Tuesday, July 18, 2017

ಕವಿತೆಗಳು

ಅಮು ಭಾವಜೀವಿಯವರ ಕವಿತಾಗುಚ್ಛ

೧•ಈ ನೆನಪುಗಳೇ ಅತಿ ಘೋರ

ಏಕಾಂತದಿ ಕಾಡಿದೆ ಬೇಸರ
ನೀನಿಲ್ಲದ ಈ ಹಾಸಿಗೆ
ನೆರಳೇ ಇಲ್ಲದ ಬೇಸಿಗೆ
ತಂಗಾಳಿ ತೀಡಿ ಹೋದರೆ
ಅದು ನಿನ್ನದೇ ಸ್ಪರ್ಷದಾನಂದ
ಹೂವ ಕಂಪು ಹರಡಲು
ಅದರ ಸೆಳೆತವೇ ನಿನ್ನ ಮಕರಂದ
ಸೋನೆ ಸುರಿದು ನಿಂತರೂ
ನಿಲ್ಲದ ಮರದಹನಿ  ನಿನ್ನ ನೆನಪು
ಒಲವಿನಲಿ ಗರಿ ಬಿಚ್ಚಿದ
ನವಿಲ ತೆರದೀ ನನ್ನ ಒನಪು
ಬೆಳೆದ ಪೈರ ತಲೆ ನೇವರಿಸಿದಂತೆ
ನೀ ನನ್ನ ಬಳಿಯಿರೆ ಸಮಾಧಾನ
ಹರಿವ ನದಿಗೆ ಅಣೆಕಟ್ಟೆ ಇರುವಂತೆ
ಹರೆಯದ ಬದುಕಿಗೆ ನೀ ಮೂಗುದಾಣ
ಇರುಳ ಬಾಂದಣಕ್ಕೆ  ಗೆಳತಿ
ಶಶಿ ತಾರೆಯರ ರಂಗು
ನೀ ಬಾಳದಿಬ್ಬಣದ ಒಡತಿ
ಸದಾ ನನಗೆ ನಿನದೇ ಗುಂಗು
ನೆನಪುಗಳೇ ಹಸಿರು
ನೆನಪುಗಳೇ ಜೀವದುಸಿರು
ನೆನಪಿಂದ ಬದುಕಿಗೊಂದು ಕಳೆ
ನೆನಪೇ ನೆಮ್ಮದಿ ಜೀವನದ ನೆಲೆ
1034ಪಿಎಂ080715
*ಅಮುಭಾವಜೀವಿ*

