Sunday, November 12, 2017

ನಾನೇಕೆ ಬರೆಯುತ್ತೇನೆ

*ನಾನೇಕೆ ಬರೆಯುತ್ತೇನೆ ಎಂದರೆ*

ಬದುಕಿನ  ಅನುಭವಗಳನ್ನು ಕವಿತೆ ಕಟ್ಟುವ ಮಟ್ಟಿಗೆ ನನ್ನಲ್ಲಿ ಬರವಣಿಗೆ  ಇದೆ ಎಂದು ಗೊತ್ತಾಗುವಷ್ಟರಲ್ಲಿ ನೂರಾರು ಕವಿತೆಗಳಲ್ಲಿ  ಆಗಲೇ ಅದು  ಅನಾವರಣಗೊಂಡಾಗಿತ್ತು.
ಶಾಲಾ ಕಾಲೇಜು ದಿನಗಳಲ್ಲಿ ದಾರ್ಶನಿಕರ ಉಕ್ತಿಗಳಂತೆಯೇ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರೆಯುತ್ತಿದ್ದೆ. ಅದನ್ನು ಗಮನಿಸಿದ ಗುರುಗಳು ಬೆನ್ತಟ್ಟಿದ್ದರು. ಮುಂದೆ ಶಿಕ್ಷಕರ ತರಬೇತಿ ಪಡೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬರೆಯುವ ಹಂಬಲ ಚಿಗುರೊಡೆಯಿತು. ಅಂದು ಆ ಹಂಬಲ ನನ್ನಲ್ಲಿ ಬರದಿದ್ದರೆ ಇಂದು *ಸಾವಿರ ಕವಿತೆಗಳ ಸರದಾರನಾಗಿ* ಗಣೇಶ್ ಸರ್ ಅವರಿಂದ ಪ್ರಶಂಶಿಸಲ್ಪಡುತ್ತಿರಲಿಲ್ಲವೇನೋ.  ಅಂದು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನನ್ನ ಕೆಲವು ಸ್ನೇಹಿತರು ಬರೆಯುತ್ತಿದ್ದ ಕವಿತೆ ಚುಟುಕುಗಳನ್ನು ಗಮನಿಸುತ್ತಿದ್ದವನಿಗೆ *ನಾನೇಕೆ ಬರೆಯಬಾರದು* ಅನ್ನಿಸಿತು. ಅಲ್ಲದೆ ಹಾಸ್ಟೆಲ್ನಲ್ಲಿದ್ದ ಕಾರಣ ವಾರದಲ್ಲಿ ಒಂದೆರಡು ಸಿನಿಮಾಗಳನ್ನು ನೋಡುತ್ತಿದೆ. ಅಲ್ಲಿ ನನಗೆ ಮೂಡಿದ ಭಾವನೆಗಳಿಗೆ  ಅಕ್ಷರ ರೂಪ ಕೊಡುತ್ತಾ ಬಂದೆ. ಮತ್ತೆ ಅದನ್ನು ನಾನು  ಓದಿದಾಗ ಇನ್ನೊಂದು ಭಾವ ಮೂಡುತ್ತಿತ್ತು, ಹೀಗೆ ನನ್ನ ಬರವಣಿಗೆಬರವಣಿಗೆಯ ಪಯಣ ಸಾಗಿತ್ತು.ಎರಡು ವರ್ಷದ ತರಬೇತಿ ಮುಗಿಯುವುದರೊಳಗೆ ನೂರಾರು ಕವಿತೆಗಳು ಜನ್ಮತಾಳಿದ್ದವು.

    ನಾನು ಕಂಡ ನನ್ನ ಸುತ್ತ ಮುತ್ತಲಿನ ಜನರ ಬದುಕು ಬವಣೆಗಳಿಗೆ ನನ್ನದೇ ಧಾಟಿಯಲ್ಲಿ ಭಾವನೆಗಳನ್ನು ಹರಿಯಬಿಡುತ್ತಿದ್ದೆ. ಅಲ್ಲಿದೆ ಆಗಿನ ವಯೋಸಹಜ ಪ್ರೀತಿ ಪ್ರೇಮದ ಕುರಿತು ಬರೆಯುವಾಗ ನೀನು ಯಾರನ್ನಾದರೂ ಪ್ರೀತಿಸುತ್ತಿರಬೇಕು ಅದಕ್ಕೆ ಹೀಗೆಲ್ಲ ಬರೆದಿದ್ದೀಯಾ ಎಂದು ಜನ  ಆಡಿಕೊಂಡರು. ಆದರೆ ನಾನು ಅದಕ್ಕೆ ತಲೆಕೆಡಿಸಿಕೊಳ್ಳದೆ ಆ ಸಂದರ್ಭಕ್ಕೆ  ಆ ಕ್ಷಣದಲ್ಲಿ ಮೂಡಿದ ಭಾಗಗಳನ್ನು ಬರೆದಿಟ್ಟುಕೊಳ್ಳುತ್ತಾ ಬಂದೆ. ಕವಿಯಾದವನು ಸಕಲರನ್ನು ಪ್ರೀತಿಸುವ,  ಜಗತ್ತಿನ ಚರಾಚರಗಳಲ್ಲಿ ಪ್ರೀತಿಯುಂಟು ಎಂಬುದನ್ನು  ಅರಿತವನಾದ್ದರಿಂದಲೇ ಕವಿಭಾವ ಕೂಡ ಹದವಾಗಿ ಮೃದುವಾಗಿ ಓದುಗರಿಗೆ ಹತ್ತಿರವಾಗುವಂತೆ ಚಿತ್ರಿಸುವ ಶಕ್ತಿಯುಳ್ಳವನಾಗಿರುತ್ತಾನೆಂಬುದು ನನ್ನ ನಂಬಿಕೆ.

  ಹೀಗೆ ಬರೆಯುತ್ತಿದ್ದ ನನಗೆ ಯಾವ ವೇದಿಕೆಯೂ ಸಿಗದೆ ಕೊರಗುತ್ತಲೇ ಬಂದ ಭಾವನೆಗಳಿಗೆ  ಎಂದಾದರೊಂದು ದಿನ ಬೆಲೆ ಸಿಗುತ್ತದೆ ಎಂಬ ನಂಬಿಕೆಯಿಂದ ಬರೆಯುತ್ತಾ ಬಂದೆ. *ನಾನೇಕೆ ಬರೆಯುತ್ತೇನೆ* ಎಂಬುದು  ಆಗ ನನಗೆ  ಗೊತ್ತಿರಲಿಲ್ಲ. ಆದರೆ ಬಂದ ಭಾವನೆಗಳು ಹಾಗೆ ಸಾಯಬಾರದು ಎಂದು ಬರೆದಿಟ್ಟುಕೊಳ್ಳುತ್ತಾ ಬಂದೆ. ಕವಿತೆಗಳಲ್ಲಿ ಜೀವನ ಪ್ರೀತಿ, ಬದುಕಿನ ರೀತಿ, ಬವಣೆಗಳು ತಂದೊಡ್ಡುವ ಫಜೀತಿ ಹೀಗೆ ಎಲ್ಲವನ್ನೂ ನನ್ನ  ಅಲ್ಪಜ್ಞಾನದ  ಅಚ್ಚಿನಲ್ಲಿ ಹಾಕಿ ರೂಪ ಕೊಡುತ್ತಾ ಬಂದೆ. ಓದುಗರಿಗೆ ಅದು ಎಲ್ಲೋ ತಮ್ಮದೇ ಬದುಕಿನ ಘಟನೆ ಅನಿಸಿ ಅದರಿಂದ ಹೊರಬರುವ ದಾರಿ ನನ್ನ ಕವಿತೆಗಳಲ್ಲಿ ಕಂಡು ಕೊಳ್ಳಲು ಪ್ರಯತ್ನ ಪಡುತ್ತಿದ್ದರು.

