Saturday, January 29, 2022

ಲೇಖನ

*ಸ್ನೇಹದಲ್ಲಿ ಸಲಿಗೆ ಇರಲಿ ಎಚ್ಚರ* 

ಒಂದು ಕೊಚ್ಚೆಯ ಸಹವಾಸ ಇಡೀ ಬದುಕಿನ ದಿಕ್ಕನ್ನೆ ಬದಲಾಯಿಸಿತ್ತು.ಕೊಚ್ಚೆ ಏನೋ ನನ್ನಂಥ ಸುಸಂಸ್ಕೃತನ ಸ್ನೇಹಮಾಡಿ ಪಾವನವಾಯಿತೇನೋ ಆದರೆ ಸುಸಂಸ್ಕೃತ ನಾಗಿದ್ದ ನಾನು ಕೊಚ್ಚೆಯ ಜೊತೆ ಸಲಿಗೆ ತೋರಿದ ತಪ್ಪಿಗೆ ಆ ರಾಡಿ ಎಲ್ಲಾ ಮುಖಕ್ಕೆ ರಾಚಿ  ವ್ಯಕ್ತಿತ್ವವೇ ದುರ್ನಾತ ಬೀರುವಂತಾಯಿತು.ಸಗಣಿಯೊಂದಿಗಿನ ಈ ಗುದ್ದಾಟದಲ್ಲಿ ಸಂಭಾವಿತನಿಗೂ ಕೂಡ ಕಳಂಕ ಮೆತ್ತಿಕೊಂಡಾಯ್ತು. ಬಯಸಿದಂತೆ ಬದುಕುತ್ತಿದ್ದವನಿಗೆ ಇಂಥದೊಂದು ಘಟನೆ ಬದುಕಿನಲ್ಲಿ ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ ಆಯಿತು . ಸ್ವಚ್ಛವಾಗಿದ್ದ ಸ್ಪಟಿಕದ ರೀತಿಯಲ್ಲಿದ್ದ ಜೀವನದಲ್ಲಿ ಈ ಕೊಚ್ಚೆಯ ಸಹವಾಸ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಬದುಕೇ ನಿರರ್ಥಕವೆನಿಸಿಬಿಟ್ಟಿತು.

        ಸ್ನೇಹ ಎಂಬುದು ಒಂದು ಪವಿತ್ರವಾದ ಸಂಬಂಧ. ಅದು ಒಂದು ಚೌಕಟ್ಟಿನೊಳಗೆ ಇದ್ದಾಗ ಘನತೆ ಗೌರವಕ್ಕೆ ಯಾವ ಧಕ್ಕೆಯೂ ಇರುವುದಿಲ್ಲ  . ಆದರೆ ಅದರೊಳಗೆ ಸಲಿಗೆ  ಎಂಬ ಸಣ್ಣ ಕೀಟ ಹೊಕ್ಕಿತೆಂದರೆ ಇಡೀ ಬದುಕನ್ನೇ ಸರ್ವನಾಶ ಮಾಡಿ ಬಿಡುತ್ತದೆ. ಮೊದಮೊದಲು ಅದು ನೀಡುವ ಮಧುರವಾದ ಯಾತನೆ ಬರುಬರುತ್ತಾ ಕೊರಳ ಹಿಡಿದು ಕಂಗಾಲಾಗಿಸಿ ಬಿಡುತ್ತದೆ . ಅದರಲ್ಲೂ ಸಭ್ಯತನದಲ್ಲಿ ಬದುಕಿದವನಿಗೆ ಬೆಳ್ಳಗಿರುವುದೆಲ್ಲವೂ ಹಾಲೆಂದು ನಂಬಿದವನಿಗೆ ಇದೊಂದು ಆಘಾತವನ್ನೇ ಉಂಟು ಮಾಡುತ್ತದೆ . 
    
      ಸ್ನೇಹ ಪ್ರೀತಿ ವಿಶ್ವಾಸ ನಂಬಿಕೆ ಇವುಗಳಿಗೆ ಬಹುದೊಡ್ಡ ಸ್ಥಾನವಿದೆ . ಇವೆಲ್ಲವೂ ಮನುಷ್ಯನ ಬದುಕಿಗೆ ಒಂದು ರೀತಿಯ ಆಸರೆಯಂತವುಗಳು . ಅವುಗಳನ್ನು ಇತಿಮಿತಿಯಲ್ಲಿ ಬಳಸಿಕೊಂಡರೆ ಬದುಕು ನಿಜಕ್ಕೂ ಪ್ರಕೃತಿಯ ಸೊಬಗಿನಿಂತಿರುತ್ತದೆ .    ಅತಿಯಾದ ಸ್ನೇಹ ಪ್ರೀತಿ ನಂಬಿಕೆ ವಿಶ್ವಾಸಗಳು ಈ ನಡೆಯನ್ನು ಕುರುಡಾಗಿಸಿ ಸ್ವಲ್ಪ ಯಾಮಾರಿದರೂ  ಬದುಕನ್ನು ಬರಡಾಗಿಸಿ ಬಿಡುತ್ತದೆ .

    ಈ ಸಮಾಜದಲ್ಲಿ ನಾವು ಸೃಷ್ಟಿಸಿಕೊಂಡಿರುವ ವ್ಯಕ್ತಿತ್ವದ ಘನತೆ ಗೌರವಗಳೆಲ್ಲವೂ ಇಂಥ ಘಟನೆಗಳಿಂದ  ಈ ಜಗತ್ತು ನಮ್ಮನ್ನು ಅನುಮಾನಿಸುವಂತೆ ಮಾಡುತ್ತದೆ . ನಮ್ಮ ಬಗ್ಗೆ ಎಷ್ಟೇ ನಂಬಿಕೆಯಿದ್ದರೂ ಕಣ್ಣೆದುರಿಗೆ ಕಂಡ ವಾಸ್ತವವೆಂಬಂತೆ ಬಿಂಬಿತವಾದ ಈ ಅಸತ್ಯದಿಂದಾಗಿ ನಾವು ನಮ್ಮ ಯೋಗ್ಯತೆಯನ್ನು ಕಳೆದುಕೊಳ್ಳಬೇಕಾಗುತ್ತದೆ . ನಮ್ಮ ಸುತ್ತಮುತ್ತಲಿನಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮನ್ನು ಬಲಿ ಕೊಡುವ ಅದೆಷ್ಟೋ ಕೊಳಕು ಹುಳಗಳು ಇವೆ ಅದನ್ನು ಅರಿತು ಅವರ ಜತೆಗೆ ಅಂತರ ಕಾಯ್ದುಕೊಂಡಾಗ ಮಾತ್ರ ನಮ್ಮ ವ್ಯಕ್ತಿತ್ವಕ್ಕೆ ಅದು ಕಪ್ಪುಚುಕ್ಕೆ ಬರದಂತೆ ತಡೆಯುತ್ತದೆ . ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ನಮ್ಮ ಸ್ನೇಹದ ಪರಿಧಿ ಮೀರಿದ ಸಂಬಂಧಗಳು ನಮ್ಮ ಸಭ್ಯತನದಲ್ಲಿ   ಅಸಭ್ಯತೆಯನ್ನಷ್ಟೇ ಜಗದೆದುರು ತೆರೆದಿಟ್ಟು ನಮ್ಮ ತನವನ್ನು ನಿಷ್ಕ್ರಿಯಗೊಳಿಸಿ ಬಿಡುತ್ತದೆ .   ಸಭ್ಯರು ಅದೆಷ್ಟೇ ನಾನು ಅದಲ್ಲ ಎಂದು ಬಾಯಿ ಬಡಿದುಕೊಂಡರೂ ಈ ಜಗತ್ತು ನಂಬುವುದು ಅಂಥವರನ್ನೇ ಹೊರತು ಸಭ್ಯನ್ನರಲ್ಲ  .

