Friday, November 5, 2021

ನನ್ನ ಬರಹಗಳು 2

ಭವದ ಬಂಧನಕಿಲ್ಲಿ
ಒತ್ತಾಸೆಗಳ ಆಧಾರ
ಸಂಕಷ್ಟಗಳ ಪರಿಧಿಯಲ್ಲಿ
ಸಂತೃಪ್ತಿಯ ಸಂಚಾರ
ಬದುಕುವ ಭರವಸೆಗೆ
ಬರಿಗಾಲ ಫಕೀರನಂತೆ
ನಿತ್ಯ  ಅಲೆದಾಟ
ಸತ್ಯದ ಪರಿಪಾಠ
ಅನುಭವದ  ಈ ಸಂಪುಟ
ಜನನದಿಂದ ಮರಣದವರೆಗೂ
ಸಹಿಸದೇ ವಿಧಿಯಿಲ್ಲ ಇದೇ ದಿಟ

0545ಎಎಂ31072021
*ಅಪ್ಪಾಜಿ ಎ ಮುಸ್ಟೂರು ಸುಧಾ*

ನೀ ಬಯಸಿದಂತೆ
ನಡೆಯಲು ಇಲ್ಲೇನು
ಎಲ್ಲವೂ ಪೂರ್ವನಿರ್ಧಾರಿತ
ಕಾಲದೊಂದಿಗೆ ನೀನು
ಸಾಗಲೇಬೇಕು ವಿಧಿಯಿಲ್ಲ
ಆಗಲೇ ಎಲ್ಲವೂ ಅಬಾಧಿತ

1044ಪಿಎಂ01082021
*ಅಪ್ಪಾಜಿ ಎ ಮುಸ್ಟೂರು ಸುಧಾ*
ಭಾವಪರವಶನಾದೆ
ಪ್ರಕೃತಿಯ ಈ ಭವ್ಯ
ಕಲಾಕೃತಿಯ ಕಂಡು
ಸುಮದ  ಈ ಚಿತ್ತಾರ
ಒಂದೊಂದರದ್ದೊಂದು ವೈಯಾರ
ನಿಸರ್ಗ ಮಾತೆಯ ಶೃಂಗಾರ
ವರ್ಣಿಸುವ ಪದಗಳೂ ನಿರುತ್ತರ
ನಿತ್ಯ ಚೈತನ್ಯದ ಚಿಲುಮೆ
ಅದಕೆ ಬೇಕಿಲ್ಲ ಉಪಮೆ
ಅದೊಂದು ಸತ್ಯದ ಪ್ರತಿಮೆ

1051ಪಿಎಂ02082021
*ಅಪ್ಪಾಜಿ ಎ ಮುಸ್ಟೂರು ಸುಧಾ*

ನೋವುಗಳ ಸರಮಾಲೆ
ನಿರಂತರ  ಅದರ  ಅಲೆ
ತೇಲುವುದೋ ಮುಳುಗುವುದೋ
ಬದುಕಿನ ಈ ಪಯಣ
ಬೇಕಿಲ್ಲ ಕಾರಣ
ನಿತ್ಯ ಅಲೆದಾಟ ಜೀವನ
ಸುಖದ ಮರೀಚಿಕೆಯ ಬೆನ್ನು ಹತ್ತಿ
ನಿರಾಸೆಯ ಕಾಡುಮೇಡು ಸುತ್ತಿ
ಮತ್ತದೇ ಬೇಸರದಿ ಬೇಸತ್ತು
ಗೊಣಗಿದೆ ಮನ  ಈ ಹೊತ್ತು

1041ಪಿಎಂ03082021
*ಅಪ್ಪಾಜಿ ಎ ಮುಸ್ಟೂರು ಸುಧಾ*

No comments:

Post a Comment