 ೨•*ಮೊದಲು ರಕ್ಷಿಸಿ*
ಸಾಕು ಮಾಡಿರಿ ಇನ್ನು
ಬರೀ ಕಡಿಯುವುದನ್ನು
ಬೆಳೆಸುವ ಕೈಗಳ ಬಲಪಡಿಸಿ
ಮೊದಲು ಪರಿಸರವ ಸಂರಕ್ಷಿಸಿ
ನಾಡು ಕಟ್ಟುವ ಹುಮ್ಮಸ್ಸಿನಲ್ಲಿ
ಕಾಡು ಕಡಿದು ಬರಿದು ಮಾಡಿ
ಪ್ರಕೃತಿಯ ಒಡಲನು ಬಂಜೆಯಾಗಿಸಿದ
ಮೊದಲು ನಿಮ್ಮ ದುರಾಸೆಯ ದೂರತಳ್ಳಿ
ನದಿಯ ಹೃದಯವ ಬಗೆದು
ಮರಳನೆಲ್ಲಾ ಮಾರಿಕೊಂಡು
ಜೀವಸೆಲೆಗೆ ಜಾಗವಿರದಂತೆ
ಮಾಡಿದ ನೀವು ಮೊದಲದನು ಕೈಬಿಡಿ
ನಿಸರ್ಗದ  ಆರೋಗ್ಯವನೇ ಕೆಡಿಸಿ
ಎಲ್ಲವನೂ ಏರುಪೇರಾಗಿಸಿ
ಬರದ ಶಾಪ ಪಡೆದ ನೀವು
ಮೊದಲು ಪರಿಸರ ಕಾಪಾಡಿ
ಎಲ್ಲ ನುಂಗುವ ದುರುಳರ
ಗಂಟಲನು ಬಿಗಿಹಿಡಿದು
ಪ್ರಕೃತಿಯ ಕೊಡುಗೆಗಳ
ಮೊದಲು ರಕ್ಷಿಸಿ
1201ಪಿಎಂ09072017
*ಅಮುಭಾವಜೀವಿ*
 *೩•*ನೆನಪಿನ ಬುತ್ತಿ*
ಬಾಲ್ಯದ ನೆನಪಿನ ಬುತ್ತಿ ಬಿಚ್ಚಿ
ಭಾವದ ಭಿತ್ತಿಗೆ ರೆಕ್ಕೆಯ ಹಚ್ಚಿ
ಹಾರುತಿದೆ ಹಕ್ಕಿಯ ಹಾಗೆ
ಕಾಗದ ದೋಣಿಯ ಈ ನಡಿಗೆ
ಮಳೆಯ ಹನಿಗಳು ಅಂಗಳ ತುಂಬಿ
ಹರಿವ ನೀರಿನ ಹೊಸತನ ಕಂಡು
ಅಮ್ಮ ಮಾಡಿದ ದೋಣಿಯ ಬಿಟ್ಟು
ಸಂಭ್ರಮಿಸಿದ ಆ ಕ್ಷಣ ಮಧುರ
ಮೆಲ್ಲ ಮೆಲ್ಲನೆ ದೋಣಿಯ ತಳ್ಳಿ
ತೇಲುತ ಮುಳುಗುತ ಸಾಗುತಲಿ
ನೀರಲಿ ಹೆಜ್ಜೆ ಹಾಕುತ ಕುಣಿದು
ದೋಣಿಯ ನಡೆಸಿದ ಖುಷಿ ಸಾವಿರ
ನೀರ ದೋಣಿಯ ಅಂಬಾರಿ ಕಂಡು
ಕಾಮನಬಿಲ್ಲಿನ ಮಧ್ಯದಿ ತೂರಿ 
ಮೈಮನ ಮುದದಿ ನಲಿದಾಡಿದ
ಬಾಲ್ಯದ ನೆನಪು ಸ್ವರ್ಗಕೂ ಮಿಗಿಲು
ಮತ್ತೆ ಬಾರದು  ಆ ಕಾಲ
ಸಂಭ್ರಮಕೀಗ ಬರಗಾಲ
ನೆನಪು ಕಾಡಿದೆ ಚಿರಕಾಲ
ಎಂದು ಮರೆಯದ ಮಳೆಗಾಲ
0603ಪಿಎಂ09072017
*ಅಮುಭಾವಜೀವಿ*
 *ಅವಳೊಲವ ಹದ*
*ಮಳೆ ಸುರಿದು*
*ಮೃದು ಹೃದಯ ತೊಳೆದು*
*ಪ್ರೀತಿ ಹಸಿರ ಹಾಸಿದಳು*
*ಒಲವಧಾರೆ ಹರಿಸಿದಳು*
*ಅಮುಭಾವಜೀವಿ*

