ಬಂತು ಬಂತು ರಾಜ್ಯೋತ್ಸವ
ಬಡಿದೆಬ್ಬಿಸಲು ಸ್ವಾಭಿಮಾನವ
ಹೆಮ್ಮೆಯ ನಾಡಿನ
ನಲ್ಮೆಯ ನುಡಿಯ
ಎಲ್ಲೆಡೆ ಸಾರುವ
ಅಭಿಮಾನದ ಉತ್ಸವ
ಸಾಹಿತ್ಯದ ಕುಸುರಿಯಲಿ
ಕಲೆಯ ಬಸಿರಿನಿಂದ
ಹುಟ್ಟಿದ ಸಂಸ್ಕೃತಿಗೆ
ಹಬ್ಬದ ಕಳೆ ಬಂದಿದೆ
ಜನಪದದ ಗೂಡಿನಲ್ಲಿ
ವಚನಗಳ ಹಾಡಿನಲ್ಲಿ
ನವ್ಯನವೋದಯ ದಲಿತ
ಬಂಡಾಯ ಸಾಹಿತ್ಯಗಳ ಕುಣಿತ
ಮಲೆನಾಡ ಹಚ್ಚ ಹಸಿರಿನಲಿ
ಬಯಲು ಸೀಮೆಯ ಕರಿ ಮಣ್ಣಲಿ
ಅನ್ಯರ ದಾಳಿಗೂ ಜಗ್ಗದೆ
ಕನ್ನಡ ನುಡಿ ತೇರು ಮುನ್ನುಗ್ಗಿದೆ
ನಗರ ಸಂಸ್ಕೃತಿಯ ಆಕ್ರಮಣಕ್ಕೆ
ಗ್ರಾಮೀಣ ಸೊಗಡಿನ ಸಂಕ್ರಮಣ
ಎಲ್ಲ ಸಹಿಸಿ ಭರವಸೆ ಮೂಡಿಸಿ
ಶತಶತಮಾನದಿ ಉಳಿದು ಬಂದಿದೆ
ಕನ್ನಡಕ್ಕಾಗಿ ಎತ್ತಿದ ಕೈ ಕಲ್ಪವೃಕ್ಷ
ಕನ್ನಡದಿ ಬದುಕ ಕಟ್ಟಿಕೊಂಡವನೇ ದಕ್ಷ
ಬನ್ನಿರಿ ಬನ್ನಿರಿ ಎಲ್ಲರೂ ಸೇರಿರಿ
ಕನ್ನಡ ತಾಯಿಗೆ ಜೈ ಎನ್ನಿರಿ
10 56 ಎಎಂ 31 10 2014
*ಅಮುಭಾವಜೀವಿ ಮುಸ್ಟೂರು*
ನನ್ನ ನಾಡು ನನ್ನ ನುಡಿ
ನನ್ನ ಬಾಳ ಮುನ್ನುಡಿ
ಭಾಷೆ ಕೊಟ್ಟ ಭರವಸೆ
ನನಗೆ ತೋರಿತು ಹೊಸ ದಿಸೆ
ಕಬ್ಬಿಗರ ನುಡಿಗಳೆ ದಾರಿದೀಪ
ಕನ್ನಡಮ್ಮನೊಲವೇ ದಿವ್ಯ ರೂಪ
ನದಿ ಕಾನನ ಗುಡಿ ಗೋಪುರ
ಹೆಸರ ಪಡೆದಿವೆ ಶಿಖರದೆತ್ತರ
ಮಣ್ಣ ಕಂಪು ನುಡಿಯ ಇಂಪು
ನಾಡಿನಲ್ಲಡೆ ತುಂಬಿದೆ
ಕಪ್ಪು ಮಣ್ಣು ಬಗೆಬಗೆ ಹಣ್ಣ
ಈ ತಾಯಿ ತನ್ನ ಮಕ್ಕಳಿಗೆಲ್ಲ ನೀಡಿದೆ
11 50 ಪಿಎಂ 31.10.2014
#ಅಮುಭಾವದೂಟ 152
ಮಯೂರನ ಸ್ವಾಭಿಮಾನದ ನಾಡು
ನೃಪತುಂಗನ ನೆಚ್ಚಿನ ಬೀಡು
ಪಂಪನ ಪರಮಾಪ್ತತೆಯ ಗೂಡು
ಈ ನಮ್ಮ ಕನ್ನಡನಾಡು
ರಾಜ ಮಹಾರಾಜರು ಕಟ್ಟಿದ
ಅಭಿಮಾನದ ಕರುನಾಡು
ಕವಿಪುಂಗವರ ಲೇಖನಿಯಲಿ
ಮೆರೆದ ಕನ್ನಡದ ಸೊಗಡು
ಪುಲಿಕೇಶಿಯ ಸಾಹಸಕೆ
ಹೆಸರಾದ ಹೊನ್ನಾಡು
ಕೃಷ್ಣ ದೇವರಾಯರು ಕಟ್ಟಿದ
ಕಲೆಸಾಹಿತ್ಯ ಸಮೃದ್ಧಿಯ ಬೀಡು
ನಿತ್ಯಹರಿದ್ವರ್ಣದ ಪ್ರಕೃತಿಯ
ಸ್ವರ್ಗ ನಮ್ಮ ಈ ಮಲೆನಾಡು
ನದಿ ನೀರ್ಝರಿಗಳು ತುಂಬಿತುಳುಕುವ
ಪರಿಶುದ್ಧ ಪ್ರೀತಿ ಹಂಚುವ ಸಿರಿನಾಡು
ಕಣ್ತುಂಬುವ ಕರಾವಳಿಯ
ಮುತ್ತು ಮಾಣಿಕ್ಯದ ಚೆನ್ನಾಡು
ಯಕ್ಷಗಾನ ಬಯಲಾಟದಂತಹ
ಗಂಡು ಕಲೆ ನೃತ್ಯದ ಹೆಗ್ಗೂಡು
ದಾಸರು ಶರಣರು ಸಂತರು
ಜನಿಸಿದ ಸುಸಂಸ್ಕೃತರ ತಾಯ್ನಾಡು
ಹಳೆ ನವೋದಯ ನವ್ಯ ಕಾವ್ಯ
ಪರಂಪರೆಯ ಶ್ರೀಗಂಧದ ಬೀಡು
ಸಂಗೀತ ಸಾಹಿತ್ಯ ಸಂಸ್ಕೃತಿಗಳ
ಸಮ್ಮಿಲನದ ನಲುನಾಡು
ಮಾಹಿತಿ ತಂತ್ರಜ್ಞಾನದ
ವಿಜ್ಞಾನ ಸುಜ್ಞಾನದ ಸವಿನಾಡು
ಸಿರಿಪಗ್ನಡನಾಡಿಲಿ ಹುಟ್ಟಿದ ನಾವೇ ಧನ್ಯರು
ಕರುಣೆ ಮಮತೆ ಮಾನವೀಯತೆಯ ತವರು
0400ಎಎಂ01112021
*ಅಪ್ಪಾಜಿ ಸುಧಾ ಮುಸ್ಟೂರು*
ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ
No comments:
Post a Comment