  ನನ್ನ ಕವಿತೆಗಳಲ್ಲಿ ಸತ್ವವಿದೆ, ಬರೆಯುವ ನನಗೆ  ಆ ಬದ್ದತೆಯಿದೆ ಎಂಬುದು ಗೊತ್ತಾದದ್ದು ಇತ್ತೀಚಿನ ದಿನಗಳಲ್ಲಿ.  ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಪ್ರತಿಕ್ರಿಯೆಗಳು ಬರೆಯುವ ನನಗೂ ಒಂದು ಬಹುದೊಡ್ಡ ಜವಾಬ್ದಾರಿ ಇದೆ ಎಂಬುದನ್ನು ತೋರಿಸಿಕೊಟ್ಟಿತು. ನನ್ನ ಕವಿತೆಗಳು ನೂರಾರು ಜನರನ್ನು ತಲುಪಿ  ಅವು ಅಲ್ಲಿ ಪಡೆದ ಪ್ರಶಂಸೆಗಳು ನಾನು ಈ ಸಮಾಜಕ್ಕೆ  ಈ ರೀತಿಯಾಗಿ ಸೇವೆ ಸಲ್ಲಿಸಬಹುದು ಎಂಬುದನ್ನು ಅರ್ಥ ಮಾಡಿಕೊಂಡೆ. ನನ್ನ ಬರಹ ನೊಂದ ಶೋಷಿತ ಜನರ ಕೂಗಾಗಬೇಕು ಎಂದು  ಆ ನಿಟ್ಟಿನಲ್ಲಿ ಆ  ಸಂದರ್ಭದಲ್ಲಿ  ಸಮಾಜದ ಘಟನೆಗಳನ್ನು ಕವಿತೆಗಳಲ್ಲಿ  ಬರೆಯುತ್ತಿದ್ದೇನೆ.

   ಕೊನೆಯದಾಗಿ ನಾನು ಈ ಸಮಾಜದ ಕೂಸು. ಅದು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ನೋವು ಅಸಮಾಧಾನ  ಅಮಾನವೀಯ ಕೃತ್ಯಗಳನ್ನು ನನ್ನಿಂದ ಸಾಧ್ಯವಾದಷ್ಟು ಜಗತ್ತಿನ ಮುಂದೆ ತೆರೆದಿಟ್ಟುಕೊಂಡಿದೆ. ನನ್ನ ಬದ್ದತೆ ಏನಿದ್ದರೂ ಬದುಕನ್ನು ಪ್ರೀತಿಸುವ,  ಅದು ಒಡ್ಡುವ ಬವಣೆಗಳನ್ನು ಸಮರ್ಥವಾಗಿ ಎದುರಿಸಲು ಮನಸುಗಳನ್ನು ಸಿದ್ದಗೊಳಿಸುವುದು ನನ್ನ ಬರವಣಿಗೆಯ  ಉದ್ದೇಶವಾಗಿದೆ.

*ಅಮುಭಾವಜೀವಿ*

0453ಎಎಂ13112017

Saturday, November 4, 2017

ನನ್ನ ನಲ್ಮೆಯ ಕನ್ನಡ ನನ್ನ ಒಲುಮೆಯ ಕನ್ನಡ ನನ್ನ ಬಲವು ಕನ್ನಡ ನನ್ನ ಗೆಲುವು ಕನ್ನಡ ಹಲ್ಮಿಡಿಯ ಉಲ್ಲೇಖಿತ ಕನ್ನಡ ಹಳೇಬೀಡು ಶಿಲ್ಪಕಲೆಯ ಕನ್ನಡ ಕದಂಬ ರಾಜಾಶ್ರಿತ ಕನ್ನಡ ಆದಿಕವಿ ಪಂಪನ ಬೆಳೆಸಿದ ಕನ್ನಡ
*೧• ವಸಂತದ ಗುರುತು* ಮನದೊಳಗೊಂದಾಸೆ ಚಿಗುರುತಿದೆ ಅದು ಬಾಳ ವಸಂತದ ಗುರುತಾಗಿದೆ ಹರೆಯದರಮನೆಯಲ್ಲಿ ಇಂದು ಒಲವಿನ ತೋರಣ ಕಟ್ಟಿದೆ ಪ್ರೀತಿಯ ಸವಿಭಾವವು ಏನೆಂದು ಪ್ರಿಯತಮೆಯ ಹೃದಯ ತಟ್ಟಿದೆ ಅವಳ ಕುಡಿನೋಟದ ಸೂಚನೆ ಹುಟ್ಟು ಹಾಕಿದೆ ನೂರು ಭಾವನೆ ನನ್ನೊಲವಿನ ನಿಷ್ಕಲ್ಮಶ ಆರಾಧನೆಗೆ ಅವಳ ಈ ನಗುವೆ ಸಂಭಾವನೆ ಹೃದಯದ ಕೋಗಿಲೆ ಹಾಡಿದೆ ಬದುಕಿಗೆ ಭವಿಷ್ಯ ನುಡಿದಿದೆ ಚಿಗುರು ತಂದ ಈ ಒಗರಿನಿಂದ ಜೀವನದಿ ಎಲ್ಲವೂ ಅಂದ ಆನಂದ ಪ್ರೀತಿಯೇ ನೀನಾದೆ ಬದುಕು ಅದೇ ವರವಾಯ್ತು ಎಲ್ಲದಕೂ ಇನ್ನಿಲ್ಲ ನನಗೆ ಬರದ ಚಿಂತೆ ನನ್ನವಳಿಹಳು ವರ್ಷಧಾರೆಯಂತೆ 0746ಎಎಂ03112017 *ಅಮುಭಾವಜೀವಿ*
ಹಚ್ಚಿಟ್ಟ ಹಣತೆ ಕನ್ನಡ ಜ್ಯೋತಿಯಾಯ್ತು ಬೀಸುವ ಗಾಳಿ ಕನ್ನಡ ಕಂಪು ಹರಡಿತು ಹರಿವ ನೀರು ಕನ್ನಡ ಕಲರವ ಸಾರಿತು ಬಾಳವ ನೆಲ ಕನ್ನಡ ಕುಲವ ಪೋಷಿಸಿತು ನುಡಿವ ಮಾತೆಲ್ಲವೂ ಕನ್ನಡ ನಡೆವ ಹಾದಿಯೆಲ್ಲವೂ ಕನ್ನಡ ಹೆಜ್ಜೆ ಗೆಜ್ಜೆಯ ದನಿಯೂ ಕನ್ನಡ ಸಿಹಿ ಸಜ್ಜಿಗೆಯ ಸವಿಯೂ ಕನ್ನಡ ಒಬ್ಬರನೊಬ್ಬರ ಬೆಸೆದ ಸ್ನೇಹ ಕನ್ನಡ ಭಿನ್ನತೆಯೊಳಗೂ ಏಕತೆ ಸಾರಿದ ಕನ್ನಡ ನಾಡು ನುಡಿಯಲೊಂದಾದ ಕನ್ನಡ ಹಾಡು ಪಾಡು ಎಲ್ಲವೂ ಕನ್ನಡ ಶರಣರುಲಿದ ವಚನವೆಲ್ಲ ಕನ್ನಡ ಷರೀಫಜ್ಜನ ತತ್ವಪದವು ಕನ್ನಡ ದಾಸರ ಭಜನೆ ಕೀರ್ತನೆ ಕನ್ನಡ ಕವಿಪುಂಗವರ ಸಾಲೆಲ್ಲವೂ ಕನ್ನಡ ಕಟ್ಟಿದ ಗುಡಿಗೋಪುರ ಕನ್ನಡ ಉಕ್ಕಿ ಬರುವ ನೂಪರವೂ ಕನ್ನಡ ಮಹಲು ಗುಡಿಸಲು ನಿಂತ ನೆಲೆ ಕನ್ನಡ ಕಲ್ಲು ಕಲ್ಲಿನಲಿ ಅರಳಿದ ಕಲೆ ಕನ್ನಡ ನಾಡ ಸಂಸ್ಕೃತಿಯ ತಿಲಕ ಕನ್ನಡ ಪ್ರತಿ ಹೃದಯದ ಮಿಡಿತ ಕನ್ನಡ ಕರುನಾಡಿನೊಳಗಿರುವುದೆಲ್ಲವೂ ಕನ್ನಡ ಹುಟ್ಟಿನಿಂದ ನಂಟು ಹೊಂದಿದ ಕನ್ನಡ ಎಂದೆಂದಿಗೂ ಅಮರ ಕನ್ನಡ ಸುಖ ದುಃಖದಲ್ಲೂ ಇದೆ ಸಂಗಡ ೦೫೩೨ಮು೦೧೧೧೨೦೧೭ *ಅಮುಭಾವಜೀವಿ*

