Saturday, February 19, 2022

ಹಾಯ್ಕು

*ಹಾಯ್ಕು*

ಪಯಣವಿದು
ಸಾಗಲಿ ಮುನ್ನಡೆಯೆ
ಯಶವಿಹುದು

ಅಂಜದೆ ಅಡಿ
ಇಟ್ಟು ಸಾಗು ಪಯಣ
ನಿಲ್ಲಿಸದಿರು

ಸರಿ ಎನಿಸಿ
ಗುರಿ ಗಮನಿಸು ನೀ 
ಗಮ್ಯ ಪಯಣ

ರವಿಯು ಕೂಡ 
ಪಯಣಸಲು ನೀನು 
ನಡೆ ಹಾದೀಲಿ

ಇರುಳ ನಿತ್ಯ 
ಪಯಣದ ಫಲವು
ದಿನದಾರಂಭ

ಹಗಲು ಕೂಡ 
ಪಯಣ ನಿಲ್ಲಿಸದು
ಸಂಶಯವೇಕೆ

1019ಪಿಎಂ19022022
*ಅಮುಭಾವಜೀವಿ ಮುಸ್ಟೂರು*

Thursday, February 17, 2022

ಕವನ

ಬೆಳದಿಂಗಳು ಚೆಲ್ಲಿದ ಈ ಇರುಳು
ಬೆಳಗುವಂತೆ ನನ್ನ ಹೊಂಗನಸುಗಳು
ಅದಕ್ಕೆಲ್ಲ ಸ್ಪೂರ್ತಿ ನಿನ್ನೀ ಹೊಳೆವ ಕಂಗಳು
ನೀನಿರದೆ ಬರಿದು ನನ್ನ ಈ ಬಾಳು

ಅಂತರಂಗದ ಭಾವನೆಗಳಿಗೆಲ್ಲ
ಜೀವತುಂಬಿದ ಅಕ್ಷರವಾದವಳು
ನೋವಿಗೆ ಮಿಡಿದು ನಲಿವನ್ನು ತಂದ
ಸಂಗಾತಿ ನೀ ನನ್ನ ಬಾಳಿಗೆ ಬೆಳಕಾದವಳು

ಎದೆ ಚಿಪ್ಪಲಿ ಹದವಾಗಿದ್ದ
ಪ್ರೀತಿಯ ಮುತ್ತಿನ ಹಾರವ ಪೋಣಿಸಿ
ಕೊರಳಲ್ಲಿ ಧರಿಸಿ ಹಗಲಿರುಳು ಕಾಯ್ವಳು
ಆಪ್ತರಕ್ಷಕಿ ಅಭಿಸಾರಿಕೆ ಇವಳು

ಪ್ರಕೃತಿ ಗುಣದ ಬಲು ಸಂಪನ್ನೆ
ಮನದಿಚ್ಛೆ ಅರಿಯುವ ಮನದನ್ನೆ
ಬಾಳಿನ ರಥಕೆ ಸಾರಥಿ ಇವಳು
ಒಲವಿನ ಮೊಗದಲ್ಲಿ ಹೊಳೆವ ಕಂಗಳು

ಷರತ್ತುಗಳಿಲ್ಲದೆ ಒಲಿದು ಬಂದವಳು
ಕಷ್ಟ ಸುಖದಲ್ಲೂ ಹೆಜ್ಜೆಗೆ ಹೆಜ್ಜೆ ಇಟ್ಟವಳು
ತಾಯಿಲ್ಲದಿದ್ದರೂ ನನಗೆ ತಾಯೊಲವ ಕೊಟ್ಟವಳು
ತಬ್ಬಲಿ ಭಾವದಿಂದ ಹೊರತಂದ ದೇವತೆಯಿವಳು

ಸೋಲನ್ನು ಗೆಲುವಾಗಿಸಿದ ಸಾಧಕಿ ನನ್ನವಳು
ಸಾವನ್ನು ಗೆಲ್ಲುವ ಆತ್ಮವಿಶ್ವಾಸ ತುಂಬಿದವಳು
ಬಡತನದಲ್ಲೂ ನಗುವ ಕಲೆ ಕಲಿಸಿದವಳು
ಈ ಬಡವನಲ್ಲ ಸಿರಿವಂತನ ಹುಟ್ಟುಹಾಕಿದಳು