*೪• ಸ್ಪೂರ್ತಿಯ ಪಡೆಯೋಣ,

ಚಂದ್ರನಿಗತ್ತ ಮುಳುಗುವ ತವಕ
ಸೂರ್ಯನಿಗಿತ್ತ ಬೆಳಗುವ ಪುಳಕ
ಇಬ್ಬರ ಬೆಳಕಿನೊಲವ ಪಡೆದ ಭೂಮಿಗೆ
ಕಾಡದು ಕತ್ತಲಿನ ಅಂಜಿಕೆ
ಇರುಳೆಲ್ಲ ಬೆಳದಿಂಗಳು ಚೆಲ್ಲಿ
ದಣಿದ ಚಂದ್ರನಿಗೆ ವಿಶ್ರಾಂತಿ
ರಾತ್ರಿ ಪೂರ ಸವಿನಿದ್ರೆಗೈದ
ಸೂರ್ಯನಲಿ ಹೊಮ್ಮಿತು ಕಾಂತಿ
ತರುಲತೆಗಳ ತಲೆ ನೇವರಿಸಿ
ನೇಸರ ಬಂದನು ಕತ್ತಲೆ ಸರಿಸಿ
ಖಗಮೃಗಗಳ ಮೈದಡವಿ
ಚೇತನ ತುಂಬಿದ ದಿನವಿಡೀ
ಮುಂಜಾನೆಯ ಮಂಜಿನ ತೆರೆ
ಸರಿಸುತ ಮೂಡಿದ ಮೂಡಣದಿ
ಹಗಲಿನ ಹೊದಿಕೆ ಹೊದ್ದು ನಿದ್ರೆಗೆ
ಜಾರಿದ ಶಶಿ ಪಡುವಣದಿ
ಎಂತಹ ಸುಂದರ ಕ್ಷಣವಿದು
ಮುಂಜಾನೆಯು ಹೊಸತನದಿ ಬೀಗಿಹುದು
ಏಳಿರಿ ಎದ್ದೇಳಿರಿ ಸವಿಯೋಣ
ರವಿಚಂದ್ರರ ಸ್ಪೂರ್ತಿಯ ಪಡೆಯೋಣ
0646ಎಎಂ10072017

*೫• ನೀನಿರುವ ಬೆಂಬಲವೇ*

ನೀ ಬರುವ ದಾರಿಯತ್ತಲೇ
ದೃಷ್ಠಿಯ ನೆಟ್ಟು ನಿಂತಿದೆ ಬದುಕು
ನೀನಿರುವೆಯೆಂಬ ಬೆಂಬಲವೇ
ಆಧಾರವಾಗಿದೆ ನನ್ನೆಲ್ಲಾಹಂಬಲಕು
ಭೂಮಿ ಒಣಗಿ ಹಸಿದರೂ
ಒಂದ್ಹನಿ ಸಾಕು ಮತ್ತೆ ಹಸಿರಾಗಲು
ಬೆನ್ನ ಹಿಂದೆ ನೀನಿರುವ ಭಾವ
ಉತ್ತೇಜಿಸಿತು ಉಸಿರಾಡಲು
ಎಡವುವ ಭಯವಿಲ್ಲ
ಹಿಡಿಯುವ ನಿನ್ನ ಕೈಗಳಿರಲು
ಕಾಡುವ ನೆನಪುಗಳಿಗೆಲ್ಲಾ
ಭರವಸೆಯಾ ಬಿಳಲಿರಲು
ಎದೆಯಾಳದ ನೋವುಗಳಿಗೆಲ್ಲಾ
ನಿನ್ನೀ ತೋಳ್ಗಳ ಸಾಂತ್ವನ
ನಡೆಯುವ ಪ್ರತಿ ಹೆಜ್ಜೆಗೂ
ನಿನ್ನೊಲವೇ ಚೇತನ
ಕಾಯುವಿಕೆಯಲ್ಲೂ ಇಷ್ಟೊಂದು
ಮಧುರಾನುಭೂತಿಯಿದೆ
ತಬ್ಬಿದ ಬಾಹುವಿನೊಳಗೆ
ಸಂತೃಪ್ತಿಯ ಮುದ್ರೆಯೊತ್ತಿದೆ
ಈ ಕಾಯುವ ಕಾಯಕ
ಬದುಕಾಗಿಸಲಿ ಸಾರ್ಥಕ
ನನ್ನ ನಿನ್ನ ಈ ಸಮಾಗಮ
ಬದುಕಿಗೊಂದು ದ್ಯೋತಕ
0338ಎಎಂ100715
*ಅಮುಭಾವಜೀವಿ*

