*ಅಮುಭಾವಜೀವಿ ಮುಸ್ಟೂರು*

ಕವಿತೆ

*ಕಪ್ಪು*ಕಪ್ಪು*
        ^^^^^ 

ಕಪ್ಪೆಂದೇಕೆ ಮೂಗು ಮುರಿಯುವಿರಿ
ನಿಮ್ಮ ಕೂದಲು ಕಪ್ಪು 
ನಿಮಗದಾಗಿದೆ ಒಪ್ಪು
ಮೈಬಣ್ಣಕೇಕೆ ಹಿಯ್ಯಾಳಿಕೆ

ಇರುಳು ಕಪ್ಪಾದರೂ
ಹೊಳೆವ ತಾರೆಗಳಲ್ಲಿಲ್ಲವೆ
ಕಣ್ಣು ಕಪ್ಪಾದರೂ
ನೋಟದಲ್ಲಿ ಬಣ್ಣಗಳಿಲ್ಲವೆ

ಕಪ್ಪು  ಎಲ್ಲವನ್ನೂ 
ತನ್ನೊಳಗೆ ನುಂಗಿಕೊಳ್ಳುವುದು
ನ್ಯಾಯದೇವತೆಯ ಕಣ್ಣಿಗೆ 
ಇದೇ ಕಪ್ಪು ಕಟ್ಟಿರುವುದು

ಕಪ್ಪಿದ್ದರೇನೇ ಬಿಳುಪಿನ ಬೆಲೆ
ಕರಿನೆಲವೇ ಕನ್ನಡದ ನೆಲೆ
ಕಣ್ಣು ಮುಚ್ಚಲು ಕಾಣುವುದು ಕಪ್ಪು 
ಕಪ್ಪು ಆಗದು ಎಂದೂ ತಪ್ಪು 

0628ಎಎಂ301216
ಅಮುಭಾವಜೀವಿ
        ^^^^^ 


Friday, December 9, 2022

ಕವನ

#ಅಮುಭಾವರಸಾಯನ ೫೧

ಯಾರು ನಿನ್ನವರು ಇಲ್ಲಿ
ಜೊತೆಗಿದ್ದು ನಗು ತರಿಸುವವರೋ
ಅಳುವಾಗ ಕಣ್ಣೀರ ಬರಿಸುವವರೋ
ದಣಿದ ಜೀವಕ್ಕೆ ನೆರಳಾಗಿ ನಿಲ್ಲುವವರೋ

ಸಂಬಂಧಗಳ ಸಂಕೋಲೆಯೊಳಗೆ
ಸಹಿಸಲಾಗದ ಕಿಚ್ಚು ಹಚ್ಚುವವರಿಗೆ
ಬೆನ್ನೆಲುಬಾಗಿ ನಿಂತು ಬಂಧಗಳ
ಕಳಚುವವರೇ ಹೆಚ್ಚು ನಿಮ್ಮ ಸುತ್ತಮುತ್ತ

ನಂಬಿಕೆಗೆ ಕೊಡಲಿಯ ಬಿಸಿ
ಅಪನಂಬಿಕೆಯೇ ಸತ್ಯವೆಂದು ನಂಬಿಸಿ
ಅವಹೇಳನ ಮಾಡಿ ಅಳಿಸುವವರು
ನಿನ್ನ ಬಂಧುಗಳು ಹೇಗಾಗುವರು ?

ಯಾರನ್ನು ನಂಬಿ ಬಂದಿಲ್ಲ ಇಲ್ಲಿ
ಯಾರಿಗಾಗಿ ಬದುಕಬೇಕಾಗಿಲ್ಲ ಬಾಳಲ್ಲಿ
ನೀ ನಂಬಿರುವ ಹಾದಿಯಲ್ಲಿ ನಡೆದುಬಿಡು ಸಾಕು
ಹುಂಬ ಜನರ ನಂಬಿಸುವ ಅಗತ್ಯವಿಲ್ಲ ಇಲ್ಲಿ