ಕಥೆ

*ಅರಳುವ ತಾವರೆ* ಮುಂದುವರಿದ *ಭಾಗ ೪* ಸವಿತಾ ದುಃಖವನ್ನು ತಡೆದುಕೊಂಡು ನಡೆದ ಘಟನೆಯನ್ನೆಲ್ಲಾ ತಾಯಿಗೆ ವಿವರಿಸಿದಳು. ನೊಂದ ತನ್ನ ಹೆತ್ತವರನ್ನು ಸಮಾಧಾನಿಸುತ್ತಾ "ಅಪ್ಪ ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ನಿಮಗೆ ತುಂಬಾ ನೋವು ಕೊಟ್ಟು ಬಿಟ್ಟೆ" ಎಂದು ಗದ್ಗತಳಾದಳು. ಆ ಕಡೆಯಿಂದ ಅವಳ ತಂದೆ "ಅಲ್ಲ ಕಣೆ ಹುಚ್ಚುಡುಗಿ ನಿನಗೆ ಎಂಥಾ ನೋವಾಗಿದ್ದರೂ ನಾವು ನಿನ್ನ ಪರವಾಗಿ ಇರುತ್ತೇವೆ ಎಂಬುದನ್ನೇ ಮರೆತು ಮನೆ ಬಿಟ್ಟು ಹೋದರೆ ನಮ್ಮ ಗತಿ ಏನು ಅಂತ ಯೋಚನೆ ಮಾಡಿದ್ದೀಯಾ ? ನೋಡು ನಿಮ್ಮಮ್ಮ ಸರಿಯಾಗಿ ಊಟ ಮಾಡದೇ ಸೊರಗಿಹೋಗಿದ್ದಾಳೆ.ಒಬ್ಬಳೆ ಮಗಳು ಅಂತ ಸಾಕಿದ್ದಕ್ಕೆ ಒಳ್ಳೆಯ ಶಿಕ್ಷೆಯನ್ನೇ ಕೊಟ್ಟೆ ಬಿಡು " ಎಂದಾಗ 'ಸಾರಿ ಅಪ್ಪ ' ಎಂದಾಗ ""ಎಲ್ಲಿದ್ದೀಯ ಮಗಳೇ ಏನು ಮಾಡ್ತಾ ಇದೀಯಾ ಇಷ್ಟು ದಿನ ಹೇಗಿದ್ದೇ.ಬಂದು ಬಿಡು ಮಗಳೇ ನೀನು ಜೀವಂತವಾಗಿದ್ದೀಯಲ್ಲ ಅಷ್ಟೇ ಸಾಕು"" ಎಂದು ಹೆತ್ತವರಿಗೆ ಮಗಳು ಸಿಕ್ಕಿದ್ದು ಸಮಾಧಾನ ತಂದಿತ್ತು. ಅಪ್ಪ ನಾನು ಇಲ್ಲಿ ಅರಾಮಾಗಿ ಇದೀನಿ. ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಊರು ಬಿಟ್ಟು ಬಂದ ಮೇಲೆ ಸಾಯಲೆಂದು ತೀರ್ಮಾನಿಸಿದ್ದೆ. ಆದರೆ ಈ ಆಂಟಿ ನನಗೆ ಬುದ್ಧಿ ಹೇಳಿ ತಮ್ಮ ಮನೆಯಲ್ಲೇ ಆಶ್ರಯ ಕೊಟ್ಟು ಕೆಲಸ ಕೊಡಿಸಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ" ಎಂದು ಹೇಳುವಾಗ ಅವಳ ಹೃದಯ ತುಂಬಿ ಬಂತು. ಆ ರಾತ್ರಿ ಪೂರ್ತಿ ಅವಳಿಗೆ ತನ್ನ ಹೆತ್ತವರ ನೆನಪು ಕಾಡಿತು. ಅತ್ತ ಅವಳ ಹೆತ್ತವರು ತಮ್ಮ ಮಗಳು ಸಿಕ್ಕ ಸಮಾಧಾನದಲ್ಲಿ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ನಿದ್ರಿಸಿದರು.ಬೆಳಿಗ್ಗೆ ಜಾನಕಮ್ಮ ಸವಿತಾಳನ್ನು ಎಬ್ಬಿಸಲು ಬಂದಾಗ ಅವಳಿನ್ನು ಮಲಗಿದ್ದನ್ನು ಕಂಡು 'ಸವಿತಾ ಏಳಮ್ಮ ಹೊತ್ತಾಯ್ತು' ಎಂದು ಅವಳನ್ನು ಮುಟ್ಟಿ ಎಬ್ಬಿಸುವಾಗ ಅವರ ಕೈ ಹಿಡಿದು "ಅಮ್ಮ ನನ್ನನ್ನು ಕ್ಷಮಿಸಬಿಡು.ನಾನು ತಪ್ಪು ಮಾಡಿದೆ. ಅದಕ್ಕೆ ನಿಮಗೆ ಮುಖ ತೋರಿಸಲೂ ಆಗದೆ ನಿಮ್ಮನ್ನು ಬಿಟ್ಟು ಬಂದೆ" ಎನ್ನುವಾಗ ಅವಳ ಕಣ್ಣಲ್ಲಿ ಕಂಬನಿ ಬರುತ್ತಿದ್ದುದನ್ನು ಗಮನಿಸಿದ ಜಾನಕಮ್ಮ ಅವಳ ಹೆತ್ತವರನ್ನು ನೆನಪಿಸಿಕೊಂಡಿದ್ದಾಳೆಂದು ಅರ್ಥವಾಯಿತು. ಅವಳನ್ನು ಎಬ್ಬಿಸಿ ಕೂರಿಸಿ 'ನೋಡು ಮಗಳೆ ಹೇಗೋ ನಾಳೆ ರಜೆ ಇದೆ ನೀನು ಊರಿಗೆ ಹೋಗಿ ನಿಮ್ಮ ಅಪ್ಪ ಅಮ್ಮನನ್ನು ಭೇಟಿಯಾಗಿ ಬಾ ನಿನಗೂ ಸಮಾಧಾನ ಇರುತ್ತೆ ಅವರಿಗೂ ನೆಮ್ಮದಿ ಆಗುತ್ತೆ' ಎಂದಾಗ ಸವಿತಾ 'ಅಮ್ಮ ಒಂದು ಮಾತು,ನೀವು ನನಗೆ ಬದುಕನ್ನು ಕೊಟ್ಟ ದೇವತೆ. ನೀವು ಅಂಕಲ್ ಎಲ್ಲರೂ ಊರಿಗೆ ಹೋಗೋಣ. ನಿಮ್ಮನ್ನು ನನ್ನ ಹೆತ್ತವರಿಗೆ ಪರಿಚಯಿಸಬೇಕು' ಎಂದಾಗ ನಾವ್ಯಾಕೆ ಮಗಳೇ ನೀನೇ ಹೋಗಿಬಿಟ್ಟು ಬಾ .ಇನ್ನೊಮ್ಮೆ ಯಾವಾಗಲಾದರೂ ಹೋದರಾಯ್ತು ಎಂದರು ಜಾನಕಮ್ಮ. ಇಲ್ಲ ಅಮ್ಮ ಈಗಲೇ ಬನ್ನಿ ಅಂಕಲ್ಗೂ ಹೇಳಿ ಎಲ್ಲರೂ ಒಟ್ಟಿಗೆ ಹೋಗಿಬರೋಣ ಎಂದಾಗ ಸರಿ ಎಂದು ಒಪ್ಪಿಕೊಂಡು ಎದ್ದು ರೆಡಿಯಾಗಿ ಕೆಲಸಕ್ಕೆ ಹೋಗಿ ಬಾ ಎಂದು ಹೇಳಿ ಅಡುಗೆ ಮನೆಯತ್ತ ಹೊರಟು ಹೋದರು. ಮರುದಿನ ಸವಿತಾ ತನ್ನ ಹೆತ್ತವರನ್ನು ಕಾಣುವ ತವಕದಲ್ಲಿ ಬೇಗ ಬೇಗನೇ ಎಲ್ಲರ ತಯಾರಿ ಬಗ್ಗೆ ಕಾಳಜಿ ವಹಿಸಿ ಮೊದಲೇ ಬುಕ್ ಮಾಡಿದ ಟ್ಯಾಕ್ಸಿಯಲ್ಲಿ ಎಲ್ಲರೂ ಕೂತು ಪ್ರಯಾಣ ಬೆಳೆಸಿದರು. ಸವಿತಾ ಒಂದು ಕಡೆ ಅಪ್ಪ ಅಮ್ಮನನ್ನು ಬಿಟ್ಟು ಬಂದ ನೋವಿಗೆ ಕಣ್ಣೀರಾದರೆ ಇನ್ನೊಂದೆಡೆ ಇಷ್ಟು ದಿನ ಅವರನ್ನು ಬಿಟ್ಟಿದ್ದು ಈಗ ಅವರನ್ನು ಕಾಣುವ ಉತ್ಸಾಹದಲ್ಲಿ ತನ್ನ ತಂದೆ ತಾಯಿಗೆ ಹೊಸ ಬಟ್ಟೆ ತೆಗೆದುಕೊಂಡು ಖುಷಿಯಿಂದ ಹೋಗುತ್ತಿದ್ದಾಳೆ. ಅವಳ ಆ ಸಂಭ್ರಮಕ್ಕೆ ಪಾರವೇ ಇಲ್ಲ. ಕಾರು ವೇಗವಾಗಿ ಓಡುತ್ತಿದೆ.ಅವಳ ಜೀವನ ಕೂಡ ಎಷ್ಟು ವೇಗವಾಗಿ ಓಡಿ ಈಗ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಹಾಗೆ ಅವಳ ಸ್ಮೃತಿ ಪಟಲದಲ್ಲಿ ನಡೆದ ಎಲ್ಲ ಘಟನೆಗಳು ಬಂದು ಹೋದವು. ಕಾರು ಬಂದು ಮನೆ ಮುಂದೆ ನಿಂತಾಗ ಮನೆಯ ಒಳಗಿನಿಂದ 'ಯಾವುದೋ ಕಾರು ಬಂದು ನಿಂತಂತಾಯ್ತು ಸ್ವಲ್ಪ ನೋಡ್ರಿ' ಎಂದಾಗ ಸವಿತಾಳ ಅಪ್ಪ ಹೊರಗೆ ಬಂದು ನೋಡಲು ಸವಿತಾ ಬಂದದ್ದು ಕಂಡು ಓಡಿ ಬಂದು ಮಗಳನ್ನು ಆಲಂಗೀಸಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದರು. ಲೇ ಎನೇ ನಮ್ಮ ಮಗಳು ಬಂದ್ಬಿಟ್ಳು ಕಣೇ ಬೇಗ ಬಾರೆ ಎಂದು ಖುಷಿಯಿಂದ ತನ್ನ ಮಡದಿಯನ್ನು ಕರೆದಾಗ ಕರುವನ್ನು ಕಳೆದುಕೊಂಡು ಪರದಾಡುತ್ತಿದ್ದ ಹಸುವಂತಾಗಿದ್ದ ಶಾರದಮ್ಮನವರು ಓಡೋಡಿ ಬಂದು ಅಂಗಳದಲ್ಲಿಯೇ ಅವಳನ್ನು ಮುದ್ದಿಸುತ್ತಾ ಬಂದ್ಯಾ ನನ್ತಾಯೀ ಎಷ್ಟು ಸೊರಗಿಹೋಗಿದಿಯಲ್ಲೇ.ಹೋಗೋ ಮುಂಚೆ ಈ ಪಾಪಿ ಅಮ್ಮನ ನೆನಪು ಬರಲಿಲ್ಲ್ವೇನೇ ನಿಂಗೆ ಎನ್ನುತ್ತಾ ಜಾನಕಮ್ಮ ಅವರಿಗೆ ಕೈ ಮುಗಿದು ನನ್ನ ಮಗಳನ್ನು ಉಳಿಸಿಕೊಟ್ಟ ದೇವತೆ ನೀವು ಎಂದಾಗ ಅಯ್ಯೋ ಅಷ್ಟು ದೊಡ್ಡ ಮಾತು ಬೇಡ. ನನ್ನ ಮಗಳು ಅಂತ ಬುದ್ಧಿ ಹೇಳಿ ಬದುಕುವ ಭರವಸೆಯನ್ನು ನೀಡಿದೆವು ಅಷ್ಟೇ. ನಿಮ್ಮ ಮಗಳು ಜಾಣೆ. ಹೇಳಿದನ್ನು ಅರ್ಥ ಮಾಡಿಕೊಂಡು ಬದುಕಿನಲ್ಲಿ ಹೊಸ ಭರವಸೆ ಮೂಡಿಸಿಕೊಂಡು ನಿಮ್ಮ ಮುಂದೆ ಮತ್ತೆ ನಿಮ್ಮ ಮಗಳಾಗಿ ಬಂದು ನಿಂತಿದ್ದಾಳೆ ಇನ್ನು ನಮ್ಮ ಜವಾಬ್ದಾರಿ ಮುಗಿತು ಎಂದು ಜಾನಕಮ್ಮ ಹೇಳಲು ಅದು ಹೇಗೆ ಮುಗಿತದೆ ಈಗ ಶುರುವಾಗಿದೆ. ನನ್ನ ಮಗಳು ಪುಣ್ಯ ಮಾಡಿದ್ದಾಳೆ. ಅವಳಿಗೆ ಇಬ್ಬರು ಅಮ್ಮಂದಿರು ಸಿಕ್ಕಿದ್ದಾರೆ ಎಂದು ಹೇಳುತ್ತಾ ಎಲ್ಲರೂ ಮನೆಯೊಳಗೆ ಹೋದರು. ಮುಂದುವರೆಯುವುದು.......
*೧•ನಿನ್ನ ಹೊರತು* ನಿನ್ನೊಲವೇ ಚೈತ್ರ ಗಾನ ಅದಕೆ ವಶವಾಗಿದೆ ನನ್ನೀ ಮನ ವಸಂತ ಬಂದ ಚಿಗುರ ತಂದ ಹೊಂಗೆ ನೆರಳ ತಂಪಿನಲ್ಲಿ ಹಾಡುವ ಕೋಗಿಲೆಯ ಗಾನ ಮಾಧುರ್ಯದ ಇಂಪಿನಲ್ಲಿ ಬದುಕು ಸುಂದರವೆಂದರಿತೆ ನಿನ್ನ ಈ ಸಹವಾಸದಿಂದ //೧// ನಿನ್ನ ಮಡಿಲು ಶಾಂತ ಕಡಲು ನಿನ್ನ ಪ್ರೀತಿ ತೆರೆಗಳಾಗಿ ಬರಲು ಬದುಕು ತೀರದ ಸಂಭ್ರಮ ನಿನ್ನ ಮಾತು ಜೇನಿನಂತೆ ನಿನ್ನ ಸ್ನೇಹ ಹಸಿರ ಹೊನಲಂತೆ ಹೊಸತನದ ಪುಳಕ ನಮ್ಮ ಸಂಗಮ /೨/ ದಿನವೆಲ್ಲವೂ ಕನವರಿಸಿದೆ ನಿನ್ನನ್ನೇ ಕ್ಷಣಕ್ಷಣವೂ ಮನ ಕಾಡಿದೆ ನನ್ನನ್ನೇ ಬಾ ಒಲವೇ ಓ ಚೆಲುವೇ ನಿನ್ನ ಹೊರತು ಎಲ್ಲ ಮರೆತು ಬದುಕುವೆ ನಾನು ಪ್ರತಿ ಕ್ಷಣ ನನಗೇಕೀ ಜಗದ ಗೊಡವೆ //೩// 1225ಪಿಎಂ27102017 *ಅಮುಭಾವಜೀವಿ*

