Friday, November 5, 2021

ಗಡಿಯಲ್ಲಿ ಎಡೆಬಿಡದೆ
ತಾಯಿಯ ಮಡಿಲೆಂದು
ಕಾಯುವ ನಿನ್ನ ಕಾಯಕಕ್ಕೆ
ಇದೆ ಸದಾ ನನ್ನ ಬೆಂಬಲ

ಹೆತ್ತವರ ಬಡತನಕ್ಕಿಂತ
ನೆತ್ತರ ಬಯಸುವ
ಶತ್ರುವಿನ ಎದೆಬಗೆಯುವ
ನಿನ್ನ ಪರಾಕ್ರಮವಿರಲಿ ಅಚಲ

ಗಡಿಯತ್ತ ನಿನ್ನ ಕಳುಹಿ
ನಾಡಲ್ಲಿ ನಾ ಚಿರವಿರಹಿ
ಪ್ರತಿಕ್ಷಣವೂ ನಿನ್ನದೇ ನೆನಪಿನಲಿ
ಕಾಲ ದೂಡುವೆ ನೀ ಬರುವಾಸೆಯಲಿ

ತಾಯಿನಾಡಿಗಾಗಿ ಮುಡಿಪು ನಿನ್ನ ಸೇವೆ
ತಬ್ಬಲಿಯಾದರು ಚಿಂತೆಯಿಲ್ಲ ಹೆಮ್ಮೆ ಪಡುವೆ
ವೀರತನದ ನಿನ್ನ ಧೀರ ನಡಿಗೆಗೆ
ವಿಜಯ ತಿಲಕವನಿಟ್ಟು ನಿನ್ನ ಹಾರೈಸುವೆ

ಸಮವಸ್ತ್ರದ ವಜ್ರಕವಚದ ಧರಿಸಿ
ಪರಾಕ್ರಮದ ಆಯುಧಗಳ ಮುಂದಿರಿಸಿ
ಮುನ್ನುಗ್ಗುವ ಗುಂಡಿಗೆಯ ಧೈರ್ಯ ನಿನ್ನಲುಂಟು
ಈ ನಿನ್ನ ಸಾಹಸಕ್ಕೆ ಸಾಟಿ ಏನುಂಟು

ತವರಿನತ್ತ ಚಿಂತೆ ನಿನಗೆ ಬೇಡ
ಎಲ್ಲವನೂ ನಿಭಾಯಿಸುವೆ
ನಿನ್ನ ಸ್ಥಾನದಲ್ಲಿ ನಿಂತು
ಅಂಜದೇ ಹೋರಾಡು ಕೆಚ್ಚೆದೆಯ ಕಲಿ ನೀನು

೦೫೨೮ಎಎಂ೨೮೦೧೨೦೨೧

ಮಮಕಾರದ ಹೃದಯವಿದ್ದರೆ
ಮರುಗುವ ಕರುಳಿದ್ದರೆ
ಬದುಕು ಶುದ್ಧವಿರುತ್ತದೆ
ನೆಮ್ಮದಿ ನೆಲೆಸುತ್ತದೆ
ಬೇಗುದಿ ಕಳೆಯುತ್ತದೆ
ಖುಷಿ ಆವರಿಸಿ
ಸುಂದರ ಬಾಳು ಸಾಕಾರಗೊಂಡು
ಸಾರ್ಥಕ ಜೀವನ ನಮ್ಮದಾಗುವುದು

೧೧೨೬ಎಎಂ೨೯೦೧೨೦೨೧
*ಅಪ್ಪಾಜಿ ಎ ಮುಸ್ಟೂರು**

.      ಎದೆಯ ಭಾವದ ನೂರು ನೋವಿಗೆ
ನಿನ್ನ ಒಲವಿನ ಮದ್ದು ಬೇಕಿದೆ
ಒಂಟಿತನದ ಈ ಪಯಣಕ್ಕೆ
ನಿನ್ನ ನೆನಪೇ ಹಾದಿ ನೆರಳಾಗಿದೆ

ಕೈ ಕೈ ಹಿಡಿದು ನಡೆದ
ಮೌನದೊಳಗೆ ಮಾತನಾಡಿದ
ಕಣ್ಣೋಟದ ಆ ಪರಿಭಾಷೆಗೆ
ಮರುಳಾದೆ ನಿನ್ನ ಪ್ರೀತಿ ಮಾತಿಗೆ

ಅಧರ ಅಧರಗಳು ಬೆಸೆದ
ಸ್ಪರ್ಶವೊಂದು ರೋಮಾಂಚನ    
ಅಂತರ ಬಯಸದ ಜೀವಗಳ
ಅಂತರಂಗದ ಆಸೆಗಳೇ ಸುಂದರ ತಾಣ