ಯಾರು ಇಲ್ಲದಿದ್ದರೂ ಬದುಕಬಹುದು
ಭರವಸೆ ಇಲ್ಲದಿದ್ದರೆ ಬದುಕುವೆ ಹೇಗೆ
ಸೋಲಿಸಿ ಬೀಳಿಸಿದವರ ಎದುರಲ್ಲಿಯೇ
ಎದ್ದು ನಿಂತು ಗೆದ್ದು ತೋರಿಸು ಸಾಕು

೦೫೨೪ಎಎಂ೧೦೧೨೨೦೨೨
*ಅಮುಭಾವಜೀವಿ ಮುಸ್ಟೂರು*
 

Thursday, December 8, 2022

ಕವನ

*ಹೆಣ್ಣೆಂಬುದೊಂದು ಶಕ್ತಿ*

ಹೆಣ್ಣೆಂಬ ಜನ್ಮ ನಂದು
ಸಹನೆಯಲ್ಲಿ ನಾನೇ ಮುಂದು 

ತಾಯ ಗರ್ಭದಿಂದಲೇ
ನನಗೆ ಸಂಕಷ್ಟ ಶುರು
ಈ ಕ್ರೂರ ಜಗದ ಮುಂದೆ
ಹೋರಾಡಬೇಕು ನಾನಾಗಲು ಪಾರು

ಬದುಕಿನಲ್ಲಿ ಎಷ್ಟೊಂದು ಪಾತ್ರ
ನಿಭಾಯಿಸುವೆ ಅದೇ ನನ್ನ ಸೂತ್ರ
ಹೆಣ್ಣನ್ನು ದೇವರೆನ್ನುವವರ ಜೊತೆ
ಕಿರಾತಕರ ಕ್ರೌರ್ಯಕ್ಕೆ ಬಲಿಯಾಗುವ ವ್ಯಥೆ

ಹೊನ್ನು ಮಣ್ಣಿನ ಜೊತೆಗೆ 
ಹೆಣ್ಣಿಗೂ ಒಂದು ಸ್ಥಾನವಿದೆ
ಮಣ್ಣಿನಂತೆ ಹೆಣ್ಣಿನ ಮೇಲು
ನಿತ್ಯ ಅತ್ಯಾಚಾರದ ಕ್ರೌರ್ಯ ನಡೆದಿದೆ

ತ್ಯಾಗಕ್ಕೆ ಮತ್ತೊಂದು ಹೆಸರು ನಾನು
ಪ್ರೇಮದ ಆ ಮೇರುವೇ ನಾನು
ಮಮತೆ ನನ್ನ ಮಂತ್ರ
ಕರುಣೆಗೆ ಹೆಸರು ನನ್ನ ಕರುಳು ಮಾತ್ರ

ನಿತ್ಯ ದುಡಿವೆ ಹರಿಸಿ ಬೆವರು
ಅದಕ್ಕೆ ನನಗೆ ಸಿಕ್ಕಿದ್ದು ಕಣ್ಣೀರು
ನನ್ನ ಶೀಲದ ಮೇಲೆಯೇ ಎಲ್ಲರ ಕಣ್ಣು
ಅದರಿಂದ ನನ್ನ ಬದುಕಾಗಿದೆ ಹುಣ್ಣು

ವರದಕ್ಷಿಣೆಗೆ ಬಲಿ ನಾನು
ಬದುಕಿನುದ್ದಕ್ಕೂ ಅಡಿಯಾಳಾಗಿಹೆನು
ಆದರೂ ಛಲಬಿಡದೆ ಸಾಧಿಸುತಿಹೆನು
ಹೆಣ್ಣೆಂಬುದು ಒಂದು ಶಕ್ತಿ ತೋರಿಹೆನು

08032014

*ಅಮು ಭಾವಜೀವಿ*

ಶೋಭ ಎನ್ ಹೆಗಡೆ ಅವರ ಪ್ರತಿಕ್ರಿಯೆ 
ಅದ್ಭುತವಾಗಿ ಹೆಣ್ಣಿನ ಬದುಕಿನಾಳದ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವಿರಿ ..ಅಮೋಘವಾಗಿದೆ .