              ಸ್ನೇಹದ  ತನ್ನ ಪಾಡಿಗೆ ತಾನು ಅರಳಿ ತನ್ನ ಸೌಂದರ್ಯವನ್ನು ಜಗತ್ತಿಗೆ ತೋರುತ್ತಿರುತ್ತದೆ .     ಆದರೆ ಆ ಸೌಂದರ್ಯಕ್ಕೆ ಮರುಳಾಗುವ ದುಂಬಿ ಪತಂಗಗಳಲ್ಲಿ ಅದೆಷ್ಟೋ  ಕೆಟ್ಟವುಗಳ ದುರ್ಗಂಧ ಸುಮದ ಸೌಗಂಧದ ಜೊತೆ ಬೆರೆತು ಇಡೀ ವಾತಾವರಣವನ್ನೇ ಕಲುಷಿತಗೊಳಿಸಿದೆ ಬಿಡುತ್ತದೆ  . ಅದೇನೋ ಹೀರಿ ಹಾರಿಹೋಗಿ ಬಿಡುತ್ತದೆ ಆದರೆ ಕಲುಷಿತಗೊಂಡ ಸುಮ ಅದನ್ನು ತೊಳೆದುಕೊಳ್ಳಲಾಗದೆ ಸಹಿಸಿಕೊಳ್ಳಲು ಆಗದೆ ನಿತ್ಯ  ಸಂಕಷ್ಟಕ್ಕೆ ಸಿಲುಕಿ ನರಳಾಡುತ್ತಿದೆ .ನಂಬಿಕೆ ದ್ರೋಹದ ಪರಿಣಾಮವನ್ನು ಇಡೀ ಬದುಕಿನುದ್ದಕ್ಕೂ ಸಹಿಸಿ ಬಾಳುತ್ತದೆ . ತನಗೆರಚಿ ಹೋದ ಕೊಚ್ಚೆಯ ಕಾರಣದಿಂದಾಗಿ ಸ್ವಚ್ಚಂದದ ಬದುಕು ಭೀಕರತೆಯ ತಾಣವಾಗುತ್ತದೆ . 

     ಈ ಹೊಸ ತಲೆಮಾರಿನ ಜನರೊಂದಿಗೆ ಸಹವಾಸ ಬೆಳೆಸುವಾಗ ನೂರು ಸಾರಿ ಯೋಚಿಸಿ ಸ್ನೇಹ ಮಾಡಬೇಕು . ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಯಾವುದೂ ನಮ್ಮನ್ನು ಹೇಗೆ ಕಚ್ಚುವುದು  ಯಾರಿಗೆ ಗೊತ್ತು ಆದ್ದರಿಂದ ನಮ್ಮ ಹುಷಾರಿನಲ್ಲಿ ನಾವು ಇರಬೇಕು . ಸಲಿಗೆ ಎಂಬುದು  ಮೂಗಿನ ತುದಿಯವರೆಗೆ ಮಾತ್ರ ಇರಬೇಕು ಮೂಗನ್ನು ಹಿಡಿಯಲು ಬಿಟ್ಟರೆ ನಮ್ಮನ್ನೇ ಸರ್ವ ನಾಶ ಮಾಡಿಬಿಡುತ್ತದೆ . ಎಷ್ಟೇ ಆತ್ಮೀಯರಾಗಿದ್ದರೂ ತುಸು ಅಂತರವನ್ನು ಕಾಪಾಡಿಕೊಳ್ಳುವುದು ಕ್ಷೇಮ .

೦೩೪೪ಎಎಂ೩೦೦೧೨೦೨೨
ಅಮುಭಾವಜೀವಿ ಮುಸ್ಟೂರು

Saturday, January 22, 2022

ನನ್ನ ನೀತಿ

ನನ್ನ ನೀತಿ

ಎಲ್ಲಿ ಮೀರಲು ಎಣ್ಣೆ ಬತ್ತಿಗಳಿಲ್ಲ
ಇಲ್ಲೇ ಇರಲು ಅವಧಿ ಮುಗಿಯುತಿಹುದಲ್ಲ
ಹಿರಿಯರ ನೆರಳಡಿಯಲ್ಲಿ
ಕಿರಿಯ ನಾ ಗುಡಿಕಟ್ಟುವೆ

ನುಡಿದಂತೆ ನಡೆಯುವ ಮಾನವ ಕುಲಜರೊಡಗೂಡಿ ತರುವೆ ಗೌರವ
ಸ್ನೇಹ ಪ್ರೀತಿ ನನ್ನ ಉಸಿರು
ಸ್ವಾಭಿಮಾನದ ಅಭಿಮಾನವೇ ನನ್ನ ತವರು

ಸಕಲ ಜೀವಿಗಳ ಜೊತೆ ನನ್ನ ಬಾಂಧವ್ಯ
ಸದ್ಧರ್ಮ ಮೀರದ ನನ್ನ ಕರ್ತವ್ಯ
ನಿಸರ್ಗದೊಡನೆ ಹೊಂದಿಕೊಂಡು
ಬಾಳುವೆ ನೆಮ್ಮದಿಯ ಹುಡುಕಿಕೊಂಡು

ಆಡುವ ಮಾತಲ್ಲಿದೆ ವಿನಯ
ನನ್ನ ಮೇಲೇಕೆ ಸಂಶಯ
ನೊಂದವರ ತವರು ಈ ಹೃದಯ
ಎಲ್ಲರೊಳಗೊಂದಾಗುವುದೆನ್ನ ಆಶಯ

ಹರಸೋ ಕೈಗಳ ನೆರಳು
ಹಾಡಿ ಹೊಗಳುವುದನ್ನ ಕೊರಳು
ನಿಮ್ಮಿಂದ ಪಡೆದುಕೊಂಡ ಪ್ರೀತಿಯ
ಮತ್ತೆ ಹಿಂತಿರುಗಿಸುವುದೆನ್ನ ನೀತಿಯು

೦೫೦೫೨೦೦೩
ಅಮುಭಾವಜೀವಿ

ಕವನ

ಸಮರ ಯಾವಾಗ

ತನ್ನ ಬಲ ದೌರ್ಬಲ್ಯಗಳನರಿಯದೆ
ನಿಸರ್ಗದ ಕುಲ ಜಲಗಳಿಗೆಲ್ಲ
ಶಕುನಗಳ ಪದವಿ ಕೊಟ್ಟು
ಸುಖಿಸುವ ಮನುಜರು ನಾವು

ತನ್ನೆಲ್ಲ ಒಳಿತು-ಕೆಡುಕುಗಳಿಗೆ
ಪ್ರಕೃತಿಯ ಜೀವಜಂತುಗಳ
ಸಂಕೇತವನ್ನು ಇಟ್ಟು ಶಕುನಗಳ
ಹೆಸರಲ್ಲಿ ಅವಕೆ ಮಸಿ ಬಡಿಯುತ್ತಿರುವ //ಮನುಜರು ನಾವು//

ತನ್ನೊಳಗಿನ ಮರ್ಮಗಳನರಿಯದೆ
ಸಾಧು ಜೀವಿಗಳ ಜನ್ಮಕ್ಕೆ
ಕಳಂಕ ಲೇಪಿಸಿ
ಕರುಳು ಮಿಡಿವ ಕರುಣೆ ಇಲ್ಲದ //ಮನುಜರು ನಾವು//

ಮನಸ್ಸಿಗಿಂತ ಕೆಟ್ಟ ಪ್ರಾಣಿ
ಲೋಕದೊಳಗೆ ಯಾವುದಿದೆ ಸ್ವಾಮಿ
ಕಂಡಕಂಡವರ ಕಾಲೆಳೆಯುವ
ನಮ್ಮ ದೊಡ್ಡ ಶತ್ರುಗಳು ನಾವು ನಾವೇ

