Tuesday, February 28, 2023

ಕವನ

ಪ್ರೀತಿಸುವ ಹೃದಯದ ಕೇಳು
ನಿನ್ನಿಂದಲೇ ಹಸನು ಈ ಬಾಳು

ಹರೆಯದ ಹುಚ್ಚು ನದಿಯ ಕಟ್ಟಿ ಹಾಕಲು
ಒಲವಿನ ಅಣೆಕಟ್ಟು ಕಟ್ಟಿ ನಿಲ್ಲಿಸಿದೆ
ಒಂಟಿತನದ ಬೀಳನು ಹಸನು ಮಾಡಲು
ಪ್ರೀತಿಯ ಸಿಂಚನಗೈದು  ಹಸಿರಾಗಿಸಿದೆ
ಈ ಹಸಿರ ದೊರೆಯು ನೀನು
ಬಾಳಲಿ ಹಸಿವಿನ ಚಿಂತೆ ಇರದಿನ್ನೂ

ಎದೆಯಾಳದ ನೋವುಗಳಿಗೆ 
ಸಾಂತ್ವಾನ ಹೇಳಿದೆ
ಬಸವಳಿದ ನಾಳಿಗೆ 
ಭರವಸೆಯ ತುಂಬಿದೆ
ನೀನಲ್ಲವೇ ಈ ಬಾಳ ಚೇತನ
ನಿನ್ನಿಂದಲೇ ಬದುಕು ಸುಂದರ ಹೂಬನ

ಹೃದಯದ ಒಡನಾಡಿ ನೀನೀಗ
ಹೊತ್ತೆ ಬಾಳ ಬಂಡಿಯ ನೊಗ
ಜೋಡೆತ್ತಿನ ರೀತಿ ಉಳುಮೆ ಮಾಡೋಣ
ಏನೇ ಬಂದರೂ ಒಲುಮೆಯಿಂದ ಬಾಳೋಣ
ಪ್ರೀತಿಯೇ ನಮ್ಮಿಬ್ಬರ ಒಡನಾಡಿ
ಬಾಳಸಂಪುಟಕ್ಕೆ ಅದುವೆ ಮುನ್ನುಡಿ

೧೧೦೧೩ಎಎಂ೦೧೦೩೨೦೨೩
*ಅಮುಭಾವಜೀವಿ ಮುಸ್ಟೂರು*


ತೊರೆದು ಜೀವಿಸಬಹುದು ನೀನು
ಮರೆತು ಬಾಳಲಾರೆನು ನಾನು
ಪ್ರೀತಿ ನಿನಗೊಂದು ಆಟ
ಪ್ರೀತಿಯೇ ನನಗೆ ನಿತ್ಯದ ಊಟ

ಬೇಡದ ಬದುಕಿಗೆ ನೀ 
ಬಂದದ್ದು ನಿಜವಾದರೂ
ಅಪವಾದ ಹೊತ್ತು ಬದುಕಿದೆ 
ನಾನು ಸದಾ ಯವಾಗಲೂ

ಬಹಳ ಪುಟದಲ್ಲಿ ನೀ ಮುಗಿದ ಅಧ್ಯಾಯ
ಅದರಿಂದ ಬದುಕಿಗೆ ಅನುಭವದ ಸಂದಾಯ ಮುಗ್ಧ ಜೀವವ ಒದ್ದು ನೀ ಹೋದೇ
ಶುದ್ಧ ಪ್ರೀತಿಯ ಮುಖಕ್ಕೆ ಮಸಿಯನ್ನು ಪಡೆದೆ

ನಿನ್ನ ಮೋಸದಾಟಕ್ಕೆ ಬಲಿಯಾದೆ
ಬಾಳ ಸಂಕಷ್ಟಕ್ಕೆ ನೀ ನನ್ನ ತಳ್ಳಿದೆ
ಯಾರು ನಂಬದಂತ ಮುಖವಾಡ ನೀ ಧರಿಸಿದೆ
ಅದು ತಂದ ದುಗುಡಕ್ಕೆ  ನಿತ್ಯ ನಾ ನರಳಿದೆ

ನೈತಿಕತೆ ಎಂಬುದು ನಿನಗೆ ಇದ್ದಿದ್ದರೆ
ನೀ ಹೀಗೆ ಕೊಡುತ್ತಿರಲಿಲ್ಲ ನನಗೆ ತೊಂದರೆ
ಅನೈತಿಕ ಅನುಬಂಧ ಬಯಸಿದೆ ನೀ
ಅದರಿಂದ ಅವಹೇಳನಕೆ ನಾ ಬಲಿಯಾದೆ