ಜೀವ ಜೀವನವೆಲ್ಲ ಮೀಸಲು ಅವಳಿಗೆ
ಬೊಗಸೆ ತುಂಬ ಒಲವ ನೀಡುವೆ ಕೊನೆವರೆಗೆ

1041ಪಿಎಂ17022022
 *ಅಮುಭಾವಜೀವಿ ಮುಸ್ಟೂರು*

ಕವಿತೆ

ಬಾಳ ಸಾಗರದ 
ತೀರದಾಸೆಗಳ ಮೇಲೆ 
ನಗುವಿನಲೆಯಲಿ ತೇಲುವ
ನಿನ್ನ ನೆನಪು ಕಾಡಿದೆ 

ಎದೆಯ ನೆಲದ ಮೇಲೆ 
ತಂಗಾಳಿ ತೀಡಿದಾಗ
ಹಾರಾಡುವ ಮುಂಗುರುಳ
ನೆನಪು ಕಾಡಿದೆ 

ಬಳುಕೋ ಬಳ್ಳಿಯ ಚೆಲುವೆ 
ನಿನಗೇಕೆ ಹೇಳು ಬಂಗಾರದೊಡವೆ
ಮುಸ್ಸಂಜೆಯ ಹೊಂಗಿರಣಕೆ
ನಿನ್ನ ನೆನಪು ಕಾಡಿದೆ 

ನಿನ್ನ ಪಾದಸ್ಪರ್ಶಕಾಗಿ
ಓಡೋಡಿ ಬರುವ ತೆರೆಗಳ ಸಾಲಲಿ
ಸೇರಿಹೋದ ಮರಳ ಕಣಕೂ
ಮಧುರ ನಿನ್ನ ನೆನಪು ಕಾಡಿದೆ 

ಹರೆಯದ ಮಧು ನೀನು
ಕರೆಯದೇ ಬರದಿರದು ದುಂಬಿಯೊಂದು
ನಿನ್ನಂದ ಕಂಡು ಮೈಮರೆತಿರಲು
ನಿನ್ನ ನೆನಪು ಕಾಡಿದೆ 

ಸಾಗರ ಗರ್ಭದ 
ಮುತ್ತುಗಳ ರಾಶಿ
ಕಾಯುವೆ ಕಾವಲುಗಾರನಾಗಿ ಅಹರ್ನಿಶಿ
ಆ ದಂತಪಂಕ್ತಿಯ ಹೊಳಪಲ್ಲಿ
ನಿನ್ನ ನೆನಪು ಕಾಡಿದೆ 

ನೀನೊಂದು ಬಾಡದ ಪುಷ್ಪ 
ನಿನ್ನಂದ ನಿತ್ಯ ಬೆಳಗೋ ಬೆಳ್ದಿಂಗಳ ದೀಪ
ನೆನಪುಗಳ ಚಿತ್ತಾರ ಬಿಡಿಸಿದ 
ಒಲವಿನ ಅಧಿದೇವತೆ ನಿನಗೆ ಶರಣು
0245ಪಿಎಂ17022022
*ಅಮುಭಾವಜೀವಿ ಮುಸ್ಟೂರು*

Tuesday, February 15, 2022

ಕವಿತೆ

ಕಳೆದುಹೋದಳು ನಲ್ಲೆ
ಬಾಡಿದಂತೆ ಮೊಗ್ಗು ಮಲ್ಲೆ
ಏಕೆಂದು ಅರಿಯುವ ಮೊದಲೇ
ಮರೆಯಾದಳು ತಂದು ವಿರಹ ಜ್ವಾಲೆ

ಮೊದಲೆಲ್ಲ ಹೀಗಿರಲಿಲ್ಲ ಅವಳು
ಅದು ಏಕೆ ಹೀಗಾಗಿ ಹೋದಳು
ಪ್ರೀತಿಯ ಅಗಾಧ ದೇವತೆ
ಎಲ್ಲಿ ಕಳೆದುಹೋದಳು ಅದೇ ಚಿಂತೆ

ಒಲವ ಒಡನಾಡಿಯಾಗಿ ಬಂದು
ಒಡಲ ಕುಡಿಗಳ ತಂದು
ಒಂದು ಬೇಡಿಕೆ ಇಡದಂತೆ ಬಾಳಿದವಳು
ಇಂದೇಕೆ ಹೀಗೆ ಕಾಣೆಯಾದಳು