ಅತಿ ಬುದ್ಧಿವಂತಿಕೆಯಿಂದ ತಾನೇ
ಅತಿಮಾನುಷನೆಂದು ಬಗೆದು
ಸಿಕ್ಕಸಿಕ್ಕದುದಕ್ಕೆಲ್ಲ ಶಕುನವಿಟ್ಟು
ಸಿಕ್ಕಿ ಬೀಳದ ಠಕ್ಕನಿವನು

ನಿಯಂತ್ರಣವಿಲ್ಲದ ನರ ತಾನು
ಜಗದ ಸುರನು ತಾನೆ ಎಂದನು
ನಿತ್ಯ ಅಸುರ ಕೃತ್ಯದ ಗೈಯುವ
ಇವನ ಮೇಲೆ ಸಮರ ಯಾವಾಗ

೦೪೦೫೨೦೦೩
ಅಮುಭಾವಜೀವಿ

ಕವಿತೆ

ಈ ಇರುಳ ನೀರವ ಮೌನದೊಳಗೂ 
ಬೆಳದಿಂಗಳು ಮೂಡುವಂತೆ 
ಮತ್ತೆ ಮರಳಿ ಮನಸ್ಸಾಗಿದೆ 
ಕೋಟಿ ತಾರೆಗಳು ಹೊಳೆದರೂ
ಶಶಿಯ ಆಗಮನದಂತೆ 
ಮತ್ತೆ ಮರಳಿ ಮನಸ್ಸಾಗಿದೆ 

ಸಾಲುಗಟ್ಟಿದ ಇಬ್ಬನಿಯೊಳಗೆ 
ಅರುಣ ಕಿರಣದ ಹೊಳಪಂತೆ 
ಮತ್ತೆ ಮರಳಿ ಮನಸ್ಸಾಗಿದೆ 
ಮುಸ್ಸಂಜೆಗೆ ಮುದುಡಿದ ಮೊಗ್ಗು 
ಮುಂಜಾನೆಗೆ ಮೆಲ್ಲ ಅರಳುವಂತೆ 
ಮತ್ತೆ ಮರಳಿ ಮನಸ್ಸಾಗಿದೆ 

ಚೈತ್ರದ ಚಿಗುರಿನ ಜೊತೆಗೆ 
ವಸಂತಕ್ಕೆ ಕೋಗಿಲೆ ಹಾಡಿದಂತೆ 
ಮತ್ತೆ ಮರಳಿ ಮನಸ್ಸಾಗಿದೆ 
ಬಿರುಬೇಸಿಗೆಯಲ್ಲಿ ಬತ್ತಿದ ತೊರೆ 
ವರ್ಷ ಕಾಲದಿ ಮೈದುಂಬಿದಂತೆ 
ಮತ್ತೆ ಮರಳಿ ಮನಸ್ಸಾಗಿದೆ 

ಎದೆಯ ಧಮನಿಯ ಬಡಿತ 
ಅವನು ಬರುವ ಸೂಚನೆ ನೀಡಲು 
ಮತ್ತೆ ಮರಳಿ ಮನಸಾಗಿದೆ 
ಕಲ್ಲು ಮುಳ್ಳಿನ ಹಾದಿ ತುಳಿದು 
ಹೆಪ್ಪುಗಟ್ಟಿದ ರಕ್ತ ಕರಗಿ 
ಮತ್ತೆ ಮರಳಿ ಮನಸಾಗಿದೆ 

೧೦೩೩ಪಿಎಂ೨೨೦೧೨೦೨೨
*ಅಮುಭಾವಜೀವಿ ಮುಸ್ಟೂರು*

Tuesday, January 4, 2022

ಲೇಖನ

ಮನುಷ್ಯನ ಬದುಕಿನಲ್ಲಿ ಸ್ನೇಹ ಎನ್ನುವುದೊಂದು ನೆರಳಿನ ಮರವಿದ್ದಂತೆ .ಇಲ್ಲಿ ನಮ್ಮ ನೋವು ನಲಿವುಗಳನ್ನು ಹಂಚಿಕೊಂಡು ಹಗುರಾಗಲು ಸಾಧ್ಯವಿದೆ .ಸ್ನೇಹಿತರಿಲ್ಲದ ಬದುಕನ್ನು  ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ . ಅದರಲ್ಲೂ ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ವಾಟ್ಸ್ ಆಪ್ ಇನ್ಸ್ ಟಾಗ್ರಾಂ ಮುಂತಾದ ಮಾಧ್ಯಮಗಳಲ್ಲಿ ಸ್ನೇಹಿತರ ದಂಡೆ ಸಿಕ್ಕಿ ಬಿಡುವುದು .ಒಬ್ಬರಿಗೊಬ್ಬರು ನೋಡಿಕೊಳ್ಳದೆ ಕೇವಲ ಅವರ ರೆಸ್ಯೂಮ್ ಗಳನ್ನು ನೋಡಿ ಅವರ ಸ್ನೇಹ ಸಂಘವನ್ನ ಒಪ್ಪಿ ಅಪ್ಪಿ ಮೈಮರೆಯುತ್ತೇವೆ .ಅಭಿರುಚಿ ಆಸಕ್ತಿ ಅನುಕೂಲ ಅನಾನುಕೂಲ ಇವೆಲ್ಲವುಗಳ ಆಚೆ ಕೇವಲ ಸ್ನೇಹದ ಕೋರಿಕೆ ಬಂದ ಕೂಡಲೇ ಅವರ ಸ್ನೇಹ ಕೋರಿಕೆಯನ್ನು  ಸ್ವೀಕರಿಸಿ ಏನನ್ನೋ ಸಾಧಿಸಿದಂತೆ ಬೀಗುತ್ತೇವೆ ಗರ್ವ ಪಡುತ್ತೇವೆ ಹೆಮ್ಮೆ ಪಡುತ್ತೇವೆ ಆದರೆ ಅವರ ಸ್ನೇಹ ಎಂತಹದ್ದು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿ  ಬಿಡುತ್ತೇವೆ. ಅವರುಗಳ ಪ್ರೊಫೈಲ್ ಗಳನ್ನು ಜಾಲಾಡಿ ದಾಗಲೂ ಅವರು ಎಂಥವರು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಕೆಲವು ಸಂದರ್ಭದಲ್ಲಿ . ಕೇವಲ ಆಕರ್ಷಣೆಗೋಸ್ಕರ ಅವರ ಸ್ನೇಹಕ್ಕೆ ಒಪ್ಪಿಗೆ ಸೂಚಿಸಿ ನಾವು ಅವರು ಮಾಡುವ ಅನ್ಯಾಯಗಳಿಗೆ ಬಲಿಯಾಗುತ್ತೇವೆ .    ಸ್ನೇಹ ಸಿಕ್ಕಾಗೆ ಎಷ್ಟು ಸಂಭ್ರಮಿಸುತ್ತೇವೆಯೋ 1ಕ್ಷಣ ಅವರು ನಮಗೆ ಪ್ರತಿಕ್ರಿಯಿಸದೇ ಹೋದ ನಮ್ಮ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಸಣ್ಣ ಅನುಮಾನ ಬಂದಾಗ ಜಗತ್ತೇ ಕಳಚಿ ತಲೆ ಮೇಲೆ ಬಿದ್ದಂತೆ ಆಡುತ್ತೇವೆ .ಇದ್ದಬದ್ದ ದಾರಿಗಳನ್ನೆಲ್ಲ ಬಳಸಿ ನಮ್ಮ ಬಗ್ಗೆ ಅವರ ಅಭಿಪ್ರಾಯ ಏನಿರಬಹುದು ಎಂದು ತಿಳಿದುಕೊಳ್ಳಲು ಪರದಾಡುತ್ತೇವೆ .ಒಮ್ಮೆ ನಾವು ಅವರಿಗೆ ನಮ್ಮ ಬದುಕು ವ್ಯಕ್ತಿತ್ವ ನಮ್ಮ ಆಸೆ ಆಕಾಂಕ್ಷೆಗಳನ್ನು ತಿಳಿಸಿದವೆಂದುಕೊಂಡರೆ ಸಾಕು ನಂತರ ಅವರು ನಮ್ಮನ್ನು ಆಳಲು ಶುರು ಮಾಡುತ್ತಾರೆ.