ಮಾವಿನಕುಳಿ ಶ್ರೀನಿವಾಸ ಅವರ ಪ್ರತಿಕ್ರಿಯೆ 

ಹೆಣ್ಣು ಅದ್ಭುತ ಶಕ್ತಿ ಕುರಿತು ಮಲಗಿದ್ದವರನ್ನೂ ಬಡಿದೆಬ್ಬಿಸುವ ಕವಿತೆಯ ಸಾಲುಗಳ ಸೊಗಸು ಅರ್ಥಪೂರ್ಣ, ಮನನೀಯ...!

Monday, December 5, 2022

ಕವನ

ಬೆಳದಿಂಗಳು ಮೆರವಣಿಗೆ ಹೊರಟಂತೆ
ಇಬ್ಬನಿಯಲಿ ದಿಬ್ಬಣ ಬರುವಂತೆ
ತಂಗಾಳಿಯು ಛಾಮರ ಬೀಸಲು
ಮೊಗ್ಗು ಬಿರಿವಾಗಿನ ಸೊಬಗು ನೀನು

 ನಿನ್ನ ನಗುವು ಜುಳು ಜುಳು ಹರಿವ ನೀರಂತೆ
ನಿನ್ನ ಮಾತೆಂದರೆ ಅರಗಿಣಿ ನುಡಿವಂತೆ
ಪ್ರೀತಿಯ ಆರಾಧ್ಯ ದೈವವು ನೀನು
ಈ ನಿನ್ನ ಚೆಲುವು ಮನಮೋಹಕ

ಈ ನಿನ್ನ ವೈಯ್ಯಾರ ಲತೆ ಬಳುಕುವಂತೆ,
ಈ ನಿನ್ನ ಶೃಂಗಾರ ಉತ್ಸವಮೂರ್ತಿಯಂತೆ
ಬಂಗಾರದಂತ ಈ ರೂಪರಾಸಿಗೆ ಮನಸೋತ
ಭ್ರಮರವಾಗಿ ನಿನ್ನನೇ ಸುತ್ತುತಲಿರುವೆ

ನೀನೊಂದು ಹಣ್ಣುಗಳ ರಾಶಿ
ಅದ ಸವಿಯಲು ಅಪ್ಪಣೆ ಬೇಕೆ
ಋತು ವಸಂತನ ಸೃಷ್ಟಿ ನೀನು
ನಿನ್ನೊಳು ಸಮಷ್ಟಿಯ ಕಂಡೆ ನಾನು

ಇರುಳೇನು ಹಗಲೇನು ನನಗೆ 
ಭರವಸೆಯ ಮಹಾ ತೇರು ನೀನು
ಏನಾದರೇನು ಹೇಗಿದ್ದರೇನು
ನೀ ಸಿಗಲು ಸುಖ ಕಾಣುವೆ ನಾನು

೧೦೦೮ಪಿಎಂ೦೫೧೨೨೦೨೨/
*ಅಮುಭಾವಜೀವಿ ಮುಸ್ಟೂರು*

ಸಾವೆಂದರೆ ಸಾವು ಅಷ್ಟೇ
ಅದಕೇಕೆ ವಿಶೇಷ ಅರ್ಥ
ಸಹಜ ಮರಣ ಜನನದಷ್ಟೇ
ಅದಕ್ಕಿರದು ಯಾವ ಸ್ವಾರ್ಥ

ಹುಟ್ಟಿಗೆ ಸಂಭ್ರಮಿಸುವ ನಾವು
ದುಃಖಿಸುವುದೇಕೆ ಬರಲು ಸಾವು
ಹೂ ಅರಳಿ ಬಾಡಿ ಹೋಗುವುದು
ಕಾಯಿ ಹಣ್ಣಾಗಿ ಮಾಗಿ ಕೊಳೆಯುವುದು