೧೧೪೦ಎಎಂ೦೧೦೩೨೦೨೩
*ಅಮುಭಾವಜೀವಿ ಮುಸ್ಟೂರು*

Thursday, February 23, 2023

ಕವನ

ಬೆಳೆಯುವವನ ತುಳಿಯುವವರು ಇರುವವರೆಗೂ
ಬೆಳೆಯುವವನ ಸ್ವಾಭಿಮಾನಕ್ಕೆ ಹಿನ್ನಡೆಯಾಗದು
ಹಂಬಲಿಸಿ ದುಡಿಯುವವನಿಗೆ ಅಡ್ಡಗಾಲಾದರೇನು
ದುಡಿಯುವ ಕೈಗಳೆಂದಿಗೂ ದಾರಿದ್ರವನು ಹೆಚ್ಚಿಸಿಕೊಳ್ಳವು

ಇಲ್ಲಿ ಎಲ್ಲವೂ ಅವರವರ ಮೂಗಿನ ನೇರದ್ದೆ ಮಾತು
ತಲೆಕೆಡಿಸಿಕೊಳ್ಳಬೇಕಿಲ್ಲ ಅಂತವರ ಮಾತಿಗೆ ಸೋತು
ಶ್ರಮದ ಬದುಕ ನಂಬಿ ಯಾರೂ ಕೆಟ್ಟಿಲ್ಲ
ಅಡ್ಡಿಪಡಿಸುವವನೇಂದಿಗೂ ಗುರಿ ಮುಟ್ಟಲ್ಲ

ಹಣವಿಂದು ಜಗವನಾಳುತಲಿದೆ
ಜನಸಮೂಹ ಅದರ ಹಿಂದೆ ಓಡುತಿದೆ
ಯಾವ ಹಂಗು ಬೇಕಿಲ್ಲ ಬೆವರ ಸುರಿಸುವವನಿಗೆ
ಹಣದಿಂದ ಗೆಲ್ಲಲಾಗುವುದಿಲ್ಲ ಗುಣ ಬೇಕು ಮನುಷ್ಯನಿಗೆ

ಏಕೆ ಇಷ್ಟೊಂದು ಸಹಿಸಲಾಗದ ಅಸೂಯ ಜನಕೆ
ಅವರವರ ಏಳಿಗೆ ಅವರವರ ದುಡಿಮೆ ಮೇಲಿದೆ
ಹರಿದ ಬಟ್ಟೆ ಕೊಳಕು ಮೈಯೆಂದು ಜರಿಯುವುದೇಕೆ
ಅವನಲ್ಲಿ ಬಸಿದ ಬೆವರಿಗೂ ಬೆಲೆ ಇದೆ

ಸೋಮಾರಿಯಾಗಿ ಕೂರುವ ಬದಲು
ಕಾಯಕದಲ್ಲಿ ತಲ್ಲೀನವಾಗುವುದು ಲೇಸು
ಉಂಡದ್ದು ಕರಗುವಂತೆ ದುಡಿಯುವ ಮೈಗೆ
ಕಾಯಕ ದೀಕ್ಷೆ ತಂದು ಕೊಡುವುದು ಯಶಸ್ಸು

೦೭೫೫ಎಎಂ೨೪೦೨೨೦೨೩
*ಅಮುಭಾವಜೀವಿ ಮುಸ್ಟೂರು*

ಕಥೆ

*ಪ್ರೀತಿಯಿಂದ*

ನೆನಪುಗಳು ನೂರು ಕಾಡಿದರು ಮುಗಿಯದ ಪ್ರೀತಿಯ ಸೆಳೆತ ನಿನ್ನದು ಕಣೆ. ಬದುಕಿನ ಏಕತಾನತೆಯಲ್ಲಿ ನನ್ನನ್ನು ಹೊರಗೆ ಕರೆದುಕೊಂಡು ಬಂದು ಜೀವನದಲ್ಲಿ ಇಷ್ಟೊಂದು ಅಗಾಧವಾದ ಸಂತೋಷ, ಸಂಭ್ರಮಗಳಿವೆ ಎಂದು ತೋರಿಸಿ ಕೊಟ್ಟವಳು ನೀನೇ ಕಣೇ. ಹೌದು ಜೀವನದಲ್ಲಿ ಎಂದು ನಾನೇ ನಾನಾಗಿ ಇನ್ನೊಬ್ಬರನ್ನು ಮಾತನಾಡಿಸಿದವನಲ್ಲ. ಯಾರೊಂದಿಗೂ ಹೇಳಿಕೊಳ್ಳುವಂತಹ ಆತ್ಮೀಯವಾದ ಸಂಬಂಧವನ್ನೇನು ನಾನು ಹೊಂದಿದ್ದಿಲ್ಲ .
ನನ್ನವರು, ಸ್ನೇಹಿತರು ಎನ್ನುವವರು ಯಾರು ಇರಲಿಲ್ಲ. ಅಕ್ಷರಶಃ ನಾನು ಒಬ್ಬಂಟಿಯಾಗಿದ್ದೆ. ನನ್ನ ಮುಜುಗರದ ಸ್ವಭಾವದಿಂದಾಗಿ ಎಲ್ಲರಿಂದಲೂ ದೂರವಾಗಿ ಒಂಟಿಯಾಗಿಬಿಟ್ಟಿದ್ದೆ. ಬಾಲ್ಯದಿಂದಲೂ ನಾನು ಹೀಗೆ ಬದುಕಿಕೊಂಡು ಬಂದೆ. ಕಾಲೇಜು ಓದಲೆಂದು ನಾನು ನಗರಕ್ಕೆ ಬಂದಾಗಲೇ ನಿಜಕ್ಕೂ ನೀರಿನಿಂದ ಆಚೆ ತೆಗೆದ ಮೀನಿನಂತೆ ಒದ್ದಾಡಿ ಹೋಗಿದ್ದೆ. ನನ್ನಿಂದ ಓದು ಮುಂದುವರಿಸಲು ಸಾಧ್ಯವೇ ಇಲ್ಲವೆಂದು ನನ್ನ ಹಳ್ಳಿಗೆ ಹಿಂತಿರುಗಿ ಹೋಗುವ ಮನಸ್ಸು ಮಾಡಿದ್ದ ನನಗೆ ನೀನು ತುಂಬಿದ ಧೈರ್ಯ ವಿಶ್ವಾಸ ನನ್ನಲ್ಲಿ ಹೊಸ ಭರವಸೆಗಳನ್ನು ಹುಟ್ಟು ಹಾಕಿದ್ದು ಸತ್ಯ.

