Monday, May 30, 2022

ಕವನ

ಅಂತರಂಗ ಅಳುತಿದೆ
ಅನುಬಂಧ ಕಳಚುತ್ತಿದೆ
ಸೋದರತೆಯು ಸೊರಗುತ್ತಿದೆ
ನಾನೆಂಬ ಅಹಂಕಾರದಿಂದ

ನಡೆವ ಹಾದಿಗೆ ಅಡ್ಡಲಾಗಿ
ಹೆಜ್ಜೆ-ಹೆಜ್ಜೆಗೂ ತೊಡರಾಗಿ
ಬೆಳೆಯಲು ಬಿಡದೆ ದಾಯಾದಿ
ಸ್ವಾರ್ಥಿಯಾದರು ಎಲ್ಲಾ ಜೀವನದಿ

ತಾನು ಮಾತ್ರ ಉಳಿದು
ಇತರರನ್ನು ಅಲ್ಲೇ ತುಳಿದು
ಜಗದೆದುರು ಮುಖವಾಡ ತೊಟ್ಟ
ಗೋಮುಖ ವ್ಯಾಘ್ರಗಳುಂಟು ಇಲ್ಲಿ 

ತನಗೆ ಬೇಕಾದಂತೆ ತಿರುಚಿ
ಎಲ್ಲವನ್ನು  ಕಿತ್ತುಕೊಳ್ಳುವ
ಹೊಟ್ಟೆಕಿಚ್ಚಿನ ಅಸೂಯೆ ವಾದಿ
ಕಿತ್ತುಕೊಂಡ ಅಮಾಯಕರ ನೆಮ್ಮದಿ

ಲೋಕದೆದುರು ಬಲು ಸಂಪನ್ನ
ಅಂತವರಿಗೆ ಉಂಟು ಬಹುಮಾನ
ಒಳ ಮನಸ್ಸಿನ ಆಳ ಅರಿಯದ ಜನ
ತಿಳಿ ಮನಸ್ಸಿಗೆ ಚುಚ್ಚಿ ತಂದರು ನೋವನ್ನ

ಇಂಥವರ ಸಂತೆಯಲ್ಲಿ ನಿಂತು ಬೆಳೆಯಲಾದೀತೆ?
ಇಂಥವರ ಎದೆಯಲ್ಲಿ ನ್ಯಾಯ ಉಳಿದೀತೆ?
ಸ್ವಾರ್ಥದ ದಬ್ಬಾಳಿಕೆಯಲ್ಲಿ ಪ್ರೀತಿ ನಲುಗಿತೇ?
ಉತ್ತರವಿಲ್ಲದ ಪ್ರಶ್ನೆಗೆ ಅರ್ಥ ಸಿಕ್ಕೀತೇ?

459ಎಎಂ31052022
*ಅಮುಭಾವಜೀವಿ ಮುಸ್ಟೂರು* 

Saturday, May 28, 2022

ಕವನ

ಅಮ್ಮ ನೀನೆಂದರೆ ಆಗಸ ನಮಗೆ
ಅಂತ್ಯವಿಲ್ಲದ ವಲವ ನೀಡುವೆ ಬದುಕಿಗೆ
ಅಂಬರದ ಚಂದಿರನ ತೋರಿಸಿ
ಅಮ್ಮ ಕೈತುತ್ತನಿತ್ತು ಬೆಳೆಸಿದೆ ನಮ್ಮನ್ನು

ಅಮ್ಮ ನೀನೆಂದರೆ ತಂಗಾಳಿಯ ತವರು
ಅನುಗಾಲವು ಸಲಹಿದ ಸೂರು
ಅವಿರತ ಶ್ರಮಿಸಿದೆ ನಮ್ಮ ಸಲಹಲು
ಅಳುವ ಮರೆಸಿ ನಗಿಸಿತ್ತು ನಿನ್ನೀ ಮಡಿಲು

ಅಪ್ಪನ ಪಾಲಿಗೆ ಸಂಗಾತಿ ನೀನಾಗಿ
ಅಕ್ಕರೆ ತೋರಿದೆ ಮಮತಾಮಯಿಯಾಗಿ
ಅತ್ಯಂತ ಮೇರು ಅಮ್ಮ ನಿನ್ನ ವ್ಯಕ್ತಿತ್ವ
ಅಭಿಮಾನದ ಬಾಂಧವ್ಯ ನಿನ್ನೀ ಮಾತೃತ್ವ

ಅದೆಷ್ಟು ಕಷ್ಟಗಳ ಸಹಿಸಿ ಸಲಹಿದೆ
ಅದೆಂಥ ವಾತ್ಸಲ್ಯ ನಮಗೆ ತೋರಿದೆ
ಅದನ್ನು ಅನುಭವಿಸಲು ಜನುಮ ಸಾಲದೆ
ಅಂತರಂಗದ ಆರಾಧ್ಯದೇವತೆ ನೀನಾದೆ

ಅದಾವ ದೇವರು ನಿನ್ನ ಮುಂದೆ ನಿಲ್ಲಲಾರ
ಅದೆಷ್ಟೋ ಸಂಪತ್ತು ನಿನ್ನೊಲವ ಮುಂದೆ ನಶ್ವರ
ಅಮ್ಮ ನೀನಿರಲು ಬಾಳು ಸುಂದರ
ಅಪ್ಪಿದರೆ ನೀನೊಮ್ಮೆ ನಮ್ಮ ಕಷ್ಟಗಳೆಲ್ಲ ದೂರ

ಅಮ್ಮ ನೀ ಸದಾ ನಮ್ಮ ಜೊತೆಗಿರು
ಅನಾಥರು ನಾವಲ್ಲ ನೀನಿರಲು
ಅದಮ್ಯ ಜೀವನೋತ್ಸಾಹ ನೀ ತುಂಬಿದೆ
ಅನುಕ್ಷಣವು ನಮ್ಮ ನೀ ಸಲಹುವ ದೇವರು

1039ಪಿಎಂ2805022
*ಅಮುಭಾವಜೀವಿ ಮುಸ್ಟೂರು*

ಕವನ

ಬದುಕಿನ ಪುಟ ತೆರೆದು
ಪ್ರೀತಿಯ ಕವಿತೆ ಬರೆದು
ಕರುಣೆಯ ಲಾಲಿ ಹಾಡಿದವಳು ನೀನಮ್ಮ
ಎಲ್ಲ ನೋವನ್ನು ತಾನೇ ನುಂಗಿ
ಬರೀ ನಗುವನ್ನೇ ನೀಡಿ ನಮಗಾಗಿ
ಬದುಕಿದರೆ ತ್ಯಾಗಮಯಿ ನೀನಮ್ಮ

ಕಷ್ಟಗಳ ದಟ್ಟ ಕಾನನದೊಳಗೆ
ಸುಖದ ನೆರಳಾದೆ ನೀ ನಮಗೆ
ತ್ಯಾಗಕ್ಕೆ ಸಾಟಿ ಏನಿಲ್ಲವಮ್ಮ
ಮಮತೆಯ ಮಹಾನ್ ಪರ್ವತ
ಅಮ್ಮ ನೀನಿತ್ತ ಒಲವು ಶಾಶ್ವತ
ನಿನ್ನ ಋಣ ತೀರಿಸಲು ಸಾಧ್ಯವಿಲ್ಲಮ್ಮ

ಅಪ್ಪನ ಜೊತೆ ಹೆಗಲಾಗಿ ದುಡಿದೆ
ಸಂಸಾರದೇಳಿಗೆಗೆ ನೀ ಶ್ರಮಿಸಿದೆ
ಸಂಬಳ ಬೇಡದ ಕಾಯಕ ನಿನ್ನದು
ಹಗಲಿಗೆ ಸೂರ್ಯನಂತೆ
ಇರುಳಿಗೆ ಚಂದ್ರನಂತೆ
ಬಾಳಿಗೆ ಕತ್ತಲಿರದಂತೆ ನೀ ಬೆಳಗಿದೆ

ಇನ್ನು ಸಾಕು ನಿನ್ನ ನೋವಿಗೆ 
ಅಂತ್ಯ ಹಾಡುವೆವು ನಗು ತರಿಸಿ
ಸದಾ ನಗುತಿರಬೇಕು ನೀನಮ್ಮ
ಮರೆತು ಬಿಡು  ಎಲ್ಲಾ ನೋವು 
ನೀನಿತ್ತ ಜೀವದಾನದ  ಋಣ ತೀರಿಸುವೆವು
ನಮ್ಮೆದುರಿಗಿರುವ ದೈವ ನೀನಮ್ಮ

2ಅಮುಭಾವಜೀವಿ ಮುಸ್ಟೂರು 

Tuesday, May 24, 2022

ಕವನ

ಎಲ್ಲೆಲ್ಲೋ ಅಲೆದು
ನಾ ಬಸವಳಿದು ಬಂದು
ಒಮ್ಮೆ ಹಿಂತಿರುಗಿ ನೋಡಿದೆ
ನಾ ಅರ್ಥವಿಲ್ಲದೇ ವ್ಯರ್ಥ ನಡೆದಿದ್ದೆ

ಇಲ್ಲಿರುವ ಎಲ್ಲವನ್ನು ಬಿಟ್ಟು
ಇಲ್ಲದಿರುವುದಕೆ ಆಸೆಪಟ್ಟು
ಎಲ್ಲೂ ಸಲ್ಲದೆ ಎಲ್ಲಾ ಕಳಕೊಂಡೆ
ನಾನೆಂಬ ಅಹಮಿನ ಕತ್ತಲೆಯೊಳಗೆ

ಸಂಬಂಧದ ಬಂಧವ ಕಳಚಿ
ಅವರಲ್ಲೆಲ್ಲಾ ನೋವಂದನುಳಿಸಿ
ದೂರ ದಿಗಂತವ ಪಡೆವ ಭ್ರಮೆಯಲಿ
ಇಲ್ಲಿರುವ ನಂದನವನವ ಬಾಡಿಸಿದೆ

ಹೂವಿಂದ ನಗುವ ಕಲಿಯದೇ
ಹಣ್ಣಿಂದ ಸವಿಯ ಪಡೆಯದೆ
ಹಸಿರಿಂದ ಆನಂದ ಹೊಂದದೆ
ಹಳಸಿದಾಸೆಯ ಹಿಂದೆ ನಡೆದೆ

'ನಾನು' ಹೋಗದೆ ಗುಡಿ ಸುತ್ತಿದರೇನು
ನಾನು ಬಿಡದೇ ಮೋಕ್ಷ ದೊರೆವುದೇನು
ನಾನೇನನೂ ತರದೆ ನನ್ನದೆಂದು ಬೀಗಿದೆ
ತೊಟ್ಟು ಕಳಚಿದ ಹಣ್ಣಾಗಿ ಬಿದ್ದು ಮಣ್ಣಾದೆ

ಬೆಳಗಲಿ ಪ್ರೀತಿಜ್ಯೋತಿ
ಅಂಧಕಾರದ ತಮವ ಕಳೆದು
ಉಕ್ಕಲಿ ಆ ನಗುವು
ಮಳೆಗಾಲದ ಮಿಂಚಂತೆ ಹೊಳೆದು.