*೬● ಪ್ರೀತಿಯಾರಾಧನಾ*

ನನ್ನೆದೆಯೊಳಗೆ ಹಾಡಿದೆ ಮೈನ
ನಿನ್ನದೇ ನಲ್ಟೆಲುವಿನ ಕವನ
ಪ್ರೀತಿಯ  ಈ ಆರಾಧನ
ದೂರ ತಳ್ಳಿತೆನ್ನ  ಏಕಾಂತವನ್ನ
ಅರಳಿದ ಸುಮದೊಲವಿನ
ಮಧು ಹೀರುವ ತವಕ
ಕಾಯಲೇ ಬೇಕಾಗಿದೆ ನಾನೀಗ
ಅವಳಾಗಿಯೇ ಕೊಡುವ ತನಕ
ಆ ಮುಂಗುರುಳಿನ ಮುತ್ತನು
ತಡೆಯುವ ಕೈಬೆರಳುಗಳಾಗಲೇ ನಾನು
ತಂಗಾಳಿಗೆ ಹಾರುವ ಸೆರಗನು
ನಾನು ಹಿಡಿದು ಕೂರಲೇನು ?
ತುಟಿ ಬಿರಿದ ನಗೆಯವಳು
ಸಿಂಹಕಟಿಯ ಬಗೆಯವಳು
ತಂಟೆ ಮಾಡದೆ ತುಂಟತನದಲಿ
ಅವಳೊಂಟಿತನಕೆ ಅಂಟಿಕೊಳಲೇ
ರಾತ್ರಿ ಹೊಳೆವ ಚುಕ್ಕಿಗಳಂತಹ  
ನಯನದೊಳಗೆ ಬಿಂಬವಾಗಿ ಕೂರಲೇ
ನಾಸಿಕದೊಳ ಸೇರುವ  ಉಸಿರಾಗಿ
ನಾನವಳ  ಒಳ ಸೇರಲೇ
ಆಹಾ ! ಎಂಥಾ ಸುಖವಿದು
ಅವಳನೇ ನಾ ನೆನೆ ನೆನೆದು
ಕವಿಯಾದೆನು ಕರಗಿಹೋಗಿ
ಸವಿಭಾವದ ಹಾಡಾದೆ ಇಂಪಾಗಿ
0701ಪಿಎಂ05062017
 *೭● ನೀನಿಲ್ಲದೆ*

ಸಾಕಾಗಿದೆ ಈ ಒಂಟಿತನ
ಕಿತ್ತು ತಿನ್ನುತಿದೆ ನನ್ನ ಪ್ರತಿ ಕ್ಷಣ
ಆ ಸಂಜೆ ಕೂಡ ರಕ್ತಕಾರಿ
ಬಿದ್ದಿದೆ ನೀನಿಲ್ಲದೆ
ಹುಣ್ಣಿಮೆ ಚಂದ್ರನ ಹೆಣ
ಬಾನ ಬೀದಿಯಲಿ ತೇಲಿದೆ
ನಿಡುಸುಯ್ಯುವ ಈ ತಂಗಾಳಿಯೂ
ಕೂಡ ರೋಧಿಸುತಿದೆ
ಈ ರಾತ್ರಿಯ ಆ ಬೆಳ್ದಿಂಗಳು
ಉರಿಬಿಸಿಲಾಗಿ ಸುಡುತಿದೆ
ಸಾಗರದಲೆ ಅಬ್ಬರಿಸಿ
ನಿನ್ನಿರುವ ಹುಡುಕುತಿದೆ
ಆ ತಾರೆಗಳೆಲ್ಲ ಬೇಸರಗೊಂಡು
ಮೋಡದ ಮರೆಗೆ  ಓಡುತಿವೆ
ಮುಂಜಾನೆಯ ಮಂಜ ಹನಿ
ಎಳೆ ಬಿಸಿಲಿಗೂ ಕೊರಗಿ ಕರಗಿದೆ
ಇನಿಯ ದನಿಯ ಹಕ್ಕಿಗಳಿಂಚರ
ಶೋಕಗೀತೆಯಾ ಉಲಿಯುತಿದೆ
ಯಾವ ರಾವಣನ ವನದಲಡಗಿರುವೆ
ಬಾ ಒಲವೆ ಬಂದು ನನ್ನ ಸಂತೈಸು
0715ಪಿಎಂ10072017
*ಅಮುಭಾವಜೀವಿ*