ಗಜಲ್

*ಗಜಲ್ ೧* ಇಲ್ಲದ ಬದುಕಿಗೆ ಜೀವ ಕೊಟ್ಟವಳು ಜೀವನದುದ್ದಕೂ ನೋವನುಂಡವಳು ಎದೆಯ ಬಸಿದು ಹಾಲು ಕುಡಿಸಿ ಕರುಳಕುಡಿಯ ಬೆಳಸಿದವಳು ಅಕ್ಕರೆಯ ನೆರಳಾಗಿ ನಿಂತ ಅಮ್ಮ ದೇವರಂತಾದವಳು ಮಕ್ಕಳ ಏಳಿಗೆಗಾಗಿ ಶ್ರಮಿಸಿದ ನಿಸ್ವಾರ್ಥ ಪ್ರೇಮವನು ನೀಡಿದವಳು ಅಮುವಿನಂತರಂಗದಲಿ ಶಾಶ್ವತ ಸ್ಥಾನ ಪಡೆದು ನಿತ್ಯ ಪೂಜಿಸ್ಪಡುವವಳು 0551ಪಿಎಂ25102017 *ಅಮುಭಾವಜೀವಿ* ನಾಗರಾಜ್ ಬೆಳಗಾವಿ ಅವರ ಪ್ರತಿಕ್ರಿಯೆ *ಅಮುಭಾವಜೀವಿ ಗುರುಗಳ* ಗಜಲ್ ಚಿಕ್ಕದಾದರೂ,ಉತ್ತಮವಾಗಿದೆ. *ಇಲ್ಲದ ಬದುಕಿಗೆ ಜೀವ ಕೊಟ್ಟವಳು* ಎಂಬ ಮಾತು ತಾಯಿಯನ್ನು ಸೃಷ್ಟಿಕರ್ತನಾದ ಬ್ರಹ್ಮನಿಗೆ ಹೋಲಿಸಿ ನೋಡುವ ಅದ್ಭುತ ಪರಿಕಲ್ಪನೆಯನ್ನು ತಂದು ಕೊಡುತ್ತದೆ. 👌👌👌👌💐💐💐💐💐💐
*ಬಸವಳಿದ ಬದುಕಿನಲಿ* ಮತ್ತೆ ಮತ್ತೆ ಬಿದ್ದ ಹೊಡೆತಕೆ ಬದುಕಲಿ ಗೆದ್ದೇ ಗೆಲ್ಲುವ ಹಟ ಸೋತ ಮನದೊಳಗಿನ ಸತ್ತ ಬಯಕೆಗಳಿಗೆ ಭರವಸೆ ತಂತು ಜೀವನಪಾಠ ಪ್ರೀತಿಯ ಪರೀಕ್ಷೆಯಲಿ ಇಟ್ಟ ನಿರೀಕ್ಷೆ ಸುಳ್ಳಾಗಿ ನಂಬಿಕೆಯೇ ನರಳಿರುವಾಗ ಭರವಸೆಯು ತಂತು ಜೀವನಸ್ಪೂರ್ತಿ ನನ್ನವರೆಂಬುರೆಲ್ಲ ಕೈಬಿಟ್ಟು ಹೋದಾಗ ಯಾರಿಲ್ಲ ಎಂದು ಕೊರಗುವ ಮನಕೆ ಬದುಕಿನ ಯಾನ ಬೇಸರವಾಗದಂತೆ ಭರವಸೆಯನಿತ್ತಿತು ಜೀವನಗಾನ ನೋವುಗಳಿಗೆ ಬಲಿಯಾದ ಮನಕೆ ನಲಿವಿನ ನೆರಳಾಗಿ ಮಿಡಿದ ಹೃದಯ ವೈಶಾಲ್ಯತೆಯ ಭರವಸೆಯೇ ಜೀವನ ಸಂದೇಶ ಬಸವಳಿದ ಬದುಕಿನಲಿ ಹೊಸತನವ ತುಂಬುವ ಹಸನಾಗದ ಅನುಭಾವವೇ ಭರವಸೆಯ ಜೀವನ ಮೌಲ್ಯ ಕಳೆದು ಕೊಳ್ಳದ ವಿಶ್ವಾಸವೇ ಭರವಸೆಯ ಮೊದಲ ಗೆಲುವು ಬದುಕಲ್ಲಿ ಹೋರಾಡಿದ ಮೇಲೆಯೇ ಸುಖದ ಸುಮವರಳುವ ಚೆಲುವು 0305ಪಿಎಂ23102017 *ಅಮುಭಾವಜೀವಿ*

ಕವಿತೆ

*ಕೊಡಲಿ ಬೀಸಿಕೊಂಡವರು* ಅಪ್ಪ ಹಾಕಿದ ಆಲದ ಮರದಲ್ಲಿ ನೇತಾಡುವವರಲ್ಲ ನಾವು ನಮ್ಮ ನಮ್ಮ ಬುಡಕೇ ಕೊಡಲಿ ಬೀಸಿಕೊಂಡ ಕುಲಜರು ನಾವು ಬೇರು ಎಷ್ಟೇ ಭದ್ರವಾಗಿದ್ದರೂ ರೆಂಬೆಕೊಂಬೆಗಳು ಎಷ್ಟೇ ವಿಶಾಲವಾದರೂ ರುಚಿಯಾದ ಹಣ್ಣುಗಳ ಹೊತ್ತರು ನಮ್ಮದೇ ಕುಲದ ಕೊಡಲಿಗೆ ಬಲಿಯಾದವರು ಮಧುರ ಭಾವಕೆ ಬರ ಬಂದೆರಗಿ ಹೃದಯ ವೈಶಾಲ್ಯ ಮರೆಯಾಗಿ ನಮ್ಮ ನಮ್ಮೊಳಗೆ ತಿಕ್ಕಾಡಿ ದ್ವೇಷದ ಕಾಡ್ಗಿಚ್ಗಿನಲಿ ಸುಟ್ಟು ಕರುಕಲಾದವರು ಹಿಂದೆ ಎಷ್ಟೊಂದು ಚಂದವಿತ್ತು ಹಕ್ಕಿ ಕೂತು ಹಾಡುತ್ತಿತ್ತು ದಣಿದ ಜೀವ ನೆರಳಲಿ ವಿರಮಿಸಿತ್ತು ನಮ್ಮ ಸಂಕುಚಿತತೆಯಿಂದ ಎಲ್ಲ ಮರೆಯಾಯ್ತು ಎಸೆಯಿರಿ ಆ ಕೊಡಲಿಯನು ಬೆಸೆಯಿರಿ ಪ್ರೀತಿ ಸ್ನೇಹಗಳನು ಮತ್ತೆ ಮರುಕಳಿಸಲಿ ಆ ಸಂಭ್ರಮ ನಮ್ಮೊಳಗೆ ಅರಳಲಿ ಮತ್ತೆ ಸಹಜ ಪ್ರೇಮ 0454ಪಿಎಂ21102017 *ಅಮುಭಾವಜೀವಿ* ಕವಿಗಳ ಶೋಧನೆ ಧ್ವನಿಸುರಳಿಗೆ ತಂಡದ ಸ್ಪರ್ಧೆ

ಕವಿತೆ

*ಮನ ಮೆಚ್ಚಿದ ಹುಡುಗಿಗಾಗಿ* ಮಾಗಿ ಛಳಿಯು ಕೂಗಿ ಕರೆದಿದೆ ಮೌನಕೋಗಿಲೆ ಹಾಡು ಹಾಡಿದೆ ನವಿಲ ನಾಟ್ಯ ಮನವ ಸೆಳೆದಿದೆ ಮನ ಮೆಚ್ಚಿದ ಹುಡುಗಿಗಾಗಿ ಮೇಘ ಕರಗಿ ಮಳೆ ಸುರಿದಿದೆ ಬರಡು ನೆಲ ಹಸಿರಾಗಿದೆ ಕೊರಡು ಕೊನರಿ ತೆನೆ ತೂಗಿದೆ ಮನ ಮೆಚ್ಚಿದ ಹುಡುಗಿಗಾಗಿ ಬತ್ತಿದ ನದಿ ಉಕ್ಕಿ ಹರಿದಿದೆ ಉಕ್ಕುವಲೆ ತೀರವನು ರಂಜಿಸಿದೆ ತೀರದಾಸೆಯೀಗ ಕೈಗೂಡಿದೆ ಮನ ಮೆಚ್ಚಿದ ಹುಡುಗಿಗಾಗಿ ಬವಣೆ ದೂರ ಓಡಿದೆ ನೆನಪು ನೂರು ಕಾಡಿದೆ ಹೃದಯ ತಾನೇ ಗುನುಗಿದೆ ಮನ ಮೆಚ್ಚಿದ ಹುಡುಗಿಗಾಗಿ ಯಾರವಳು ಎಲ್ಲಿಹಳು ಕರೆತನ್ನಿ ಚಂದ್ರನ ಮಗಳು ಭೂತಾಯ ಮಡಿಲು ಕನವರಿಸಿದ ಕನಸಿನ ರೂಪದವಳು ನನ್ನ ಮೆಚ್ಚಿದ ಹುಡುಗಿ 0416ಪಿಎಂ21102017 *ಅಮುಭಾವಜೀವಿ* ಸ್ಪರ್ಧಾ ವೇದಿಕೆ ಸ್ಪರ್ಧೆಗೆ