          ಈ ಸಾಮಾಜಿಕ ಜಾಲತಾಣಗಳಲ್ಲಿರುವ ಸ್ನೇಹಿತರು ಯಾರು ನಮ್ಮ ಕಷ್ಟ ಸುಖಗಳಿಗೆ ಆಗುವುದಿಲ್ಲ .ನಮ್ಮ ಪೋಸ್ಟ್ ಗಳಿಗೆ ಕೇವಲ ಲೈಕು ಡಿಸ್ ಲೈಕ್ ಕಾಮೆಂಟ್ ಅಷ್ಟಕ್ಕೆ ಅವರು ಸೀಮಿತರಾಗಿರುತ್ತಾರೆ .  ಅದರಾಚೆ  ಒಂದು ಸಣ್ಣ  ಸಹಾಯವನ್ನು ಯಾಚಿಸಿದರೂ ಅವರು ಅದನ್ನು ಈಡೇರಿಸುವಲ್ಲಿ ಅಶಕ್ತರಾಗುತ್ತಾರೆ.ಕಷ್ಟಕ್ಕಾಗದ ಇಂತಹ ಸಾವಿರ ಸಾವಿರ ಸ್ನೇಹಿತರುಗಳನ್ನಿಟ್ಟುಕೊಂಡು ನಾವು ಸಾಧಿಸುವುದಾದರೂ ಏನು? ಇಲ್ಲಿನ ಸ್ಪಂದನೆಗಳು ಕೇವಲ ಬೂಟಾಟಿಕೆಗಷ್ಟೇ ಸೀಮಿತವಾಗಿರುತ್ತವೆ .  ಇಲ್ಲಿ ಕೊಡುವುದಕ್ಕಿಂತ ಪಡೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿರುತ್ತದೆ . 


           ಇನ್ನು ಈ ಸ್ನೇಹದ ನೆವಮಾಡಿಕೊಂಡುನಮ್ಮ ಸಲಿಗೆ  ಬಯಸುತ್ತಾರೆ, ಸಲಿಗೆಯನ್ನು ಕೊಟ್ಟುಬಿಟ್ಟೆವು ಎಂದರೆ ಇಡೀ ನಮ್ಮ ಬದುಕಿನಲ್ಲಿ ಆಡಬಾರದ ಆಟಗಳನ್ನೆಲ್ಲಾ ಆಡಿ ನಮ್ಮ ಬದುಕನ್ನೇ ನಿಸ್ಸಾರವಾಗಿ ಸುತ್ತಾರೆ . ಪ್ರೀತಿ ಪ್ರೇಮಗಳ ಬಲೆಬೀಸುತ್ತಾರೆ ಹಣ ಗಿಫ್ಟ್ ಗಳ ಆಮಿಷ ಒಡ್ಡುತ್ತಾರೆ ಕೊನೆಗೆ ನಮ್ಮನ್ನೇ ಕೆಟ್ಟವರನ್ನಾಗಿ ಬಿಂಬಿಸಿಬಿಡುತ್ತಾರೆ . ನಮ್ಮ ಹೊರಜಗತ್ತನ್ನೇ ಮರೆಯುವಷ್ಟು ನಾವು ಈ ಜಗತ್ತಿನಲ್ಲಿ ಕಳೆದುಹೋಗಿಬಿಡುತ್ತೇವೆ . ಕಳೆದುಹೋದದ್ದು ಕೇವಲ ನಾವಲ್ಲ ನಮ್ಮ ವ್ಯಕ್ತಿತ್ವ ನಮ್ಮ ನಂಬಿಕೆ ನಮ್ಮ ಭರವಸೆ ನಮ್ಮ ಆಸೆ ಆಕಾಂಕ್ಷೆ ನಮ್ಮ ಹಣ ಸಮಯ ಎಲ್ಲವನ್ನು ಕಳೆದುಕೊಂಡು ಸಾಮಾಜಿಕ ಜಾಲತಾಣಗಳ ಬಾಯಿಬಡುಕ ಕಾಮೆಂಟ್ಸ್ ಗಳಿಗೆ ಬಲಿಯಾಗಿ ಅದೆಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಣ್ಣ ಮುಂದೆ ಇದೆ .

    ಇಲ್ಲಿ ಅಮಾಯಕರೆಂದು ಗೊತ್ತಾದ ತಕ್ಷಣ ನಮ್ಮನ್ನು ಅವರ ಹಿಡಿತಕ್ಕೆ ತೆಗೆದುಕೊಂಡು ಬಿಡುತ್ತಾರೆ .ನಮ್ಮೆಲ್ಲ ರಹಸ್ಯಗಳನ್ನು ಬಲು ಜಾಣ್ಮೆಯಿಂದ ಹೊರಗೆ ತೆಗೆದುಕೊಂಡು ಬಿಡುತ್ತಾರೆ . ಅದರಲ್ಲೂ ಪ್ರೀತಿ ಪ್ರೇಮದ ಬಲೆಗೆ ಸಿಕ್ಕೆವೆಂದರೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ . ನಮ್ಮನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಅಕ್ಷರಶ: ಸಾಮಾಜಿಕ ಜಾಲತಾಣಗಳ ಬೀದಿಗೆ ಎಸೆದು ಬಿಡುತ್ತಾರೆ .ಅಂತಹ ಸಂದರ್ಭದಲ್ಲಿ ನಾವು ಮಾತ್ರ ಕೊರಗಿ ಸೊರಗಿ ಬದುಕೇ ಬೇಡವೆಂದು ಬೆಂಡಾಗಿ ಹೋಗಿಬಿಡುತ್ತೇವೆ . ಆದರೆ ನಮ್ಮನ್ನು ಈ ಸ್ಥಿತಿಗೆ ತಂದ ಆ ಮಹಾನುಭಾವರು ಖುಷಿಯಿಂದ ಏನೂ ಆಗಿಲ್ಲವೇನೋ ಎಂಬಂತೆ ಹಾಡುತ್ತಾ ಕುಣಿಯುತ್ತಾ ನಲಿಯುತ್ತಾ ಬದುಕುತ್ತಿರುತ್ತಾರೆ .ತನ್ನ ಕುಟುಂಬದ ಜತೆ ಒಳ್ಳೆಯ ಒಡನಾಟವಿಲ್ಲ ಎಂದು ಹೇಳಿಕೊಂಡಿದ್ದ ಅವರು ಇದಾದ ಮೇಲೆ ಅದೇ ಕುಟುಂಬದ ಜೊತೆ ತುಂಬಾ ಅನ್ಯೋನ್ಯವಾಗಿ ಬದುಕುತ್ತಾ ಇರುತ್ತಾರೆ .ನಮ್ಮಿಂದ ಬೇಕಾದುದನ್ನೆಲ್ಲ ಪಡೆದುಕೊಂಡ ಮೇಲೆ ನಮ್ಮನ್ನು ಎತ್ತಿ ಬಿಸಾಡಿ ಇನ್ನೊಂದು ಮಿಕವನ್ನು ಹುಡುಕುವುದರತ್ತ  ತಮ್ಮ ಗಮನವನ್ನು ಹರಿಸುತ್ತಿರುತ್ತಾರೆ . ನಮಗಾದ ಅನ್ಯಾಯದ ಬಗ್ಗೆ ನಾವೆಲ್ಲರೂ ಬಾಯಿಬಿಡದೆ ಕೊರಗುತ್ತೇವೆ ಆದರೆ ಅವರು ಅದನ್ನೇ ಬಂಡವಾಳ ಮಾಡಿಕೊಂಡು ಜಗದೆದುರು ತಾವು ಸಾಚಾ ಎಂದು ಬೀಗುತ್ತಿರುತ್ತಾರೆ . ಅದಲ್ಲದೆ ನಾವೇನಾದರೂ ಅವರ ಬಗ್ಗೆ ಮಾತನಾಡಲು ಶುರು ಮಾಡಿದರೆ ನಮ್ಮನ್ನು  ಹೆದರಿಸಿ ಬೆದರಿಸುವ ಕರೆಗಳನ್ನು ಮಾಡಿ ನಮ್ಮನ್ನು ಇನ್ನಷ್ಟು ಹೈರಾಣು ಮಾಡಿಬಿಡುತ್ತಾರೆ . ಇವರ ಸಹವಾಸವೇ ಸಾಕು ಎಂದು ನಾವು ಮೌನಕ್ಕೆ ಶರಣಾಗಿ ಬಿಡಬೇಕಾಗುತ್ತದೆ .

       ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಸ್ನೇಹಿತರ ದಂಡು ಎಂದೂ ನಮ್ಮ ಶ್ರೇಯಸ್ಸನ್ನು ಬಯಸುವುದಿಲ್ಲ. ಆ ಸ್ನೇಹದಿಂದ ನಮಗೆ 1ನಯಾಪೈಸೆಯ ಅನುಕೂಲ ಆಗುವುದಿಲ್ಲ .ಇಂತಹ ಸಾವಿರ ಸಾವಿರ ಸಂಖ್ಯೆಯ ಸ್ನೇಹಿತರ ಇಟ್ಟುಕೊಂಡು ನಾವು ಜೀವನದಲ್ಲಿ ಏನು ಸಾಧಿಸುತ್ತೇವೆ  

ಕವಿತೆ

ಬಾಳಿನ ಗುಡಿ ಮಲಿನವಾಯಿತು
ಮಾಯಾಂಗನೆ ಬೀಸಿದ ಬಲೆಗೆ
ಬಿದ್ದ ಬದುಕು ಇನ್ನಿಲ್ಲದಂತೆ ನರಳಿತು
ಈಗವಳ ಕಪಿಮುಷ್ಟಿಯಿಂದ
ಹೊರ ಬಂದಾಯ್ತು
ಜೀವನವೀಗ ನಿರಾಳತೆಯಿಂದ
ನಿಟ್ಟುಸಿರು ಬಿಟ್ಟಿತು

೧೨೩೬ಪಿಎಂ೨೫೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು*


ಮನಸ್ಸು ನಿರ್ಮಲವಾಗಿರಲಿ
ಕಲ್ಮಶ ಆಲೋಚನೆಗಳನ್ನು ತ್ಯಜಿಸಿ
ಬದುಕಿನೆಡೆಗೆ ಗಮನಹರಿಸಿ
ನೋವು ಕೊಡುವ ಚಿಂತೆ ನಿಗ್ರಹಿಸಿ
ತೊಂದರೆಯೀವ ಜನರ ತಿರಸ್ಕರಿಸಿ
ನಂಬಿದವರಿಗೆ ನೆರಳಾಗಿ ಜೀವಿಸಿ
ಅವಮಾನವ ಧನಾತ್ಮಕವಾಗಿ ಸ್ವೀಕರಿಸಿ
ತುಳಿಯುವವರ ಪಾದದಡಿಯಿಂದ ಉದ್ಭವಿಸಿ
ಅಧಿಕಾರ ದರ್ಪದವರನು ದೂರವಿರಿಸಿ
ಪ್ರೀತಿಸುವ ಪ್ರತಿಯೊಬ್ಬರ ಆಲಂಗಿಸಿ

೦೨೧೯ಪಿಎಂ೨೬೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*



#ಅಮುಭಾವದೂಟ ೧೯೯
ಉಸಿರುಗಟ್ಟಿದಂತಿತ್ತು
ಅಲ್ಲಿಂದ ಹೊರ ನಡೆದೆ
ಸತ್ಯವಂತರಿಗಲ್ಲಿ ಉಳಿಗಾಲವಿಲ್ಲ
ನ್ಯಾಯ ಕೇಳಿದರಲ್ಲಿ ಅದು ಸಿಗುವುದಿಲ್ಲ
ಪ್ರಾಮಾಣಿಕತೆಗೆ ಬೆಲೆ ಸಿಗದ ಜಾಗವದು
ಸ್ವಾರ್ಥ ತುಂಬಿದ ಈ ಜಗದಲ್ಲಿ
ನಿಸ್ವಾರ್ಥಿಗಳಿಗೆ ನೆಲೆಯಿಲ್ಲ

೦೮೨೯ಪಿಎಂ೨೭೧೨೨೦೨೧
*ಅಪ್ಪಾಜಿ ಸುಧಾ ಮುಸ್ಟೂರು*

ಕವನ

ಮರುಹುಟ್ಟಿಗಾಗಿ
ಪ್ರತಿಕ್ಷಣವೂ ಕಾದು
ಬೇಯುತಿದೆ ಬದುಕು
ಮತ್ತೆ ಮತ್ತೆ ಎಡವಿ ಬಿದ್ದು
ಎದ್ದು ನಿಲ್ಲುವ ಆತ್ಮವಿಶ್ವಾಸಕ್ಕೆ
ಎದುರಾಯ್ತು ಚುಚ್ಚುಮಾತುಗಳ ತೊಡಕು

ಜೀವನದ ಹೋರಾಟದಲ್ಲಿ
ಹಂಬಲಿಸಿದೆ ಬೆಂಬಲಿಸುವವರ
ಆದರೆ ಯಾರೂ ಕೈ ನೀಡರಿಲ್ಲಿ
ಜೊತೆ ನಡೆಯುವ ನಂಬಿಕಸ್ಥರೇ
ತೊಡರುಗಾಲುನಿಕ್ಕಿ ಬೀಳಿಸಿ
ತುಳಿದು ಮೇಲೇರುವರು ನಮ್ಮನಿಲ್ಲಿ

ಹುಲ್ಲುಕಡ್ಡಿಯ ಆಸರೆಗೂ
ನೂರು ಕಟ್ಟು ಕಥೆಗಳುಟ್ಟಿಕೊಂಡು
ಕಷ್ಟಗಳ ಹೊತ್ತುತರುವವು
ಹಲ್ಲುಕಚ್ಚಿ ಗೆಲ್ಲ ಹೊರಟರೆ
ಅಲ್ಲೂ ತಮ್ಮ ಪ್ರಭಾವ ಬೀರಿ
ಸೋಲುಣಿಸಿ ಮೆರೆಯುವರು

ಹೇಗಿದ್ದರೂ ಕಷ್ಟ ಜೀವನದಲ್ಲಿ
ಮೇಲೇರಲು ಬೀಳಿಸುವರು
ಕೆಳಗಿಳಿಯಲು ತುಳಿಯುವರು  
ಇಷ್ಟೊಂದು ಹೋರಾಟದಲ್ಲಿ
ಕೆಚ್ಚೆದೆಯ ತೋರಿದರೂ
ಕೊಚ್ಚೆ ಎಂದು ಮೆಚ್ಚದೇ ಹೋಗುವರು