ಈ ಕಾಲೇಜು ಜೀವನದ ಅಗಾಧ ಸಾಗರ ನನ್ನನ್ನು ವಿಚಲಿತನನ್ನಾಗಿಸಿತ್ತು. ಇಲ್ಲಿನ ಹುಡುಗ ಹುಡುಗಿಯರ ಮಾತು, ತುಂಟಾಟ ,ಒಡನಾಟ ,ರಂಪಾಟ, ರಾದ್ಧಾಂತಗಳನ್ನು ನೋಡಿ ಮನಸು ಘಾಸಿಗೊಂಡಿತ್ತು. ಅಂದು ಅನಂತ ಮತ್ತು ಅವನ ಗುಂಪು ನನ್ನ ಮೇಲೆ ರಾಗಿಂಗ್ ಮಾಡಿದಾಗ ನನಗೆ ಆನೆಬಲ ತುಂಬಿ ಅವರನ್ನು ಹೆದರಿಸುವ ಶಕ್ತಿಯನು ಕೊಟ್ಟೆ. ಅಂದೇ ಜಗತ್ತಿನಲ್ಲಿ ಮೃದು ಮಾತಿಗಿಂತಲೂ ಎದೆಗೊಟ್ಟು ಎದುರಿಸುವ ಛಾತಿ ನಮಗೆ ಇದ್ದರೆ ಮಾತ್ರ ನಾವಿಲ್ಲಿ ಬದುಕಬಹುದೆಂದು ತೋರಿಸಿ ಕೊಟ್ಟೆ. ಅದಾದ ಮೇಲೆ ದಿನಾಲು ನೀನು ನನಗೆ ಕಷ್ಟವಾದ ವಿಷಯಗಳನ್ನು ತುಂಬಾ ಪ್ರೀತಿಯಿಂದ ಅರ್ಥವಾಗುವಂತೆ ಹೇಳಿಕೊಡುತ್ತಿದ್ದ ರೀತಿ, ನಗರ ಜೀವನದ ಓರೆ ಕೋರೆಗಳನ್ನು  ತಿಳಿಸಿಕೊಡುತ್ತಾ ನನ್ನನ್ನು ಹೊಸ ಮನುಷ್ಯನನ್ನಾಗಿ ರೂಪಿಸಿದೆ. ನೀನು ನಿಮ್ಮ ಮನೆಯಿಂದ ಆಗಾಗ ತಂದುಕೊಡುತ್ತಿದ್ದ ತಿಂಡಿ ತಿನಿಸುಗಳ ರುಚಿ ಈಗಲೂ ನನ್ನ ಬಾಯಲ್ಲಿ ನೀರೂರಿಸುತ್ತಿದೆ. ನನ್ನ ನಿನ್ನ ನಡುವೆ ಅದಾವ ಬಂಧ ಬೆಳೆದಿತ್ತೋ ಕಾಣೆ ನೀನು ನನ್ನನ್ನು ಕಾಳಜಿ ಮಾಡುತ್ತಿದ್ದ ರೀತಿಗೆ ನಾನು ಸಂಪೂರ್ಣ ನಿನಗೆ ವಶವಾಗಿ ಹೋಗಿದ್ದೆ.