ಗಜಲ್

*ಗಜಲ್* ಬದುಕು ಬರಿದಾಗಿದೆ ಬಣ್ಣಗಾದೆ ಕನಸು ಕಪ್ಪಾಗಿ ತೆಪ್ಪಗಿವೆ ಬಣ್ಣಗಾಣದೆ ಭಾವಗಳು ಶಿಲೆಯ ಭಿತ್ತಿಗಳಾಗಿವೆ ಭಾವನೆಗಳು ಭಗ್ನಗೊಂಡಿವೆ ಬಣ್ಣಗಾಣದೆ ಸೂರ್ಯನ ಬಿಳಿ ಬೆಳಕಿಗೆ ಹೊಳೆದಿವೆ ಆಂತರ್ಯದೊಳಗೆ ಅಸುನೀಗಿವೆ ಬಣ್ಣಗಾಣದೆ ಸಾಕಿ ನಿನ್ನ ಮೇಲಿಟ್ಟಿದ್ದ ನಂಬಿಕೆಗೆ ಪ್ರೀತಿ ಲೇಪವಿಲ್ಲದೆ ಕರಗಿವೆ ಬಣ್ಣಗಾಣದೆ ಬೆಳದಿಂಗಳು ಕೂಡ ಕತ್ತಲೆಗೆ ಹೆದರಿದೆ ನಿನ್ನ ನಗುವಿನ ಬಣ್ಣಗಾಣದೆ ಅಮುವಿನಂತರಂಗ ಭಣಗುಡುತಿದೆ ಬರಡು ಹೃದಯ ಬಣ್ಣಗಾಣದೆ 0243ಪಿಎಂ21102014 *ಅಮುಭಾವಜೀವಿ*

ಕವಿತೆ

*ವಿಶ್ವಪರಂಪರೆಯ ಸಾಕ್ಷಿಗಳು* ಒಂದೊಂದು ಕಲ್ಲು ಹೇಳುತಿದೆ ಹಾಳಾದ ಹಂಪೆಯ ಕಥೆಯ ಸಂಪದ್ಭರಿತ ನಾಡು ಸಂಪೂರ್ಣ ಭಗ್ನಗೊಂಡ ಆ ವ್ಯಥೆಯ ಒಂದೊಂದು ಅವಶೇಷವೂ ಕಣ್ಣಿಗೆ ಕಟ್ಟುವಂತೆ ನೋವ ಹೇಳುತಿದೆ ಮಾರಕ ದಾಳಿಗೆ ಸಿಕ್ಕು ನಲುಗಿದ ಆ ದಾರುಣವ ಇತಿಹಾಸವು ಮರೆಯುವುದೆ ಶಿಲೆಯು ಕಲೆಯಾಗಿ ಅರಳಿ ಕಲ್ಲಲ್ಲೂ ಸಂಗೀತ ಮೈತಾಳಿ ಕಾವ್ಯ ಕನ್ನಿಕೆ ನಾಟ್ಯವಾಡಿದ ಸಾಮ್ರಾಜ್ಯದ ಅಂತ್ಯವನ್ನು ನೆನಪಿಸಿದೆ ಶಿಲೆಯೊಂದು ಆಕೃತಿಯಾಗಿ ಸಾಂಸ್ಕೃತಿಕ ವೈಭವದಿ ಮೆರೆದು ಧರ್ಮಾಂಧರ ದಬ್ಬಾಳಿಕೆಗೆ ಮೂಕಸಾಕ್ಷಿಯಾಗಿದೆ ಈ ಕೊಂಪೆ ಭಗ್ನಾವಶೇಷಗಳು ಇಂದಿಗೂ ಸೌಂದರ್ಯದ ಪ್ರತಿಮೆಗಳು ನೋವಲ್ಲೂ ನಾಡಸಂಸ್ಕೃತಿಯ ಸಾರುತಿರುವ ವಿಶ್ವಪರಂಪರೆಯ ಸಾಕ್ಷಿಗಳು 0136ಪಿಎಂ21102017 *ಅಮುಭಾವಜೀವಿ*

ಕವಿತೆ

*೧•ಈ ಮಿಲನ* ಮೋಡ ಮೋಡಗಳ ಚುಂಬನ ಗುಡುಗಿನ ಭಾರೀ ಆಕ್ರಂದನ ನಮ್ಮಿಬ್ಬರ ಈ ಮಿಲನ ಬದುಕಿಗೆ ಮಳೆಯಾಗಮನ ಅಧರಗಳ ಈ ಸ್ಪರ್ಶ ಮಳೆಯಲ್ಲಿ ನೆನೆದ ಹರ್ಷ *೨•ಪ್ರೀತಿಪಾಲು* ನಲ್ಲನ ಚುಂಬನಕೆ ನಲ್ಲೆಯ ಹಣೆಯಲಿ ಮುತ್ತುಗಳ ಸಾಲು ಕೈ ಸೇರದೆ ಹೃದಯ ಆಯ್ತು ಅವನ ಪ್ರೀತಿಯ ಪಾಲು *೩•ಆಕರ್ಷಣೆ* ಮಳೆಯ ಚುಂಬನದಿಂದ ಇಳೆಯೊಳಗೆ ನವಚೇತನ ನಲ್ಲನ ಬಾಹುವಿನೊಳಗೆ ನಲ್ಲೆಯ ಆತ್ಮ ಸಂಮಿಲನ ಹೃದಯ ಹೃದಯಗಳ ಬದಲಾವಣೆ ಪ್ರೀತಿ ತಂದ ಆಕರ್ಷಣೆ *ಅಮುಭಾವಜೀವಿ*

