ಅದೇಕೆ ಮಳೆಯೇ ಹೀಗೆ
ಹುಚ್ಚೆದ್ದು ಸುರಿಯುತಿರುವೆ
ಮುಂಗಾರಿನಾಗಮನವೇ
ಸೋನೆಮಳೆಯಾಗಿ ಬಂದಿರುವೆ
ವೈಶಾಖದ ಬಿಸಿಲ ತಾಪ
ಒಮ್ಮೆಲೇ ತಂಪಾಗಿ ಹೋಯ್ತು
ಬರಿದಾದ ಕೆರೆಕಟ್ಟೆಗಳು ತುಂಬಿ
ಮೆರೆಯುತಿವೆ ಮೈದುಂಬಿ
ನಗರಗಳೆಲ್ಲ ನೀರೊಳು ಮುಳುಗಿವೆ
ನದಿಗಳು ಪ್ರವಾಹವಾಗಿ ಉಕ್ಕಿವೆ
ಗಿರಿಶೃಂಗಗಳೆಲ್ಲ ಹಸಿರೊದ್ದು ಮಲಗಿವೆ
ಹೊಲಗದ್ದೆಗಳೆಲ್ಲ ನಡುಗಡ್ಡೆಗಳಾಗಿವೆ
ಇನ್ನೆಷ್ಟು ದಿನವೋ ಈ ರಗಳೆ
ಸುರಿವುದ ನಿಲ್ಲಿಸಲಿ ಮಳೆ
ಬದುಕು ಭೀಕರವಾಗುವ ಮೊದಲು
ಬರಲಿ ಒಂದಿಷ್ಟು ಬಿಸಿ ಬಿಸಿಲು
ಇನ್ನು ಮುಂದಿದೆ ಮಳೆಗಾಲ
ಬಿಡುವು ಮಾಡಿಕೊಳ್ಳಬೇಕಲ್ಲ
ಜಲ ದಿಗ್ಬಂಧನ ತೆರವುಗೊಳಿಸು
ಮುಳುಗುವ ಬದುಕ ಉಳಿಸು
0717ಪಿಎಂ20052022
*ಅಮುಭಾವಜೀವಿ ಮುಸ್ಟೂರು*
No comments:
Post a Comment