*೮● ನೊಂದಿವೆ ಜೀವಗಳು*

ನೊಂದಿವೆ ಜೀವಗಳು
ಬೆಂದಿವೆ ಭಾವಗಳು
ಈ ಗೊಂದಲದ ಗೂಡಲ್ಲಿ
ಗಲಿಬಿಲಿಗೊಂಡಿಹೆ ಮನದಲ್ಲಿ
ಆರಕ್ಷಕರೇ ಆತ್ಮಹತ್ಯೆಗೆ
ಕೊರಳೊಡ್ಡುತಿರುವಾಗ 
ಕಾಪಾಡುವ ಕೈಗಳೇ
ನಡುಗುತಲಿರುವಾಗ,,,,,,, //ನೊಂದಿವೆ//
ದಕ್ಷತೆಗಿಲ್ಲಿ ಬೆಲೆಯೇ ಇಲ್ಲ
ಪ್ರಾಮಾಣಿಕತೆಗೆ ಮನ್ನಣೆ ಇಲ್ಲ
ರಾಜಕೀಯದ ಚದುರಂಗದಲಿ
ನಿತ್ಯ  ಉರುಳುವ ಅಮಾಯಕ ಜೀವಗಳಿಗಾಗಿ,,,,,,// ನೊಂದಿವೆ//
ಆಳುವವರ ಅಟ್ಟ ಹಾಸದ ಮುಂದೆ
ಬಾಳುವವರು ಪಟ್ಟ ಕಷ್ಟ ಕೇಳುವವರಾರು
ದಿಟ್ಟತನದ ಹೋರಾಟವನ್ನು ಹತ್ತಿಕ್ಕುವ
ಕುಮ್ಮಕ್ಕು ನಡೆಯುತಿರಲು, ,,,//ನೊಂದಿವೆ//
/1050pm080716
*ಅಮುಭಾವಜೀವಿ*
*೯● ಎಲ್ಲ ಬರಿದಾಗುವ ಮುನ್ನ*

ಕರಿನೆಲವು ಬಾಯಾರಿ /
ಬಿರಿದು ಕರೆದಿದೆ
ಬಾ ಮಳೆಯೇ /
ಈ ಮುನಿಸೇತಕೆ
ಎಷ್ಟೆಂದು ಸಹಿಸುವುದು/
ಒಡಲು ಬರಿದಾಗಿಹುದು
ಕಡಲಿಂದ ಮೇಲೇರಿ /
ಮೇಘಗಳ ಸವಾರಿಯಲಿ
ಮರುಮಾತನಾಡದೆ ಬಂದು ಬಿಡು
ಈ ಭೀಕರತೆಯ ಕಳೆದು ಬಿಡು
ನೆತ್ತಿ  ಒಣಗಿದ ಮರದಿ ಕೂತು
ಹಕ್ಕಿ ರೋಧಿಸುತಿದೆ ಬಿಕ್ಕಿ ಬಿಕ್ಕಿ
ಗುಟುಕರಿಸಲು ಹನಿ ನೀರಿಲ್ಲ
ಕಟುಕರ ಪಾಲಾದವು ಜಾನುವಾರುಗಳೆಲ್ಲ
ಕನಿಕರಿಸು ಮಳೆ ಸುರಿಸು
ಎಲ್ಲ ಬರಿದಾಗುವ ಮುನ್ನ
ರೈತರ ಜೀವವ  ಉಳಿಸು
ಅವರ ಶ್ರಮಕೆ ಫಲವನು ಕೊಡಿಸು
ಬೇಡ ಬೇಡ  ಈ ಕಠೋರ ಮುನಿಸು
ಬರವ ನೀಗಿ ನೀರು ದಯಪಾಲಿಸು
ಬರದ ಭೀಕರತೆಯ ತಪ್ಪಿಸು
ಹರನ ಜಟೆಯಿಂದ ಗಂಗೆಯನು ಹರಿಸು
0540ಪಿಎಂ10072017
*ಅಮುಭಾವಜೀವಿ*