ಕಥೆ

ಮುಂದುವರೆದ ಭಾಗ3 (ಅರಳುವ ತಾವರೆ) ರವಿ ಅವಳನ್ನು ಸಮಾಧಾನ ಪಡಿಸುತ್ತಿರುವಾಗ ಸವಿತಾಳಿಗೆ ಎಚ್ಚರವಾಯ್ತು. ಎದ್ದು ನೋಡಿದರೆ ಸಮಯ ಆಗಲೆ ಒಂಬತ್ತಾಗಿತ್ತು. ''ಅಯ್ಯೋ ಇಷ್ಟೊತ್ತಿನ ತನಕ ಮಲಗಿಬಿಟ್ಟಿದ್ದೇನಲ್ಲ ಎಚ್ಚರವೇ ಆಗಲಿಲ್ಲ. ಅಮ್ಮ ಏನಂದುಕೊಂಡರೋ"" ಎಂದುಕೊಳ್ಳುತ್ತಾ ರಶ್ಮಿಯನ್ನು ಎತ್ತಿಕೊಂಡು ಹಾಗೆಲ್ಲ ಜೋರಾಗಿ ಓಡಬಾರದು ಏನಾದರೂ ಏಟಾಗಿದ್ದಿದ್ದರೆ ಎಂದು ಅವಳನ್ನು ಎತ್ತಿಕೊಂಡು ಅಡುಗೆ ಮನೆಯತ್ತ ಬಂದು ''ಅಮ್ಮ ಸಾರಿ ಬೆಳಗಾಗಿದ್ದು ಗೊತ್ತಾಗಲೇ ಇಲ್ಲ ತುಂಬಾ ನಿದ್ರೆ ಬಂದು ಎಚ್ಚರ ಇಲ್ಲದ ಹಾಗೆ ಮಲಗಿಬಿಟ್ಟೆ" ಎನ್ನುತ್ತಾ ಬಂದ ಸವಿತಾಳಿಗೆ 'ಅಯ್ಯೋ ಬಿಡಮ್ಮ ಅದಕ್ಕೆಲ್ಲಾ ಸಾರಿ ಏಕೆ ಕೇಳ್ತಿಯಾ ನೀನು ನಮ್ಮ ಮಗಳು ಅಲ್ಲವೇ. ಈ ಕಿತಾಪತಿಗಳು ನಿನ್ನ ನಿದ್ರೆ ಹಾಳುಮಾಡಿದರು 'ಎಂದು ರಶ್ಮಿ ರವಿಯನ್ನು ಬೈಯಲು ಅಮ್ಮ ಅವರನ್ನೇನು ಅನ್ನಬೇಡಿ ಅವರಿನ್ನೂ ಮಕ್ಕಳು. ಎನ್ನುತ್ತಾ ಅಮ್ಮ ಏನಾದರೂ ಕೆಲಸ ಹೇಳಿ ನಾನು ನಿಮಗೆ ಸಹಾಯ ಮಾಡುವೆ ಎಂದಳು ಸವಿತಾ. ಕೆಲಸ ನಾನು ಮಾಡ್ಕೊಳ್ಳುತ್ತೇನೆ ನೀನು ಹೋಗಿ ಸ್ನಾನ ಮಾಡಿಕೊಂಡು ಬಾ ಹೋಗು ಎಂದು ಅವಳನ್ನು ಕಳಿಸಿದಳು. 'ಜಾನಕಿ ಎಂದು ಕೂಗುತ್ತಾ ರಾಮಣ್ಣ ಅಡುಗೆ ಮನೆ ಕಡೆ ಬಂದು "ನೋಡು ನನಗೆ ಗೊತ್ತಿರುವ ಒಬ್ಬರು ಒಂದು ಕಂಪನಿ ನಡೆಸುತ್ತಿದ್ದಾರೆ, ಅಲ್ಲಿ ಒಂದು ಕೆಲಸ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಬೇಗ ಬೇಗ ತಿಂಡಿ ಮಾಡು,ಸವಿತಾಗೂ ಹೊರಡಲು ಹೇಳು ನಾನು ಹಾಗೆ ಹೋಗ್ತಾ ಅವಳನ್ನು ಕರೆದುಕೊಂಡು ಹೋಗಿ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬಿಟ್ಟು ನಾನು ಡ್ಯೂಟಿಗೆ ಹೋಗುವೆ'' ಎಂದು ಹೇಳಿ ರಾಮಣ್ಣ ಕೆಲಸಕ್ಕೆ ಹೋಗಲು ತಯಾರಾಗಿ ಬಂದು ಟೇಬಲ್ ಬಳಿ ಕೂತರು.ಸವಿತಾ ಅಷ್ಟೊತ್ತಿಗೆ ಅವಳು ರೆಡಿಯಾಗಿ ಬಂದಳು. ರಾಮಣ್ಣನವರನ್ನು ನೋಡುತ್ತ "ಅಪ್ಪ ನಿಮಗೆ ಹೇಗೆ ಕೃತಜ್ಞತೆ ಹೇಳಲಿ, ನಾನು ಬಂದ ಒಂದೇ ದಿನದಲ್ಲಿ ಕೆಲಸ ಹುಡಿಕಿ ಸಾಯಬೇಕೆಂದಿದ್ದವಳಿಗೆ ಬದುಕುವ ದಾರಿ ತೋರಿದಿರಿ" ಎಂದು ಕೈ ಮುಗಿದಳು. ಅಯ್ಯೋ ಮಗಳೆ ಏನಿದೆಲ್ಲ? ನನ್ನ ಮಕ್ಕಳಿಗೆ ನಾನು ಮಾಡುವುದು ನನ್ನ ಕರ್ತವ್ಯ ಕಣಮ್ಮಾ. ಹೀಗೆಲ್ಲಾ ಕೈ ಮುಗಿಬಾರದು ಎಂದು ಹೇಳಿ ರಾಮಣ್ಣ ಆಕೆಗೆ ಸಾಂತ್ವನ ಹೇಳಿದರು. ನಗರ ಪ್ರತಿಷ್ಠಿತ ಕಂಪನಿಯಲ್ಲಿ ಸವಿತಾಗೆ ಕೆಲಸಕ್ಕೆ ಸೇರಿಸಿ ರಾಮಣ್ಣ ತನ್ನ ಕಛೇರಿಗೆ ತೆರಳಿದರು. ಕಂಪನಿಯಲ್ಲಿ ಹತ್ತಾರು ಜನ ಕೆಲಸ ಮಾಡುತ್ತಿದ್ದರು ಕಂಪನಿಯ ಎಂಡಿ ತನ್ನ ಸಹಾಯಕನನ್ನು ಕರೆದು ಸವಿತಾಳನ್ನು ಪರಿಚಯಿಸಿ ಅವಳು ಕೆಲಸ ಮಾಡಬೇಕಾದ ಜಾಗ ತೋರಿಸಿ ಕೆಲಸದ ಜವಾಬ್ದಾರಿಯನ್ನು ವಿವರಿಸುವಂತೆ ಹೇಳಿ ಕಳಿಸಿದರು. ಅದರಂತೆ ಅವರೊಂದಿಗೆ ಛೇಂಬರ್ನಿಂದ ಹೊರ ಬಂದ ಸವಿತಾಳಿಗೆ ಎಲ್ಲಾ ನೌಕರರನ್ನು ಪರಿಚಯಿಸಿ ಅವಳ ಕೆಲಸದ ಬಗ್ಗೆ ಮಾಹಿತಿ ನೀಡಿ ಅವನು ತನ್ನ ಜಾಗದಲ್ಲಿ ಹೋಗಿ ಕುಳಿತು ಕೆಲಸದಲ್ಲಿ ತೊಡಗಿಕೊಂಡನು. ಸವಿತಾ ಮೊದಲ ದಿನದ ಕೆಲಸಕ್ಕೆ ತನ್ನನ್ನುತಾನು ಅರ್ಪಿಸಿಕೊಂಡಳು. ಕೆಲಸ ಮಾಡುತ್ತಾ ಸವಿತಾ ದಿನೇ ದಿನೇ ಎಲ್ಲರ ಮೆಚ್ಚುಗೆ ಗಳಿಸತೊಡಗಿದಳು. ಯಾವುದೇ ಕೆಲಸ ಕೊಟ್ಟರು ಬೇಜಾರಿಲ್ಲದೆ ಪ್ರಾಮಾಣಿಕ ಪ್ರಯತ್ನದಿಂದ ಮಾಡಿ ಮುಗಿಸುತ್ತಿದ್ದಳು. ಅವಳ ಕಾರ್ಯ ವೈಖರಿಯನ್ನು ಗಮನಿಸಿದ ಎಂಡಿ ಅವರು ಅವಳಿಗೆ ಮೂರೇ ತಿಂಗಳಿಗೆ ಪ್ರಮೋಷನ್ ನೀಡಿ ತನ್ನ ಸಹಾಯಕಿಯಾಗಿ ನೇಮಿಸಿಕೊಂಡರು. ದೀಪಾವಳಿ ಹಬ್ಬದ ಅಂಗವಾಗಿ ಅವಳಿಗೆ ಸಿಕ್ಕ ಈ ಹುದ್ದೆಯಿಂದ ಮನೆಯಲ್ಲೂ ಎಲ್ಲರಿಗೂ ಖುಷಿ ತಂದಿತು. ಆಗ ಜಾನಕಮ್ಮ ಸವಿತಾಳನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು " ನೋಡಿದೆಯಾ ಸವಿತಾ ನೀನು ಸುಮ್ಮನೆ ಬೇಜಾರು ಮಾಡಿಕೊಂಡು ಸಾಯುವ ನಿರ್ಧಾರ ಮಾಡಿದ್ದೆ. ಆದರೆ ಈಗ ನೀನು ನಿನ್ನ ಕೆಲಸದಲ್ಲಿ ತೋರಿಸುವ ಪ್ರೀತಿ ಅದು ನೀಡುವ ತೃಪ್ತಿಯ ಮುಂದೆ ನಿನ್ನ ನೋವನೆಲ್ಲ ಮರೆತಿರುವೆ. ಹೀಗೆ ಉನ್ನತ ಮಟ್ಟದ ಬದುಕು ನಿನ್ನದಾಗಲಿ "ಎಂದು ಮನಸಾರೆ ಹಾರೈಸಿದರು. ಅದನ್ನು ಕೇಳಿ ಸವಿತಾ ಕಣ್ಣಲ್ಲಿ ಆನಂದ ಭಾಷ್ಪ ಹರಿಯತೊಡಗಿತು.ಅದನ್ನು ಗಮನಿಸಿದ ರಾಮಣ್ಣ 'ಸರಿಸರಿ ಆ ಖುಷಿಯಲ್ಲಿ ಹೀಗೆ ಮೈಮರೆಯಿತೀರೋ ಅಥವಾ ಹೊಟ್ಟೆಗೆ ಏನಾದರೂ ಹಾಕ್ತೀರೋ?' ಎಂದಾಗ ವಾಸ್ತವಕ್ಕೆ ಮರಳಿದ ಇಬ್ಬರು 'ಇವತ್ತು ಹಬ್ಬದೂಟ ಮಾಡ್ತೇವೆ ಸ್ವಲ್ಪ ಕಾಯಿರಿ' ಎನ್ನುತ್ತಾ ಅಡುಗೆ ಮನೆ ಕಡೆ ನಡೆದರು. ಇತ್ತ ಸವಿತಾ ಮನೆಯಲ್ಲಿ ಹೇಳದೇ ಕೇಳದೇ ಮನೆ ಬಿಟ್ಟು ಹೋದ ಮಗಳಿಗಾಗಿ ಎಲ್ಲ ಕಡೆ ಹುಡುಕಿ ಸುಸ್ತಾದ ಅವಳ ಅಪ್ಪ ಅಮ್ಮ ಅವಳು ಎಲ್ಲಾದರೂ ಇರಲಿ ಜೀವಂತವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಕಣ್ಣೀರಲ್ಲಿ ಕೈತೊಳೆಯುತ್ತಿದ್ದರು.ಅವಳ ಸ್ನೇಹಿತರಲ್ಲಿ ನೆಂಟರಿಷ್ಟರ ಮಲೆಗಳಲ್ಲಿ ಎಲ್ಲಾ ಕಡೆಯೂ ಹುಡುಕಿದರೂ ಅವಳು ಇರುವಿಕೆಯ ವಿಷಯ ಮಾತ್ರ ತಿಳಿಯಲಿಲ್ಲ. ಇದ್ದ ಒಬ್ಬಳೇ ಮಗಳು ಹೀಗೆ ಹೋಗಿದ್ದು ಆ ಜೀವಿಗಳಿಗೆ ಅತೀವ ದುಃಖ ತಂದಿತ್ತು. ಪ್ರೀತಿಸಿದವನು ಮೋಸ ಮಾಡಿದ ವಿಚಾರ ತಿಳಿದ ಮೇಲಂತೂ ಅವಳು ಬದುಕಿರುವ ಸಾಧ್ಯತೆಯೇ ಇಲ್ಲ ಎಂದು ಎಲ್ಲರೂ ಹೇಳುವಾಗ ಅವರ ಹೆತ್ತ ಕರುಳು ಅವಳು ಎಲ್ಲೋ ಒಂದು ಕಡೆ ಇದ್ದಾಳೆ ಎಂಬ ಆಶಾಭಾವವೇ ಅವರನ್ನು ಸಮಾಧಾನಿಸುತ್ತಿತ್ತು. ಎಲ್ಲರೂ ಊಟ ಮುಗಿಸಿ ಮಲಗುವ ಕೋಣೆಗೆ ಹೋದರು.ಸವಿತ ಮಾತ್ರ ನಿದ್ರೆ ಬರದೆ ಹಾಗೆ ರೂಮಿನಲ್ಲಿ ಅವಳ ಇಂದಿನ ಸಾಧನೆಗೆ ತನಗೆ ಆಶ್ರಯ ಕೊಟ್ಟ ರಾಮಣ್ಣ ಜಾನಕಮ್ಮ ಅವರನ್ನು ಮನದಲ್ಲೆ ಸ್ಮರಿಸಿದಳು. ಇದೇ ಸಮಯದಲ್ಲಿ ಅವಳಿಗೆ ತನ್ನ ಹೆತ್ತವರ ನೆನಪಾಯಿತು. ತನ್ನ ಮಗಳ ಸಾಧನೆಯನ್ನು ಕೇಳಿದರೆ ಅವರೆಷ್ಟು ಖುಷಿ ಪಡಬಹುದು ಎಂದು ಮನೆಯಲ್ಲೇ ನೆನಪಿಸಿಕೊಳ್ಳಲು ಕಣ್ಣೀರ ಧಾರೆ ಹರಿಯುತ್ತಿತ್ತು. ಕೆನ್ನೆ ಮೇಲಿನ ಕಂಬನಿಯನ್ನು ಒರೆಸಿಕೊಳ್ಳುತ್ತಾ ಇದೇ ಮೊದಲ ಬಾರಿಗೆ ತನ್ನ ಹೆತ್ತವರಿಗೆ ಫೋನಾಯಿಸಿದಳು.ಆ ಕಡೆಯಿಂದ ನೊಂದ ದನಿಯಲ್ಲಿ ಅಮ್ಮ ಮಾತನಾಡಲು ಸವಿತಾಳಿಗೆ ಮಾತೇ ಹೊರಡದೇ ದುಃಖ ಉಮ್ಮಳಿಸಿಬಂತು. ಆ ಕಡೆಯಿಂದ 'ಯಾರು ಏನಾಗಬೇಕಿತ್ತು. ಇಷ್ಟೊತ್ತಿನಲ್ಲಿ ಫೋನ್ ಮಾಡಿರುವ ನೀವಾರು' ಎಂದು ಕೇಳಲು ಧೈರ್ಯ ಮಾಡಿ ಸವಿತಾ 'ಅಮ್ಮಾ' ಎಂದ ದನಿ ಕೇಳಿ ಹೋಗಿದ್ದ ಜೀವ ಬಂದಂತಾಗಿ 'ಮಗಳೇ ಹೇಗಿದ್ದಿಯಾ ? ಎಲ್ಲಿದ್ದೀಯ ? ಯಾಕಿಂತ ಕೆಲಸ ಮಾಡಿದೆ ನೀನು ಎಂದು ಒಂದೇ ಉಸಿರಿಗೆ ಪ್ರಶ್ನಿಸಿದರು ಅಮ್ಮ.