೧೦೩೯ಪಿಎಂ೨೧೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

#ಅಮುಭಾವದೂಟ ೧೯೩

ಜಗದ ಜೀವಜಾತಕೆಲ್ಲ
ಅನ್ನ ನೀಡುವ ಅನ್ನದಾತ
ನೇಗಿಲ ಹಿಡಿದು  ಉಳುವ
ಅವನೇ ಪರಿಶ್ರಮದ ರೈತ

ಬಿಸಿಲು ಮಳೆ ಚಳಿಗೆ ಅಂಜದೆ
ಹಗಲು ಇರುಳು ಎಂದು ನೋಡದೆ
ಬೆವರು ಸುರಿಸಿ ದುಡಿಯುವನೊಬ್ಬ ಜೀವ
ಬೆಳೆಯ ಬೆಳೆದು ನೀಗಿಸುವನು ಹಸಿವ

ಬೆಳೆ ಬಂದರೆ ಬೆಲೆ ಇಲ್ಲ
ಬೆಲೆ ಇದ್ದರೆ ಬೆಳೆ ಇಲ್ಲ
ಹವಾಮಾನದ ವೈಪರೀತ್ಯಕ್ಕೆ ಸಿಲುಕಿ
ನಲುಗಿದರೂ ದುಡಿಮೆಯನೆಂದು ಬಿಡದವನು

ದೇಶದ ಬೆನ್ನೆಲುಬು ಬಳಲಿ ಬೆಂಡಾಗದಂತೆ
ಆಳುವವರು ಆಸರೆಯಾಗಬೇಕು ಅನಿವಾರ್ಯ
ಶ್ರಮಕ್ಕೆ ತಕ್ಕ ಫಲವೂ ಸಿಕ್ಕರೆ
ಅವನೆಂದೂ ಬಿಡನು ಉಳುವ ಕಾರ್ಯ

ಅವನ ಬೆವರಿನಿಂದ ಋಣ ನಮ್ಮ ಮೇಲೆ
ನಾವು ನೀಡುವ ಹಣ ಅವನ ಬೆವರಿನ ಬೆಲೆ
ಸಾಲ ಮಾಡಿ ಸಲಹುತಿಹನು ನಮ್ಮನ್ನೆಲ್ಲಾ 
ಆತ್ಮಹತ್ಯೆಗೆ ಶರಣಾಗದಂತೆ ತಡೆಯಬೇಕು ನಾವೆಲ್ಲ

ರೈತನೊಲುಮೆ ಉಳುಮೆಯೊಂದೇ
ನಮ್ಮ ಕಾಯುವ ನೆರಳು
ಅನ್ನದಾತನ ದಾರಿದ್ರ್ಯ ನೀಗಲು
ಬೆಂಬಲಿಸೋಣ ಅವನು ಸ್ವಾಭಿಮಾನದಿ ಬದುಕಲು

೧೧೦೮ಎಎಂ೨೩೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು*
*ಶ್ರಮಜೀವಿ ಅನ್ನದಾತನಿಗೆ ರೈತ ದಿನದ ಶುಭಾಶಯಗಳು
ಒಂದೊಂದು ಪದದಲ್ಲೂ
ಭಾವನೆಗಳ ತುಂಬಿರುವೆ
ಸಾವದಾನದಿ ಓದಿ ತಿಳಿ
ಅರಿವಾಗುವುದೆನ್ನ ಮನಸು
ಪ್ರತಿ ಪದದ ಅರ್ಥ ಹುಡುಕದೆ
ಸ್ವಾರ್ಥ ತೊರೆದು ನೋಡು
ಅವೆಲ್ಲ ಹೃದಯದ ಮಾತು
ಹೃದಯ ತೆರೆದು ನೋಡು ಅವೆಷ್ಟು ಸೊಗಸು
ಎದೆಗಿರಿದು ನೋವ ನೀಡದಿರು
ಅವೆಲ್ಲಾ ನನ್ನೊಲವ ಕುಸುಮಗಳು

೦೫೫೪ಪಿಎಂ೨೪೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*


ನೋವಿರುವ ಜಾಗಕ್ಕೇನೇ
ಚುಚ್ಚುವವರು ಜಾಸ್ತಿ
ಅಮಾಯಕರ ಕಂಡರೆ
ತುಳಿಯುವವರು ಜಾಸ್ತಿ
ಆದರ್ಶಗಳ ನಂಬಿದವರಿಗೆ
ಸಂಕಷ್ಟಗಳು ಜಾಸ್ತಿ
ನೆರಳಿಗಂಜುವವರಿಗೇನೇ
ಬೆರಳು ಮಾಡಿ ತೋರುವವರು ಜಾಸ್ತಿ
ದುಷ್ಟ ದುರುಳರನ್ನೇ
ಈ ಜಗವು ನಂಬಿ ಆರಾಧಿಸುವುದು ಜಾಸ್ತಿ
ನೆಟ್ಟಗಿರುವವರನ್ನೇ ಇಲ್ಲಿ
ಬೆಟ್ಟು ಮಾಡುವವರು ಜಾಸ್ತಿ
ಕಪಟಿಗಳ ದಂಡಿಸಲಾಗದಿದ್ದರೂ
ಸತ್ಯವಂತರ ನಿಂದಿಸುವುದೇ ಜಾಸ್ತಿ
ಜೀವವಿರುವತನಕೆ ಒಳ್ಳೆಯವರಿಗೆ ಬೆಲೆಯಿಲ್ಲ
ಜೀವ ಹೋದ ಮೇಲೆ ಕೊಂಡಾಡುವರೆಲ್ಲಾ

೧೧೨೦ಪಿಎಂ೨೪೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
ನಿನ್ನ ಅನುರಾಗದ ತಾಳಕೆ
ಮಿಡಿಯಿತೆನ್ನ ಹೃದಯ
ನಿನ್ನೊಳು ನಾ ಬೆರೆತೆ
ಅದೊಂದು ವಿಸ್ಮಯ
ನಿನ್ನ ತೋಳೊಳಗೆ
ಬಂಧಿಯಾಗಿರಲು ಇಲ್ಲ ಭಯ

೦೭೩೦ಎಎಂ೨೫೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

ಬಾಳ ಗೀತೆಗೆ ನೀನೆ ಸಾಹಿತ್ಯ
ಒಲವ ಹಾದಿಗೆ ನಿನ್ನ ಸಾಂಗತ್ಯ
ನೀ ಜೊತೆಯಿರೆ ಬದುಕೇ ಸುಖಾಂತ್ಯ
ಸುಖ ಜೀವನಕ್ಕೆ ನಾಂದಿಯಾಡಲಿ ದಾಂಪತ್ಯ
ನೆಮ್ಮದಿ ಬದುಕಿಗೆ ಇರಲಿ ನಿನ್ನ ಸಾರಥ್ಯ

೧೧೦೭ಎಎಂ೨೫೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
ಅವಳ ಆ ಮೋಸ
ಬದುಕಿಗೊಂದು ಪಾಠವಾಯ್ತು
ಅತಿಯಾದುದೆಲ್ಲ ವಿಷವಾಗುವುದು
ಎಂಬುದು ದಿಟವಾಯಿತು
ನೊಂದ ಜೀವವೆಂದು ತಂಪೆರೆಯಲು
ಹೋಗಿ ಸಂಕಷ್ಟಕ್ಕೆ ಸಿಲುಕಿಯಾಯ್ತು 

ಕವಿತೆ

ಗೆಲುವನ್ನು ಸಂಭ್ರಮಿದಷ್ಟೇ
ಸೋಲನ್ನು ಸ್ವೀಕರಿಸಬೇಕು
ಸೋತಾಗಲೇ ತಿಳಿಯುವುದು
ನಮ್ಮವರು ಯಾರೆಂದು
ಏಕೆಂದರೆ ಈ ಜಗದಲಿ
ಗೆದ್ದೆತ್ತಿನ ಬಾಲ ಹಿಡಿಯುವವರೇ ಜಾಸ್ತಿ
ಸೋತವರು ಒಬ್ಬಂಟಿಯಾಗುವುದೇ ಜಾಸ್ತಿ
ಗೆಲುವು ಅಭಿಮಾನ ಹೆಚ್ಚಿಸಿದರೆ
ಸೋಲು ಸ್ವಾಭಿಮಾನಿಯಾಗಿಸುತ್ತದೆ