: ೧೦ *ಸಂಜೆ ಹಾಯ್ಕುಗಳು*

*ಈ ಸಂಜೆಗೇಕೋ*
*ನೀನಿರದ ಬೇಸರ*
*ಸಿಟ್ಟು ತಂದಿದೆ*
*ತಾರೆಗಳೆಲ್ಲ*
*ಬೆಳ್ದಿಂಗಳ ರಾತ್ರಿಗೆ*
*ಮಬ್ಬಾಗಿಹವು*
*ತಂಗಾಳಿ ತೀಡಿ*
*ಇರುಳ  ಏಕಾಂತಕೆ*
*ಭಂಗ ತಂದಿದೆ*
*ನಿಶಾಚರಿಯ*
*ನಿಗೂಢ ಪಯಣವು*
*ಘಾಸಿಗೊಂಡಿದೆ*
*ಹುಣ್ಣಿಮೆ ಚಂದ್ರ*
*ಮೋಡದ ಮರೆಯಲಿ*
*ಅವಿತುಕೊಂಡ*
*ಮುಂಜಾನೆ ತಾನು*
*ಏನೂ  ಆಗಿಲ್ಲವೆಂದು*
*ಬಯಲಾಗಿಸ್ತು*
0556ಪಿಎಂ11072017
*ಅಮುಭಾವಜೀವಿ*

: *೧೧• ಎಲ್ಲ ಮರೆತಿರುವಾಗ*

ಬೇಡವೆಂದರೂ ನೀ
ಮತ್ತೆ ಬೀಳುವೆ ಕಣ್ಣಿಗೆ
ಮರೆಯ ಬೇಕೆಂದರೂ ನೀ
ಆಸೆ ಹುಟ್ಟಿಸುವೆ ಮನಸಿಗೆ
ನನಗೆ ಗೊತ್ತು ನೀನೆಂದೂ
ಸಿಗದ ಹುಳಿದ್ರಾಕ್ಷಿ ಎಂದು
ಎಲ್ಲ ಮರೆತಿರುವಾಗ ನೀ ಬಂದು
ಭೂತಕೆ ತಳ್ಳುವೆ   ಅಲ್ಲಿಗೇ ಹೋಗೆಂದು
ನಾ ಭ್ರಮನಿರಸನಗೊಂಡು
ಬದುಕನ್ನೇ ಬೇಡವೆನ್ನುವ
ತೀರ್ಮಾನಕ್ಕೆ ಗಟ್ಟಿ ಅಂಟಿಕೊಳ್ಳುವಾಗಲೇ ಚಿತ್ತ ಚಂಚಲಿಸಿದೆ
ಆಶಾಗೋಪುರವೆಂದೋ ಕಳಚಿತ್ತು
ಒಲವ ನೂಪುರ ಒಡೆದು ಹಾಳಾಗಿತ್ತು
ಮರಳುರಾಶಿಯನ್ನ ಆಗಲೇ  ಮುಚ್ಚಿತ್ತು
ನೀನದರ ಗುಟ್ಟ ಒಡೆಯಬೇಡ್ಹೋಗು
ಬಡವನ ಪಾಡು
ದಡವಿಲ್ಲದ ಗೂಡು
ಎಲ್ಲ ಒಣಗಿರುವಾಗ ಕಿಚ್ಚು
ಹಚ್ಚಿ ನಾಶಗೈಯುವುದು ಬೇಡ
ನಿನ್ನ ಜಾಡ ನೀ ಹಿಡಿದು ನಡೆ
ಕಣ್ಣೆತ್ತಿ ನೋಡದೆ ನನ್ನ ಕಡೆ
ಬದುಕು ಕಲಿಸಿದೀ ಪಾಠ
ಬಾಳಗೀತೆಗಿದೇ ಮುಖಪುಟ.
0610ಪಿಎಂ150715
*ಅಮುಭಾವಜೀವಿ*