ಅಮು
1048ಎಎಂ240515

Friday, May 20, 2022

ಕವಿತೆ

ಅದೇಕೆ ಮಳೆಯೇ ಹೀಗೆ 
ಹುಚ್ಚೆದ್ದು ಸುರಿಯುತಿರುವೆ
ಮುಂಗಾರಿನಾಗಮನವೇ 
ಸೋನೆಮಳೆಯಾಗಿ ಬಂದಿರುವೆ

ವೈಶಾಖದ ಬಿಸಿಲ ತಾಪ
ಒಮ್ಮೆಲೇ ತಂಪಾಗಿ ಹೋಯ್ತು 
ಬರಿದಾದ ಕೆರೆಕಟ್ಟೆಗಳು ತುಂಬಿ
ಮೆರೆಯುತಿವೆ ಮೈದುಂಬಿ

ನಗರಗಳೆಲ್ಲ ನೀರೊಳು ಮುಳುಗಿವೆ
ನದಿಗಳು  ಪ್ರವಾಹವಾಗಿ ಉಕ್ಕಿವೆ
ಗಿರಿಶೃಂಗಗಳೆಲ್ಲ ಹಸಿರೊದ್ದು ಮಲಗಿವೆ
ಹೊಲಗದ್ದೆಗಳೆಲ್ಲ ನಡುಗಡ್ಡೆಗಳಾಗಿವೆ

ಇನ್ನೆಷ್ಟು ದಿನವೋ ಈ ರಗಳೆ 
ಸುರಿವುದ ನಿಲ್ಲಿಸಲಿ ಮಳೆ
ಬದುಕು ಭೀಕರವಾಗುವ ಮೊದಲು
ಬರಲಿ ಒಂದಿಷ್ಟು ಬಿಸಿ ಬಿಸಿಲು

ಇನ್ನು ಮುಂದಿದೆ ಮಳೆಗಾಲ
ಬಿಡುವು ಮಾಡಿಕೊಳ್ಳಬೇಕಲ್ಲ
ಜಲ ದಿಗ್ಬಂಧನ ತೆರವುಗೊಳಿಸು
ಮುಳುಗುವ ಬದುಕ ಉಳಿಸು

0717ಪಿಎಂ20052022
*ಅಮುಭಾವಜೀವಿ ಮುಸ್ಟೂರು* 



Thursday, May 19, 2022

ಕವಿತೆ

ಅಭಿನಂದನೆ ನಿನಗೆ
ಶುಭಕೋರುವೆ ಆ ಸಾಧನೆಗೆ

ನೀ ನಡೆದು ಬಂದ ಹಾದಿ
ಅದು ಕಲ್ಲುಮುಳ್ಳಿನ ಬೇಗುದಿ
ಕಷ್ಟವನ್ನು ಇಷ್ಟಪಟ್ಟು ಎದುರಿಸಿದೆ
ಈಗ ವಿಜಯಮಾಲೆ ನಿನಗೆ ದಕ್ಕಿದೆ

ಅವಮಾನಿಸಿದವರ ಎದುರಲ್ಲೇ
ಅಭಿಮಾನದ ಪದಕ ಧರಿಸಿದೆ
ಸ್ವಾಭಿಮಾನದ ಈ ನಿನ್ನ ಪಯಣ
ಗುರಿ ಸಾಧನೆಗೆ ಅದುವೆ ಮಹಾ ಪ್ರೇರಣ

ತುಳಿದವರ ತಲೆ ಮೇಲೆ ಮೆರೆಯಬೇಕು
ತುಳಿತಕ್ಕೊಳಗಾದವರಿಗೆ ಸ್ಫೂರ್ತಿಯಾಗಬೇಕು
ಸಹನೆಯ ಕಿಚ್ಚು ಸಾಧನೆಯ ಜ್ಯೋತಿ ಯಾಗಬೇಕು
ತುಳಿದವರು ಕೂಡ ಸದಾ ನಿನ್ನ ಮೆಚ್ಚಬೇಕು

ಇನ್ನು ನಿನ್ನ ನೋವಿಗೆಲ್ಲ ಕೊನೆ
ಎಲ್ಲ ಮರೆಸಿಹುದು ಈ ಸಾಧನೆ
ಅಂತ್ಯವಾಯಿತು ಅವನ ಶೋಧನೆ
ನಿನ್ನನಿನ್ನು ತಾಕದು ಅವಹೇಳನೆ

ಕನಸು ಇನ್ನು ಕೈಗೂಡಿದೆ
ಯಶಸ್ಸು ನಿನಗೊಲಿದಿದೆ
ಹೆಮ್ಮರವಾಗಿ ಬೆಳೆಯಬೇಕು ನೀನಿನ್ನು 
ಆಗ ಮರೆಯದಿದ್ದರೆ ಸಾಕು ನನಗಿನ್ನು

0548ಪಿಎಂ19052022
*ಅಮುಭಾವಜೀವಿ ಮುಸ್ಟೂರು* 

    

ಕವಿತೆ

ಯಾರಿವಳು ಯಾರಿವಳು
ನೋಡಿದೊಡನೆ ಮೈಮರೆಸುವವಳು
ಮುಂಗಾರಿನ ಮಿಂಚಂತೆ ಅವಳು

ನಗುವಿನಲ್ಲಿ ಸುಮವಾಗಿ ಅರಳುವವಳು
ಅಂದದಲಿ ಕಾರ್ಮುಗಿಲ ಮುಂಗುರುಳವಳು
ವಯ್ಯಾರದಲಿ ಹಂಸ ನಡಿಗೆಯವಳು 

ಅವಳೊಮ್ಮೆ ಬಳಿ ಸುಳಿದುಹೋದರೆ
ಬಿರು ಬೇಸಿಗೆಯಲ್ಲಿ ಸೋನೆ ಸುರಿದಂತೆ
ಹೊಂಗೆ ನೆರಳಿನ ತಂಪು ಅವಳೊಮ್ಮೆ ಸಿಕ್ಕರೆ

ಮಾತಲ್ಲಿ ಅವಳು ಕೋಗಿಲೆಯ ದನಿಯವಳು
ಮೌನದಲ್ಲಿ ಮಿನುಗುವ ಇಬ್ಬನಿಯು ಅವಳು
ಮೈಮರೆಸುವ ಮೋಹದ ಪತಂಗದಂತವಳು

 ಸೀರೆಯನುಟ್ಟರವಳು ಪ್ರಕೃತಿಮಾತೆ
ಲಂಗದಾವಣಿಯಲವಳು ನಲಿವ ಲತೆ
ಕಲ್ಪನೆಯ ಗುಂಗಲ್ಲವಳು ಮೂಡಿದ ಕವಿತೆ

ಅವಳೊಲವು ಸಾಗರದಲೆಗಳ ರೀತಿ
ಅವಳ ಚೆಲುವು ಆಕರ್ಷಣೆಯ ಶಕ್ತಿ
ಅವಳೆಂದರದುವೇ ಭಾರತೀಯ ಸಂಸ್ಕೃತಿ

ಬೇಕಿಲ್ಲ ಈ ಚೆಲುವೆಗೊಡವೆ
ಕೋಟಿಯೊಳಗೊಬ್ಬಳಿ ಚೆಲುವೆ
ಅವಳಿಗಾಗಿಯೇ ನಾ ನಿತ್ಯ ಬರುವೆ

ನಾಳೆಗಳಿರುವವು ಅವಳಿರುವ ತನಕ
ಬಾಳಿಗವಳೆ ಹೆಮ್ಮೆಯ ಪ್ರತೀಕ
ಅವಳು ಮತ್ತೆ ಮತ್ತೆ ಸೆಳೆವ ಚುಂಬಕ

0653ಪಿಎಂ19052022
*ಅಮುಭಾವಜೀವಿ ಮುಸ್ಟೂರು* 

Monday, May 16, 2022

ಕವನ

ಮುಸ್ಸಂಜೆಯ ಮೈಮೇಲೆ
ಮುತ್ತಿನ ಹನಿಗಳ ಅಭಿಷೇಕ
ಉರಿಬಿಸಿಲಿಗೆ ದಣಿದ ನೆಲಕೆ
ತಂಪೆರೆಯಿತು ನೀಡಿ ಪುಳಕ

ಮುಂಗಾರಿಗೆ ಮತ್ತೇರಿ
ಮಿಂಚು ಗುಡುಗಿನ ಆರ್ಭಟದಿ
ಕೆರೆಕಟ್ಟೆಗಳ ಮೈದುಂಬಿಸಿ
ಪ್ರಕೃತಿಗೆ ತಂತು ಹೊಸತನ

ಕಾರ್ಮೋಡಗಳೆದೆಯಿಂದ
ಕೋಲ್ಮಿಂಚಿನ ರುದ್ರನರ್ತನ
ಹೊಸ ಮಳೆಯು ಇಳೆ ತಣಿಸಲು
ಹಸಿರಿನಾಳೆಯಲ್ಲಿ ಮೂಡಿತು ಕವನ

ಬಿರುಗಾಳಿ ಸುಳಿಗಾಳಿಗಳ
ರೌದ್ರಾವತಾರ ಭಯಂಕರ
ಮಳೆ ಬಂದು ನಿಂತ ಮರುಕ್ಷಣ
ಕಣ್ಮನಗಳಿಗೆ ನಯನಮನೋಹರ

ವೈಶಾಖದ ಬಿಸಿಲಿನ ಕಾರಣ
ಭೂಮಿಯೊಳಗೆ ಜಲಮರುಪೂರಣ
ಮಳೆಗಾಲವು ಮುಂಬದುಕಿಗೆ ಪ್ರೇರಣ
ನಿಸರ್ಗದ ಉನ್ನತಿಗೆ ಪುಷ್ಟಿ ಕರಣ

0544ಪಿಎಂ16052022
*ಅಮುಭಾವಜೀವಿ ಮುಸ್ಟೂರು* 
    

Wednesday, May 11, 2022

ಕವನ

ಎಲ್ಲ ಧರ್ಮಗಳ ಸಾರವೂ ಒಂದೇ
ಎಲ್ಲ ಧರ್ಮಗಳ ಬೋಧನೆಯು ಒಂದೇ
ಆದರೂ ಏಕೆ ಈ ಕಚ್ಚಾಟ
ಹಿಂಸೆಯು ಎಂದೂ ಧರ್ಮವಾಗಿದು
ಕೊಲೆಯನು ಎಂದೂ ಧರ್ಮ ಒಪ್ಪದು
ಆದರೂ ನೀ ಹುಚ್ಚಾಟ

ಭಕ್ತಿಯೇ ಮುಕ್ತಿಯ ದಿಟದ ಹಾದಿ
ಪರಸ್ಪರ ಪ್ರೀತಿಯು ತರುವುದು ನೆಮ್ಮದಿ
ಆದರೂ ಮರುವರೇಕೆ ಈ ಪರಿಧಿ
ಎಲ್ಲರ ಬೆಳಗುವ ಸೂರ್ಯನು ಒಬ್ಬನೇ
ಎರಡನ್ನು ಕಳೆಯಲು ಇರುವ ಚಂದ್ರನೊಬ್ಬನೇ
ದೈವವೊಂದು ನಾಮ ಹಲವು ಅರಿಯೋ ಸುಮ್ಮನೆ

ಮೈಯಲ್ಲಿ ಹರಿಯುವ ರಕ್ತವು ಒಂದೇ
ಬದುಕಲು ಉಸಿರಾಡುವ ಗಾಳಿಯೊಂದೇ
ಆದರೂ ಸತ್ತಿತೇಕೆ ಮಾನವ ಪ್ರೇಮ
ಹುಟ್ಟುವುದು ಒಂದೇ ಜನ್ಮ
ಸಾಯಲೇಬೇಕು ಮೀರದು ನಿಯಮ
ಹಾದಿ ತಪ್ಪಿ ನಡೆದರೆ ಒಪ್ಪದು ಧರ್ಮ

ಸೋತಿದ್ದೆಲ್ಲಿ ಮಾನವೀಯತೆ
ಶಿಕ್ಷಿಸದೇಕೆ ಧರ್ಮ ಸಂಹಿತೆ
ಮೂರು ದಿನದ ಬಾಳಲೇಕೆ ಅಸಮಾನತೆ
ಜೀವದ ಬೆಲೆ ಅರಿತುಕೊಂಡರೆ
ಮನುಷ್ಯತ್ವ ಆಗದು ಎಂದೂ ಕ್ರೂರತ್ವ
ಕೂಡಿ ಬಾಳುವುದಲ್ಲವೇ ಇಲ್ಲಿ ಮಹತ್ವ