೦೧೨೮ಪಿಎಂ೩೧೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

ಹೊಸತಿಲ್ಲ ಹಳತೇ ಎಲ್ಲ
ಕಾಲಗರ್ಭದ ನಾಗಾಲೋಟದಲ್ಲಿ
ಮನುಜ ಸಂಸ್ಕೃತಿಯ ಆಚರಣೆ ಇದು
ದಿನದರ್ಶಿಕೆಯ ಬದಲಾವಣೆಯಿದು

ಸಮಯದ ಹಿಂದೆ ಓಡುವ ನಮಗೆ
ಅದು ಸಿಕ್ಕದೆ ಕರೆದೊಯ್ಯುತ್ತಿದೆ
ವರುಷಗಳ ಲೆಕ್ಕದಲ್ಲಿ ಮಾತ್ರ
ಎಂದಿಗೂ ಬದಲಾಗದು ಅದರ ಸೂತ್ರ

ನಿಸರ್ಗಕ್ಕೆ  ಇಲ್ಲ ಇದರ ಆಚರಣೆ
ಕೃತಕತೆಯ ವ್ಯರ್ಥ ವಿಜೃಂಭಣೆ
ಪಾಶ್ಚಿಮಾತ್ಯದ ಅಂಧ ಅನುಕರಣೆ
ನಾವೀನ್ಯತೆ ಇಲ್ಲದ ಸಂಭ್ರಮಾಚರಣೆ

ಮದ್ಯ ಮಾದಕಗಳ ಸೇವಿಸಿ
ಮಧ್ಯರಾತ್ರಿಯಲ್ಲಿ ಸ್ವಾಗತಿಸಿ
ದಿನಕಳೆದರೆ ಮತ್ತದೇ ನಿಸ್ಸಾರ ಜೀವನ
ಪುಟ ತಿರುವಿ ಹಾಕುವ ಕಾಲದ ನಿರ್ಗಮನ

ಪ್ರತಿಕ್ಷಣವೂ ಹೊಸತಾದರೂ
ಅದಕ್ಕೆ ಬೇಕಿಲ್ಲ ಇಂಥ ಆಚರಣೆ
ಬದುಕಿನ ಪಯಣಕ್ಕೆ ಸದ್ವಿನಿಯೋಗಿಸಿಕೊಂಡರೆ
ಸಾರ್ಥಕತೆಯ ಅನುಭವದ ಸಂಗ್ರಹಣೆ

ಸಾಗುವ ಹಾದಿಯಲ್ಲಿ ನಗು ತುಂಬಿ
ಸಂಭ್ರಮಿಸುವುದು ಒಳಿತು ಪ್ರತಿಕ್ಷಣ
ಸರಿದು ಹೋಗುವ ವರ್ಷಗಳ ನೆನಪು
ನೆಮ್ಮದಿಯ ಬಾಳಿಗೆ ಆಗಲಿ ಪ್ರೇರಣಾ

೦೨೩೮ಎಎಂ೦೧೦೧೨೦೨೨
*ಅಮುಭಾವಜೀವಿ ಸುಧಾ ಮುಸ್ಟೂರು
*

ಕವಿತೆ

ನನ್ನ ನಾಳೆಯ ಭರವಸೆಯ ನೀನು
ನನ್ನ ಇಂದಿನ ಸ್ಫೂರ್ತಿ ನೀನು
ನನ್ನ ನಿನ್ನೆಯ ಅನುಭವ ನೀನು
ನನ್ನೊಳಗಿನ ಉಸಿರಾಗಿ ಬೆರೆತು
ನನ್ನ ಬೇಕು ಬೇಡಗಳನ್ನೆಲ್ಲ ಅರಿತು
ಬದುಕಿಗೊಂದು ಬೆಲೆ ತಂದೆ ಎಲ್ಲ ಮರೆತು
ಸೋತ ಹಾದಿಯಲ್ಲಿ ಚೇತನವಾಗಿ
ಗೆಲ್ಲುವ ಹಂಬಲಕ್ಕೆ ಬೆಂಬಲವಾಗಿ
ನನ್ನೊಡನೆ ಹೆಜ್ಜೆಯಿಟ್ಟೆ ಅರ್ಧಾಂಗಿಯಾಗಿ

೦೨೩೭ಎಎಂ೦೨೦೧೨೦೨೨
*ಅಮುಭಾವಜೀವಿ ಸುಧಾ*

ಸೋಲುಗಳ ಸರಮಾಲೆ
ಕಂಗೆಡಿಸಿದೆ ಬದುಕನು
ಅಸಹಾಯಕತೆಯ ಸಂಕೋಲೆ
ಆ ಸೋಲಿಗೆ ಬರೆದಿದೆ ಮುನ್ನುಡಿಯನ್ನು

ಪ್ರಾಮಾಣಿಕತೆಯ ಪಂದ್ಯದಲ್ಲಿ
ಗೆಲುವು ಸುಲಭವಿಲ್ಲ
ಏಟಿನ ಮೇಲೆ ಏಟು ಬೀಳಲು
ಗುರಿ ಮುಟ್ಟುವ ಭರವಸೆಯೇ ಉಳಿದಿಲ್ಲ

ನಂಬಿಕೆಯ ನೌಕೆಯೊಳಗೆ ತೂತುಬಿದ್ದು
ಹೂತು ಹೋಗುತ್ತಿದೆ
ವಿಶ್ವಾಸದ ಹಗ್ಗವೇ ನೇಣಿನ ಕುಣಿಕೆಯಾಗಿ
ಬದುಕನ್ನು ಕೊಲ್ಲುತ್ತಿದೆ

ದಾರಿ ತೋರುವ ಕೈಗಳೆಲ್ಲವೂ ಈಗ
ಹಾದಿ ತಪ್ಪಿಸಿ ಆಟ ನೋಡುತ್ತಿವೆ
ಪ್ರೀತಿಯ ನೆರಳು ನೀಡುವ ರೆಂಬೆಗಳು
ಮುರಿದು ನೋವ ನೀಡುತ್ತಿವೆ

ಎಲ್ಲೋ ಒಂದು ಸಣ್ಣ ಆಸೆ ಹುಲ್ಲು ಕಡ್ಡಿಯ
ಆಸರೆ ಸಿಗಬಹುದೆಂದು ಕಾಯುತ್ತಿದೆ
ಪರಾಜಯದ ಕೊಂಡಿ ಕಳಚಿ
ವಿಜಯದ ನಿರೀಕ್ಷೆಯಲ್ಲಿದೆ

೦೨೪೪ಪಿಎಂ೦೨೦೧೨೦೨೨
*ಅಮುಭಾವಜೀವಿ*
ಎತ್ತ ಸಾಗಲಿ ಹೇಳು
ಬದುಕಲ್ಲಿ ಬರೀ ಏಳುಬೀಳು
ಎಷ್ಟು ಸಹಿಸಿದರೂ ಈ ಬಾಳು
ಮುಗಿಯುತ್ತಿಲ್ಲ ಬರೀ ಗೋಳು
ಮುಟ್ಟಿದುದೆಲ್ಲ ಬಂಗಾರವಾಗಲಿ ಎಂಬಾಸೆ
ಎಲ್ಲ ಬರಿಗೈಯಾಯ್ತು ಅದಕೀ ನಿರಾಸೆ

