Tuesday, November 14, 2023

ಲೇಖನ

*ಮಗು ಮಾನವ ಕುಲದ ಕುಸುಮ*

ಮಗು ಮಾನವ ಕುಲದ ಚಂದದ ಕುರುಹು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಭವಿಷ್ಯದ ಮನುಕುಲಕೆ ಮುನ್ನುಡಿ. ಮಗುವಿನ ಬಾಲ್ಯವನ್ನು ಅತ್ಯಂತ ಸಂಸ್ಕಾರಯುತವಾಗಿ, ಅಷ್ಟೇ ಜವಾಬ್ದಾರಿಯುತವಾಗಿ ರೂಪಿಸುವ ಹೊಣೆಗಾರಿಕೆ ತಂದೆ ತಾಯಿ ಪೋಷಕರು ಹಾಗೂ ಶಿಕ್ಷಕರದ್ದಾಗಿದೆ. 

      ಪ್ರತಿಯೊಂದು ಮಗುವೂ ಕೂಡ ಅಗಾಧ ಪ್ರತಿಭೆಯನ್ನು ತನ್ನೊಳಗೆ ಇರಿಸಿಕೊಂಡೇ ಜನ್ಮ ಪಡೆದಿರುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸೂಕ್ತ ವ್ಯಕ್ತಿ ಸಿಕ್ಕಾಗ ಮಾತ್ರ 
ಆ ಪ್ರತಿಭೆ ಅನಾವರಣಗೊಳ್ಳುತ್ತದೆ. ಇಲ್ಲವಾದಲ್ಲಿ ಅದು ಅಲ್ಲೇ ಕಮರಿಹೋಗುತ್ತದೆ. ಭವಿಷ್ಯದ ಮನುಕುಲದ ಭವಿಷ್ಯ ಏನಾಗಬೇಕು ಎಂಬುದರ ಪರಿಣಾಮ ಇಂದು ನಾವು ಮಕ್ಕಳನ್ನು ಬೆಳೆಸುವ ರೀತಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಎಲ್ಲರೂ ಸೇರಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಮೌಲ್ಯಯುತ ಬದುಕನ್ನು ಕಟ್ಟಿಕೊಡಬೇಕಾದುದು ಇಂದಿನ ಅಗತ್ಯ ಮತ್ತು ಅನಿವಾರ್ಯ. ನಮ್ಮ ಜೀವನ ಮೌಲ್ಯಯುತವಾಗಿದ್ದಾಗ ಮಾತ್ರ ಮಕ್ಕಳು ಅದನ್ನು ಅನುಸರಿಸುವಂತೆ ನಾವು ಮಾರ್ಗದರ್ಶನ ಮಾಡಬಹುದು. ನಾವೇ ಹಾದಿ ತಪ್ಪಿದರೆ ಮಕ್ಕಳು ಭವಿಷ್ಯದ ಗತಿಯನ್ನೇ ಬದಲಿಸಿಕೊಂಡು ಬಿಡುವ ಅಪಾಯ ಇದೆ. 

    '' ಮಕ್ಕಳಿಸ್ಕೂಲ್ ಮನೇಲಲ್ವೇ"" ಎಂಬ ಮಾತಿನಂತೆ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಇಲ್ಲಿ ಕಲಿಯುವ ಬಾಲ್ಯದ ಅನುಭವಗಳೇ ಮೇರು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ಇಲ್ಲಿನ ಕೊರತೆಗಳು ಒಮ್ಮೊಮ್ಮೆ ಮಗುವನ್ನು ಹಾದಿ ತಪ್ಪಿಸುವ ಅಪಾಯವಿದೆ. ಹಾಗಾಗಿ ಪ್ರತಿಯೊಬ್ಬರೂ ಆ ಕೊರತೆಯನ್ನು ನಿವಾರಿಸಲು, ಮಕ್ಕಳ ಗುರಿಯ ಗತಿಯನ್ನು ಅವಲೋಕಿಸಿ ಅದಕ್ಕೆ ಸೂಕ್ತವಾದ ಮಾರ್ಗದರ್ಶನ ಮಾಡಬೇಕು. ಹೆತ್ತವರು ,ಪೋಷಕರು, ನೆರೆಹೊರೆ, ಸಮಾಜದ ಪ್ರತಿಯೊಂದು ಹಂತದಲ್ಲೂ ಅವರನ್ನು ತರಬೇತಿಗೊಳಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ. 

          ಶಾಲಾ ಪರಿಸರ ಸ್ನೇಹಮಯವಾದ, ಆಹ್ಲಾದಕರವಾದ, ಆಕರ್ಷಣೀಯವಾಗಿದ್ದಾಗ ಮಾತ್ರ ಮಗು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುತ್ತದೆ. ಭಯದ ವಾತಾವರಣ, ಅಸುರಕ್ಷತೆ, ಅತಿಯಾದ ಶಿಸ್ತು ಅವರ ಮನಸನ್ನು ಘಾಸಿಗೊಳಿಸಿದರೆ ಆ ಮಗು ಖಂಡಿತ ಉತ್ತಮ ವ್ಯಕ್ತಿ ಆಗಲ್ಲ. ಮಕ್ಕಳು ತರಗತಿಯ ಚಟುವಟಿಕೆಗಳಲ್ಲಿ ಸ್ವಾಭಾವಿಕವಾಗಿ ಮತ್ತು ಸ್ವಚ್ಚಂದವಾಗಿ ಕಲಿಯುವಂತಹ ವಾತಾವರಣ ಕಲ್ಪಿಸಿ ಕೊಡಬೇಕಾದ ಹೊಣೆಗಾರಿಕೆ ಶಿಕ್ಷಕರು ಹಾಗೂ ಸಂಬಂಧಿತ ವ್ಯವಸ್ಥೆಯ ಮೇಲೆ ಇದೆ. ಆದ್ದರಿಂದ ಇಲ್ಲಿ ಯಾರೂ ಯಾವ ಕಾರಣಕ್ಕೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ತುಂಬಾ ಶ್ರದ್ಧೆಯಿಂದ ನಿಭಾಯಿಸಬೇಕು. ಮಕ್ಕಳ ಬಾಲ್ಯ ಅರಳಬೇಕೇ ಹೊರತು ಕೆರಳಬಾರದು, ಕೊರಗಬಾರದು. ಆ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಯ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಬೇಕು. 