0247ಎಎಂ24022022
*ಅಮುಭಾವಜೀವಿ ಮುಸ್ಟೂರು*
    
ಒಬ್ಬನ ಯುದ್ಧೋನ್ಮಾದಕೆ
ಅದೆಷ್ಟು ಅಮಾಯಕರ ಬಲಿ
ರಾಜ್ಯದಾಸೆಗಾಗಿ ಮೇರಾಜ್ಯದಾ
ದ್ವೇಷ ಸಾಧಿಸುವುದು ಎಷ್ಟು ಸರಿ

ಹೆಚ್ಚುಗಾರಿಕೆಯ ಹುಚ್ಚುತನವೇ
ಯುದ್ಧವೆನ್ನುವ ಈ ರಕ್ತಪಾತ
ಬದುಕುವ ಹಂಬಲದ ಜೀವಗಳ
ಕೊಲ್ಲುವ ಗುಂಡು ಪಿರಂಗಿಗಳ ಧಾವಂತ

ಸಾವು-ನೋವುಗಳ ಮೇಲೆ ಸಾಮ್ರಾಜ್ಯ ಕಟ್ಟುವ
ಅನಾಥ ಬದುಕುಗಳ ರೋಧನ
ಕೇಳದಷ್ಟು ಕಿವುಡಾಗಿ ಹೋಯಿತೇನೋ
ಆಳುವವನ ರಣೋತ್ಸಾಹದ ಆಕ್ರಮಣ

ಹಿಂಸೆಯಿಲ್ಲದೆ ಯುದ್ಧವಿಲ್ಲ
ಧ್ವಂಸವಾಗುವುದು ಬದುಕೆಲ್ಲ
ನೊಂದವರ ಕಣ್ಣೀರು ಒರೆಸಲು ಸಾಧ್ಯವೇ
ಯುದ್ಧವೆಂಬ ರಕ್ತಪಿಪಾಸುವಿಗೆ

ಶಾಂತಿಯಿಂದ ಜಯಿಸಬಹುದು 
ಆಗಿದ್ದಾದರೂ ಅಶಾಂತಿಯ ಅಸ್ತ್ರವಿಡಿದರೇಕೆ
ಪ್ರೀತಿಯಿಂದ ಪಡೆಯಬಹುದಾದರೂ
ದ್ವೇಷಕಾರುವ ಮನಸ್ಥಿತಿ ಏಕೆ

ಹೆಡೆಮುರಿಕಟ್ಟಿ ಮೂಲೆಗಿರಿಸಿ
ಯುದ್ಧ ರಕ್ಕಸಿಯನು ಈಗಲೇ
ಶುದ್ಧ ಮನದ ಗದ್ದುಗೆಯೇರಲಿ
ಶಾಂತಿಯ ಶುಭ್ರ ಪತಾಕೆ ನಿತ್ಯ ಹಾರಲಿ

0336ಎಎಂ27022022
*))ಅಮುಭಾವಜೀವಿಮುಸ್ಟೂರು*
ನಮಗೇಕೆ ನಲ್ಲೆ ಬೇರೆಯವರ ಚಿಂತೆ
ನಮ್ಮಲ್ಲೇ ನಾವು ಹಚ್ಚಿಕೊಳ್ಳೋಣ ಒಲವ ಹಣತೆ

ಊರ ಮೇಲೆ ಊರು ಬಿದ್ದರೆ ಏನಂತೆ
ನಿತ್ಯವೂ ತಪ್ಪದ ರವಿಚಂದ್ರರ ಕಾಯಕದಂತೆ
ನಾವಿಬ್ಬರೂ ಸದಾ ಪ್ರೀತಿಸುತ್ತಲೇ ಇರೋಣ
ನಮಗಾಗಿ ನಾವಿಲ್ಲಿ ನಿತ್ಯ ಬದುಕೋಣ

ಹೇಳಿಕೆಯ ಕೇಳಿಕೆಯ ಮಾತುಗಳಿಗೆ
ಎಂದೂ ನಾವು ಕಿವಿಗೊಡುವುದು ಬೇಡ
ದಾರಿತಪ್ಪಿಸುವ ದೂರುಗಳ ದೂರವಿರಿಸಿ
ಧಮನಿ ಧಮನಿಯೊಳಗೂ ಪ್ರೀತಿ ಬೆಸೆಯೋಣ

ಹಮ್ಮು-ಬಿಮ್ಮುಗಳಿಲ್ಲದೊಲವ
ದೀಕ್ಷೆಯನ್ನು ಇಂದೇ ತೊಡೋಣ
ಅಂತರಂಗ ಬೆಸೆದ ಅನುಬಂಧವ
ಅನವರತ ನಾವು ಕಾಪಿಟ್ಟುಕೊಳ್ಳುವ

ಬಡತನದ ಬೇಗೆಯಲ್ಲಿ ಬೆಂದರೂ
ಕೈತುತ್ತನುಣುವ ಸಿರಿವಂತಿಕೆಯಲಿ ಬಾಳೋಣ
ನನಗಾಗಿ ನೀನು ನಿನಗಾಗಿ ನಾನೆನ್ನುವ
ಸಂಸ್ಕಾರವಂತ ಪ್ರೇಮಿಗಳಾಗೋಣ

ನಮ್ಮ ನಾಳೆಗಳು ಸುಂದರವಾಗಲು
ಇಂದು ನಾವು ಆನಂದದಿ ಬಾಳೋಣ
ವಸ್ತುಗಳ  ಸಿರಿವಂತಿಕೆಗಿಂತ
ಹೃದಯ ಶ್ರೀಮಂತಿಕೆಯ ಹೊಂದೋಣ

0239ಎಎಂ27022022
*ಅಮುಭಾವಜೀವಿ ಮುಸ್ಟೂರು*
    
ಪ್ರೀತಿಸುವ ಪ್ರತಿ
ಹೃದಯದ ಮಾತು 
ನಾ ನಿನ್ನ ಪ್ರೀತಿಸುವೆ

ಆರಾಧಿಸುವ ಪ್ರತಿ 
ಮನಸಿನ ಮಾತು
ನಾ ನಿನ್ನ ಪೂಜಿಸುವೆ

ಭರವಸೆ ತುಂಬುವ
ಪ್ರತಿ ಸಂಬಂಧದ ಮಾತು
ನಾ ನಿನ್ನ ಜೊತೆಗಿರುವೆ

ಆನಂದ ತರುವ
ಪ್ರತಿಕ್ಷಣದ ಮಾತು
ನಾ ನಿನ್ನ ನೆರಳಾಗಿರುವೆ

ನೋವು ನೀಗುವ
ಪ್ರತಿ ಕೈಗಳ ಮಾತು
ನಾ ನಿನ್ನ ಕಂಬನಿ ಒರೆಸುವೆ

ಸಾಧಿಸುವವನಿಗೆ
ಸ್ಫೂರ್ತಿಯ ಮಾತು
ನಾ ನಿನ್ನ ಬೆಂಬಲವಾಗಿರುವೆ

ಸ್ನೇಹ ಬಯಸುವ 
ಪ್ರತಿ ಜೀವದ ಮಾತು
ನಾ ನಿನ್ನ ಹೆಜ್ಜೆ ಗುರುತಾಗಿರುವೆ

ಕವಿತೆ ಹುಟ್ಟುವ 
ಪ್ರತಿ ಭಾವದ ಮಾತು
ನಾ ನಿನ್ನ ಪದವಾಗುವೆ

ಸಾಯುವ ಪ್ರತಿ 
ಜೀವದ ಮಾತು
ನಾ ಮತ್ತೆ  ಹುಟ್ಟಿ ಬರುವೆ

0259ಎಎಂ25022022
*ಅಮುಭಾವಜೀವಿ ಮುಸ್ಟೂರು*
ಅವಳ ಮೋಸದ ಜಾಲಕೆ
ನಾ ಸುಲಭದ ತುತ್ತಾದೆ
ಅವಳ ಆ ಕಟ್ಟು ಕಥೆಯ
ನಂಬಿ ನಾ ಮೂರ್ಖನಾದೆ

ಪ್ರೀತಿಯ ಅವಳ ಆಟದಲಿ
ಅಮಾಯಕನಾಗಿ ಸಿಲುಕಿಕೊಂಡೆ
ಗಂಡನಿದ್ದೂ ಪ್ರಿಯಕರನಾಗಿ
ನನ್ನ ಬಯಸಿದ್ದುದರಲಿ ನನ್ನ ತಪ್ಪೇನಿದೆ

ಹಣ್ಣು ತಿಂದು ಬೀದಿಗೆಸೆದವನೊಬ್ಬ
ಜಾರಿಬಿದ್ದ ಸಿಪ್ಪೆಗೆ ಬದುಕು ಕೊಟ್ಟವನೊಬ್ಬ
ಇಬ್ಬರದೊಂದೊಂದು ಕುರುಹು ಇರುವಾಗ
ನೊಂದವಳೆಂದು ಅನುಕಂಪ ತೋರಿದ್ದು ತಪ್ಪೇನು

ಇಲ್ಲಸಲ್ಲದ ಆರೋಪ ಹೊರಿಸಿ
ನಂಬಿಕೆಗೆ ದ್ರೋಹ ಬಗೆದಳು
ಬಯಸದೆ ಬಂದವಳೆಂದು
ಕೊಟ್ಟ ಸಲಿಗೆ ನೆಮ್ಮದಿಯ ಸುಲಿಗೆಗೈದಿದೆ

ಅಲ್ಲೆಲ್ಲೋ ಅವಳು ಸಂತೋಷದಿಂದಿರೆ
ಬದುಕಿನ ಭೀಕರತೆಗೆ ಬಲಿಯಾದೆ
ಮೋಸಗಾತಿಯ ಸ್ನೇಹ ತ್ಯಜಿಸಿ
ಬದುಕ ಹೊರಟರೂ ಭೀತಿ ತಪ್ಪದು

ದೂರದ ಬೆಟ್ಟದ ನುಣುಪಿಗೆ
ಮರುಳಾದ ಆ ತಪ್ಪಿಗೆ
ಕಂದಕಕೆ ತಳ್ಳಿ ನುಣುಚಿಕೊಂಡಳು
ಈಗ ನೊಂದುಕೊಂಡಿವೆ ನನ್ನೊಲುಮೆಯ ಜೀವಗಳು

1044ಪಿಎಂ22022022
*ಅಮುಭಾವಜೀವಿ ಮುಸ್ಟೂರು*

    ಚಂದಿರನಿಲ್ಲದ ಈ ಇರುಳು
ನೀನಿಲ್ಲದೆ ನಾನಾದಂತೆ ಮರುಳು
ಬರೀ ತಾರೆಗಳಿಂದ ಓಡದು ಕತ್ತಲು
ಬರೀ ಬೇಸರ ಕವಿದಿದೆ ಸುತ್ತಮುತ್ತಲು

ನೀರವ ಮೌನದ ಈ ರಾತ್ರಿ
ದಣಿದು ಮಲಗಿದೆ ಧರಿತ್ರಿ
ಏಕಾಂತಕ್ಕೆ ಭೂಷಣವಲ್ಲ ಈ ಸಮಯ
ನೈದಿಲೆ ಹೂ ಕಾಡಿದೆ ವಿರಹದ ಅಧ್ಯಾಯ

ದಾರಿಕಾಣದೆ ಮಂಕಾಗಿರುವೆ
ತಿಂಗಳ ದರ್ಶನವಿರದೇ ಕಂಗಾಲಾಗಿರುವೆ
ಕರೆತಂದು ಬಿಡು ಅವನನ್ನು ನಿನ್ನ ಜೊತೆಗೆ
ತಂಪಿರುಳ ಸವಿಯೋಣ ನಾವು ಒಟ್ಟಿಗೆ