ಅಂದು ಕಾಲೇಜಿನ ಕೊನೆಯ ದಿನ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದಾಗ ನೀನು ಅದೇಕೋ ಮಂಕಾಗಿದ್ದೆ. ಅದನ್ನು ಗಮನಿಸಿ ನಾನು ನಿನ್ನತ್ರ ಬರುವುದನ್ನು ಕಂಡು ನೀನು ನಿನ್ನ ಒಳಗಿನ ನೋವನ್ನು ಮರೆಮಾಚಿ ನನ್ನ ನೋಡಿ ಮುಗುಳ್ನಕ್ಕೆ. ಏನಾಯ್ತು ಎಂದು ನಾನು ಕೇಳಲು ಏನು ಇಲ್ಲ ಎಂದೆ. ನಿನ್ನೊಳಗೆ ಪ್ರೀತಿ ಯಾವಾಗ ಮೂಡಿತು ಕಾಣೆ. ಆದರೆ ನೀನು ಅದನ್ನು ಹೇಳಿಕೊಳ್ಳದೆ ಮುಚ್ಚಿಟ್ಟೆ. ಎಷ್ಟೋ ದಿನಗಳು ಕಳೆದಾದ ಮೇಲೆ ನಿನ್ನ ಗೆಳತಿ ಉಷಾ  ನನಗೆ ಸಿಕ್ಕಾಗ ನಿನ್ನ ವಿಷಯ ಹೇಳಿದಳು. ಆಗ ನನಗೆ ಎಷ್ಟು ಖುಷಿಯಾಗಿತ್ತು ಗೊತ್ತಾ. ಆ ವಿಷಯ ಕೇಳಿ ನಿನ್ನನ್ನು ಹುಡುಕಲು ಪ್ರಯತ್ನಿಸಿದರೂ ನೀನು ಸಿಗಲೇ ಇಲ್ಲ. ಅದುವರೆಗೂ ನನಗೆ ಆ ಭಾವನೆಯೇ ಇರಲಿಲ್ಲ. ನೀನೆ ನನ್ನ ಇಷ್ಟ ಪಡುತ್ತಿ ರುವಾಗ ನಾನು ನಿನ್ನ ಪ್ರೀತಿಸದಿದ್ದರೆ ತಪ್ಪಾಗುತ್ತದೆ ಎಂದುಕೊಂಡು ನಿನ್ನ ನೆನಪುಗಳಲ್ಲಿ ಕಾಲ ದೂಡುತ್ತಿದ್ದೇನೆ. ಎಲ್ಲಿರುವೆ ಬೇಗ ಬಂದು ಬಿಡು ನಿನಗಾಗಿ ನನ್ನ ಜೀವ ಸದಾ ಕಾಯುತ್ತಿರುತ್ತದೆ. ಎಂಥ ಸ್ಥಿತಿಯಲ್ಲಿ ಇದ್ದರು ನನ್ನ ನಿನಗಾಗಿ ಹೃದಯದಲ್ಲಿ ಜಾಗ ಕಾಯಂಗೊಳಿಸಿರುವೆ.

ಹರೆಯದ ಸಮಯದಲ್ಲಿ ಹಾದಿ ತಪ್ಪದಂತೆ ನನ್ನನ್ನು ಮಾರ್ಗದರ್ಶಿಸಿದ ನೀನು ನನಗೆ ಬೇಕೇ ಬೇಕು ಕಣೆ. ಇನ್ನು ನನ್ನ ಮುಂದಿನ ಜೀವನವನ್ನು ನೀನೆ ಮುನ್ನಡೆಸಿಕೊಂಡು ಹೋಗಬೇಕು. ಗೆಳತಿ ನೀನು ಎಲ್ಲಿದ್ದರೂ ತಡಮಾಡದೆ ಬಂದುಬಿಡು. ಈ ಪ್ರೇಮಿಯ ಬರಿದಾದ ಬದುಕನ್ನು ನಿನ್ನೊಲವಿನ ಒರತೆಯಿಂದ ತುಂಬಿಸು ಬಾ. ನೀ ಕಂಡ ಕನಸುಗಳನ್ನು ನನಸಾಗಿಸು ಬಾ. ನೀ ಬರುವ ದಾರಿಯ ಕಾಯುತ್ತಲೇ ಇರುವ ಇಂತಿ ನಿನ್ನವ

ಪ್ರೀತಿಯಿಂದ.......................