            ಬಾಲ್ಯದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದು. ಅದು ಹೆಣ್ಣಿರಲಿ, ಗಂಡಿರಲಿ  ಮಗುವಿನ ಬಾಲ್ಯವನ್ನು ಕಸಿದುಕೊಳ್ಳುವ, ಕಮರಿಸುವ,ಅವರ ಆಸೆಆಕಾಂಕ್ಷೆಗಳಿಗೆ ತಣ್ಣೀರೆರಚುವ, ಆಸಕ್ತಿಯನ್ನು ಕುಂದಿಸುವ ಕೆಲಸ ಆಗಬಾರದು. ಎಳವೆಯಲ್ಲಿಯೇ ಮಗುವಿನ ಆಸಕ್ತಿ ಅಭಿರುಚಿಗಳನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಒದಗಿಸಿದ್ದೇ ಆದರೆ ಈ ಸಮಾಜಕ್ಕೆ ಒಬ್ಬ ಅದ್ಬುತ ವ್ಯಕ್ತಿಯನ್ನು ಕೊಡುಗೆಯಾಗಿ ನೀಡುವುದರಲ್ಲಿ ಅನುಮಾನವಿಲ್ಲ. ಮಕ್ಕಳಿಗೆ ಸೋಲುಗಳನ್ನು ಗೆಲುವಾಗಿಸಿಕೊಳ್ಳುವ, ಅವಮಾನಗಳನ್ನು ಅಭಿಮಾನವಾಗಿಸಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಬೇಕು. ಈ ಸಮಾಜಕ್ಕೆ ತನ್ನ ಅಗತ್ಯ ಏನು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ನೋವು,ದುಃಖ, ಕಷ್ಟ, ಹಿಂಸೆ, ಸೋಲು ,ಅವಮಾನ, ಅಸಮಾಧಾನ, ಅಸಮಾನತೆ , ಅಮಾನವೀಯತೆ ಮುಂತಾದ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು, ಅವುಗಳನ್ನು ತನ್ನ ಬದುಕಿನಲ್ಲಿ ಹೇಗೆ ದಾಟಿ ಮುಂದೆ ಹೋಗಬೇಕೆಂಬುದನ್ನು ಕಲಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. 

        ಮಕ್ಕಳು ಮಾನವ ತೋಟದ ಸುಂದರ ಕುಸುಮಗಳು. ಅಕ್ಕರೆಯಿಂದ ಅವನ್ನು ಸಂರಕ್ಷಿಸುವ,ಸಂಸ್ಕಾರಯುತವಾಗಿ ಬೆಳೆಸುವ, ಬೆಂಬಲಿಸುವ ಮನಸ್ಥಿತಿ ನಮ್ಮದಾಗಬೇಕು. ಹೂವು ಬಾಡದಂತೆ ಸದಾ ತನ್ನ ತಾಜಾ ತನವನ್ನು ಜಗತ್ತಿಗೆ  ಉಣಬಡಿಸಿ ಉಲ್ಲಸಿತವಾಗಿರುವಂತೆ ನೋಡಿಕೊಳ್ಳಬೇಕು. ಕೀಳುವ ಕೈಗಳಿಂದ ರಕ್ಷಿಸಬೇಕು. ಧಮನಗೈಯುವ ವ್ಯವಸ್ಥೆಯಿಂದ ದೂರವಿರಿಸಬೇಕು. ಸಾಮಾಜಿಕ ಪಿಡುಗುಗಳು ಬಾಧಿಸದಂತೆ ಎಚ್ಚರಿಕೆ ವಹಿಸಬೇಕು. ಆಗ ಮಾತ್ರ ಮನಕುಲ ಸುಭಿಕ್ಷವಾಗಿ, ಸುಭದ್ರವಾಗಿ, ಸಂತೃಪ್ತಿಯಿಂದ ಬದುಕಲು ಸಾಧ್ಯವಾಗದು. ಎಲ್ಲಾ ಮಕ್ಕಳೂ ಆರೋಗ್ಯವಂತರಾಗಿ, ಸುಶಿಕ್ಷಿತರನ್ನಾಗಿ ಮಾಡಿ ಸಮಾಜದ ಅಗತ್ಯಗಳಿಗೆ ತಕ್ಕಂತೆ ರೂಪಿಸಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯ. ಈ ಸಂದರ್ಭದಲ್ಲಿ ಅಂತಹ ಮಹೋನ್ನತ ಕಾರ್ಯ ನಿರ್ವಹಿಸುವ ಮೂಲಕ ಮನುಕಲದ ಧಾವಂತದ ಬದುಕಿನಲ್ಲಿ ದಾರಿ ತಪ್ಪಿ ದಂಗುಬಡಿಸುವ ಸ್ಥಿತಿ ನಿರ್ಮಾಣ ಆಗದಂತೆ ಎಚ್ಚರ ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. 

0417ಎಎಂ14112019
*ಮಕ್ಕಳ ದಿನಾಚರಣೆಯ ಶುಭಾಶಯಗಳೊಂದಿಗೆ*
*ಅಮು ಭಾವಜೀವಿ*

No comments:

Post a Comment