ಏಕಾಂತ ಬಯಸುವ ಪ್ರತಿಜೀವಕೂ
ಸದಾ ಅವನ ಬೆಳದಿಂಗಳು ಇರಬೇಕು
ಒಲವಿನೋಲೆಯನೋದುವ ನಲ್ಲೆಯ ಮುಂಗುರುಳು
ತಂಗಾಳಿಗೆ ಹಾರುತ ಕಚಗುಳಿ ಇಡಬೇಕು

ಹುಣ್ಣಿಮೆ ಕಂಡ ಸಾಗರ ಉಕ್ಕುವ ರೀತಿ
ಪರಿಶುದ್ಧ ನಮ್ಮಿಬ್ಬರ ಈ ಪ್ರೀತಿ
ರೋಹಿಣಿ ಚಂದಿರನಂತೆ ನಾವು
ಜೊತೆ ಜೊತೆಯಲಿ ಸಾಗಬೇಕು ಜೀವನವು

ಅಮಾವಾಸ್ಯೆಗೆ ರಜೆಯನ್ನು ಹಾಕಿ
ಸ್ಪೂರ್ತಿಯ ತಾರೋ ಓ ಸುಂದರ
ನಿನ್ನ ಹಾಲ್ಬೆಳದಿಂಗಳಿನಂತೆಯೇ 
ಬೆಳಗಲಿ ನಮ್ಮೀ ಹೃದಯ ಮಂದಿರ

1043ಪಿಎಂ28022022
*ಅಮುಭಾವಜೀವಿ ಮುಸ್ಟೂರು*
    
 ಶಿವನೇ ನಿನ್ನ ರಾತ್ರಿಯಲ್ಲಿ
ನೆನ್ನೆ ನಮಗೆ ಪುಣ್ಯಪ್ರಾಪ್ತಿ ಖಾತ್ರಿಯೂ
ಶಂಕರ ನೀನು ಸುಂದರ ವದನನು
ಭಕ್ತರಿಗಾಗಿ ತನ್ನನ್ನೇ ತಾ ನೀಡುವವನು

ಶಂಕರಿಯ ಪ್ರಾಣ ವಲ್ಲಭ
ನಿನ್ನ ವಾಹನನೇ  ವೃಷಭ 
ಅರ್ಧನಾರೀಶ್ವರ ಈ ಅಭಯಂಕರ
ಶರಣರ ಪಾಲಿನ ಶಂಭೋ ಶಂಕರ

ಕಣ್ಣಪ್ಪನಿಂದ ಕಣ್ಣನ್ನು ಪಡೆದ
ಮುಕ್ಕಣ್ಣ ನೀನು ಆಪ್ತರಕ್ಷಕ
ಗಣಪನಿಗೆ ಆನೆಯ ಮೊಗವಿತ್ತ
ಕೃಷ್ಣನ ಆರಾಧ್ಯ ಈ ಲಿಂಗ ಸ್ವರೂಪ

ಪ್ರೀತಿಯಲ್ಲಿ ಕರೆದರೆ ಕ್ಷಣದಲ್ಲಿ ಬರುವ
ಬಂದೊಡನೆ ಕೋರಿಕೆಯನ್ನು ಈಡೇರಿಸುವ
ಬೂದಿ ಬಡುಕ ಈ ಸ್ಮಶಾನ ರುದ್ರ
ಅವನೊಲುಮೆಯ ಪಡೆದ ಬಾಳು ಸುಭದ್ರ

ನಾಟ್ಯ ಪ್ರವೀಣ ಈ ನಟರಾಜನು
ವಿಷವನ್ನು ಕುಡಿದ ವಿಷಕಂಠನೂ
ಲಯಕಾರಕ ಬಲು ವಿನಯವಂತನು
ಕೋಪಗೊಂಡರೆ ರುದ್ರತಾಂಡವನೀತನು

ನಿನ್ನ ಕೃಪೆ ಇರಲಿ ನಮ್ಮ ಮೇಲೆ
ನಮ್ಮ ಆರಾಧ್ಯ ದೈವ ಶಿವಶಂಕರ
ನೀ ನಡೆಸಿದಂತೆ ನಾ ನಡೆಯುವೆವು
ಸಲಹು ನಮ್ಮನು ಮುರುಡೇಶ್ವರ

1106ಪಿಎಂ01032022
*ಅಮುಭಾವಜೀವಿ ಮುಸ್ಟೂರು* 

    ಬೇಲಿಯ ಹಾಕಿದೆ ಬದುಕು
ಹಾರಲಾಗದ ಬಂಧನದಿ ಸಿಲುಕಿ
ಆನಂದವನ್ನೇ ಕಳೆದುಕೊಂಡಿದೆ
ಪಂಜರದೊಳಗಿನ ಬದುಕು
ಸವಿ ಭೋಜನದ ಸುಖ
ಎಷ್ಟಿದ್ದರೇನು ಹಿತ ಕೊಡಬಲ್ಲದೇ

ದಾಹ ನೀಗದವನ ಜೊತೆ
ಎಷ್ಟು ದಿನ ಕಳೆದರೆ ಏನಂತೆ
ಮರುಭೂಮಿಯಲ್ಲಿ ನೀರನರಸಿದಂತೆ
ನಾಯಿ ಮುಟ್ಟಿದ ಮಡಿಕೆ ಬಾಯಿ
ಮುಚ್ಚುವ ಅನುಕಂಪಕ್ಕೆ ಕಟ್ಟಿದ ತಾಳಿ
ನರಕ ತೋರುವುದಲ್ಲದೆ ನಾಕವಾಗದು

ಕೊಟ್ಟ ಕುದುರೆಯ ಕಟ್ಟಿಹಾಕದ ಹಮ್ಮೀರ
ಸಿಂಹಾಸನದ ಮೇಲೆ ಇದ್ದರೇನಂತೆ
ಪ್ರಾಯ ಲಾಯದ ಅಷ್ಟವಕ್ರನಿಗೆ ಸಮನಲ್ಲ
ಹುಟ್ಟ ಬಟ್ಟೆಯೊಳಗಿನ ಉರಿ ತಣಿಸಲು
ಬೆತ್ತಲೆ ತನುವನಪ್ಪಿ ಅಧರಚುಂಬನದಿ
ಕಾಮಕಟ್ಟೆಯನೊಡೆವ ಸರದಾರ ಬೇಕು

ದೇವರ ಹೆಸರಿನಲ್ಲಿ ದಾಸಿಯಾಗಿ
ಹೇಸಿಗೆ ಪಡದ ಊರವರಿಗೆ ಹಾಸಿಗೆಯಾಗಿ
ಸುಲಿದ ಹ(ಹೆ)ಣ್ಣಿನ ಸಿಪ್ಪೆಯಾಯಿತು ಬದುಕು
ವೇಷ್ಯೆಗದು ದುಡಿಯುವ ಮಾರ್ಗ
ಸಾರವಿದ ಸಂಸಾರದೊಳಗೆ ಈಗ
ಉಗುಳಲಾರದ ನುಂಗಲಾರದ ನರಕದ ಬದುಕು

1049ಪಿಎಂ03032022
*ಅಮುಭಾವಜೀವಿ ಮುಸ್ಟೂರು*
    
ಒಡಲೊಳಗೆ ಬೆಂಕಿ ಕುದಿಯುತಿದೆ
ಹರೆಯವದಕ್ಕೆ ತುಪ್ಪ ಸುರಿಯುತ್ತಿದೆ
ಬೇಯುವ ಭಯದಲ್ಲಿ ಕಾದಿದೆ ಹೃದಯ
ನಲ್ಲನ ಬಿಸಿ ಅಪ್ಪುಗೆಗಾಗಿ ಸಂಜೆ ಸಮಯ

ಬೇಡದ ಕೊರಳಿಗೆ ತಾಳಿಯ ಕಟ್ಟಿ
ನಾಳೆಯ ಭರವಸೆಗೆ ಕೊಳ್ಳಿಯನ್ನಿಟ್ಟು
ಮದ್ಯದ ದಾಸನಾಗಿ ಸದ್ದಡಗಿಹನು
ಇರುಳು ಜಾರುವ ಮುನ್ನ ಕರೆ ತರಬೇಕಿದೆ

ತನು ಶೃಂಗಾರವನ್ನು ಬಯಸಿದೆ
ಮನ ಇವನಿಂದ ನೊಂದು ಸೊರಗಿದೆ
ಆನಂದವೆಂಬುದು ನಂದಿ ಹೋಗಿದೆ
ಮೈ ಮಾಡಿಕೊಂಡಿಹೆ ವಿಧಿಯಿಲ್ಲದೆ

ಕೈಲಾಗದವನು ಕುಡಿತದ ಆಸೆಗೆ
ಉಳ್ಳವರ ಮಂಚಕ್ಕೆ ತಳ್ಳಿ ಮಲಗಿಹನು
ಕರುಳಿಂಡಿದರೂ ಕೊರಳೊಡ್ಡಿದ ತಪ್ಪಿಗಾಗಿ
ಕೈ ಚಾಚಿ ನಿಂತಿರುವೆ ಕದತೆರೆದು

ಕಂಡ ಕನಸುಗಳೆಲ್ಲ ಸೋತವು
ದಿನಕ್ಕೊಬ್ಬನ ತೃಷೆ  ನೀಗುತ ತನುವು
ಮುಳ್ಳ ಮೇಲಿನ ವಸ್ತ್ರದಂತಾಗಿದೆ
ಮಿಸುಕಿದರು ಹರಿದು  ವ್ರಣವಾಗುತ್ತಿದೆ

ಇಷ್ಟೇ ತಾನೇ ಹೆಣ್ಣಿನ ಬಾಳು
ಕೈ ಹಿಡಿದವನು ಕೈಬಿಟ್ಟರೆ ಗೋಳು
ಸತ್ತು ಸಾಧಿಸುವುದೇನಿದೆಂದುಕೊಂಡರೆ
ನಾನೀಗ ನಿತ್ಯ ನರಕ ಉಣ್ಣುವವಳು