ನಂಬಿಕೆಯ ಮಹಾಮೇರು
ವಿಶ್ವಾಸದ ಅಂತಃಸತ್ವ ಬೇರು
ಪ್ರೀತಿಯ ಸೊಗಸಾದ ಸೂರು
ಸತಿ ಇವಳು ನನ್ನ ಬಾಳುಸಿರು

ಕಳೆದುಹೋಗದಿರು ಬಾಳ ಗೆಳತಿ
ನೀನಿರದೆ ನನಗಿರದು ಸದ್ಗತಿ
ಎಡವಿದವನ ಮೇಲೆ ಎದುರಿಸುವಸ್ತ್ರ ಬೇಡ
ನೀನಿರದ ಬದುಕು ನನಗೂ ಬೇಡ

ನಿನ್ನ ಮುಂದೆ ನನಗಿಲ್ಲ ಯಾವ ಘನತೆ
ನೀನಿರದೆ ಬೆಳಗದು ನನ್ನ ಬಾಳ ಹಣತೆ
ಈ ಪಾಪಿಯ ಮನ್ನಿಸಿ ತೋರು ಮಮತೆ
ನೀನೇ ನನ್ನ ಒಲವ ಬತ್ತದ ಒರತೆ

0758ಎಎಂ16022022
 *ಅಮುಭಾವಜೀವಿ ಮುಸ್ಟೂರು*

ಕವಿತೆ

ನೀ ಹಚ್ಚಿದ ಒಲವ ಹಣತೆ
ಏಕೋ ನನ್ನ ಸುಡುತ್ತಿದೆ
ಬಯಸದೇ ಬಂದ ನೀನು
ನೋವಿನಾಳಕೆನ್ನ ತಳ್ಳಿದೆ

ನೀನಾಗೇ ಬಳಿ ಬಂದೆ
ಪ್ರೀತಿಯ ಪ್ರಸ್ತಾಪಿಸಿದೆ
ಬೇಡವೆಂದರೂ ಮತ್ತೆ ಮತ್ತೆ ಬಯಸಿದೆ
ಲೋಕ ನನ್ನ ದ್ವೇಷಿಸುವಂತೆ ನೀ ಮಾಡಿದೆ

ಅಂತರಂಗದೊಳಗೆ ಅದ್ಯಾವ ವಿಷ ತುಂಬಿ
ನನ್ನ ವಶಮಾಡಿಕೊಂಡೆ ನೀನು
ಪ್ರಶಾಂತವಾಗಿದ್ದ ನನ್ನ ಬಾಳಿನೊಳಗೆ
ಅಶಾಂತಿಯ ತುಂಬಿ ಹೋದೆ ನೀನು

ಪದೇ ಪದೇ ನಾ ಹೇಳುತ್ತಿದ್ದ ಮಾತು ನಿಜವಾಯ್ತು
ಹೂವಿಂದ ಹೂವಿಗೆ ಹಾರುವ ದುಂಬಿ ನೀನೆಂದು
ಮಧುವ ಇರುವ ಭರದಲ್ಲಿ ನೀನು
ಬದುಕನ್ನೇ ಬರ್ಬರವಾಗಿ ಕೊಂದು ಹೋದೆ

ನಿನ್ನ ಈ ಮೋಸದಾಟಕ್ಕೆ
ನಾ ಬಲಿಯಾದದ್ದು ವಿಪರ್ಯಾಸ
ನಿನ್ನ ನಾಟಕದ ಮಾತುಗಳಿಗೆಲ್ಲ
ಕಿವಿಗೊಟ್ಟು ನಾ ಕಳೆದುಕೊಂಡೆ ಸಂತಸ

ಸದ್ಯ ನಿನ್ನ ಸುಳಿಗೆ ಸಿಕ್ಕು
ನಾ ಸರ್ವನಾಶವಾಗಲಿಲ್ಲ
ನಿನ್ನ ದುರ್ನಡತೆಗಳಿಗೆ ಶಿಕ್ಷೆಯಾಗಲಿ
ನೊಂದ ನನ್ನ ಹೃದಯಕ್ಕೆ ಶಾಂತಿ ಸಿಗಲಿ

1115ಪಿಎಂ15022022
 *ಅಮುಭಾವಜೀವಿ ಮುಸ್ಟೂರು*

Sunday, February 13, 2022

ಕವಿತೆ

ಒಂದು ದಿನದ ಆಚರಣೆಯಲ್ಲ
ಈ ನಮ್ಮ ಪ್ರೇಮವು
ಪ್ರತಿಕ್ಷಣದ ಅನುಸರಣೆಯು
ಅಂತರಂಗದ ಈ ಅನುಭಾವವು

ತುಸು ಜಗಳ ಇರುವಲ್ಲಿ
ಒಲವಿನ ಅಡಿಪಾಯ ಭದ್ರವು
ಹಸುಗೂಸಿನಂತ ಮನಸ್ಸು ನಿನ್ನದು
ನಸು ನಗುತ ಬಾಳೋಣ ಅದೇ ಸೂತ್ರವು

ಹೃದಯ ಹೃದಯಗಳು ಬೆಸೆದ ಗೂಡಿದು
ಭಾವದ ಅನುಬಂಧ ಹೊಸೆದ ಬಂಧವಿದು
ಉಸಿರಿರುವ ತನಕ  ಉಸಿರಾಗಿರುವ
ಹಸಿರಿನ ಸಮೃದ್ಧ ನಮ್ಮನ್ನು ಈ ಕೂಟವು

ನನ್ನ ಹಾದಿಗೆ ನೆರಳಾದೆ ನೀನು
ನಿನ್ನ ಭಾವಕೆ ಕೊರಳಾಗೂವೆ ನಾನು
ನೀನಿರುವ ತಾಣವೇ ಪ್ರೇಮಕಾಶ್ಮೀರ
ನಾನಾಗಿ ಬಾಳುವೆ ನಿನ್ನ ಹಣೆಯ ಸಿಂಧೂರ

ಅಮರತ್ವದ ಪ್ರೇಮದ ಕೂಸು ನಾವು
ಬಾಳ ಸೊಗಸ ಸವಿಯೋಣ ನಾವು
ಸುಖ-ದುಃಖವ ಸಮ ಭಾವದಿ ಸಹಿಸಿ
ಸದಾ ಖುಷಿಯಾಗಿರುವ ಪ್ರೀತಿಸಿ

074ಎಎಂ14022022
*ಅಮುಭಾವಜೀವಿ ಮುಸ್ಟೂರು*

Friday, February 11, 2022

ಒಲವ ಕವಿತೆ

ಒಲವಿನ ಪೂಜೆಗೆ ದಿನವೇಕೆ
ಕ್ಷಣ ಒಂದಾದರೂ ಸಾಕು ಪ್ರೀತಿಸೋಕೆ

ಪ್ರೀತಿಯ ಪ್ರತಿಪಾದನೆಯೇ ಬದುಕು
ಪ್ರೀತಿಸುವ ಹೃದಯದ ಇರದು ಕೆಡುಕು 
ಇಡುವ ಹೆಜ್ಜೆಯ ಅಡಿ ಮೆತ್ತೆ ಈ ಪ್ರೀತಿ
ಜಗವ ಸಲಹುವ ಸಮಭಾವ ಅದರ ನೀತಿ

ಹೆಣ್ಣು-ಗಂಡುಗಳ ಎದೆ ಭಾವದ ಕವಿತೆ
ಕತ್ತಲು ಹೊಳೆಯುವುದು ಕಣ್ಣ ಹಣತೆ
ಮೇಲು ಕೀಳುಗಳ ಛಾಯೆ ಇರದ
ಮೇರು ವ್ಯಕ್ತಿತ್ವ ಅದರದು

ಕುರೂಪವನೂ ಅಂದಗಾಣಿಸುವ
ಅಪರೂಪದ ಅನುಬಂಧ ಪ್ರೀತಿ
ಬಡತನದಲ್ಲೂ ಸಿರಿತನ ಕಾಣುವ
ಶ್ರೀಮಂತ ಭಾವಗೀತೆ ಈ ಪ್ರೀತಿ

ದೂರುವವರನ್ನು ಆರಾಧಿಸುವ
ದ್ವೇಷ ದಳ್ಳುರಿಯನ್ನು ಆರಿಸುವ
ಸೋತ ಬದುಕಿಗೆ ಸಂಜೀವಿನಿಯಾಗಿ
ಸಮೃದ್ಧಿಯ ನೆಮ್ಮದಿ ತರುವುದು ಪ್ರೀತಿ