ಸಾಧನೆಯ ಹಾದಿಯಲ್ಲಿ
ಸಹಿಸದವರ ಅಡ್ಡಗಾಲು  
ನೋವುಗಳ ಸರಮಾಲೆಯಲ್ಲಿ
ಸೋಲುಗಳದ್ದೇ ಸಿಂಹಪಾಲು
ಬತ್ತಿಯೇ ಇಲ್ಲ ಬಾಳಲಿ ಭರವಸೆ
ಕಾದಿದೆ ಯಾವಾಗ ಬರುವುದೋ ಆ ಉಷೆ

ಪ್ರಾಮಾಣಿಕನೆಂದು ಹೇಳಿಕೊಳ್ಳುವುದು
ಕೂಡ ಇಲ್ಲಿ ಅಪರಾಧ
ಪ್ರತಿ ಹೆಜ್ಜೆಗೂ ಎದುರುಗೊಳ್ಳುವುದು
ಎಲ್ಲರ ಇಲ್ಲಿ ವಿರೋಧ
ಈ ಜಗದಿ ಇಲ್ಲ  ಒಂದಿನಿತೂ ಪ್ರಶಂಸೆ
ಉಳಿದಿರುವುದೊಂದೇ ಬದುಕಿನ ಖುಲಾಸೆ

೧೦೩೫ಪಿಎಂ೦೨೦೧೨೦೨೧
*ಅಮುಭಾವಜೀವಿ*


ಮೂಡಣದ ಅಂದದ ಹಕ್ಕಿ
ಕಾಲದ ರೆಕ್ಕೆಯ ಬಿಚ್ಚಿ
ಹಾರುತ ಬರುತಲಿದೆ
ಬೆಳಕಿನ ಕಿರಣವು ಸೂಸಿ
ಜಗವನೆಲ್ಲ ಪ್ರಕಾಶಿಸಿ
ಮೇಲೇರುತ ಬರುತಲಿದೆ

ಖಗ ಮೃಗಗಳ ಎಚ್ಚರಿಸಿ
ಗಿಡಮರಗಳ ನೇವರಿಸಿ
ಮೌನ ಭಾಷೆಯ ಸಂದೇಶ ಹೊತ್ತು ತರುತ್ತಿದೆ
ಮಂಜಿನ ಹನಿಗಳಲಿ ಹೊಳೆದು
ಸುಮಗಳ ಚೆಲುವಲ್ಲಿ ನಲಿದು
ಸೌಂದರ್ಯಕೆ ಹೊಸ ಮೆರಗು ತಂದಿದೆ

ಬೆಳಗಿನ ಚುಮುಚುಮು ಚಳಿಗೆ
ಬಿಸಿಯನು ತಾಕಿಸೋ ಸುಂದರ ಘಳಿಗೆ
ಮನಮೋಹಕ ಮುಂಜಾನೆ ಈ ದೀವಿಗೆ
ನವನವೋನ್ಮೇಷಶಾಲಿನಿ
ಪ್ರಕೃತಿ ಇದು ಅಮೃತವರ್ಷಿಣಿ
ಹಕ್ಕಿ ಕೊರಳ ಮಧುರನಾದ ವಾಹಿನಿ

ಬೆಳಕಿದು ಬದುಕಿನ ಅವಕಾಶ
ಸಾರಿದೆ ನವಚೇತನ ಸಂದೇಶ
ಭಾಸ್ಕರನಾಗಮನ ನಿತ್ಯ ವಿಶೇಷ
ಕವಿಮನ ಹಾಡಿದೆ ಕವಿತೆ
ಮರೆತು ಎಲ್ಲ ಚಿಂತೆ
ತೊಡುತ ಕಾಯಕ ದೀಕ್ಷೆ

೦೭೫೭ಎಎಂ೦೩೦೧೨೦೨೨
*ಅಮುಭಾವಜೀವಿ*

#ಅಮುಭಾವದೂಟ ೨೧೨

*ರುಬಾಯಿ*

ಬದುಕನ್ನು ಸದಾ ಪ್ರೀತಿಸು
ಆಗಲೇ ಕಾಣುವೆ ಸೊಗಸು
ನಿರಾಸೆ ಬೇಡವೇ ಬೇಡ
ಸಮಚಿತ್ತದಿ ನೀ ಪರೀಕ್ಷೆ ಎದುರಿಸು

೦೨೨ಪಿಎಂ೦೩೦೧೨೦೨೨
*ಅಮುಭಾವಜೀವಿ ಮುಸ್ಟೂರು*

ಈ ಕತ್ತಲು ಪ್ರಪಂಚ ಕಂಡಷ್ಟೂ ಕೌತುಕ
ಬೆಳದಿಂಗಳ ತಂಗಾಳಿ ರಾತ್ರಿ ಮನಮೋಹಕ
ತಾರೆಗಳ ಹೊಳಪು ಈ ಇರುಳ ತಂಪು
ಮೈಮನಗಳಿಗೆ ಬಲು ಹಿತವಪ್ಪು
ನೀರವ ಮೌನಕ್ಕೆ ಶರಣಾದ ಪ್ರಕೃತಿಗೆ
ದಣಿವು ನೀಗಿಸಿಕೊಳ್ಳಲಿಷ್ಟು ವಿಶ್ರಾಂತಿ
ನಿದ್ರೆಗೆ ಜಾರುವ ಮುನ್ನ ರಸಿಕ ಮನಸ್ಸುಗಳಿಗೆ
ಪ್ರಶಸ್ತ ತಾಣ ಈ ಇರುಳ ಗಾನ
ಆಗಸಕ್ಕೂ ಮಿನುಗುವ ನಕ್ಷತ್ರಗಳ ಸಿಕ್ಕಿಸಿಕೊಂಡು
ತೇಲುತ ಬೀಗುವ ಮಹಾ ಸಂಭ್ರಮ
ಕರಿ ಛಾಯೆಯ ಒಡಲಲ್ಲಿ ತುಂಬಿಕೊಂಡಿದೆ
ಎಷ್ಟೊಂದು ಅದ್ಭುತಗಳ ಸಮಾಗಮ

೧೦೩೩ಪಿಎಂ೦೩೦೧೨೦೨೨
*ಅಮುಭಾವಜೀವಿ ಮುಸ್ಟೂರು*
 
#ಅಮುಭಾವದೂಟ ೨೧೪

ಸ್ವರದವ್ವ*

*ಅ* ಮ್ಮನ ಮಡಿಲಲಿ ಕೂತು
*ಆ* ನಂದದಿ ಕೈತುತ್ತು ತಿನ್ನುತ
*ಇ* ರುಳ ಬಾಂದಣದಿ ಮಿನುಗುವ
*ಈ* ತಾರೆಗಳ ಜೊತೆಗೂಡಿ
*ಉ* ತ್ಸಾಹದಿಂದ ನಲಿಯುತ
*ಊ* ಟ ಸವಿಯುವ ಆ
*ಋ* ಣಭಾರ ಹೊತ್ತ ತಾಯ
*ಎ* ದೆಯ ಹಾಲು ಕುಡಿದ ಕಂದನ
*ಏ* ಳಿಗೆಗಾಗಿ ದುಡಿವ ಜೀವ
*ಐ* ಕ್ಯತೆಯ ಸಂಸ್ಕಾರ ಕಲಿಸಿ
*ಒ* ಳ್ಳೆಯ ಹಾದಿಲಿ ನಡೆಸಿ
*ಓ* ದು ಬರಹದುಡುಗೊರೆ ನೀಡಿ
*ಔ* ನ್ನತ್ಯದ ಕನಸು ಬಿತ್ತಿ ಹೋದ
*ಅಂ* ತರಂಗದ ಸ್ಪೂರ್ತಿ ತಾಯಿ
*ಅ:* ‍ಹಂಕಾರವಿಲ್ಲದಂತೆ ಬೆಳೆಸಿದ ದೈವ

೦೬೧೮ಪಿಎಂ೦೪೦೧೨೦೨೨
*ಅಮುಭಾವಜೀವಿ ಮುಸ್ಟೂರು*