ಗಝಲ್

*ಗಜಲ್ ೧* ಎಲ್ಲ ಮನೆಯೊಳಗೂ ದೀಪ ಬೆಳಗುತಿದೆ ನನ್ನದೆಯೊಳಗೆ ಮಾತ್ರ ಕತ್ತಲೆ ತುಂಬಿದೆ ಅನಾಥ ಬದುಕಿನೊಳಗೆ ನಿತ್ಯ ವೇದನೆ ನನ್ನವರಾರಿಲ್ಲ ಆ ದೇವರನೇ ನಾ ನಂಬಿದೆ ಊರೆಲ್ಲಾ ಹಬ್ಬದ ಖುಷಿಯಲ್ಲಿ ಮಿಂದಿರುವಾಗ ಈ ಬಡಪಾಯಿಗೆ ಬಂಧುಗಳಾರಿಲ್ಲವೆಂದು ನೊಂದಿದೆ ಅವರ ಮನೆಯಂಗಳದಿ ರಂಗೋಲಿ ನಗುತಿರಲು ಬಿಕಾರಿಯ ಮನದಂಗಳ ಬಿಕೋ ಎನ್ನುತಿದೆ ಕತ್ತಲೆಯ ಕೂಪದಲಿ ಬೆತ್ತಲಾದ ಬದುಕು ಬರಿಗೈ ಬೊಗಸೆಗೆ ನಿರಾಸೆಯನೇ ಸುರಿದಿದೆ *ಅಮು*ವಿನಂತರಂಗದ ಈ ವೇದನೆಗೆ ಉಪಶಮನವಾಗಿ ಬೆಳಕೇ ನೀ ಬರಬಾರದೆ 1219ಪಿಎಂ18102017 *ಅಮುಭಾವಜೀವಿ*