ಪಡೆದುಕೊಳ್ಳುವುದಕ್ಕಿಂತ ಕೊಡುವ ತೃಪ್ತಿ
ನೀಡುವುದು ಈ ಒಲವಿನ ಸಂದೀಪ್ತಿ
ಕಳೆದು ಹೋಗುವುದರಲ್ಲೂ ಗೆಲುವು ತರುವ
ಅಭಿಮಾನದ ಅಶರೀರವೀ ಪ್ರೀತಿ

ಅನುಭವಿಸೋಣ ಸದಾ ಅದನ್ನು
ಅವಮಾನಿಸಿದಂತೆ ಕಾಯೋಣ ಇನ್ನು
ಬದುಕಿನ ಘನತೆಯೇ ಪ್ರೀತಿ
ಅದರ ಅಂತಃಸತ್ವವೇ ಈ ಧರಿತ್ರಿ

0659ಎಎಂ11022022
ಅಮುಭಾವಜೀವಿ ಮುಸ್ಟೂರು

Thursday, February 10, 2022

ಕಥೆ

ಕಥೆ

ಬೇಕಿಲ್ಲದೊಲವು
##########

ಬದುಕಿನ ಕಟು ಸತ್ಯಗಳ ಹುಟ್ಟು ಹಾಕಿ ದಡ ಸೇರಿಸಬೇಕೆಂಬ ಹುಮ್ಮಸ್ಸಿನಲ್ಲಿ ಹೊರಟ ಭಾವನೆಗಳ ಹೋರಾಟದಲ್ಲಿ ಅತ್ತ ಧರಿ  ಇತ್ತ  ಪುಲಿ ಎಂಬ ಹೊಯ್ದಾಟದಲ್ಲಿ ಇದ್ದ ನೆಮ್ಮದಿಯನ್ನು ಕಳೆದುಕೊಂಡು ಜೀವಿಸಬೇಕಾದ ಅನಿವಾರ್ಯದಲ್ಲಿ ತನ್ನತನವನ್ನು ಬಿಟ್ಟುಕೊಡಲಾಗದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲಾಗದೆ ಬಾಳು ಸವೆಯುತಿದೆ. ಬದುಕಿನ ಆಸ್ಥಾನದಲ್ಲಿ ರಾಜನಾಗಿ ವಿರಾಜಮಾನವಾಗಿ ಮೆರೆಯಬಹುದಿತ್ತು ಆದರೂ ಅಷ್ಟಾವಕ್ರತನದ ಮೋಹಕ್ಕೆ ಬಲಿಯಾಗಿ ಇದ್ದ ಮೈಯ ವಾಂಛೆಗಳಿಗೆ ರಾಜ್ಯ ಪಟ್ಟವ ತೊರೆದು ವ್ಯಕ್ತಿತ್ವದ ಹರಣದಲ್ಲಿ ಸುಂದರ ಬದುಕನ್ನು ತನ್ನ ಕೈಯಾರ ಹಾಳುಮಾಡಿಕೊಂಡು ನರಕ ಸದೃಶ್ಯ ಸಂಕಷ್ಟಗಳನ್ನು ಎದುರಿಸಿ ಸೋತ ಕಥೆಯಿದು.

      ಸುಂದರ ಬದುಕಿನ ರೂವಾರಿ ಕನಸುಕಂಗಳ ಸಂಸಾರಿ ಹೆಂಡತಿ ಮಕ್ಕಳ ಜೊತೆಜೊತೆಗೆ ಸುಖದಿ ಬಾಳುವಾಗ ಅದಾವ ವಕ್ರದೃಷ್ಟಿಯು ಬಿತ್ತೋ ಅಲ್ಲಿಂದಲೇ ಬದುಕಿನ ಅವನತಿ ಶುರುವಾದ ಅನುಭವ. ಬದುಕನ್ನು ದಿಗ್ಧದರ್ಶಿಸುವವನ ಬದುಕೇ ಹಳ್ಳದಲ್ಲಿ ಬಿದ್ದು ಒದ್ದಾಡುವಂತಹ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ವಿಪರ್ಯಾಸ.