ಹೀಗೆ ಸುಮ್ಮನೆ,,,,,,,,,,,,,,,,
ಅಮು ಭಾವಜೀವಿ ಮುಸ್ಟೂರು

Sunday, February 19, 2023

ಕವಿತೆ

ಕೈಹಿಡಿದು ನಡೆಸು ಓ ದೇವ
ಜೀವನ ಪಾವನ ಮಾಡು ಮಹಾದೇವ

ಮಹಾ ಶಿವರಾತ್ರಿಯ ಪೂಜೆ
ಮಹಾ ಸಂಕಲ್ಪದ ಸುಕ್ಷಣ
ಬಾಳಿನ ಏಳುಬೀಳುಗಳಲಿ
ಕೈಬಿಡದೆ ಮುನ್ನಡೆಸು ಓಂ ಶಿವ

ಕಾಯಕ ದೀಕ್ಷೆ ತೊಟ್ಟಿರುವೆ
ಕಾಪಾಡು ಶಂಕರ ಅನವರತ
ದುಡಿಯುವ ಕೈಗಳಿಗೆ ಬಲವಾಗಿ
ದಣಿವರಿಯದ ದುಡಿಮೆಗೆ ಅಣಿಗೊಳಿಸು

ಮುಕ್ಕಣ್ಣ ನಿನ್ನ ನಂಬಿ ನಡೆಯುತಿರುವೆ
ಮುಂದೆ ಹಿಂದೆ ರಕ್ಷಕನಾಗಿ ಸಲಹು
ಕೆಟ್ಟ ಶಕ್ತಿಗಳ ಉಪಟಳವ ತಡೆದು
ನಿನ್ನ ಭಕ್ತರ ಹಾದಿಯ ಕಾಯುತಿರು ದೇವ

ನೋವುಗಳ ನಿವಾರಿಸು ಲಯಕಾರನಾಗಿ
ನಗುವ ಬಾಳಲಿ ತುಂಬು ನಾಗಭೂಷಣ
ಭವಬಂಧನದಿ ಹರಸು ಭೋಲೇನಾಥ
ಲಿಂಗವ ಧರಿಸಿರುವೆ ದಯೆ ತೋರು ರುದ್ರ

ನೀನಲ್ಲದೆ ಸಲಹುವವರಾರಿಲ್ಲ ಬಾಳಲಿ
ಕೈಮುಗಿದು ಬೇಡಿಕೊಳ್ಳುತಿಹೆ ಮಹೇಶ
ಹರ ನೀ ಹರಸು ಸಾಕು ಬೇಡ ಬೇರೇನು
ಕಾಯಕದಿ ಕೈಲಾಸ ಕಾಣುವೆ ಕರೆದುಕೋ ಸರ್ವೇಶ

0948ಪಿಎಂ18022023
*ಅಮುಭಾವಜೀವಿ ಮುಸ್ಟೂರು*




 ತಾಯಿ ನೀನಿಲ್ಲದೆ ತವರೆಲ್ಲಿದೆ
ಅಮ್ಮ ನೀನಿಲ್ಲದೆ ನಮ್ಮ ಕುರುಹೆಲ್ಲಿದೆ

ಒಡಲಲಿ ಜಾಗವ ನೀಡಿ
ಒಲವಿಂದ ಜೋಗುಳ ಹಾಡಿ
ಸಲಹಿದೆ ಮಾತೆ ನನ್ನನು
ಮಡಿಲಲಿ ಮುದ್ದಿಸಿ ಮಲಗಿಸಿ
ಹಾಲುಣಿಸಿದೆ ನೀ ಹಸಿವ ನೀಗಿಸಿ
ನಿನಗ್ಯಾರು ಸಾಟಿಯಿಲ್ಲ ಜಗದಿ

ಅಕ್ಕರೆ ತುಂಬಿದ ಅಪ್ಪುಗೆ ನಿನ್ನದು
ಮಮತೆಯು ಬೆಸೆದ ಬಂಧವಿದು
ನೀ ಕಣ್ಣಿಗೆ ಕಾಣುವ ದೇವರು
ನೋವೆಲ್ಲವ ನೀನೊಬ್ಬಳೇ ಸಹಿಸಿ
ನಮಗೆ ನಗುವ ಹೂವು ಹಾಸಿ
ದಣಿವಿಲ್ಲದೆ ದುಡಿದ ಜೀವವದು

ಜನುಮ ಪೂರ ಋಣಿಯು ನಾನು
ನಿನ್ನ ಜೀವ ಜೀವನದ ದೋಣಿಯು ನೀನು
ಉಸಿರು ಕೊಟ್ಟ ಹೆಸರದೊಂದೆ ಅಮ್ಮ
ಬಸಿರ ಬಸಿದೆ ರಕ್ತದಲ್ಲಿ
ಹೆಸರು ಕೊಟ್ಟೆ ಬದುಕಿನಲ್ಲಿ
ದೈವಕೂ ಮಿಗಿಲಾದ ಜೀವ ನೀನಮ್ಮ