1057ಪಿಎಂ04032022
*,., 
ಅಮುಭಾವಜೀವಿ ಮುಸ್ಟೂರು*
    
*ನಾಳೆಯ ಭರವಸೆಯೊಂದಿಗೆ ಇಂದು ಬಾಳಬೇಕು*

     ಈ ಬದುಕು ಬಲು ಸ್ವಾರ್ಥಿ. ನಾವು ಎಷ್ಟೇ ಪ್ರಯತ್ನಪಟ್ಟರೂ ಅದು  ತನಗೆ ಹೇಗೆ ಬೇಕೋ ಹಾಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಕೆಲವೊಂದು ಬಾರಿ ಬದುಕು ನಮ್ಮ ಹಿಡಿತಕ್ಕೆ ಸಿಕ್ಕರೂ ಕೂಡ ಹಲವು ಬಾರಿ ಅದು ನಮ್ಮನ್ನು ಹಲವಾರು ಬಿಕ್ಕಟ್ಟುಗಳಲ್ಲಿ ಸಿಲುಕಿಸಿ ನಾವು ಹಿಡಿದ ಹಿಡಿತವನ್ನು ಸಡಿಲಿಸಿಕೊಂಡು ಮುನ್ನಡೆಯುತ್ತ ನಮಗೆ ಹಲವಾರು ಸಂಕಷ್ಟಗಳನ್ನು ನೀಡುವ ಮೂಲಕ ಅನುಭವದ ಪಾಠಗಳನ್ನು ಹೇಳಿಕೊಡುತ್ತದೆ. ನಮ್ಮ ಬದುಕು ನಮ್ಮ ಹಿಡಿತವನ್ನು ತಪ್ಪದಂತೆ ತುಂಬಾ ಜಾಗರೂಕತೆಯಿಂದ ಅದನ್ನು ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಅಕ್ಕ-ಪಕ್ಕ ಹಿಂದೆ ಮುಂದೆ ನೆರೆಹೊರೆಯ ಯಾವ ಮಾತುಗಳಿಗೂ ನಾವು ಕಿವಿಗೊಡದೆ ನಡೆದಾಗ ಮಾತ್ರ ನಮ್ಮ ಬದುಕು ಸುಸೂತ್ರವಾಗಿ ಸಾಗುತ್ತಿರುತ್ತದೆ. ಅವರ ಆಡುವ ಮಾತುಗಳಿಗೆ ಕಿವಿಗೊಟ್ಟೆವೆಂದರೆ ನಮ್ಮ ಬದುಕಿನ ಅವನತಿಯ ಅಲ್ಲಿಂದಲೇ ಶುರುವಾಗುತ್ತದೆ. ನಮ್ಮ ಬದುಕನ್ನು ನಾವೇ ಮುನ್ನಡೆಸಬೇಕೇ ವಿನಃ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ನಾವು ಯಾವುದೋ ಒಂದು ಮಾತಿಗೆ ಕಟ್ಟುಬಿದ್ದು ನಮ್ಮ ಬದುಕಿನ ಹಿಡಿತವನ್ನು ಅವರ ಕೈಗೆ ನೀಡಿದೆವೆಂದರೆ ಮುಗಿಯಿತು ನಾವು ನಮ್ಮ ಜೀವನದ ಗುರಿಯನ್ನು ಕಳೆದುಕೊಂಡು ಯಾವುದೋ ಮೋರಿ ಸೇರಿ ಬಿಡುತ್ತೇವೆ. ಹಾಗಾಗಿ ಯಾರು ಏನೇ ಅಂದರೂ ಯಾವುದೇ ಸಲಹೆ ಸೂಚನೆ ನೀಡಿದರು ಅಂತಿಮವಾಗಿ ತೀರ್ಮಾನಿಸಿ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ನಮ್ಮದೇ ಆಗಿರುತ್ತದೆ.

        ಜೀವನದಲ್ಲಿ ಕಷ್ಟಗಳು ಬರುವುದು ಹಾದಿ ತಪ್ಪಿದ ಬದುಕನ್ನು ಸರಿದಾರಿಗೆ ತಂದುಕೊಳ್ಳಲು ಇರುವ ಒಂದು ಅವಕಾಶ. ನಡೆಯುವ ಮನುಷ್ಯ ಎಡವುವುದು ಸಹಜ. ಎಡವಿ ಬಿದ್ದ ಜಾಗದಲ್ಲಿ ಆದ ನೋವು ಇಡೀ ಬದುಕಿನುದ್ದಕ್ಕೂ ನಮ್ಮನ್ನು ಮತ್ತೆ ಬೀಳದಂತೆ ಊರುಗೋಲಾಗಿರುತ್ತದೆ. ಎಂತಹ ಮಹನೀಯರೇ ಆದರೂ ಸಾಧಕರೆನಿಸಿ ಕೊಂಡವರು ಒಮ್ಮೆ ಜೀವನದಲ್ಲಿ ಬಿದ್ದ ಮೇಲೆಯೇ ಎದ್ದು ನಿಂತು ಬದುಕನ್ನು ಉತ್ತುಂಗಕ್ಕೆ ಹೊಯ್ದು ಇತರರಿಗೆ ಮಾದರಿಯಾಗುತ್ತಾರೆ. ಹಾಗೆ ನಾವು ಕೂಡ ಬಾಳುವ ಭರದಲ್ಲಿ ಸೋತೆವೆಂದು ಹತಾಶರಾಗದೆ ಸಾಧಿಸುವ ಹೊಸ ಹುಮ್ಮಸ್ಸಿನೊಂದಿಗೆ ಮುನ್ನಡೆಯಬೇಕು. ನಾವು ಬಿದ್ದ ಸಮಯದಲ್ಲಿ ನಕ್ಕವರ ಎದುರು ಎದ್ದು ನಿಲ್ಲಬೇಕು. ಆ ಭರವಸೆಯ ಆತ್ಮವಿಶ್ವಾಸ ನಮ್ಮಲ್ಲಿ ಅಚಲವಾಗಿರಬೇಕು. ನಗುವ ತುಟಿಗಳು ಎಂದಿಗೂ ಮೇಲೆತ್ತುವ ಕೈಗಳಾದವು. ಕುಹಕವಾಡಿ ನಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ ಮಾತುಗಳಿಗೆ ಎಂದು ಕಿವಿಗೊಡಬಾರದು. ಯಾರು ಏನೇ ಹೇಳಿದರೂ ನಾವು ನಂಬಿದ ತತ್ವ ಆದರ್ಶ ಬದುಕಿನ ಬಗೆಗಿನ ನಮ್ಮ ಗುರಿ ವಿಶ್ವಾಸ ನಂಬಿಕೆ ಇದೆಲ್ಲದಕ್ಕೂ ಮಿಗಿಲಾಗಿ ಎಂಥದ್ದೇ ಸಂದರ್ಭದಲ್ಲೂ ಹಿಂದೆ ಸರಿಯಾದ ಸಾಧಿಸಿಯೇ ತೀರುವ ಛಲ ನಮ್ಮಲ್ಲಿ ಅಚಲವಾಗಿರಬೇಕು.

        ಜೀವನದಲ್ಲಿ ಸೋತವರು ಯಾರು ಸತ್ತಿಲ್ಲ, ಸೋಲು ಸಾಯುವುದಕ್ಕೆ ಅಲ್ಲ ಸಾಧಿಸುವುದಕ್ಕೆ ಎಂದುಕೊಂಡಾಗ ಯಾವ ಹತಾಶೆಯ ನಮ್ಮನ್ನು ಕುಗ್ಗಿಸುವುದಿಲ್ಲ. ಸಾಧಕರ ಹಾದಿಯು ಕೂಡ ಕಲ್ಲು ಮಣ್ಣಿನಿಂದ ಕೂಡಿದ್ದರು ಅವರು ಸಾಧಿಸಿದ ನಂತರ ಅದೇ ಹಾದಿ ಇತರರಿಗೆ ಉತ್ತಮ ಮಾರ್ಗವಾಗಿ ತೋರುತ್ತದೆ. ಆದರೆ ನಮ್ಮ ನಮ್ಮ ಹಾದಿಗಳು ಯಾವತ್ತಿಗೂ ಭಿನ್ನ ಭಿನ್ನವಾಗಿಯೇ ಇರುತ್ತವೆ. ಬದುಕನ್ನು ನಾವು ನೋಡುವ ರೀತಿಯಂತೆಯೇ ಮುನ್ನಡೆಸಿಕೊಂಡು ಹೋಗುವುದು ನಮ್ಮ ಗುರಿ ಸಾಧನೆಯ ಮೊದಲ ಮೆಟ್ಟಿಲಾಗಿ ಇರಬೇಕು. ಅವರು ಹೇಳಿದರು ಅವರು ಹೇಳಿದರು ಎಂದು ನಮ್ಮ ದಾರಿಯ ಮಧ್ಯೆ ಕವಲುಗಳೆದ್ದರೆ ನಾವು ಸಾಗುವ ದಾರಿಯ ಕ್ಷಮತೆ ಕಡಿಮೆಯಾಗುತ್ತದೆ. ನಮ್ಮ ಗುರಿ ಸಾಧನೆಯಲ್ಲಿ ಮೂರನೆಯವರ ಕಿವಿ ತುರಿಸುವಿಕೆಗೆ ಅವಕಾಶ ನೀಡಲೇಬಾರದು. ಆಗ ಮಾತ್ರ ನಾವು ಜಯದ ನಗೆ ಬೀರಬಹುದು.

       ನಾವು ಜೀವನದಲ್ಲಿ ಅದೆಷ್ಟೇ ಬಾರಿ ಸೋತರೂ ಮರಳಿ ಯತ್ನವ ಮಾಡಿ ಜೇಡ ಮೇಲೇರುವಂತೆ ನಾವು ಕೂಡ ಸತತ ಪರಿಶ್ರಮದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬೇ ಬದುಕಿನಲ್ಲಿ ನಾವು  ಶರಣಾಗುವ ಬದಲು ತುಸು ಸೈರಣೆಯಿಂದ ಯಶಸ್ಸಿನ ಪ್ರೇರಣೆಯೊಂದಿಗೆ ಗೆದ್ದೇ ಗೆಲ್ಲುವೆ ಎಂಬ ಭರವಸೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪರಿಪಾಠದ ಪುಟದಲ್ಲಿ ನಮ್ಮ ಸಾಧನೆಯು ದಾಖಲಾಗುತ್ತದೆ. ಅದು ಸಾಧ್ಯವಾಗಬೇಕೆಂದರೆ ಇಂದು ಇಂದಿಗೆ ಮುಗಿಯಿತು ಎಂದು ಕೊಳ್ಳುವುದಕ್ಕಿಂತ ಇಂದು ಸಾಧ್ಯವಾಗದ್ದು ನಾಳೆ ಸಾಧ್ಯವಾಗುವುದೆಂದುಕೊಂಡರೆ ಯಾವುದು ಅಸಾಧ್ಯವಾಗಿ ಉಳಿಯದು. ಪ್ರತಿ ಸೋಲಿನ ಕುರಿತಾದ ಇಂತಹ ಧನಾತ್ಮಕತೆ ಸಾಧಿಸುವ ಉದ್ದೇಶಕ್ಕ ಉತ್ಸುಕತೆಯನ್ನು ನೀಡುತ್ತದೆ. ಆ ಉತ್ಸಾಹವನ್ನು ನಾವು ಎಂದಿಗೂ ಕಳೆದುಕೊಳ್ಳದಂತೆ ಸಾಗುವ ಮೂಲಕ ಸಂತೃಪ್ತ ಬದುಕಿಗೆ ನಾವು ಆಪ್ತರಾಗೋಣ.

