ಇದು ಸಹಜ
ತಿಳಿಯೋ ಓ ಮನುಜ
ಬುಡ ಒಣಗಿದ ಮೇಲೆ
ಸುಡದಿರುವರೇ ಜನ
ಸುಡುವ ಕಿಡಿ ತಾಗಿದರೆ
ನೋಯದಿರುವುದೇ ಮನ
ಹೂ ಅರಳಿ ನಗುತಲಿದ್ದರೆ
ಕೈ ಕೀಳದೆ ಸುಮ್ಮನಿರುವುದೇ
ಮನದೊಳಗಣ ಭಾವನೆಗಳ
ಮೊಗ ತೋರದೇ ಮರೆಮಾಚುವುದೇ
ಅಮಾವಾಸ್ಯೆಯ ದಿನದಂದು ಕಾಣಬಹುದೇ
ಆ ಬೆಳದಿಂಗಳ ಚೆಲುವ
ಬರವಿದ್ದರೂ ವಸಂತ ಬಂದಾಗ
ಚಿಗುರದೆ ಇರುವುದೇ ನಿಸರ್ಗ
ನವ ಮಾಸ ತುಂಬಿದ ಮೇಲೂ
ಗರ್ಭದಲ್ಲೇ ಉಳಿಯುವುದೇ ಭ್ರೂಣ
ಸಾವು ಬಂದು ಕರೆವಾಗ
ದೇಹವನ್ನು ತೊರೆಯದಿರುವುದೇ ಪ್ರಾಣ
ಆರಂಭ ಎಷ್ಟು ಸತ್ಯವೋ
ಅಂತ್ಯವೂ ಕೂಡ ಅಷ್ಟೇ ಸತ್ಯ
*ಅಮ ಭಾವಜೀವಿ*
No comments:
Post a Comment