೦೬೪೩ಪಿಎಂ೧೯೦೨೨೦೨೩
*ಅಮುಭಾವಜೀವಿ ಮುಸ್ಟೂರು*

ಏಕೆ ಇಂಥಾ ದೂಷಣೆ
ಏಕಿಷ್ಟೊಂದು ಶೋಷಣೆ
ತಪ್ಪಾದರೂ ಏನಿತ್ತು
ಏಕೊದಗಿತಿಂತ ಆಪತ್ತು

ಎಲ್ಲಾ ನನ್ನವರೆಂಬ ಭ್ರಮೆಯಲ್ಲಿ
ನಡೆದುಬಂದೆ ಇಷ್ಟು ದೂರ
ಎಲ್ಲಾ ಮರೆತು  ಬೆಲ್ಲ ಸವರಿದ
ಮಾತಿಗೆ ಓಗೊಟ್ಟು ಬಿಟ್ಟು ಹೋದದ್ದು ಘೋರ

ಯಾರಿಂದ ಏನನ್ನೂ ಬಯಸಲಿಲ್ಲ
ಅವರ ಪ್ರೀತಿಯೊಂದು ಸಾಕಿತ್ತಲ್ಲ
ಕಷ್ಟಕ್ಕೆ ಹೆಗಲು ಕೊಟ್ಟು ನಡೆದೆ
ಈಗ ಅದೇ ಕಷ್ಟದಲಿ ಒಬ್ಬಂಟಿಯಾದೆ

ಅನುಮಾನವೇ ಆಳುತಿರುವಾಗ
ಅವಮಾನವು ಸಹಜ ಬದುಕಲಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ
ನೋಡದೇ ಹೋದರು ಬಾಳಲಿ

ತಿರುಗಿ ನೋಡದವರ ಹಿಂದೆ ಹೋಗಿ
ಬೆಂಬಲವಾಗಿದ್ದವರ ಮರೆಯುವರು ಜನ
ನದಿ ದಾಟಿದ ಮೇಲೆ ಅಂಬಿಗನೇಕೆ
ಇಷ್ಟೇ ಈ ಜಗದೊಳಗೆ ನಮ್ಮ ಜೀವನ

೧೦೫೦ಪಿಎಂ೧೯೦೨೨೦೨೩
*ಅಮುಭಾವಜೀವಿ ಮುಸ್ಟೂರು* 


ನಿರೀಕ್ಷೆಗಳೆಲ್ಲ ಸುಳ್ಳಾದವು
ನಂಬಿಕೆಗಳು ಹುಸಿಯಾದವು
ಅರ್ಥವಾಗಿದ್ದು ಈಗೊಂದೇ
ಹೋರಾಟ ಮಾಡದೇ ಏನೂ ದಕ್ಕದೆಂದು

ದುಡಿಯುವ ಕೈಗಳು ನಮ್ಮವು
ಬೇಡಿ ತಿನ್ನಬಾರದು ಅಲ್ಲವೇ !
ಬೇಡಿಕೆ ಈಡೇರಿಸದ ಮೇಲೆ
ಬದುಕಲು ಹೋರಾಟ ಅನಿವಾರ್ಯವಲ್ಲವೇ ?

ಕೇಳುವ ಮುನ್ನವೇ ಕೊಡುವ
ಧಾರಾಳ ಗುಣವಿಲ್ಲದವರಿಗೆ
ಹೋರಾಟದ ಮೂಲಕ ಪಡೆಯಬೇಕು
ಪಾಠವಾಗಲಿ ಕೀಳಾಗಿ ಕಾಣುವವರಿಗೆ

ಒಂದೇ ನೆಲದ ಒಂದೇ ಕೆಲಸಕೆ
ಇಲ್ಲಿ ಭಿನ್ನ ಭಿನ್ನ ಕೂಲಿ
ಎಲ್ಲರೂ ಮಾಡುವುದು ಹೊಟ್ಟೆಗಾಗಿ
ಆದರೂ ಈ ತಾರತಮ್ಯ ಏಕಿಲ್ಲಿ

ಹಕ್ಕು ಕೇಳಿದರೆ ಹತ್ತಿಕ್ಕುವವರಾರೂ
ಉಳಿದಿಲ್ಲ ಈ ಜಗದಲಿ
ಗೊತ್ತಿದ್ದೂ ಜಾಣಕಿವುಡು ತೋರಿದವರ
ಕಿವಿ ಕಚ್ಚಿ ಎಚ್ಚರಿಸದೆ ವಿಧಿಯಿಲ್ಲ

ಕಾರ್ಮಿಕರ ಕಡೆಗಣಿಸುವುದು
ದುರಾಡಳಿತದ ಅತಿರೇಕ
ಕೈಕಟ್ಟಿ ಕುಳಿತರೆ ಇಲ್ಲೇನೂ ಸಿಗದು
ದನಿಯೆತ್ತಬೇಕು ಸೌಲಭ್ಯ ಸಿಗುವ ತನಕ