      ಸೌಂದರ್ಯದ ದೃಷ್ಟಿಯಿಂದ ಅವಿನಾಶ್ ಹೇಳಿಕೊಳ್ಳುವಂತಹ ಸ್ಪುರದ್ರೂಪಿ ಯುವಕನೇನಲ್ಲ. ಆದರೆ ಅವನ ಬರಹಗಳಲ್ಲಿ ಪ್ರೀತಿಯ ಭಾವ , ಪ್ರಕೃತಿಯ ಸೌಂದರ್ಯೋಪಾಸನೆ, ಜೀವನಾನುಭವ ಹೇರಳವಾಗಿರುತ್ತಿತ್ತು. ಪದಗಳಿಗೆ ಪದ್ಯದ ರೂಪ ಕೊಟ್ಟು ಕನಸುಗಳಿಗೆ ಕವನಗಳಲ್ಲಿ ಜಾಗವಿತ್ತು ತನ್ನ ಪಾಡಿಗೆ ತಾನು ಭಾವವಿಹಾರಿಯಾಗಿ ಜೀವನಾನಂದದಲ್ಲಿ ಮಿಂದು ಹೋಗಿದ್ದ. ಅಲ್ಲಿ ಇಲ್ಲಿ ನಡೆಯುತ್ತಿದ್ದ ಕಾವ್ಯ ಗೋಷ್ಠಿಗಳಲ್ಲಿ ಭಾಗವಹಿಸುತ್ತಾ ತನ್ನ ವೃತ್ತಿ ಪ್ರವೃತ್ತಿಗಳನ್ನು ಸರಿದೂಗಿಸಿಕೊಂಡು ಸಂಸಾರದೊಳಗೆ ಬಡವನಾದರೆ ಕೈ ತುತ್ತು ತಿನ್ನಿಸುವಷ್ಟು ಪ್ರೀತಿಯ ಪುಟ್ಟ ಗೂಡಿನಲ್ಲಿ ಬಾಳು ಸಾಗುತ್ತಿತ್ತು.

   ಬೆಚ್ಚನೆಯ ಗೂಡಿತ್ತು ವೆಚ್ಚಕ್ಕೆ ಬೇಕಾಗುವಷ್ಟು ಹೊನ್ನಿತ್ತು ಇಚ್ಛೆಯನ್ನು ಅರಿಯುವ ಸತಿಸುತೆಯರ ಪ್ರೀತಿ ಇತ್ತು. ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಲು ಭಾವಾಭಿವ್ಯಕ್ತಿಯ ನಂಟಿತ್ತು. ಇಂಥ ಸುಖಸಂಸಾರದ ನೇತೃತ್ವ ವಹಿಸಿದ ಅವನಿಗೆ ಅಭಿಮಾನಿಗಳ ಬೆಂಬಲಿಗರ ಸಣ್ಣದೊಂದು ಹಿನ್ನೆಲೆಯಿತ್ತು. ಯಾರೊಂದಿಗೂ ಸಂಘರ್ಷಕ್ಕಿಳಿಯದ ಯಾವುದಕ್ಕೂ ವಿವೇಚನೆ ಕಳೆದುಕೊಳ್ಳದ ತನ್ನ ಜೊತೆಗಾರರೊಂದಿಗೆ ಸ್ನೇಹಜೀವಿಯಾಗಿ ಬದುಕಿದ ಭಾವಜೀವಿಯಾಗಿದ್ದ ಅವಿನಾಶ್. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವನ ಬರಹಗಳನ್ನು ಮೆಚ್ಚುವ ಸ್ನೇಹಿತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅದರಲ್ಲಿ ಅವನ ವಿದ್ಯಾರ್ಥಿಗಳು, ಸಹ ಯಾನಿಗಳು, ಹಿರಿಯರು ಕಿರಿಯರೆನ್ನದೆ ಎಲ್ಲರೊಂದಿಗೂ ಒಳ್ಳೆಯ ಒಡನಾಟ ಹೊಂದಿದ್ದ. ಇಂತಹ ಸ್ವಚ್ಛ ವ್ಯಕ್ತಿತ್ವದ ಅವಿನಾಶನ ಭಾವ ಪಯಣದಲ್ಲಿ ಅವಳ ಸ್ನೇಹದ ಪ್ರವೇಶವಾಯಿತು. ಎಲ್ಲರ ಹಾಗೆ ಅವಳಿಂದಲೇ ಲೈಕು ಕಾಮೆಂಟು ಬರತೊಡಗಿದವು. ಅವು ಕೇವಲ ಅವನ ಬರಹಗಳಿಗೆ ಸೀಮಿತವಾಗಿರಬೇಕಾಗಿತ್ತು. ಆದರೆ ಬರು ಬರುತ್ತಾ ಸ್ನೇಹವೆಂಬುದು ಆತ್ಮೀಯತೆಯಾಗಿ ವೈಯಕ್ತಿಕ ಬದುಕಿನ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರೆ. ಅವಳಿಗೂ ಬರಹದ ನಂಟು ಇದ್ದುದರಿಂದ ಆ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿದ್ದವು. ಅವಳು ಅವನ ಬರಹದ ಹುಚ್ಚು ಅಭಿಮಾನಿಯಾಗಿದ್ದಳು. ಸ್ವಚ್ಛ ಸ್ನೇಹದ ಪ್ರತಿಪಾದನೆಯಲ್ಲಿ ಅವನು ಮುಂದೊದಗಬಹುದಾದ ಅಪಾಯವನ್ನು ಮನಗಂಡರು ಅದಕ್ಕೆ ಯಾವುದೇ ಕುಂದು ಬರದಂತೆ ನಡೆದುಕೊಳ್ಳುವ ಆತ್ಮವಿಶ್ವಾಸ ಅವನಲ್ಲಿ ಇತ್ತಾದರೂ ಅವನು ಅವಳಿಂದ ಅದನ್ನು ನಿರೀಕ್ಷಿಸಿರಲಿಲ್ಲ.