0439ಎಎಂ09032022
*ಅಮುಭಾವಜೀವಿ ಮುಸ್ಟೂರು* 


    ದಿನದಾರಂಭದ ಮುಂಜಾನೆ 
ಹೊಸ ಭರವಸೆಯೀವ ಸೂಚನೆ 
ತಂಪಾಗಿ ಶುರುವಾಯಿತು ದಿನ
ಸಜ್ಜಾಗಲಿ ಕಾರ್ಯಕೆ ಈ ಮನ

ಉಷೆಯ ಕಿರಣ ಮೆಲ್ಲ ತಾಕಲು
ಹೂ ಪಕಳೆ ತೆರೆದು ಅರಳಲು 
ಮಧುರ ಗಾನದ ಹಕ್ಕಿ ಕೊರಳು
ಹೊಳೆವ  ಆ ಮಂಜಿನ ಹನಿಗಳು 

ಇರುಳ ಸಂಕಷ್ಟವ ದಾಟಿ
ಹೊಸ ಚೈತನ್ಯವ ತುಂಬಿ 
ಬೆಳಗು ಮೂಡಿತು ಉಲ್ಲಾಸದಿ
ಬದುಕಿನ ಪುಟ ತೆರೆಯಲು 

ಪ್ರಕೃತಿ ಮಾತೆಯು ಈಗ
ನವನವೋನ್ಮೇಷಶಾಲಿನಿ
ಪ್ರತಿ ಕ್ಷಣವೂ ಹೊಸತನದಿ
ಹರಿಯುತಿದೆ ಭಾವವಾಹಿನಿ

ಆಸ್ವಾದಿಸುತ  ಅನುಭವ ಪಡೆದು
ಕಾಲದೊಂದಿಗೆ ಹೊಂದಿ ನಡೆದು
ಬಾಳ ಕಟ್ಟಿಕೊಳ್ಳೋಣ ನಿತ್ಯ 
ನಿಸರ್ಗದ ಚೆಲುವಿದು ಸತ್ಯ

0710ಎಎಂ17022022
 *ಅಮುಭಾವಜೀವಿ ಮುಸ್ಟೂರು*

    
    ಸೋತವರ ಮೇಲೆ ಇಲ್ಲಿ
ನಿತ್ಯ ಆರೋಪದ ಸುರಿಮಳೆ
ಗೆದ್ದವನ ಹೊತ್ತು ಮೆರೆಸುವರು
ಗೆಲುವನ್ನೇ ಎಲ್ಲ ಸಂಭ್ರಮಿಸುವರು

ಜಯವು ಹೇಗೆ ಬಂದಿತೆಂದು
ಯಾರು ತಲೆಕೆಡಿಸಿಕೊಳ್ಳರು ಇಲ್ಲಿ
ಗೆಲುವೊಂದೇ ಮುಖ್ಯ ಹಾದಿಯಲ್ಲ
ಶರಣಾಗತಿಯ ಎಂದು ಸೋಲಲ್ಲ

ಗೆದ್ದೇ ಗೆಲ್ಲುವೆನೆಂದು ಹೊರಟವನಿಗೆ
ನೂರು ಜನ ಅಡ್ಡಗಾಲಾಗಿ ತಡೆಯುವರು
ಬೆಣ್ಣೆ ಮಾತು ಹಣದ ಗಮ್ಮತ್ತು ಇದ್ದರೆ ಸಾಕು
ಗೆದ್ದೆತ್ತಿನ ಬಾಲ ಹಿಡಿಯುವವರೇ ಎಲ್ಲ

ಸೋತವನ ಪ್ರಯತ್ನದ ಮುಂದೆ
ಗೆದ್ದವನು ಬಲಾಡ್ಯನಾಗಿರಬಹುದು
ಗೆಲ್ಲುವವನಿಗೆ ಎದುರಾಳಿಯಾಗಿ ನಿಂತವನು
ಎಂದಿಗೂ ಬಲಹೀನನಾಗಿರಲಾರ

ಶಕುನಿಯಂತ ಜನರ  ಕುಬುದ್ಧಿಯಿಂದ
ಕೊಂಡಿಮಂಚಣ್ಣನಂತವರ ಕುತಂತ್ರದಿಂದ
ಕೈಕೆಯಂತ ಕೃಷಮತಿಯ ಸಹಾಯದಿಂದ
ಗೆದ್ದೆ ಗೆಲುವೆಂದಿಗೂ ಸಾರ್ಥಕತೆ ಪಡೆಯದು


ಸೋತವನು ಸತ್ತರೆ ಏನಂತೆ
ಪ್ರತಿಸ್ಪರ್ಧೆ ನೀಡಿದ ಹೆಮ್ಮೆಯದು
ಸ್ವಾರ್ಥವಿಲ್ಲದ ಗೆಲುವು ಶ್ರೇಷ್ಠ
ಆಗದಕ್ಕೆ ಜಗದೆಲ್ಲೆಡೆ ಮನ್ನಣೆ ಸಿಗುವುದು

1045ಪಿಎಂ02032022
*ಅಮುಭಾವಜೀವಿ ಮುಸ್ಟೂರು*

ಮೂಡಣಕ್ಕೆ ರಂಗನು ಎರಚಿ
ಹಕ್ಕಿ ಹಾಡಿನ ಗುಂಗು ಬೆರೆಸಿ
ಮುಂಜಾನೆಗೆ ಮಂಜಿನಹನಿ ಸ್ವಾಗತಿಸಿ
ಸಂಭ್ರಮಿಸುತ್ತಿದೆ ಪ್ರಕೃತಿ ಈಗ

ಬದುಕಿನ ಪುಟ ತೆರೆದು
ಕಾಲದ ಜೊತೆ ಕಥೆ ಬರೆದು
ಕೈಹಿಡಿದಿದೆ ಕಾಲದ ಬರಹ
ದಿನದಾರಂಭಕೆ ಹೊಸತನದಿ

ಅರಳುವ ಹೂವಿನಿಂದ ಮುನ್ನುಡಿ ಬರೆಸಿ
ಮೇಲು ತಂಗಾಳಿಯಿಂದ ಸಂಗೀತ ಬೆರೆಸಿ
ದುಂಬಿಯ ಝೇಂಕಾರದ ಜೊತೆ ಹಾಡಿಸಿ
ಸುಪ್ರಭಾತ ಮೊಳಗಿಸಿದೆ ನಿಸರ್ಗ ವಾಣಿ

ಬಲು ರೋಚಕ ಇದರ ಬರಹ
ಯಾರು ಬರೆಯಲಾರರು ಅದರ ವಿನಹ
ಇದರ ಅನುಭವ ಪಾಠಕ್ಕೆ ಸಾಟಿಯೇ ಇಲ್ಲ
ಸೋಜಿಗವೇ ತುಂಬಿದೆ ಈ ಶಾಲೆಯಲ್ಲಿ

ಬೇಗನೆ ಎದ್ದು ಕಲಿಯೋಣ ಬಾರ
ಮುಂಜಾನೆ ಇದು ಬಲು ಸುಂದರ
ಎಲ್ಲ ನೋವ ಮರೆಸಿ ನಗುವ ತರಿಸಿ
ಬೆಳೆಯುತ್ತಾ ಬೆಳೆಸುತ್ತಿದೆ ಈ ಪ್ರಕೃತಿ

ತಾರತಮ್ಯ ಇದಕ್ಕೆ ಇಲ್ಲ
ಮೇಲು-ಕೀಳು ಮಾತೇ ಇಲ್ಲ
ಸಹಬಾಳ್ವೆಯ ಸುಂದರ ಕಥನ
ಚೆಲುವೊಲವಿನ ಈ ಕವನ

0807ಎಎಂ12032022
*ಅಮುಭಾವಜೀವಿ ಮುಸ್ಟೂರು*

ಅವಳ ಒಪ್ಪಿಗೆಯಿಲ್ಲದೇ
ನನ್ನ ಯಾವ ಬರಹಕ್ಕೂ
ಜೀವ-ಜೀವನವೆರಡು ಇಲ್ಲ
ಅವಳ ಮೊಗದಿ ನಗು ತರಿಸಿ
ಅವಳ ಹೃದಯವನೊಮ್ಮೆ ಒಪ್ಪಿಸಿ
ಜೀವ ತುಂಬುವವರೆಗೂ ನಿಲ್ಲಿಸುವುದಿಲ್ಲ

ನಾ ಬರೆದುದೆಲ್ಲಾ ಅವಳ
ಒಲವಿನ ಪರಿಪರಿ ಬೇಡಿಕೆ
ನನ್ನ ಅವಳ ನಡುವಿನ ಒಡಂಬಡಿಕೆ
ಈ ಬರಹವೆಲ್ಲ ಅವಳ ಪೂಜೆಗೆ
ಪ್ರತಿ ಸಾಲು ಅವಳಿಗಾಗಿಯೇ ಕಾಣಿಕೆ
ಅವಳು ಓದುವವರೆಗೆ ನನ್ನೊಳಗೆ ಚಡಪಡಿಕೆ

ನಮ್ಮಿಬ್ಬರದು ಹಾಲುಜೇನು ಮಿಶ್ರಣ
ನಾವು ಸಂಧಿಸಲು ಒಲವೇ ಕಾರಣ
ಆ ಗೆಲುವಿಗೆ ನನ್ನದೊಂದು ಪ್ರಣಾಮ
ಜಗಳವಾಡಿದರು ಜೊತೆಜೊತೆಯಲಿರುವೆವು
ಜೀವನದ ಬಂಡಿಯನ್ನು ಸಮನಾಗಿ ಎಳೆವ ನಾವು
ಹೊಂದಿಕೊಂಡು ಬಾಳಲು ಕಡೆಗೀಲು ಈ ಪ್ರೇಮ

ದೂರುವ ಮಾತೆಲ್ಲಿದೆ ಪ್ರೀತಿಯೊಳಗೆ
ಸೇರುವ ತವಕವಿದೆ ಎದೆಯೊಳಗೆ
ಒಲವಿನ ಅಂಟು ನಂಟ ಬೆಸೆದಿದೆ
ಬದುಕಿರುವೆವು ಉಸಿರಿರುವವರೆಗೆ
ಹಮ್ಮು-ಬಿಮ್ಮುಗಳಿಲ್ಲ ನಮ್ಮೊಳಗೆ
ನಾನು ಪತಿ ಅವಳು ಸತಿ ಸುಖೀ ದಂಪತಿ

1115ಪಿಎಂ14032022
*ಅಮುಭಾವಜೀವಿ ಮುಸ್ಟೂರು*
    
    ಚಂದಿರನಿಲ್ಲದ ಬಾನೊಳಗೆ  
ಏನಿದೆ  ಅಂದ
ನಲ್ಲೆ ನಿನ್ನ ನಗುವಿಲ್ಲಿದೆ
ಎಲ್ಲಿದೆ ಹೇಳು ಆನಂದ
ಪ್ರೀತಿಯ ಕೋರಿಕೆ ಇದು
ಪ್ರತಿ ಕ್ಷಣವು ಬೇಡಿಹುದು

ತಾರೆಗಳ ಜೊತೆ ಶಶಿ ಬಂದರೆ ತಾನೇ
ಇರುಳ ಈ ಬಾನೊಳಗೆ ಬೆಳಕು
ಫಳಫಳ ಹೊಳೆವ ನಯನಗಳ ಜೊತೆ
ನಿನ್ನೀ ನಗು ಬೆರೆತರೆ ಸುಂದರ ಬದುಕು
ತಂಗಾಳಿಯು ತೀಡಿದ ಹಾಗೆ
ನಲ್ಲೆ ನಿನ್ನೀ ಮುಗುಳ್ನಗೆ

ಅರಳಿದೆ ನೈದಿಲೆ ಬೆಳದಿಂಗಳ ಕಂಡು
ಕೆನ್ನೆಯ ಮುತ್ತಿದೆ ಮುಂಗುರುಳ ದಂಡು
ತಣ್ಣನೆ ಹೊತ್ತಲಿ ಬೆಚ್ಚನೆ ಅನುಭವ
ಪ್ರೀತಿ ಸಾಗರ ಒಮ್ಮೆಲೆ ಉಕ್ಕುವ ಸಂಭವ
ಈ ರಾತ್ರಿಯು ಸರಿಯದೆ ನಿಂತು ಬಿಡಲಿ
ಮಗುವಾಗಿ ಹೀಗೆ ಮಲಗುವೆ ನಿನ್ನ ಮಡಿಲಲಿ

ಆಹಾ ಎನಿಸುವ ಹಿತಕರ ರಾತ್ರಿ
ಬೆಚ್ಚಗೆ ಮಲಗಿದೆ ಧರಿತ್ರಿ
ನಲ್ಲೆ ನಿನ್ನ ಒಲವಿದು ಖಾತ್ರಿ
ಎಂದೆಂದಿಗೂ ಅಮರ ನಮ್ಮಿ ಮೈತ್ರಿ
ನಿಜವಾಯಿತು ಒಲವಿನ ಸಾಂಗತ್ಯ 
ಖುಷಿಯ ಹಂಚಿತು ಈ ನಮ್ಮ ದಾಂಪತ್ಯ