೧೨೫೨ಎಎಂ೨೦೦೨೨೦೨೩
*ಅಮುಭಾವಜೀವಿ ಮುಸ್ಟೂರು*


ಬೆಳ್ಳಂಬೆಳಗು ಆಹಾ ಎಂಥಾ ಸೊಬಗು
ಇರುಳ ಕಳೆದು ತಂದ ಹೊಂಬಣ್ಣದ ಮೆರುಗು

ಹಗಲೆಂಬ ಬಾಗಿಲು ತೆರೆದು
ಜಗವ ಏಳಿಸಿದ ದಿನಕರ ಬಂದು
ಇಬ್ಬನಿಯಲಿ ಮೊಗವ ತೊಳೆದು
ಹಕ್ಕಿಗಳ ಕಲರವದಿ ಸುಪ್ರಭಾತ ಹಾಡಿದೆ

ನೀಲ ಶುಭ್ರ ಬಾನಲಿ ಮೇಲೇರಿ
ಹೊನ್ನತೇರನೇರಿ ಬಂದ ನೇಸರ
ಕಳೆದನು ನೀರವ ರಾತ್ರಿಯ
ಆ ಮೌನತುಂಬಿದ ಬೇಸರ

ತಣ್ಣನೆಯ ಮುಂಜಾವಿನಲಿ
ಬೆಚ್ಚನೆಯ ಕಿರಣಗಳ ಕಳಿಸಿ
ಹಚ್ಚಹಸುರಿನ ಪ್ರಕೃತಿಯಲಿ
ಮನೆಮಾಡಿತು ನವಚೈತನ್ಯ ಸಂಭ್ರಮಿಸಿ

ಪ್ರತಿ ಚಟುವಟಿಕೆಗೂ ಚಾಲನೆಯನಿತ್ತು
ಪ್ರಗತಿ ಪಥದಲ್ಲಿ ಮಾರ್ಗದರ್ಶನವಿತ್ತು
ಪ್ರದರ್ಶಿಸಿದ ಜಗದಾಂತರ್ಯವ
ಪ್ರಫುಲ್ಲಿತ ಹೊಂಗಿರಣ ಪ್ರಸರಿಸಿ

ಧನ್ಯವಾಯ್ತು ಧರೆಯೀಗ
ಭಾಸ್ಕರನ ಕೃಪೆಯಿಂದ
ಬೆಳಗಿದು ಬಲು ಸೋಜಿಗ
ನಿಸರ್ಗದ ಈ ನಿತ್ಯ ಕೌತುಕ

೦೬೨೯ಎಎಂ೨೦೦೨೨೦೨೩
*ಅಮುಭಾವಜೀವಿ ಮುಸ್ಟೂರು*



Saturday, February 11, 2023

ಕವನ

ಬಿಡು ನಿರಾಸೆ
ಇರಲಿ ಚೂರು ಭರವಸೆ
ಬದುಕಲು ಬಂದವರು ನಾವು
ಬಿಸಿಲಾದರೇನು 
ಚಳಿ ಮಳೆಯಾದರೇನು
ಜೀವನೋತ್ಸಾಹ ಕಳೆದುಕೊಳುವುದೇ ಹೂವು

ಎಷ್ಟೇ ತುಳಿದರೂ
ಅಳಿಯದುಳಿದು ಮತ್ತೆ
ಚಿಗುರುವ ಗರಿಕೆಯ ಛಲವಿರಲಿ
ಕಾಡ್ಗಿಚ್ಚು ಸುಟ್ಟರೂ
ರೆಂಬೆ ಕೊಂಬೆ ಬೂದಿಯಾದರೂ
ಹಸಿ ಬೇರು ಹೊಸ ಚಿಗುರು ತರುವ ನಂಬಿಕೆಯಿರಲಿ

ಜ್ವಾಲಾಮುಖಿ ಒಡಲೊಳಗಿದ್ದರೂ
ನೋಯದ ಭೂತಾಯೊಡಲಲಿ
ಚೆಲುವು ನಳನಳಿಸುವುದು ಸತ್ಯ
ಸೋಲುಗಳ ಸರಮಾಲೆ ಎದುರಾಗಲಿ
ನೋವಿನ ಸುನಾಮಿಯೆ ಬರಲಿ
ಅಂಜದ ಮನಸ್ಥಿತಯಿರಲಿ ನಿತ್ಯ

ಇರುವುದೊಂದೇ ಜನುಮವಿದು
ಎಂದೂ ಸೋಲೊಪ್ಪಬಾರದು
ಬರಲಿ ಏರಿಳಿತ ನೂರು
ನಾಳೆಯೆಂಬ ಭರವಸೆಯಿರಲಿ
ಗೆದ್ದೇ ಗೆಲ್ಲುವ ವಿಶ್ವಾಸವಿರಲಿ
ಯಾರಿಲ್ಲ ಇಲ್ಲಿ ಸೋಲದೆ ಗೆದ್ದವರು