೧೨೨೫ಪಿಎಂ ೨೯೦೧೨೦೨೧

ಮೂಗುತಿ ಸುಂದರಿ
ಮನಕದ್ದ ಪೋರಿ
ಈ ನಿನ್ನ ನಗೆಯ ಸ್ಫೂರ್ತಿಗೆ
ಸೋತು ಶರಣಾದೆ ಒಮ್ಮೆಗೆ

ಹಸಿರು ಸೀರೆಯನುಟ್ಟು
ಕೆಂಪು ರವಿಕೆಯ ತೊಟ್ಟು
ಕೊರಳ ಶೃಂಗಾರಕ್ಕೆ ಬಂಗಾರದ ಹಾರ
ತಾಯಿ ಭಾರತಿ ನೀಡಿದ ಸಂಸ್ಕಾರ

ಬೆಳದಿಂಗಳಂಥ ನಗುವು
ಮನಮೋಹಕ ವೈಯಾರವು
ಹರೆಯ ತುಂಬಿದ ಚೆಲುವೆ
ನಿನಗಾರು ಸಾಟಿ ಇಲ್ಲಿಲ್ಲವೇ

ಮುಸ್ಸಂಜೆಯ ರಂಗಿದೆ ಕೆನ್ನೆಯ ಮೇಲೆ
ಬೆಳದಿಂಗಳ ಹೊಳಪಿನ ದಂತದ ಸಾಲೆ
ಚಂಚಲ ಮನದ ಸುಕೋಮಲೆ
ಕವಿ ಹೆಣೆದ ಪದಗಳ ಮಾಲೆ

ಕೈಯೆತ್ತಿ ಮುಗಿವ ಸಂಸ್ಕೃತಿ
ನಿನ್ನ ನೋಡಿಯೇ ಬಂದ ಪದ್ದತಿ
ಕರುನಾಡಿನ ಓ ಸುಕುಮಾರಿ
ನಿನ್ನೊಡನಾಟವೆ ಬಲು ಚೇತೋಹಾರಿ

೦೫೩೨ಪಿಎಂ೨೭೦೪೨೦೨೧
ಅಪ್ಪಾಜಿ ಎ ಮುಷ್ಟೂರು



#ಅಮುಭಾವದೂಟ ೦೩

  *ಜೀವನ ಸತ್ಯ*

ಮರವಾಗಲಿಲ್ಲ
ನೇರಳೀಯಲಿಲ್ಲ
ಬರೀ ಬದುಕಿ ಹೊರಟೆ
ನನ್ನವರೆನ್ನಲ್ಲಿಲ್ಲ
ಯಾರೂ ನನ್ನ ನಂಬಲಿಲ್ಲ
ವ್ಯರ್ಥ ಬದುಕಿದು ಸ್ವಾರ್ಥಕ್ಕೆ ಬಲಿಯಾಯ್ತು

ಬಯಸಿದಂತೆ ಬದುಕು ಸಾಗದು
ಸಾಧಿಸದೆ ಕುರುಹು ಉಳಿಯದು
ಸ್ವಂತದ್ಯಾವುದೂ ಇಲ್ಲಿ ನನ್ನದಿಲ್ಲ
ಜನರನೆಂದೂ ನಂಬಿಸಲಾಗದು
ನನಗೆ ಬೇಕಾದಂತೆ ಬದುಕಲು ಬಿಡದು
ಸಾಕ್ಷಿ ಇರೋ ಸತ್ಯಕ್ಕೆ ಸಾವಿಲ್ಲ

ತುಳಿಯಲೆಂದೇ ಕಾಯುತಿಹರು
ಬೆಳೆವ ಚಿಗುರನು ಚಿವುಟುವರು
ಪೋಷಿಸದೆ ಬೆಳೆಯಬೇಕು ಅದೇ ಜೀವನ
ಕಳಕಳಿಯ ಕೇಳರು ಯಾರು
ಎಲ್ಲ ಕಬಳಿಸುತ್ತ ಹೊರಟಿಹರು
ಬರಿಗೈಯಲ್ಲಿ ಮುಗಿಸಬೇಕು ಪಯಣ

೦೪೨ಪಿಎಂ೨೮೦೪೨೦೨೧
*ಅಪ್ಪಾಜಿ ಎ ಮುಸ್ಟೂರು*

ಕನಸುಗಳ ಗೂಡೊಳಗೆ
ಮನದ ಭಾವನೆಗಳಿಗೆ
ತುಸು ಜಾಗವಿದೆ
ಮಿಡಿಯುತಿವೆ ಮಿಸುಕಾಡಿಸದಿರಿ

ನೊಂದ ಭಾವಗಳು ಬೇಯುತ್ತಿವೆ
ಅಂತ್ಯ ಕಾಣದೆ ಸೊರಗಿವೆ
ಮನದ ಭಿತ್ತಿಯ ಮೇಲೆ
ಚಂದದ ಚಿತ್ತಾರ ಬರೆಯಲು ವಿಫಲವಾಗಿವೆ

ನೀನಾಡುವ ಪ್ರತಿ ಮಾತು
ಚೈತನ್ಯ ತುಂಬುವುದು ನನ್ನೊಳಗೆ
ಅಂತರಂಗದ ವಾಸಿ ನೀನು
ಜಗವ ನೋಡುವೆ ನಿನ್ನ ಕಣ್ಣೊಳಗೆ