0948ಪಿಎಂ15032022
*ಅಮುಭಾವಜೀವಿ ಮುಸ್ಟೂರು*

    
ಕನ್ನಡ ಉಳಿಸಲು 

ನುಡಿಯ ಅಡಿಯಲ್ಲಿ
ನಾಡಿಗಾಗಿ ದುಡಿಯೋಣ
ಕನ್ನಡವ ಉಳಿಸಿ-ಬೆಳೆಸಲೆಂದೇ
ಪಣತೊಡೋಣ

ಪಂಪ-ರನ್ನರಲಿ ಕಾವ್ಯ ಕಟ್ಟಿಸಿ
ಮಯೂರ ಪುಲಕೇಶಿಯ ಪರಾಕ್ರಮದಿ
ಕಟ್ಟಿದ ನಾಡಿಗೆ ನಾವಿಂದು
ಅಭಿಮಾನದ ಜ್ಯೋತಿಯ ಬೆಳಗೋಣ

ಕುವೆಂಪು ಕಾರಂತ ಬೇಂದ್ರೆಯವರಿಗೆ
ಜ್ಞಾನಪೀಠದ ಮುಕುಟವಿರಿಸಿ
ಕಲೆ ಸಾಹಿತ್ಯ ಸಂಸ್ಕೃತಿ ಬೆಳೆಸಿದ
ಕರುಣೆಯ ನಾಡಿಗೆ ಒಡನಾಡಿ ಆಗೋಣ

ಕರಾವಳಿಯ ತೀರದಲ್ಲಿ
ನದಿಯು ಸೇರುವ ತವಕದಲ್ಲಿ
ಸಹ್ಯಾದ್ರಿಯ ಹಸಿರು ಸಿರಿಯ
ಸಂಪತ್ತಿಗೆ ಆಪತ್ತು ಬರದಂತೆ ಕಾಯೋಣ

ನಾಡು-ನುಡಿಗಾಗಿ ಟೊಂಕ ಕಟ್ಟಿದವರ
ಬಿಂಕಕೆ ಚ್ಯುತಿಬಾರದಂತೆ ಸಂಘಟಿಸೋಣ
ಈ ವರ್ಣಮಾಲೆಯ ಸುಸ್ವರ
ಕಿವಿಗಳ ತುಂಬಿ ರಿಂಗಣಿಸಲಿ

ಕನ್ನಡಕ್ಕಾಗಿ ಕೈ ಎತ್ತು
ಓ ಕನ್ನಡದ ಧೀರ
ನಾಡು-ನುಡಿಯ ಉಳಿವಿಗೆ
ನಿನ್ನ ಹೋರಾಟವಾಗಲಿ ಅಮರ

0239ಪಿಎಂ25112015


ಕನ್ನಡವೇ ತಾಯ್ನುಡಿಯು
ಕರುನಾಡೆ ತಾಯ್ನೆಲವು
ಲೋಪವಾಗದಂತೆ ದೀಪ
ಹಚ್ಚುವ ಬನ್ನಿ ನುಡಿ ಉಳಿಯಲು

ತಮಿಳು ತೆಲುಗೊಡನೆ ಸ್ಪರ್ಧಿಸಿ
ಮರಾಠಿ ಮಲೆಯಾಳಿಗಳ ಹಿಮ್ಮೆಟ್ಟಿಸಿ
ಆಂಗ್ಲಭಾಷೆಯ ಆಕ್ರಮಣವನ್ನು
ಪ್ರತಿರೋಧಿಸಿ ಉಳಿಸಿಕೊಳ್ಳುವ ನಮ್ಮತನ

ನೆಲ ಜಲ ಕಾಗಿ ನಿತ್ಯ ಉಪಟಳ
ಕೊಡುವವರಿಗೆರೆಗಿದೆ ಈಗ ಕಳವಳ
ಕೈಹಿಡಿದು ಮೇಲೆತ್ತೋಣ
ಕನ್ನಡಿಗರ ಸೌಹಾರ್ದತೆ ತೋರೋಣ

ಜ್ಞಾನಪೀಠದ ಅಧಿಪತಿಗಳಾಗಿ
ಕಲೆ-ಸಂಸ್ಕೃತಿಗಳ ಪೋಷಕರಾಗಿ
ಅನುಭಾವದ ವಚನಗಳ ಮಂತ್ರ ಹಾಡಿ
ಜಾನಪದ ತ್ರಿಪದಿಗಳ ವಂದಿಸೋಣ

ಪ್ರೀತಯಲಿ ನಾವೆಲ್ಲ ಗೆಲ್ಲೋಣ
ಶಾಂತಿಯಲಿ ಎಲ್ಲವನು ಪಡೆಯೋಣ
ರಕ್ತರಹಿತ ಕ್ರಾಂತಿ ಮಾಡಿ
ಈ ಗಂಧದಗುಡಿಯಲ್ಲಿ ಬಾಳೋಣ

ಕರುನಾಡಿಗೆ ಜಯವೆನ್ನಿರಿ
ಕನ್ನಡವನ್ನೇ ಉಸಿರಾಡಿರಿ
ಚಿರ ಉಳಿಯಲಿ ಈ ಭಾಷೆ
ಅದೇ ಕನ್ನಡಿಗರೆಲ್ಲರ ಅಭಿಲಾಷೆ

0254ಪಿಎಂ25112015
ಅಮುಭಾವಜೀವಿ ಮುಸ್ಟೂರು 


ಬೆಳಕಿನಿಂದ ಹೂವು ಬಾಡಿತ್ತು
ಕ್ರೂರ ಬೆಳಕು ಮಾತ್ರ ಮೆರೆಯುತ್ತಿದೆ
ಇಂಥ ದುಷ್ಟತನಕ್ಕೆ ಬಲಿಯಾಗುವ
ಅಮಾಯಕರಿಗೆ ಪಾಠವಾಗಬೇಕಿದೆ

    
ಹೊಸತನದ ಹುಮ್ಮಸ್ಸಿನಲ್ಲಿ ಏನನ್ನೋ ಸಾಧಿಸಿ ಬಿಡಬೇಕೆಂಬ ಹುಚ್ಚು ಹಂಬಲದಲ್ಲಿ ಹೋಗುತ್ತಿರುವ ದಾರಿ ಸರಿಯಾದದ್ದೋ ಸುರಕ್ಷಿತವಾದದ್ದೋ ಎಂಬುದನ್ನು ಕೂಡ ಅರಿಯದಷ್ಟು ಉತ್ಕಟತೆಯಲ್ಲಿ ನಮಗೆ ಮೋಸ ಮಾಡಲೆಂದೇ ಕಾದಿರುವ ಗೋಮುಖ ವ್ಯಾಘ್ರಗಳ ಕಪಿಮುಷ್ಠಿಗೆ ಸಿಲುಕಿ ಪಡಬಾರದ ಪಾಡು ಅನುಭವಿಸಿ ನೊಂದು ಬೆಂದು ಬಸವಳಿದು ಈ ಜೀವ ಜೀವನ ಎರಡು ಬೇಡವೆಂದು ನಿರ್ಧರಿಸುವ ಹಂತಕ್ಕೆ ತಲುಪಿ ಹೋಗಿದೆ ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ಅವಕಾಶಗಳನ್ನು ನೀಡುವ ನೆಪದಲ್ಲಿ ಅವಕಾಶವಾದಿಗಳು ನಮ್ಮನ್ನು ಬಳಸಿಕೊಂಡು ಹಿಂಡಿ ಹಿಪ್ಪೆ ಮಾಡಿ ಬೀದಿಗೆಸೆದು ಬಿಡುವರು. ಈಗಿನ ಯುವ ಸಮುದಾಯಕ್ಕೆ ತಾಳ್ಮೆಯ ಕೊರತೆ ಎದ್ದು ಕಾಣುತ್ತದೆ. ನಾಲ್ಕು ಸಾಲು ಗೀಚಿದ್ದೆ ತಡ ತಾನ ದೊಡ್ಡ ಬರಹಗಾರನೇ ಎಂದು ತೋರಿಸಿಕೊಳ್ಳುವ ಇರಾದೆಗೆ ಬಿದ್ದು ಹೋಗುವ ದಾರಿಯನ್ನೇ ದಿಕ್ಕು ತಪ್ಪಿಸಿ ಪ್ರಶಸ್ತಿ-ಪುರಸ್ಕಾರಗಳ ಅಮಲೇರಿಸಿ ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡು ಪ್ರತಿಭೆಯನ್ನು ತುಳಿದು ಬೆಳೆದು ನಿಲ್ಲುವ ಭಂಡರ ಮೋಡಿಯ ಮಾತುಗಳಿಗೆ ಬಲಿಯಾಗಿ ಸರ್ವಸ್ವವನ್ನೇ ಕಳೆದುಕೊಂಡು ಸಮಾಜದೆದುರು ಅದನ್ನು ಒಪ್ಪಿಕೊಳ್ಳಲಾಗದೆ ಅನಾಹುತ ಮಾಡಿಕೊಳ್ಳುವ ಅಮಾಯಕ ಯುವಮನಸ್ಸುಗಳಿಗೆ ಹಾಲು ಯಾವುದು ಸುಣ್ಣದ ನೀರು ಯಾವುದು ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಅವಶ್ಯಕವಾಗಿದೆ.

    ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಪ್ರಚಲಿತದಲ್ಲಿರುವ ಮುಖ ಒಂದಾದರೆ, ಮರೆಯಲ್ಲಿ ಅವಿತು ಮರಳು ಮಾಡಿ ಪ್ರಪಾತಕ್ಕೆ ತಳ್ಳುವ ಖೂಳರ ಸಮೂಹವೇ ತುಂಬಿ ಹೋಗಿದೆ. ಇಂತಹ ಸಂದರ್ಭದಲ್ಲಿ ಅನನುಭವಿ ಯುವಕ/ ಯುವತಿಯರು ಬಹುಬೇಗ ಅಂತಹವರನ್ನು ನಂಬಿ ಮೋಸ ಹೋಗಿರುವುದೇ ಹೆಚ್ಚು. ಹಿಂದೆ ಗೊತ್ತಿಲ್ಲ ಮುಂದೆ ಗೊತ್ತಿಲ್ಲದ ಅಪರಿಚಿತರ ಜೊತೆ ವ್ಯವಹಾರ ನಡೆಸುವಾಗ ತುಂಬಾ ಜಾಗರೂಕತೆಯಿಂದ ಮುಂದುವರಿಯಬೇಕಾಗುತ್ತದೆ. ನಮ್ಮ ಪ್ರತಿಭೆ ನಮ್ಮ ಬೆಳವಣಿಗೆಗೆ ಪೂರಕವಾಗಿರಬೇಕು. ಕಾಯುವ ಮನಸ್ಥಿತಿ ಗಾಢವಾಗಿ ಇರಬೇಕು. ಮೋಡಿಗಾರನ ಮಾಯಾಜಾಲದಂತೆ ಯಾವುದು ಅಂದುಕೊಂಡಂತೆ ತಕ್ಷಣಕ್ಕೆ ಆಗುವುದಿಲ್ಲ. ಅದಕ್ಕೆಲ್ಲ ತುಂಬಾ ಸಮಯ ಬೇಕಾಗುತ್ತದೆ. ಈ ಮಧ್ಯೆ ನಮ್ಮ ಪ್ರತಿಭೆಯನ್ನು ಗುರುತಿಸುವ ನೆಪದಲ್ಲಿ ನಮ್ಮ ಮುಗ್ಧತೆಯನ್ನು ಕೈವಶ ಮಾಡಿಕೊಂಡು ತಾವು ಹೇಳಿದಂತೆ ಕೇಳುವ ಸೂತ್ರದ ಗೊಂಬೆಗಳನ್ನಾಗಿಸಿಕೊಂಡು ಮೆರೆಯುವವರ ಮುಂದೆ ನಾವು ಕುರಿಗಳಂತೆ ತಲೆತಗ್ಗಿಸಿ ನಿಲ್ಲಬಾರದು. ನಮ್ಮೊಳಗಿನ ಕ್ರಿಯಾಶೀಲತೆ ಪ್ರಾಮಾಣಿಕವಾಗಿದ್ದೂ ಕನಸು ಕಲ್ಪನೆಗಳಿಗೆ ಜೀವ ತುಂಬುವಂತೆ ಇದ್ದರೆ ವರುಷಗಳ ಲೆಕ್ಕದಲ್ಲಿ ಅದನ್ನು ಕಾಪಿಟ್ಟುಕೊಂಡು ನಮ್ಮ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಸಂದರ್ಭದಲ್ಲಿ ಕೆಲವರು ಒಡ್ಡುವ ಆಮಿಷಗಳಿಗೆ ಬಲಿಯಾಗದೆ ಪ್ರತಿನಿಮಿಷವೂ ಎಚ್ಚರಿಕೆಯಿಂದ ಮುಂದೆ ಸಾಗಿದಾಗ ಮಾತ್ರ ನಮ್ಮ ಗುರಿ ತಲುಪುತ್ತೇವೆ. ಯಾವುದೇ ಹಿರಿಮೆ ಗರಿಮೆ ಕಡೆಗೆ ಮನಸ್ಸು ಕೊಡದೆ ನಮ್ಮೊಳಗಿನ ಉತ್ಕಟೇಚ್ಛೆಯು ನಮ್ಮ ಉನ್ನತಿಗೆ ಮೆಟ್ಟಿಲಾಗುವಂತೆ ಮಾರ್ಪಡಿಸಿಕೊಂಡು ನಾವಿಲ್ಲಿ ಬೆಳೆಯಬೇಕೆ ವಿನಹ ಗೊತ್ತುಗುರಿಯಿಲ್ಲದೆ ಯಾವುದೇ ವ್ಯಕ್ತಿ ಸಂಘಟನೆಯವರು ಮೂಗಿನ ತುದಿಗೆ ತುಪ್ಪ ಸವರುವ ಕೆಲಸ ಮಾಡುವಾಗ ಅಂಥವರಿಂದ ದೂರವಿದ್ದು ನಮ್ಮ ಪಾಡಿಗೆ ನಾವು ಸಾಧನೆಯ ಗಮ್ಯದೆಡೆಗೆ ದೃಷ್ಟಿನೆಟ್ಟು ಸಾಗಬೇಕು. ಅದರಲ್ಲೂ ಹೊಸಪೀಳಿಗೆಯ ಯುವಕ-ಯುವತಿಯರು ಅನುಭವದ ಕೊರತೆಯಿಂದಲೂ ಅತಿಯಾದ ಆತ್ಮವಿಶ್ವಾಸದಿಂದಲೋ ಯಾರು ಗುರುತಿಸಿ ಬೆಳೆಸುತ್ತಾರೆ ಎಂಬ ಅಂಧಶ್ರದ್ಧೆಯಿಂದ ಮುಂದೆ ಹೋದರೆ ಅವರು ನಮ್ಮ ಕಣ್ಣಿಗೆ ಪಟ್ಟಿ ಕಟ್ಟಿ ನಮ್ಮ ಜುಟ್ಟು ಹಿಡಿದು ಅವರಿಗೆ ಬೇಕಾದಂತೆ ನಡೆಸಿಕೊಂಡು ಎಲ್ಲ ಬರಿದಾಗಿಸಿ ನಡು ನೀರಲ್ಲಿ ಕೈ ಬಿಟ್ಟು ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ತೀವ್ರತರ ಖಿನ್ನತೆಗೆ ಒಳಗಾಗಿ ಅನ್ಯಾಯ ಎಸಗಿದವರ ವಿರುದ್ಧ ಸೆಟೆದು ನಿಲ್ಲಲಾಗದೆ, ಮೋಸ ಹೋದದ್ದನ್ನು ಅರಗಿಸಿಕೊಳ್ಳಲಾಗದೆ, ಸಮಾಜದೆದುರು ಮುಖ ತೋರಿಸಲಾಗದೆ ಸುಂದರವಾದ ಬದುಕಿಗೆ ಇತಿಶ್ರೀ ಹಾಡುವುದು ವೀರರ ಲಕ್ಷಣವಲ್ಲ. ತೊಂದರೆ ಕೊಟ್ಟವನನ್ನು ಬಯಲಿಗೆಳೆದು ಜಗದೆದುರು ಅವನ ಕಪಟತನ ಜಗಜ್ಜಾಹೀರು ಮಾಡಿ ಮುಂದೆ ಯಾರು ಅಂತವನ ಆಮಿಷಗಳಿಗೆ ಬಲಿಯಾಗದಂತೆ ಕಾಯುವ ಕಟ್ಟಾಳುಗಳಾಗಿ ನಿಂತು ಸಮಸ್ಯೆಯನ್ನು ಎದುರಿಸಬೇಕು.

         ನಮ್ಮ ಕಣ್ಣೆದುರೇ ನಡೆಯುವ ಇಂತಹ ದುಷ್ಕೃತ್ಯಗಳಿಗೆ ಸಾಮೂಹಿಕವಾಗಿ ನ್ಯಾಯಸಮ್ಮತವಾಗಿ ಕಾನೂನಾತ್ಮಕವಾದ ಹೋರಾಟದಿಂದ ಅಪರಾಧಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಅದನ್ನು ಬಿಟ್ಟು ಆಗಿ ಹೋದದ್ದರ ಬಗ್ಗೆ ಮರುಕಪಟ್ಟು ಅನುಕಂಪದ ನಾಲ್ಕು  ಮಾತುಗಳನ್ನಾಡಿದರೆ ತಪ್ಪಿತಸ್ಥನಾದವನು ಅದನ್ನೇ ನಮ್ಮ ಅಸಹಾಯಕತೆ ಎಂದು ತಿಳಿದು ಮತ್ತೆ ಮತ್ತೆ ಅಂಥದೇ ಕೃತ್ಯಗಳನ್ನೆಸಗುತ್ತಾ ಸಮಾಜದಲ್ಲಿ ದೊಡ್ಡ ವ್ಯಕ್ತಿಯಂತೆ ಬಿಂಬಿತನಾಗುತ್ತಾನೆ. ಯಾರು ನನಗೆ ಏನೂ ಮಾಡಲಾರರು ಎಂದು ಮೆರೆಯುತ್ತಿರುತ್ತಾನೆ. ಅಂತದಕ್ಕೆಲ್ಲ ಆಸ್ಪದ ನೀಡದೆ ನಾವು ನಡೆಯುವ ಹಾದಿಯಲ್ಲಿ ಮೈಯೆಲ್ಲ ಕಣ್ಣಾಗಿ ನಮ್ಮನ್ನು ನಾವು ಕಾಪಾಡಿಕೊಂಡು ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು. ಇಲ್ಲಿ ಬೆಳೆಸುವ ಕೈಗಳ ಪ್ರಾಮಾಣಿಕತೆ ಮೇಲ್ನೋಟಕ್ಕೆ ಕಾಣುವುದೇ ಇಲ್ಲ. ಹಾಗಾಗಿ ಯಾವುದೇ ಕ್ಷಣದಲ್ಲಾದರೂ ನಾವು ಹಾದಿ ತಪ್ಪುವ ಅವಕಾಶವೇ ಇಲ್ಲದಂತೆ ಕಟ್ಟೆಚ್ಚರದಿಂದ ನಮ್ಮ ಕನಸು ಭಾವನೆಗಳ ಜೊತೆಗೆ ಗುರಿ ತಲುಪುವ ವೇದಿಕೆಯನ್ನು ನಾವೇ ಮಾಡಿಕೊಂಡು ಬೆಳೆಯಬೇಕೆ ವಿನಹ ಯಾರದೋ ಮರ್ಜಿಗೆ ಒಳಗಾಗಿ ಅವನ ಸಿಗುವ ಭಿಕ್ಷೆಗೆ ಬಾಯಿತೆರೆದು ಕೂರದೆ ನಮ್ಮತನ ನಮ್ಮ ಘನತೆಯನ್ನು ಕಾಯ್ದುಕೊಂಡು ಸಮಾಜದಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸಬೇಕು.

1143ಪಿಎಂ16032022
ಅಮುಭಾವಜೀವಿ ಮುಸ್ಟೂರ

    
ಮೂಡಣದಿ ರವಿಯಾಗಮನ
ಪಡುವಣದಿ ಶಶಿಯ ನಿರ್ಗಮನ 
ಈ ದೃಶ್ಯ ಬಲು ರೋಮಾಂಚನ 
ನೋಡು ಪ್ರಕೃತಿಯ ಸೊಬಗನ್ನ

ಮುಂಜಾನೆಯ ಈ ಸನ್ನಿವೇಶ
ಸವಿವ ಮನಕೋ ಸಂತೋಷ 
ಈ ಅದ್ಭುತ ಸಮ್ಮಿಲನ
ಕಣ್ತುಂಬಿಕೊಳ್ಳುವುದೇ ವಿಶೇಷ 

ಹೋಳಿ ಹುಣ್ಣಿಮೆಯ ಸಂಭ್ರಮ 
ನಿಸರ್ಗದ  ಈ ಕ್ರಿಯೆ ಅನುಪಮ
ಜಗಬೆಳಗುವ  ಇಬ್ಬರ ಯಾತ್ರೆ 
ಸವಿಯೋ ಮನಗಳಿಗಂತೂ ಜಾತ್ರೆ 

ಇರುಳು ಪೂರ ಚಂದ್ರನಾಡಳಿತ
ದಿನವು ಪೂರ ಸೂರ್ಯನ ಪಥ
ಬಾಳುವ ನಮಗಿದು ರಸದೂಟ
ಎಷ್ಟೊಂದು ಚಂದ  ಈ ಇಬ್ಬರಾಟ

ವಸಂತ ಬಣ್ಣಗಳ ಈ ಕಾಲ
ಚೈತ್ರದಾಗಮನಕೆ ಸಕಾಲ
ಚಿಗುರೊಗರು ಕುಡಿವ ಕೋಕಿಲ
ಇಂಪಾಗಿ ಹಾಡುತ ಶುಭ ಕೋರಿದೆ 

ಬೆಳಗಾಯಿತು ಏಳಿರಿ ನೀವೆಲ್ಲ 
ಹೂ ಅರಳುವ ಖುಷಿಗೆಣೆಯಿಲ್ಲ
ಮಂಜಿನ ಹನಿಗಳುಸಾಲಾಗಿ 
ಸ್ವಾಗತ ಕೋರಿವೆ ದಿನಕಾಗಿ

0540ಎಎಂ19032022
*ಅಮುಭಾವಜೀವಿ ಮುಸ್ಟೂರು*



    


   

Monday, May 2, 2022

#ಅಮುಭಾವದೂಟ 281
ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿರಲಿ
ಮೇಲೆ ಹೋದಂತೆಲ್ಲಾ ಕಾಲೆಳೆವರು
ಸಾಧಸುವವನ ಶ್ರಮ ನೋಡದ ಜನ
ಸಾಧನೆ ಕಂಡು ಹೊಟ್ಟೆಕಿಚ್ಚು ಪಡುವರು
ತುಳಿಯುವ ನೂರು ಕಾಲಡಿ ಮತ್ತೆ 
ಗರಿಕೆಯಾಗಿ ಚಿಗುರಿ ಹಸಿರಾಗಬೇಕು
ಬದುಕು ನನ್ನದು ಬವಣೆಗಳನ್ನು ನನ್ನದು
ಸುಖದ ಸಾಧನೆಯಲ್ಲಿ ಇವರಿಗೇಕೆ ಹೊಟ್ಟೆಯುರಿ

1220ಪಿಎಂ02052022
*ಅಮುಭಾವಜೀವಿ ಮುಸ್ಟೂರು*