0530ಎಎಂ11022022
*ಅಮುಭಾವಜೀವಿ ಮುಸ್ಟೂರು*

Tuesday, February 1, 2022

ಕವಿತೆ


ನೀನು ನನ್ನವಳೆಂಬ ಭಾವ 
ಪದಗಳಲ್ಲಿ ತುಂಬಲಿ ಹೇಗೆ ಜೀವ 
ಬರೆವ  ಪ್ರತಿ ಸಾಲಲ್ಲಿ ನೀನೇ ಅವಿತೆ
ಅದಕ್ಕೆ ನನ್ನ ಬಾಳಾಯ್ತು ಸುಂದರ ಭಾವಗೀತೆ 
ಹೃದಯ ತುಂಬಿದ ನೆನಪಾದೆ 
ಕೈಗೆಟುಕದ ಕುಸುಮ ನೀನಾದೆ 

ಸನಿಹವೇ ಇದ್ದರೂ ಕೂಡ 
ನಿನ್ನೊಲವಿಗಾಗಿ ನಾ ಅಲೆಯುತ್ತಿರುವೆ 
ನೀ ಬಳಿ ಇದ್ದರೂ ಅರಿಯದಾದೆ 
ನಿನ್ನ ಪ್ರೀತಿಗೆ ನಾ ಶರಣಾಗಿ ಹೋದೆ 
ಕರುವನ್ನಸರಿಸುವ ಹಸುವಿನಂತೆ ಹುಡುಕುತಿರುವೆ 

ಜನ್ಮಾಂತರಗಳ ಬಂಧ ಬೆಸೆದ 
ಅನುಬಂಧವೇ ಇದು ನಮ್ಮದು 
ಒಬ್ಬರನೊಬ್ಬರು ಬಿಟ್ಟಿರಲಾರದ 
ಅದಾವ ಮೈತ್ರಿ ನಮ್ಮ ಬೆಸೆದಿಹುದೋ
ನಿನ್ನ ಸೇರುವ ಹಂಬಲವಿದೇನೋ ನಾ ಕಾಣೆ 

ಏಳೇಳು ಜನ್ಮಕೂ ಜೊತೆಗಾತಿ ನೀನು 
ನಿನ್ನೊಲವಿಗಾಗಿ ನಿತ್ಯ ಕಾಯುವೆನು 
ಹೃದಯದ ಮಾತಿದು ನೀ ಕೇಳು 
ಆತ್ಮದನುಸಂಧಾನ ನಮ್ಮೀ ಬಾಳು 
ಕೂಗಿ ಒಮ್ಮೆ ನೀ ಹೇಳು 
ನಿನ್ನ ಪ್ರೇಮಿ ನಾನೆಂದೂ ಇನ್ನು 

೧೦೪೯ಪಿಎಂ೦೧೦೨೨೦೨೨
*ಅಮುಭಾವಜೀವಿ ಮುಸ್ಟೂರು*