ಅನುಬಂಧ ಬೆಸೆದ ಈ ನಮ್ಮ ಮಿಲನಕೆ
ಒಲವೊಂದೆ ನಾ ಕೊಡಬಲ್ಲ ಕಾಣಿಕೆ
ಸಂಗಾತಿ ನಿನ್ನ ಈ ಸಂಪ್ರೀತಿಗಾಗಿ
ಜನ್ಮಪೂರ ಮುಡಿಪಿಡುವೆ ನಿನ್ನ ಸೇವೆಗಾಗಿ

ನಿನ್ನೊಳಗೆ ನಾನು ನನ್ನೊಳಗೇ ನೀನು
ಅರ್ಧನಾರೀಶ್ವರ ತತ್ತ್ವ ಅಲ್ಲವೇನು
ಸೋಲು ಗೆಲುವಿನ ಜೀವನವ
ಸುಖಿಸೋಣ ಬಾ ನನ್ನ ಬಾಳ ಸಂಗಾತಿ

೦೧೧೬ಪಿಎಂ೦೨೦೫೨೦೨೧

ಮುಂದೆ ನೂರು ದಾರಿಗಳಿವೆ
ಹತಾಶರಾಗದೆ ಮುನ್ನಡೆಯಬೇಕು
ಸೋಲು ಕಲಿಸುವ ಪಾಠ
ಬದುಕಿನಾನುಭವದ ಸಂಪುಟ
ಎಡವಿ ಬಿದ್ದಾಗಲೇ ಗೊತ್ತಾಗೋದು
ಎತ್ತಲು ಬರುವರಾರು ಎಂಬುದು
ಗೆಲುವು ಸಾಧಿಸಲು ತಾಳ್ಮೆಯಿಂದ
ಮುನ್ನಡೆಯಬೇಕು ಬಾಳಲಿ

೦೭೪೨ಪಿಎಂ೦೪೦೫೪೦೪೧
*ಅಪ್ಪಾಜಿ ಎ ಮುಸ್ಟೂರು*

        #ಅಮುಭಾವದೂಟ ೦೯

ಯಾವ ಕಡೆ ನೋಡಿದರೂ ತುದಿ ಕಾಣದು
ಬದುಕಲಿ ಇನ್ನೂ ಬವಣೆ ನೀಗದು
ನೋವು ದಿನೇದಿನೆ  ಹೆಚ್ಚಾಗುತಿದೆ
ನಲಿವು ತನ್ನಿಂತಾನೆ ಮಾಯವಾಗಿದೆ
ಸೋಲುವ ಭಯದಲ್ಲಿ ಬದುಕು
ನರಳುತಿದೆ ನಿತ್ಯ ಸಹಿಸಲಾಗದೆ ಕೆಡುಕು

೦೬೦೫೨೨೧
*ಅಪ್ಪಾಜಿ ಎ ಮುಸ್ಟೂರು*


ನನ್ನೊಳಗಿನ ಅದೆಸ್ಟೋ ಒತ್ತಾಸೆಗಳು
ನಿರಾಸೆ ಗಳಾಗಿ ಉಳಿದವು
ನನ್ನೊಳಗಿನ ಅದೆಷ್ಟೋ ಕನಸುಗಳು
ನನಸಾಗದೆ ಅಳಿದವು

ನನ್ನ ಪಾಲಿನ ಬದುಕಿನ ವ್ಯಾಖ್ಯಾನವೇ
ಬದಲಾಗಿ ಹೋಯ್ತು
ನನ್ನೊಳಗಿನ ಆತ್ಮವಿಶ್ವಾಸಕ್ಕೆ
ಬಲವಾದ ಪೆಟ್ಟು ಬಿದ್ದಿತು

ಸತತ ಸೋಲುಗಳೇ
ಗೆಲುವಾಗುವುದೆಂದು ಕಾಯುತ್ತಿರುವೆ
ಜಯದ ಪರೀಕ್ಷೆ ಅಷ್ಟೊಂದು
ಸುಲಭವಲ್ಲ ವೆಂದೀಗ ಅರಿತಿರುವೆ

ಬದುಕುವ ಭರವಸೆಯೇ ಬತ್ತುತ್ತಿದೆ
ಸಮಸ್ಯೆಯ ಭೂತ ಕತ್ತು ಹಿಚುಕುತ್ತಿದೆ
ಬವಣೆ ಗಳಿಗೀಗ ಬಡತನವಿಲ್ಲ
ಭರವಸೆಯ ತುಂಬುವುದು ಹೇಗೆ ತಿಳಿಯುತ್ತಿಲ್ಲ

ಆದರೂ ಬದುಕಲೇಬೇಕಿದೆ
ಸಾಧಿಸುವ ಛಲದೊಂದಿಗೆ
ಬರಲಿ ಕಷ್ಟಗಳು ನೂರು
ಎದುರಿಸಬೇಕು ಎದೆಗುಂದದೆ

೦೬೧೪ಎಎಂ೦೭೦೫೨೦೨೧
ಅಪ್ಪಾಜಿ ಎ ಮುಸ್ಟೂರು
 

No comments:

Post a Comment