ಸಾವಿರದ ಮನೆ ಸಾಸಿವೆ ಸಿಗದು
ಸಾವಾದ ಮನೆಯಲಿ ನಗು ಕಾಣದು
ಮುಕ್ತಿ ಹೊಂದಲು ಜೀವ ಪಯಣ
ಅಂತ್ಯ ತರುವ ಸಾವು ಅದಕೆ ಕಾರಣ

ಆದಿ ಇರುವಂತೆಯೇ ಅಂತ್ಯವೂ ಕೂಡ
ಆದರೆ ಸಾವೆಂದರೇಕಿಷ್ಟೊಂದು ದುಗುಡ
ಅವರವರ ನಿಲ್ದಾಣ ಬರಲು ಇಳಿಯಲೇಬೇಕು
ಹೋದವರ ನೆನೆನೆನೆದು ಅಳುತಲಿರಬೇಕು

ಸಾಧಕರಿಗೆ ನಿರ್ವಾಣ ದುರುಳರಿಗೆ ಕಡಿವಾಣ
ಹೆಸರಿದೆ ನೂರು ಉಳಿದವರಿಲ್ಲ ಯಾರೂ
ನಡೆನುಡಿಗಳೊಂದಾದ ಜೀವನ ಯಾನ
ಸಾರ್ಥಕತೆಗೆ ಸಾಕ್ಷಿಯಾದ ಸಾವಿನ ಸ್ಥಾನ

೦೬೦೧ಎಎಂ೦೬೧೨೨೦೨೨
*ಅಮುಭಾವಜೀವಿ ಮುಸ್ಟೂರು*

Saturday, December 3, 2022

ಕವನ

ಬೆಳದಿಂಗಳ ರಾತ್ರಿಯಲ್ಲಿ
ಕೊರೆವ ಮಾಗಿ ಚಳಿಯಲ್ಲಿ
ಸಂಗಾತಿ ನೀನಿರಲು ಜೊತೆಯಲ್ಲಿ
ಸ್ವರ್ಗಕ್ಕೂ ಕಿಚ್ಚು ಹಚ್ಚುವೆ

ತಂಗಾಳಿಯ ತೇರಲ್ಲಿ
ಹೂಗಂಪಿನ ನಡುವಲ್ಲಿ
ಸೌಂದರ್ಯದ ಸಾಕ್ಷಾತ್ಕಾರದಲ್ಲಿ
ಪ್ರೀತಿಯ ಆರಾಧನೆಗೈಯುವೆ

ವೈಯಾರದ ಲತೆಯಲ್ಲಿ
ಹೊಳೆವ ಇಬ್ಬನಿಯಲ್ಲಿ
ಮೂಡಿದ ಪ್ರತಿಬಿಂಬದಲ್ಲಿ
ನಮ್ಮಿಬ್ಬರ ಚಿತ್ತಾರ ಬಿಡಿಸುವೆ

ಮುಂಜಾನೆಯ ಹೂಬಿಸಿಲಲ್ಲಿ
ಮುಸ್ಸಂಜೆಯ ಹೊಂಬಣ್ಣದಲಿ
ಇರುಳಾವರಿಸುವ ವೇಳೆಯಲ್ಲಿ
ಚುಕ್ಕಿ ಚಂದ್ರಮರಂತೆ ನಾವಲ್ಲವೇ

ಋತುಗಳ ಸಂತೆಯಲ್ಲಿ
ಭಾವದ ಭಾಷೆಯಲ್ಲಿ
ಬದುಕಿನ ಯಾನದಲ್ಲಿ
ನಿನ್ನೊಂದಿಗೆ ನಾ ಸದಾ ಇರುವೆ

ಒಲವು ತಂದ ಈ ಬಂಧನ
ಒಲಿದಂತೆ ಹಾಡುವ ಕವನ
ನಿಮ್ಮಿಬ್ಬರ ಈ ಮಿಲನ
ಪ್ರತಿ ಹೃದಯಕೂ ಸಂಚಲನ

೦೨೨೭ಎಎಂ೦೪೧೨೨೦೨೨
*ಅಮುಭಾವಜೀವಿ ಮುಸ್ಟೂರು*