೧೦೫೨ಪಿಎಂ೧೧೦೨೨೦೨೩
*ಅಮುಭಾವಜೀವಿ ಮುಸ್ಟೂರು*

Friday, February 10, 2023

ಕವನ

ಅರುಣ ಕಿರಣ ಸೂಸಲು
ತೆರೆಯಿತು ಹಗಲ ಬಾಗಿಲು
ಬಿರಿದ ಮೊಗ್ಗು ಅರಳುವ ಸಮಯ
ಅನಾವರಣಗೊಂಡಿತು ಜಗದ ವಿಸ್ಮಯ

ಚಿಲಿಪಿಲಿ ಕಲರವ ಗಾನ
ಎಲೆ ಮೇಲೆ ಇಬ್ಬನಿಯ ಕವನ
ಮೈದಡವಿದೆ ತಂಗಾಳಿಯ ಬೆರಳು
ಮೈಮುರಿದೆದ್ದವು ಮುದುಡಿದ ಮನಗಳು

ಹರಿವ ನೀರಿನ ಜುಳುಜುಳು ನಿನಾದ
ನೂರು ಭಾವ ಮೂಡಿಸಿತು ಮೌನ ಸಂವಾದ
ಕ್ಷಣ ಕ್ಷಣವೂ ಹೊಸತನ ತಂದಿತು
ನವೋನ್ಮೈಷಶಾಲಿ ಪ್ರಕೃತಿಯ ಸಂದೇಶ

ಮುಂಜಾನೆಯ ಹೂಬಿಸಿಲ ಹೊಂಗಿರಣ
ದಿನದಂಗಳದಿ ನಳನಳಿಸುವ ತೋರಣ
ದುಡಿಯುವ ಕೈಗಳಿಗೆ ಕೆಲಸವನಿತ್ತು
ತಂತು ಹಸಿದ ಹೊಟ್ಟೆಗೆ ಅನ್ನದ ತುತ್ತು

ಸೋಮಾರಿತನವ ದೂರ ತಳ್ಳಿ
ಶ್ರಮದ ಬದುಕಿನ ಪಾಠ ಹೇಳಿ
ದಿನದ ಅವಕಾಶವ ನೀಡಿದ
ದಿನಕರನೆಂಬ ಮಹಾಬೋಧಕ

0೬೩೭ಎಎಂ೧೧೦೨೨೦೨೩
*ಅಮುಭಾವಜೀವಿ ಮುಸ್ಟೂರು*

Friday, February 3, 2023

ಕವನ

ಪ್ರೀತಿಯ ಅನುಬಂಧವೇ ಹೊಸದು
ಹೇಳಲಾಗದ ಅನುಭೂತಿ ಅದು

ನೋವಿಗೆ ನೆರಳಾಗುವ ಹೃದಯ
ಖುಷಿಯಲಿ ಒಂದಾಗುವ ಸಮಯ
ನಾನು ನೀನು ಬೇರೆ ಎನದ ಹಾಗೆ
ನಾವಿಬ್ಬರಾಗುವ ಬೆಸುಗೆ

ನೋಟಕ್ಕಿಂತಲೂ ಭಾವ ಮಿಲನ
ಎದೆಯ ಮಾತುಗಳೊಂದೊಂದು ಕವನ
ಪ್ರೀತಿಸಲು ಸಾಕಾಗದು ಒಂದು ಜೀವನ
ಏಳೇಳು ಜನ್ಮಗಳ ಪಾಡು ಒಲವಿನ ನಿಲ್ದಾಣ

ಆಕರ್ಷಣೀಯ ಸಂಘರ್ಷವಿಲ್ಲದೆ
ಪ್ರೀತಿಯ ಭಾವಕ್ಕೆ ಅಭಾವವಿಲ್ಲದೆ
ಪ್ರತಿಕ್ಷಣವೂ ಹಿಡಿಯುವ ಮನವು
ದುಂಬಿಗಾಗಿ ಕಾಯುವಂತೆ ಸುಮವು

ಶತಮಾನದ ಇತಿಹಾಸ ಪುಟಗಳ ಸಾರ
ಅಭಿಮಾನದ ಆಲಾಪವೇ ಇದರ ಸಂಸ್ಕಾರ
ಪ್ರೀತಿಯಲ್ಲಿ ಎಂದು ಇರದು ಅಧಿಕಾರ
ಇದು ಪ್ರೀತಿಸುವ ಹೃದಯಗಳ ಮಮಕಾರ

ಮನಸೊಪ್ಪಿದ ಅಪ್ಪುಗೆಯೇ ಪ್ರೀತಿ
ಜಗವ ಗೆದ್ದೇ ಗೆಲ್ಲುವುದದರ ಛಾತಿ
ಜೀವ ಜೀವಗಳ ಬೆಸೆಯುವ ನೀತಿ
ಬದುಕಿನಾಧಾರದ ಅನುಸಂಧಾನವೇ ಪ್ರೀತಿ

೧೧೧೩ಪಿಎಂ೦೩೦೨೨೦೨೩
*ಅಮುಭಾವಜೀವಿ ಮುಸ್ಟೂರು*