*೧೨● ಗಡುವಿಲ್ಲದ ಬಡತನ*

ಅದೆಷ್ಟು ನೋವುಗಳನಿತ್ತು
ಕಂಗೆಡಿಸುವೆ ಓ ಬದುಕೇ
ಎಲ್ಲದಕ್ಕೂ ಎದೆಗುಂದದ
ಆತ್ಮಸ್ಥೈರ್ಯ ನನ್ನೊಳಿದೆ
ಗಡುವಿಲ್ಲದ ಬಡತನ ನೀಡಿ
ಗರಬಡಿಸಿದೆ ನೀನು
ಮಡುಗಟ್ಟಿದ ಆ ನೋವಲೂ
ನಡು ಮುರಿದು ದುಡಿವೆನು
ಉಳ್ಳವರ ಅಟ್ಟಹಾಸ ತೋರಿಸಿ
ಇಲ್ಲದ ನನ್ನ ಹಂಗಿಸುವೆ
ಅಂಬಲಿಯ ಕುಡಿದಾದರೂ
ಈಜಿ ದಡ ಸೇರುವೆ
ನೆಲೆಯಿಲ್ಲದ ನನ್ನನ್ನ ನೀ ಅಲೆಸಿದೆ
ಆ ಅಲೆಯಲ್ಲೂ ತೇಲಿ ಬರುವೆ
ಸೂರೊಂದನು ಕಟ್ಟಿ ಪಾರಾಗಿ
ನೆಮ್ಮದಿಯ ನೆರಳಲ್ಲಿ ಬಾಳುವೆ
ನಾ ಅಂಜಲಾರೆ  ನೀ ಕಷ್ಟ ಕೊಟ್ಟರು
ನನ್ನ ತನ ಮಾಸದು ನೀನೆಷ್ಟೇ ಸುಟ್ಟರು
ಬಂದದ್ದೇ ಭಾಗ್ಯವೆಂದು
ಬದುಕುವ ಬಡವ ನಾನು
ಎದೆಗುಂದುವ ಮಾತೆ ಇಲ್ಲ
ಎದುರೀಜಿ ದುಡಿವೆ ಇನ್ನೂ.
725ಎಎಂ180715
*ಅಮುಭಾವಜೀವಿ*


*೧೩● ಈ ಅನುರಾಗ*

ಅನುರಾಗದ ಪುಟ ತೆರೆದಿದೆ
ನನ್ನದೇ ಬಾಳಲ್ಲಿ
ಒಲವಿನ ಹಣತೆ ಬೆಳಗಿತು
ನಾ ನಡೆಯುವ ಹಾದಿಯಲ್ಲಿ
ಬದುಕು ಬರದ ಬೇಗೆಗೆ ಸಿಲುಕಿ
ಪರಿತಪಿಸುತಲಿರುವಾಗ
ಮುಂಗಾರಿನ ಹನಿ ಸ್ಪರ್ಶವ
ತಂತು ನಿನ್ನ ಈ ಅನುರಾಗ
ಬತ್ತಿದೆದೆಯೊಳಗೆ ಮತ್ತೆ ಚಿಗುರು
ಕುಡಿಯೊಡೆಯಿತು ನಿನ್ನಿಂದ
ನಿನ್ನೊಲವಿನ  ಆಲಿಂಗನ
ಭರವಸೆಯ ಬಿತ್ತಿತು ಆಗಿಂದ
ಒಂಟಿತನದ ರಾತ್ರಿಯೊಳಗೆ
ಬೆಳದಿಂಗಳು ನೀನಾಗಿ ಬಂದೆ
ಕಗ್ಗತಲಿನ ಕೈಹಿಡಿದು
ಬೆಳಕಿನೆಡೆಗೆ ನೀ ಕರೆತಂದೆ
ಈ ಬದುಕಿಗೀಗ ಶುಭಯೋಗ
ಅದಕೆ ಕಾರಣವೇ ಈ ಅನುರಾಗ
ಹೊಸ ಹುರುಪಿನ ಆಶಾಕಿರಣ
ನೀನೇ ಬದುಕಿನ ನವಚೇತನ
0643ಎಎಂ18072017
*ಅಮುಭಾವಜೀವಿ*

No comments:

Post a Comment